Advertisement

ಕೆ.ಕೆ. ಪೈ-ಗಣ್ಯರು ಕಂಡಂತೆ…

02:33 AM Jun 26, 2021 | Team Udayavani |

ಕೆ.ಕೆ. ಪೈ ಈಗ ಬದುಕಿರುತ್ತಿದ್ದರೆ ಇಂದು ಅವರಿಗೆ 101 ವರ್ಷ ಪ್ರಾಯವಾಗುತ್ತಿತ್ತು. ಕೆ.ಕೆ. ಪೈ ಈಗ ಭೌತಿಕವಾಗಿ ನಮ್ಮೊಂದಿಗಿಲ್ಲವಾದರೂ ಅವರ ನೆನಪು ಮಾತ್ರ ಶಾಶ್ವತವಾಗಿ ಉಳಿಯಲಿದೆ.

Advertisement

ಕೆ.ಕೆ. ಪೈ ಅವರ ಕುರಿತಾಗಿ ಪ್ರಕಟ ಗೊಂಡಿರುವ ಹಲವು ಪುಸ್ತಕಗಳಲ್ಲಿ ಪ್ರಮುಖವಾದವು ಎರಡು. ಅವುಗಳಲ್ಲಿ ಒಂದು ಇಂಗ್ಲಿಷ್‌ ಪುಸ್ತಕ. ಇನ್ನೊಂದು ಕನ್ನಡದಲ್ಲಿದೆ. ಈ ಎರಡು ಪುಸ್ತಕಗಳು 1998ರಲ್ಲಿ ಕೆ.ಕೆ. ಪೈಯವರ 78ನೆಯ ಜನ್ಮದಿನದಂದು ನಡೆದ ಸಾರ್ವಜನಿಕ ಸಮ್ಮಾನ ಕಾರ್ಯಕ್ರಮದ ಅಂಗ ವಾಗಿ ಪ್ರಕಟಗೊಂಡಿವೆ.

ಅನ್ನದಾತ
ಸಿಂಡಿಕೇಟ್‌ ಬ್ಯಾಂಕ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ಅಂದಿನ ಕೇಂದ್ರ ಅರ್ಥ ಸಚಿವ ಸಿ. ಸುಬ್ರಹ್ಮಣ್ಯಮ್‌ ಅವರು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆ.ಕೆ. ಪೈ ತೋರಿದ ಸಾಧನೆಗಳು ಅಸಾ ಮಾನ್ಯವಾಗಿದ್ದು ಅವರ ನಾಯಕತ್ವಕ್ಕೆ ಸಮಾಂತರ ವಾದವರು ವಿರಳ ಎಂದು ಪ್ರಶಂಸಿಸಿದ್ದರು. ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಎನ್‌.ಡಿ. ತಿವಾರಿ ಅವರು ಕೆ.ಕೆ. ಪೈ ಅವರ ನಾಯಕತ್ವ ಮತ್ತು ಸಾಧನೆಗಳನ್ನು ಶ್ಲಾಘಿಸಿದರು.

ಐಸಿಐಸಿಐ ಬ್ಯಾಂಕ್‌ನ ಅಂದಿನ ಅಧ್ಯಕ್ಷ ಎನ್‌. ವಾಘೂಲ್‌ ಅವರು ಕೆ.ಕೆ. ಪೈ ಅವರ ಅಸಾಮಾನ್ಯ ನಾಯಕತ್ವವನ್ನು ಪ್ರಶಂಸಿಸಿದುದಲ್ಲದೆ ಕೆ.ಕೆ. ಪೈ ತಮ್ಮ “ಬ್ಯಾಂಕಿಂಗ್‌ ಗುರು’ ಎಂದು ವರ್ಣಿಸಿದ್ದರು. ಇನ್ನು ಸತೀಶ್ಚಂದ್ರ ಹೆಗ್ಡೆ ಅವರು ಕೆ.ಕೆ. ಪೈ ಅವರನ್ನು ಯಾವಾಗಲೂ “ಅನ್ನದಾತ’ ಎಂದು ಕೊಂಡಾಡುತ್ತಿದ್ದರು. ಹೆಗ್ಡೆ ಅವರ ಆಶಯದಂತೆ ಸಮ್ಮಾನ ಸಮಾರಂಭದಲ್ಲಿ ಕೆ.ಕೆ. ಪೈ ಅವರಿಗೆ ಚಿನ್ನದ ಬಟ್ಟಲನ್ನು ನೀಡಲಾಯಿತು.

ರನ್ನ ಭಂಡಾರ
ಸಮ್ಮಾನ ಸಮಾರಂಭದಲ್ಲಿ ಪ್ರಕಟಿಸಲ್ಪಟ್ಟ ಎರಡು ಪುಸ್ತಕಗಳಲ್ಲಿ ಹಲವಾರು ಗಣ್ಯರು ಮತ್ತು ಹೆಸರಾಂತ ಲೇಖಕರು ಕೆ.ಕೆ. ಪೈ ಅವರ ನಾಯಕತ್ವ ಸಾಧನೆಗಳು, ಪ್ರತಿಭೆಗಳು ಮತ್ತು ಅವರ ಸಮಾಜಸೇವೆಯ ಕುರಿತಾಗಿ ಬರೆದಿರುವರು. ಪ್ರೊ| ಕು.ಶಿ. ಹರಿದಾಸ ಭಟ್ಟರ ಪ್ರಕಾರ ಕೆ.ಕೆ. ಪೈ ಬ್ಯಾಂಕಿಂಗ್‌ ಪ್ರತಿಭೆ ಮಾತ್ರ ಆಗಿರಲಿಲ್ಲ. ಸಮಾಜ ಸೇವೆ, ಸಾಹಿತ್ಯ, ಸಾಂಸ್ಕೃತಿಕ, ಶಿಕ್ಷಣ ಇತ್ಯಾದಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ “ಮಿನುಗು ಪ್ರತಿಭೆ’ಯಾಗಿದ್ದರು. “ನೂರಾರು ಸಂದರ್ಭಗಳಲ್ಲಿ ತಾನು ಸಂಪರ್ಕಿಸಿದ ವ್ಯಕ್ತಿಗಳನ್ನು ಸ್ಮತಿಸಂಪುಟದಲ್ಲಿ ಜತನವಾಗಿರಿಸಿ ಮೌಲ್ಯಾಂಕನ ಮಾಡಬಲ್ಲ ಒಂದು ರನ್ನ ಭಂಡಾರವೇ ಕೆ.ಕೆ. ಪೈಗಳಲ್ಲಿ ಅಡಕವಾಗಿದೆ’ ಎಂದು ಕುಶಿ ಅವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ.

Advertisement

ಕೌಶಲ್ಯದೊಳೆತ್ತಿದ ಕೈ
ಪಾಡಿಗಾರು ಶೀನ ಶೆಟ್ಟರು ತಮ್ಮ ಲೇಖನದಲ್ಲಿ ಕೆ.ಕೆ. ಪೈ ಎಂತಹ ಅದ್ಭುತ ಆಡಳಿತಗಾರರಾಗಿದ್ದರು ಎಂಬುದನ್ನು ವಿವರಿಸಿದ್ದಾರೆ. ಬಡೆಕಿಲ ಕೃಷ್ಣ ಭಟ್ಟರು ತಮ್ಮ ಲೇಖನದಲ್ಲಿ ಕೆ.ಕೆ. ಪೈ ಅವರನ್ನು “ಕೌಶಲ್ಯದೊಳೆತ್ತಿದ ಕೈ’ ಎಂದು ವರ್ಣಿಸಿದ್ದಾರೆ.

ಪ್ರೊ| ಎಂ. ರಾಮಚಂದ್ರ ಅವರು ಕೆ. ಕೆ. ಪೈ ಅವರ ಪರಿಚಯ, ಸಾಮೀಪ್ಯ, ಸತ್ಸಂಗ ಗಳು ಹೆಜ್ಜೆನಿನಂತೆಯೇ – ಸರಸ, ಸಂತೋಷಪ್ರದ ಮತ್ತು ಹಿತಕರ ಎಂದು ವಿವರಿಸಿದ್ದಾರೆ. ಕೆ.ಎಂ. ಉಡುಪರು ತಮ್ಮ ಲೇಖನದಲ್ಲಿ ಕೆ.ಕೆ. ಪೈ ಗ್ರಾಮೀಣ ಅಭಿವೃದ್ಧಿಗೆ ನೀಡಿದ ಅಸಾಮಾನ್ಯ ಕೊಡು ಗೆಯನ್ನು ಸ್ಮರಿಸಿದ್ದಾರೆ. ಸಿಂಡಿಕೇಟ್‌ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎಚ್‌.ಎನ್‌.ರಾವ್‌ ತಮ್ಮ ಲೇಖನದಲ್ಲಿ ಕೆ.ಕೆ. ಪೈ ಕುರಿತು ಈ ರೀತಿ ಬರೆದಿದ್ದಾರೆ -‘K.K. Pai’s life has been a saga of hard work, planning, innovation, dedication and relentless efforts to building of the Syndicate Bank to greater and greater hights year after year’.

ಎಂ.ವಿ. ಕಾಮತ್‌ ಅವರು ಕೆ.ಕೆ. ಪೈ ಅವರ ಕುರಿತಾಗಿ ಬರೆಯುತ್ತಾ ವಿದ್ಯಾರ್ಥಿ ಜೀವನದಲ್ಲಿ ಕೆ.ಕೆ. ಪೈ ಕಲಿಕೆಯಲ್ಲಿ ಅದರಲ್ಲೂ ಮುಖ್ಯವಾಗಿ ಗಣಿತದಲ್ಲಿ ಎಲ್ಲರಿಗಿಂತ ಯಾವಾಗಲೂ ಮುಂದೆ ಇರುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ. ಹೆಸರಾಂತ ಲೇಖಕ ಜಿ.ಟಿ. ನಾರಾಯಣ ರಾವ್‌ ಕೆ.ಕೆ. ಪೈ ಅವರನ್ನು “ಮೈವೆತ್ತ ಲಾಲಿತ್ಯ’ ಎಂದು ವರ್ಣಿಸಿದ್ದಾರೆ.

ಗುಣಗ್ರಾಹಿ ವಿಮರ್ಶಕ
ಕೆ.ಕೆ. ಪೈ ಒಬ್ಬ ಗುಣಗ್ರಾಹಿ ವಿಮರ್ಶಕರಾಗಿದ್ದಾರೆ ಎಂದು ಪ್ರೊ| ಕೆ.ಆರ್‌. ಹಂದೆ ಹೇಳಿದ್ದಾರೆ. ಯಾವುದೇ ವಿಷಯವನ್ನು ಓದಿ ಅರ್ಥೈಸಿಕೊಂಡು ವಿಮರ್ಶಿಸುವ ಸಾಮರ್ಥ್ಯ ಅವರಿಗಿದೆ ಎಂಬುದು ಪ್ರೊ| ಹಂದೆ ಅವರ ಲೇಖನದ ತಾತ್ಪರ್ಯ.
ಬಿ.ವಿ. ಕೆದಿಲಾಯರ ಪ್ರಕಾರ ಕೆ.ಕೆ. ಪೈ ಆದರ್ಶವಾದಿಯೂ ಹೌದು, ವಾಸ್ತವವಾದಿಯೂ ಹೌದು, ಯೋಧನೂ ಹೌದು, ರಸಿಕನೂ ಹೌದು, ರಾಜಕಾರಣಿಯೂ ಹೌದು, ದಾರ್ಶನಿಕನೂ ಹೌದು. ಇವೆಲ್ಲವೂ ಸೇರಿದ ಮಧುರ ಪಾಕವೇ ಕೆ.ಕೆ. ಪೈ ಎಂದವರು ವರ್ಣಿಸಿದ್ದಾರೆ.

ಕೆ.ಕೆ. ಪೈ ಅವರ ನಾಯಕತ್ವ ಮತ್ತು ಆಡಳಿತವನ್ನು ಹಿಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಬಹಳಷ್ಟು ಹೊಗಳಿದ್ದರು. ಪಾಟೀಲ ಪುಟ್ಟಪ್ಪ ಅವರು ಕೆ.ಕೆ. ಪೈ ಅವರ ಆಡಳಿತ ಹಾಗೂ ಬ್ಯಾಂಕಿಂಗ್‌ ಮತ್ತು ಶಿಕ್ಷಣ ಕ್ಷೇತ್ರದ ಸೇವೆಗಳಿಗೆ ಸರಿಸಾಟಿಯಿಲ್ಲ ಎಂದು ಬರೆದಿದ್ದರು. ಕೆ.ಕೆ. ಪೈ ಅವರ ವಿಷಯದಲ್ಲಿ ಕೆ.ಆರ್‌. ರಾಮಮೂರ್ತಿ, ಜೆ.ಎಸ್‌. ವಾಘೆ¾àಯ, ಮೂರ್ತಿ ಎರ್ಕಾಡಿತ್ತಾಯ ಸಹಿತ ಹಲವರು ಬರೆದಿದ್ದಾರೆ ಮತ್ತು ತಮ್ಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೀಗೆ ಹಲವು ಹಣ್ಯರು ಕೆ.ಕೆ. ಪೈ ಅವರನ್ನು ತಮ್ಮದೇ ಆದ ಮಾತುಗಳಲ್ಲಿ ಬಣ್ಣಿಸಿದ್ದಾರೆ.

– ಡಾ| ಕೆ. ಕೆ. ಅಮ್ಮಣ್ಣಾಯ

Advertisement

Udayavani is now on Telegram. Click here to join our channel and stay updated with the latest news.

Next