Advertisement

ಕಬ್ಬೂರಿಗೆ ಬೇಕು ಬಸ್‌ ನಿಲ್ದಾಣ

11:46 AM Nov 13, 2019 | Suhan S |

ಚಿಕ್ಕೋಡಿ: ಸುತ್ತಮುತ್ತ ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನವಾದ ತಾಲೂಕಿನ ಕಬ್ಬೂರ ಪಟ್ಟಣದಲ್ಲಿ ಬಸ್‌ ನಿಲ್ದಾಣ ಇಲ್ಲದೇ ಪ್ರಯಾಣಿಕರು ನೆತ್ತಿ ಸುಡುವ ಬಿಸಿಲಿನ ಮಧ್ಯೆ ಹೈರಾಣಾಗುತ್ತಿದ್ದು, ಬಸ್‌ ತಂಗುದಾಣ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರ ಬಹುದಿನಗಳ ಬೇಡಿಕೆ ಈಡೇರುತ್ತಿಲ್ಲ.

Advertisement

ಪಟ್ಟಣ ಪಂಚಾಯತ್‌ ಹೊಂದಿರುವ ತಾಲೂಕಿನ ಕಬ್ಬೂರ ಪಟ್ಟಣದ ಸಾರ್ವಜನಿಕರಿಗೆ ಸುಸಜ್ಜಿತ ಬಸ್‌ ನಿಲ್ದಾಣ ಅವಶ್ಯಕವಾಗಿದೆ. ಪಟ್ಟಣದ ಮಧ್ಯೆ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಆದರೆ ಪ್ರಯಾಣಿಕರು ಬಸ್‌ ನಿಲ್ದಾಣ ಇಲ್ಲದೇ ಹೆದ್ದಾರಿ ಪಕ್ಕದಲ್ಲಿಯೇ ಬಸ್‌ಗಾಗಿ ಕಾಯಬೇಕಾಗಿದೆ.

ಪಟ್ಟಣದಲ್ಲಿ ಸುಮಾರು 25ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಆಡಳಿತ ದೃಷ್ಟಿಯಿಂದಾಗಿ ಕಳೆದ ನಾಲ್ಕೈದು ವರ್ಷದ ಹಿಂದೆ ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳದೇ ಇರುವುದು ವಿಪರ್ಯಾಸ.

ಪಟ್ಟಣದ ಮಾರ್ಗ ಮಧ್ಯ ಹಾದು ಹೋಗಿರುವ ರಾಜ್ಯ ಹೆದ್ದಾರಿ ಮೇಲೆ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳಿಗೆ ಹೋಗುವ ಪ್ರಯಾಣಿಕರು ನಿಪ್ಪಾಣಿ, ಕೊಲ್ಲಾಪುರ, ಪುಣೆ, ಮುಂಬೈ, ಸಾಂಗಲಿ, ಗೋಕಾಕ, ಸವದತ್ತಿ, ಯಲ್ಲಮ್ಮನಗುಡ್ಡ, ಧಾರವಾಡ, ಬೆಂಗಳೂರ, ಬೆಳಗಾವಿ ಮುಂತಾದ ಕಡೆಗೆ ಈ ಬಸ್‌ ನಿಲ್ದಾಣದಿಂದ ಪ್ರಯಾಣಿಸುವುದರಿಂದ ಅಂದಾಜು 175ಕ್ಕೂ ಅಧಿ ಕ ಬಸ್‌ಗಳು ಪ್ರತಿನಿತ್ಯ ಸಂಚರಿಸುತ್ತವೆ. ಇಂತಹ ದೊಡ್ಡ ಪಟ್ಟಣದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಕಬ್ಬೂರ ಪಟ್ಟಣದಿಂದ ಸುತ್ತಮುತ್ತಲಿನ ಗ್ರಾಮಗಳಾದ ಬೆಲ್ಲದ ಬಾಗೇವಾಡಿ, ಜಾಗನೂರ, ವಿಜಯನಗರ, ಕೆಂಚ್ಚನಟ್ಟಿ, ಬೆಳಗಲಿ, ಮಾಡಲಗಿ, ಜೋಡಹಟ್ಟಿ, ಮಿರಾಪುರಹಟ್ಟಿ ಅಲ್ಲದೆ ಸಮೀಪದಲ್ಲಿ ಚಿಕ್ಕೋಡಿ ರೈಲು ನಿಲ್ದಾಣವಿದ್ದು, ರೈಲಿನಲ್ಲಿ ಬರುವಂತಹ ಪ್ರಯಾಣಿಕರು ತಮ್ಮ ಪಟ್ಟಣ, ಗ್ರಾಮ, ನಗರಗಳಿಗೆ ಹೋಗುವವರು ಕಬ್ಬೂರ ಪಟ್ಟಣದಿಂದ ಪ್ರಯಾಣ ಮುಂದುವರಿಸಬೇಕಾಗುತ್ತದೆ. ಆದರೆ ಇಲ್ಲಿ ಬಿಸಿಲು, ಮಳೆಗೆ ಆಸರೆ ಪಡೆಯಲು ತಂಗುದಾಣ ಇಲ್ಲದಂತಾಗಿದೆ.

Advertisement

ಕಳೆದ ನಾಲ್ಕೈದು ವರ್ಷಗಳ ಹಿಂದೆ ರಾಜ್ಯ ಹೆದ್ದಾರಿ ನಿರ್ಮಾಣವಾಗುವ ಮುನ್ನ ಚಿಕ್ಕದಾದ ಬಸ್‌ ನಿಲ್ದಾಣ ಇತ್ತು. ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಕಾಮಗಾರಿ ಆರಂಭವಾದಾಗ ಚಿಕ್ಕ ಬಸ್‌ ನಿಲ್ದಾಣ ತೆರವುಗೊಳಿಸಿದರು. ಈಗ ಹೆದ್ದಾರಿ ನಿರ್ಮಾಣವಾಗಿ ಎರಡು ವರ್ಷ ಕಳೆಯುತ್ತಾ ಬಂದಿದೆ. ಪಟ್ಟಣದ ಜನರಿಗೆ ಅನುಕೂಲವಾಗಲು ಬಸ್‌ ನಿಲ್ದಾಣವನ್ನು ಯಾಕೆ ನಿರ್ಮಿಸಿಲ್ಲ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಹಳೆ ಬಸ್‌ ನಿಲ್ದಾಣದ ಜಾಗದಲ್ಲಿ ಈಗಾಗಲೇ ಬೀದಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಇಟ್ಟು ವ್ಯಾಪಾರ -ವಹಿವಾಟು ಆರಂಭಿಸಿದ್ದಾರೆ. ಬಸ್‌ಗಾಗಿ ಪ್ರಯಾಣ ಬೆಳೆಸುವ ಸಾರ್ವಜನಿಕರು ಮಾತ್ರ ನಿಲ್ಲಲು ಸ್ಥಳವಿಲ್ಲದಂತಾಗಿದೆ.

ಮಹಿಳೆಯರು, ವಯೊವೃದ್ಧರು, ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ನಿಲ್ಲಲು ಸ್ಥಳವಿಲ್ಲದಾಗಿದೆ. ರಸ್ತೆಯ ಪಕ್ಕದಲ್ಲಿ ನಿಂತಾಗ ಅನೇಕ ಬಾರಿ ಅಪಘಾತ ಸಂಭವಿಸಿ ಜನರು ಕೈಕಾಲು ಕಳೆದುಕೊಂಡ ಉದಾಹರಣೆಗಳು ಇವೆ.

ಶೌಚಾಲಯವಿಲ್ಲದೆ ಪರದಾಟ: ಬಸ್‌ ನಿಲ್ದಾಣ ಇಲ್ಲದೇ ಪರದಾಡುತ್ತಿರುವ ಜನರಿಗೆ ಶೌಚಾಲಯ ಇಲ್ಲದೇ ಇರುವುದು ಮತ್ತೂಂದು ಸಂಕಷ್ಟ ತಂದಿದೆ. ದೂರದ ಗ್ರಾಮಗಳಿಂದ ಬಸ್‌ಗಾಗಿ ಕಾಯ್ದು ಕುಳಿತುಕೊಳ್ಳುವ ಪ್ರಯಾಣಿಕರು ಶೌಚಾಲಯಕ್ಕೆ ಹೋಗಲು ಕಿ.ಮೀ. ನಷ್ಟು ದೂರ ಹೋಗಬೇಕು. ಕುಡಿಯುವ ನೀರಿನ ಸಮಸ್ಯೆಯಂತೂ ಹೇಳತೀರದಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಪಟ್ಟಣದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ, ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ಒದಗಿಸಬೇಕು ಎನ್ನುತ್ತಾರೆ ಸ್ಥಳೀಯರು.

ರಾಜ್ಯ ಹೆದ್ದಾರಿ ನಿರ್ಮಾಣ ಮಾಡುವ ಮುನ್ನ ಕೆಶಿಪ್‌ನವರು ಗುರುತಿಸಿದ ಜಾಗವನ್ನು ಪಟ್ಟಣ ಪಂಚಾಯತಿಗೆ ಹಸ್ತಾಂತರಿಸದ ಕಾರಣ ಬಸ್‌ ತಂಗುದಾಣ ನಿರ್ಮಿಸಲು ತೊಂದರೆಯಾಗಿದೆ. ಶೀಘ್ರ ಕೆಶಿಪ್‌ ಅಧಿಕಾರಿಗಳಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲಾಗುತ್ತದೆ. ಎಂ.ಬಿ.ಭೃಂಗಿಮಠ, ಮುಖ್ಯಾಧಿಕಾರಿ

 

-ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next