Advertisement

ಬೆರಳ ತುದಿಯ ಬರೀ ಓಳು…

12:59 PM May 29, 2018 | Harsha Rao |

ಇಂದು ವಾಟ್ಸಾéಪ್‌- ಫೇಸ್‌ಬುಕ್‌ ತೆರೆದರೆ ಸಾಕು; ಆಹಾರ ಚೆಲ್ಲಬೇಡಿ, ತಾರಸಿ ಮೇಲೆ ಬಾಯಾರಿ ಬಂದ ಹಕ್ಕಿಗಳಿಗೆ ನೀರು ಇಡಿ, ಅಪಘಾತದಲ್ಲಿ ನರಳುತ್ತಿದ್ದರೆ ಅವರನ್ನು ಕಾಪಾಡಿ, ರಕ್ತದಾನ ಮಾಡಿ… ಇಂಥ ಮೆಸೇಜುಗಳೇ ಕಾಣಿಸುತ್ತವೆ. ಆದರೆ, ಇಂಥ ಸಂದೇಶಗಳನ್ನು ಕಣ್ಮುಚ್ಚಿಕೊಂಡು ಪಟಕ್ಕನೆ ದಾಟಿಸುವ ಎಷ್ಟು ಮಂದಿ ಇದನ್ನು ಆಚರಿಸಿದ್ದಾರೆ? ಎನ್ನುವುದು ಸದ್ಯದ ಪ್ರಶ್ನೆ…

Advertisement

ಫೇಸ್‌ಬುಕ್‌- ವಾಟ್ಸಾéಪ್‌ ಇಲ್ಲದ ಕಾಲದಲ್ಲೇ ಆ ಹಾಡು ವೈರಲ್‌ ಆಗೊØàಗಿತ್ತು; “ಹೇಳುವುದು ಒಂದು ಮಾಡುವುದು ಇನ್ನೊಂದು’. ಯೆಸ್‌… ಅದೇ ಸ್ವತಃ ಅಣ್ಣಾವ್ರು “ಜ್ವಾಲಾಮುಖೀ’ ಚಿತ್ರದಲ್ಲಿ ಹಾಡಿದ ಹಾಡೇಕೋ, ಇಂದು ಮನದಾಳದಲ್ಲಿ ಮತ್ತೆ ಮತ್ತೆ ಪ್ಲೇ ಆಗುತಿದೆ. ಇದಕ್ಕೆ ಕಾರಣ ಖಂಡಿತಾ ಯಾವ ಹೆಣ್ಣೂ ಅಲ್ಲ, ರಾಜಕಾರಣಿಯಂತೂ ಅಲ್ಲವೇ ಅಲ್ಲ. ನಮ್ಮ ಸುತ್ತಮುತ್ತಲಿನ ಟೈಂ ಪಾಸ್‌ ಗೆಳೆಯರಷ್ಟೇ!

ಯಾಕೆ ಅಂತೀರಾ? ಕೆಲ ತಿಂಗಳ ಹಿಂದೆ “ವಿಶ್ವ ಆಹಾರ ದಿನ’ ಬಂತು. ಇಂಥ ವಿಶೇಷ ದಿನಗಳೇನಾದರೂ ಬಂದುಬಿಟ್ಟರೆ ನನ್ನ ಒಬ್ಬ ಮಿತ್ರನಿಗೆ ಹಬ್ಬವೋ ಹಬ್ಬ. ಆ ದಿನಕ್ಕೆ ಪೂರಕವಾಗಿ ಆತ ಅದ್ಭುತ ಮೆಸೇಜೊಂದನ್ನು ಹುಟ್ಟು ಹಾಕುತ್ತಾನೆ. ಅದನ್ನು ನಾನಾ ಗ್ರೂಪುಗಳಲ್ಲಿ ಹರಿಬಿಟ್ಟು, ವೈರಲ್‌ ಆಗಿಸಿ, ಇಡೀ ದಿನ ಅದ ಕ್ರೆಡಿಟ್ಟು ತಗೊಂಡು, ಮಿಂಚುತ್ತಿರುತ್ತಾನೆ.

ಆ ದಿನವೂ ಆತ ಒಂದು ಸಂದೇಶ ಸೃಷ್ಟಿಸಿಬಿಟ್ಟಿದ್ದ. “ಆಹಾರ ಎಸೆಯದಿರಿ, ಬಾಳು ಕಸಿಯದಿರಿ’ ಅಂತ. ಯಾರಿಗಾದರೂ ಒಮ್ಮೆ ಈ ಸಾಲುಗಳನ್ನು ನೋಡಿದರೆ, ಮೈಯಲ್ಲೇನೋ ಜಾಗೃತಿಯ ವಿದ್ಯುತ್‌ ಸಂಚಾರಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಅದು ಬೇರೆ ಆತ ಆಫ್ರಿಕದ, ನಿಸ್ತೇಜ ಮುಖದ ಯಾವುದೋ ಬಡ ಪುಟಾಣಿಯ ಚಿತ್ರವನ್ನೂ ಹಾಕಿದ್ದ. ಅದನ್ನು ನೋಡಿಯೇ, ಅನೇಕರು “ಅಯ್ಯೋ…’ ಎಂದು ಉದ್ಗರಿಸಿರಲೂಬಹುದು. ರಾತ್ರೋ ರಾತ್ರಿ ಆ ಪೋಸ್ಟೂ ವೈರಲ್‌ ಆಗಿಹೋಯ್ತು.

ಅವತ್ತು ಮಧ್ಯಾಹ್ನ ಒಂದು ಘಟನೆ ನಡೆಯಿತು. ಹಾಗೆ ಸಂದೇಶ ಹುಟ್ಟುಹಾಕಿದ ಗೆಳೆಯನ ಪಕ್ಕ ಊಟಕ್ಕೆ ಕುಳಿತಿದ್ದೆ. ಆ ಮಹಾಪುರುಷ, ತನ್ನ ತಟ್ಟೆಯಲ್ಲಿದ್ದ ಅಂಗೈಯಗಲದ ಚಪಾತಿಯ ಜತೆಗೆ ಒಂದಿಷ್ಟು ಮೊಸರಿನಲ್ಲಿ ಚೆನ್ನಾಗಿ ಕಲಸಿದ್ದ ಅನ್ನವನ್ನು ಬಿಟ್ಟು ಎದ್ದಿದ್ದ. ಅದನ್ನು ನೋಡಿ, ವೇಸ್ಟ್‌ ಮಾಡ್ತಿದ್ದಾನಲ್ಲ ಅಂತ ಬೇಸರದಿಂದ ನಾನು ಕೇಳಿಯೇಬಿಟ್ಟೆ: “ಯಾಕೆ ಊಟ ಬಿಟ್ಟೆ?’. ಅದಕ್ಕೆ ಆತ, “ಏನ್‌ ಕೆಟ್ಟ ಊಟ. ಸ್ವಲ್ಪವೂ ಚೆನ್ನಾಗಿಲ್ಲ, ನಂಗ್‌ ಇಷ್ಟಾನೂ ಆಗ್ಲಿಲ್ಲ. ಸ್ವಲ್ಪ ತಾನೆ ಬಿಟ್ಟಿರೋದು’ ಎಂದು ಮಾಡಿದ ತಪ್ಪಿಗೆ ತೇಪೆ ಹಚ್ಚಲು ಹೊರಟ. ಆಗ ನನಗೆ ನೆನಪಾಗಿದ್ದು, ಆತನೇ ಮುಂಜಾನೆ ಕಳುಹಿಸಿದ್ದ ಆ ಮೆಸೇಜು!

Advertisement

ಹಾಗೆ ಆತ ಮಾಡುತ್ತಿದ್ದುದ್ದು ಅದೊಂದೇ ದಿನವಲ್ಲ. ಊಟ ಬಿಟ್ಟು ಏಳುವುದು ಆತನಿಗೆ ರೂಢಿಯಾಗಿ ಹೋಗಿತ್ತು. ಕಳುಹಿಸಿದ ಮೆಸೇಜಿಗೂ, ಆತನ ವರ್ತನೆಗೂ ಸಂಬಂಧವೇ ಇಲ್ಲವೆಂದು ಅರಿತು ನಾನು ಸುಮ್ಮನಾದೆ.
  ಆತ ಮಾತ್ರ ಆರೋಪಿ ಅಂತ ನಾನು ಇಲ್ಲಿ ಸಾಬೀತು ಮಾಡಲು ಹೋಗುತ್ತಿಲ್ಲ. ಇದು ಬರಿಯ ಆಹಾರದ ವಿಷಯವೂ ಅಲ್ಲ. ವಿಶ್ವ ಜಲ ಸಂರಕ್ಷಣೆ ದಿನ ಆಚರಿಸುವ ಹೊತ್ತಿನಲ್ಲೂ ಇಂಥದ್ದೇ ಪ್ರಮಾದಗಳು ನನ್ನ ಕಣ್ಣಿಗೆ ಕಂಡಿವೆ. ಜಲ ಸಂರಕ್ಷಣೆ ಬಗ್ಗೆ ಮಾತಾಡುವ ನಾವು, ಪ್ರತಿದಿನ ಸ್ನಾನ ಮಾಡುವಾಗ, ಕೈಕಾಲು ತೊಳೆಯುವಾಗ, ಗೊತ್ತಿದ್ದೂ ವ್ಯರ್ಥ ಮಾಡುವ ನೀರೆಷ್ಟು? ಮೂಲೆಯ ಕೊಳಾಯಿಯಿಂದ “ಅಯ್ಯೋ ನನ್ನ ಕಾಪಾಡಿ’ ಎಂದು ಅಂಗಲಾಚುವ ಗಂಗಾ ಮಾತೆಗಷ್ಟೇ ಈ ಸತ್ಯ ಗೊತ್ತು. ಹಲ್ಲುಜ್ಜುವಾಗಲೂ ನಲ್ಲಿಯ ನೀರನ್ನು ನಿಲ್ಲಿಸದೇ, 4ಜಿ ವೇಗದಲ್ಲಿ ಅದನ್ನು ಹರಿಯಲುಬಿಟ್ಟು, ನಂತರ ಬಂದು ಮೊಬೈಲಿನಲ್ಲಿ “ನೀರನ್ನು ಉಳಿಸಿ’ ಎಂದು ಹೇಳುವುದರಲ್ಲಿ ಅರ್ಥವೇನು?

ಮತ್ತೆ ಕೆಲವರಿದ್ದಾರೆ. ಜನವರಿ- ಮೇ ತಿಂಗಳಲ್ಲಿ ಅವರು ಎಚ್ಚರಗೊಳ್ಳುವರು. “ಬೇಸಿಗೆ ಶುರುವಾಗಿದೆ. ಪ್ರಾಣಿ ಪಕ್ಷಿಗಳಿಗೆ ಕುಡಿಯಲು ಎಲ್ಲೂ ನೀರು ಸಿಗುತ್ತಿಲ್ಲ. ನಿಮ್ಮ ತಾರಸಿಯ ಮೇಲೆ ಒಂದು ಬೌಲ್‌ನಲ್ಲಿ ನೀರನ್ನು ಇಟ್ಟು, ಪಕ್ಷಿಗಳ ಜೀವ ಕಾಪಾಡಿ’ ಎನ್ನುವ ಅವರ ಕಳಕಳಿಗೆ ಒಂದು ಸಲಾಂ. ಯಾರೋ ಹುಟ್ಟುಹಾಕಿದ ಈ ಮೆಸೇಜನ್ನು ಪಟಕ್ಕಂತ ಕಣ್ಮುಚ್ಚಿಕೊಂಡು ದಾಟಿಸುವುದಷ್ಟೇ ಇವರ ಕೆಲಸ. ಅದನ್ನು ಅಳವಡಿಸಿಕೊಳ್ಳುವ ಗೋಜಿಗೆ ಇವರು ಹೋಗಿದ್ದನ್ನು ನಾನು ಯಾವತ್ತೂ ಕಂಡಿಲ್ಲ. ಅವರ ಮನೆಯ ತಾರಸಿಯಲ್ಲಿ ನೂರಾರು ಹಕ್ಕಿಗಳು ಬಾಯಾರಿದ ಗಂಟಲಿನಲ್ಲಿ “ಗುಟುರ್‌ ಗುಟುರ್‌…’ ಎಂದರೂ ಇವರು ಒಂದು ಗುಟುಕೂ ನೀರನ್ನು ಮೇಲಿಟ್ಟಿರುವುದಿಲ್ಲ.

ಇಂದು ಸೋಷಿಯಲ್‌ ಮೀಡಿಯಾದಂಥ ಪ್ರಬಲ ಮಾರ್ಗ ನಮ್ಮ ಕಣ್ಮುಂದಿದೆ. ಅದರಲ್ಲಿ ಸುಮ್ಮನೆ ಕಾಲಹರಣ ಮಾಡಲು, ಲೈಕ್‌ ಗಿಟ್ಟಿಸಿಕೊಳ್ಳಲು ಪೋಸ್ಟ್‌ಗಳನ್ನು ಹಾಕುವುದನ್ನು ಬಿಟ್ಟು, ಸಾಮಾಜಿಕ ಕಳಕಳಿ ಇಟ್ಟುಕೊಳ್ಳಬೇಕಿದೆ. ಇನ್ನೊಬ್ಬರಿಗೆ ಹೇಳುವ ಮೊದಲು ನಾವೇ ಅದನ್ನು ಆಚರಿಸಿ, ಸಮಾಜಕ್ಕೆ ಮಾದರಿಯಾದರೆ, ಇಂಥ ಜಾಲತಾಣಗಳ ಉದ್ದೇಶವೂ ಸಾರ್ಥಕತೆ ಪಡೆದುಕೊಳ್ಳುತ್ತದೆ.
– – –
ಅಲರ್ಟ್‌ ಆಗಿ…
– ಆಚರಣೆ ಎನ್ನುವುದು ಬೆರಳ ತುದಿಯಲ್ಲಿ ಸಂದೇಶ ಟೈಪಿಸಿದರಷ್ಟೇ ಮುಗಿದು ಹೋಗುವಂಥದ್ದಲ್ಲ.
– ನಿಮ್ಮ ವಾಟ್ಸಾéಪ್‌ಗೆ ಅಥವಾ ಫೇಸ್‌ಬುಕ್‌ನಲ್ಲಿ ಯಾರಾದರೂ ಇಂಥ ಸಂದೇಶ ಹಾಕಿದರೆ, ಕೂಡಲೇ ಅವರನ್ನು ಪ್ರಶ್ನಿಸಿ: “ನೀವು ಈ ಕೆಲಸ ಮಾಡಿದ್ದೀರಾ?’ ಅಂತ.
– “ಇಲ್ಲ’ ಎಂಬ ಉತ್ತರ ಅವರದ್ದಾದರೆ, ಮೊದಲು ಅಳವಡಿಸಿಕೊಳ್ಳಲು ಸೂಚಿಸಿ.
– ಇಂಥ ಸಂದೇಶ ಹುಟ್ಟುಹಾಕುವವರು, ಮೊದಲು ಅದನ್ನು ಅನುಸರಿಸಿ, ನೈತಿಕತೆಯನ್ನು ಉಳಿಸಿಕೊಳ್ಳಬೇಕು.
– ಈ ಸಂದೇಶಗಳು ಇನ್ನೊಬ್ಬರ ಕಣ್ತೆರೆಸುವುದು ನಿಜ. ಪ್ರತಿಯೊಬ್ಬರು ಇದನ್ನು ಆಚರಿಸಿದರಷ್ಟೇ ಇದಕ್ಕೆ ಒಂದು ಅರ್ಥ. 

– ಮಧುಶೇಖರ್‌ ಸಿ.

Advertisement

Udayavani is now on Telegram. Click here to join our channel and stay updated with the latest news.

Next