Advertisement

ಅಕ್ಷರ ಲೋಕದ ಅಂಗಳದಲ್ಲಿ

07:29 PM Aug 30, 2019 | Sriram |

ಕಾಡಲ್ಲೊಂದು ಸುತ್ತು…
ಕಾಡು ಎಂದರೆ ಅರಣ್ಯವೂ ಹೌದು. ಅದು ನಮ್ಮನ್ನು ಕಾಡುವುದೂ ಹೌದು. ದಟ್ಟಾರಣ್ಯವನ್ನು ನೋಡಿದಾಗ ಮನಸ್ಸು ಅರಳುತ್ತದೆ. ಧ್ವಂಸಗೊಂಡ ಕಾಡನ್ನು ನೋಡಿದಾಗ ಮನಸ್ಸು ಮುದುಡುತ್ತದೆ. ಮನುಷ್ಯ, ತನ್ನ ವಿಕಾಸ ಚರಿತ್ರೆಯ ಶೇ.95ರಷ್ಟು ಭಾಗವನ್ನು ಕಾಡು ಮೇಡುಗಳಲ್ಲಿಯೇ ಕಳೆದಿದ್ದಾನೆ. ಕಾಡಿನ ಒಂದೊಂದು ಜೀವಿಯೂ ನಮ್ಮ ಪೂರ್ವಜರನ್ನು ಕಾಡಿದೆ. ಅವರನ್ನು ಸೆಳೆದಿದೆ, ಅಟ್ಟಾಡಿಸಿದೆ, ಬೆಳೆಸಿದೆ, ಹಿಂಸಿಸಿದೆ, ಅವನ ವ್ಯಕ್ತಿತ್ವವನ್ನು ರೂಪಿಸಿದೆ. ಕಾಡಿನ ಜೀವಿಗಳೆಲ್ಲ ಸೇರಿ, ಮನುಷ್ಯನನ್ನು ಅತ್ಯಂತ ಬಲಾಡ್ಯ ಜೀವಿಯನ್ನಾಗಿ ಮಾಡಿವೆ. ಅವನಿಗೆ ಓಡಲು, ಏರಲು, ಜಿಗಿಯಲು, ಈಜಲು ಕಲಿಸಿದ್ದೇ ಈ ಜೀವಿಗಳು.

ಹಾಗಾಗಿ, ನಮ್ಮ ಪ್ರತಿಯೊಂದು ಜೀವಕೋಶದಲ್ಲೂ ಕಾಡಿನ ಮೆಮೊರಿ ಇದೆ. ಅದನ್ನು ಕೆದಕಿದಾಗಲೆಲ್ಲ ಕಾಡು ಕಾಡುತ್ತದೆ.ಇಂಥ ಹಿನ್ನೆಲೆಯ ಕಾಡನ್ನು, ಇದು ಮಾರುವೇಷದ ದೇವರು ಎಂದು ನಂಬಿ ಪೂಜಿಸುವ ಜನರಿದ್ದಾರೆ. ಕಾಡು ಪ್ರಾಣಿಗಳನ್ನು ಸ್ವಂತ ಮಕ್ಕಳಿಗಿಂತ ಹೆಚ್ಚು ಮುತುವರ್ಜಿಯಿಂದ ಕಾಪಾಡುವ ಜನ ಇದ್ದಾರೆ. ಹಾಗೆಯೇ, ಹಲ ಬಗೆಯ ಸಂಪತ್ತಿನಿಂದ ಕೂಡಿರುವ ಕಾಡನ್ನು ಲೂಟಿ ಮಾಡುವವರೂ ಇದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಡಿಗೆ ಬೆಂಕಿ ಹಚ್ಚುವ ನೀಚರೂ ಇದ್ದಾರೆ. ಕಾಡು ಇದ್ರೆ ನಾಡು ಎಂದು ಎಚ್ಚರಿಸುವವರ ಮಧ್ಯೆಯೇ- ಕಾಡಾ? ಅದರಿಂದ ಏನುಪಯೋಗ ಹೋಗ್ರಿ ಎಂದು ಉಡಾಫೆಯಿಂದ ಮಾತಾಡುವ ಜನರಿದ್ದಾರೆ. ಇಂಥವರೆಲ್ಲ ಅಸಲಿ ಮುಖವನ್ನು ತೆರೆದಿಡುತ್ತಲೇ, ಕಾಡಿನ ಅಂತರಂಗ ಆಲಿಸುವ ವಿಶಿಷ್ಟ ಪ್ರಯತ್ನವಾಗಿ “ಜಂಗಲ್‌ ಡೈರಿ’ ಹೊರಬಂದಿದೆ.
ಜಂಗಲ್‌ ಡೈರಿ, ಲೇ: ವಿನೋದ್‌ ಕುಮಾರ್‌ ಬಿ. ನಾಯ್ಕ, ಪ್ರ: ಬಹುರೂಪಿ ಪ್ರಕಾಶನ, ಸಂಜಯನಗರ, ಬೆಂಗಳೂರು

Advertisement

ವೈದ್ಯ”ರತ್ನ’ಗಳು
ಇತಿಹಾಸ ಪುರುಷರಾದ ಹಲವು ವಿಜ್ಞಾನಿಗಳ ಅನುಭವ, ಸಾಧನೆ ಮತ್ತು ಜೀವನದರ್ಶನವನ್ನು ಯುವಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ “ಲೋಕಜ್ಞಾನ ಮಾಲೆ’ಯನ್ನೂ ಆರಂಭಿಸಲಾಗಿದೆ. ನವಕರ್ನಾಟಕ ಪ್ರಕಾಶನದ ಈ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಈ ವರೆಗಿನ ಮಹತ್ವದ ಸಂಶೋಧನೆಗಳು ಮತ್ತು ಸಂಶೋಧಕರನ್ನು ಪರಿಚಯಿಸಲಾಗುತ್ತದೆ.

ವೈದ್ಯವಿಜ್ಞಾನಿಗಳಿಂದ ಆವಿಷ್ಕಾರಗೊಂಡ ಹಲವು ರೀತಿಯ ಸಂಶೋಧನಾ ಫ‌ಲಗಳು ಇಂದು ಮಾನವನಿಗೆ ವರದಾನವಾಗಿ ಪರಿಣಮಿಸಿವೆ. ಮಾನವ ಕುಲಕ್ಕೆ ಮಾರಕವಾದ ಅನೇಕ ಕಾಯಿಲೆಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ವೈದ್ಯವಿಜ್ಞಾನದ ಕೊಡುಗೆ ಅಪಾರ. ಸಂಶೋಧನೆ- ಆವಿಷ್ಕಾರಗಳ ಮೂಲಕ ಮಹತ್ವದ್ದನ್ನು ಸಾಧಿಸಿದ, ಪ್ರಯೋಗಗಳ ಮೂಲಕ ಖಚಿತ ಫ‌ಲಿತಾಂಶ ಪಡೆದ ವಿಜ್ಞಾನಿಗಳು ಎಂದೆಂದಿಗೂ ಸ್ಮರಣೀಯರೇ. ಹೊಸ ರೀತಿಯ ಚಿಕಿತ್ಸಾ ವಿಧಾನ, ಹೊಸ ಉಪಕರಣಗಳ ಅಭಿವೃದ್ಧಿ, ಲೇಸರ್‌ ಬಳಕೆ… ಮುಂತಾದುವೆಲ್ಲ, ರೋಗಿಗೆ ಸಮಾಧಾನ ತರುವ ವಿಷಯಗಳೇ. ಔಷಧಿಗಳ ಹೊಸ ಆವಿಷ್ಕಾರವೂ ಅಷ್ಟೇ: ಎಲ್ಲರಿಗೂ ಗೊತ್ತಿರುವಂತೆ, ಇವತ್ತು ಎಲ್ಲ ಕಾಯಿಲೆಗಳಿಗೂ ಔಷಧಿಗಳಿವೆ. ಇದೆಲ್ಲಾ ಸಾಧ್ಯವಾಗಿರುವುದು ಬಗೆಬಗೆಯ ಸಂಶೋಧನೆಗಳಿಂದಲೇ. ಇದಕ್ಕೆಲ್ಲ ಕಾರಣರಾದ ವೈದ್ಯವಿಜ್ಞಾನಿಗಳ ಪರಿಚಯ ಇಲ್ಲಿದೆ. ಕ್ರಿಸ್ತಪೂರ್ವ 600ರಲ್ಲಿದ್ದ ಸುಶ್ರುತನಿಂದ ಆರಂಭಿಸಿ, 2013ರಲ್ಲಿ ನಿಧನನಾದ ರಾಬರ್ಟ್‌ ಎಡ್ವರ್ಡ್‌ ವರೆಗಿನ 41 ವೈದ್ಯ ವಿಜ್ಞಾನಿಗಳ ಬದುಕು ಸಾಧನೆಯ ಸ್ವಾರಸ್ಯಕರ ಮಾಹಿತಿ ಇಲ್ಲಿದೆ.
ವಿಶ್ವವಿಖ್ಯಾತ ವೈದ್ಯವಿಜ್ಞಾನಿಗಳು, ಲೇ: ಡಾ.ಎಚ್‌.ಡಿ. ಚಂದ್ರಪ್ಪಗೌಡ, ಡಾ. ನಾ. ಸೋಮೇಶ್ವರ, ಪ್ರ: ನವಕರ್ನಾಟಕ ಪಬ್ಲಿಕೇಷನ್ಸ್‌, ಬೆಂಗಳೂರು- 1

ತಲೆಮಾರಿನ ಮಾತು- ಕಥೆ
ಕಾದಂಬರಿಗಳಿಗೆ ಇದು ಕಾಲವಲ್ಲ. ಕಾದಂಬರಿಗಳನ್ನು ಓದುವಷ್ಟು ಸಮಯವಾಗಲಿ, ಸಹನೆಯಾಗಲಿ ಓದುಗರಿಗೆ ಇಲ್ಲ ಎಂದು ಅಲ್ಲಲ್ಲಿ ಮಾತಾಡುವುದನ್ನು ಎಲ್ಲರೂ ಕೇಳಿಯೇ ಇರುತ್ತಾರೆ. ಇಂಥ ಸಂದರ್ಭದಲ್ಲಿಯೇ ರಘು ವೆಂಕಟಾಚಲಯ್ಯ ಅವರ “ಬಿದಿರಿನ ಗಾಳ’ ಕಾದಂಬರಿ ಹೊರಬಂದಿದೆ. ಕಥೆಯೊಂದು ಹೇಗೆ ಕಾದಂಬರಿಯ ಸ್ವರೂಪ ಪಡೆಯಿತು ಎಂಬುದನ್ನು ಲೇಖಕರು ವಿವರಿಸುವುದು ಹೀಗೆ:

“ಬಿದಿರಿನ ಗಾಳ’ ಸಣ್ಣ ಕಥೆಯಾಗಿ ಥ್ರಿಲ್‌ ಕೊಡಲಿ ಎಂಬ ಉದ್ದೇಶದಿಂದ ಅದರ ಎರಡು ಕಂತುಗಳನ್ನು ವಾಟ್ಸಾéಪ್‌ ಮೂಲಕ ಮಿತ್ರ ಬಳಗಕ್ಕೆ ಕಳುಹಿಸಿದೆ. ರೋಚಕತೆ ನಿರ್ಮಿಸಲು ಹೋಗಿ ಅದೇ ಕತೆಯಾಗಿ ಹರಿದು, ಕೊನೆಗೆ ಕಾದಂಬರಿಯಾಗಿ ರೂಪುಗೊಂಡು ನಿಂತುಬಿಟ್ಟಿತು. ಕಂತುಗಳಲ್ಲಿ ಓದಿದ ಗೆಳೆಯರು, ವಾಟ್ಸಾéಪ್‌ನಲ್ಲಿಯೇ ಚರ್ಚೆಗೆ ಬಂದರು. ನಾಳೆ ಏನಾಗುತ್ತದೆ? ಯಾರು, ಯಾರ ವಿರುದ್ಧ ಮಸಲತ್ತು ಮಾಡುತ್ತಾರೆ? ಕಡೆಗೆ ಯಾರು ಗೆಲ್ಲುತ್ತಾರೆ ಎಂದೆಲ್ಲ ಕೇಳತೊಡಗಿದರು. ಈ ಕಥಾವಸ್ತು ಓದುಗರಿಗೆ ಇಷ್ಟವಾಗಿದೆ ಎಂಬುದಕ್ಕೆ ಸಾಕ್ಷಿ ಸಿಕ್ಕಿತು…’

ಈ ಕಾದಂಬರಿ, ಮೂರು ತಲೆಮಾರಿನ ಕಥೆ ಹೇಳುತ್ತದೆ. ಇಲ್ಲಿ ಗ್ರಾಮೀಣ ಬದುಕಿನ ರಮ್ಯ ಚಿತ್ರಣವಿದೆ. ಘೋರ ಚಿತ್ರಣವೂ ಇದೆ. ಸಾಮಾಜಿಕ ಸಂಘರ್ಷದ ಜೊತೆ ಜೊತೆಗೇ ಸಾಮರಸ್ಯದ ಸೊಗಸೂ ಇದೆ. ಹಳ್ಳಿಯಿಂದ ಕ್ರಮೇಣ ದೂರ ಸರಿದ ಬ್ರಾಹ್ಮಣ ಸಮುದಾಯದ ಒಳತೋಟಿ, ತಲ್ಲಣ, ಅಸಹಾಯಕತೆ, ಮಾಟ- ಮಂತ್ರವನ್ನು ನಂಬುವ, ಸಿದ್ಧಿ- ಸಾಧನೆಗಾಗಿ ಹಂಬಲಿಸುವ ಜನರ ಬದುಕಿನ ವಾಸ್ತವ ಚಿತ್ರಣವಿದೆ.
ಬಿದಿರಿನ ಗಾಳ, ಲೇ. ರಘು ವೆಂಕಟಾಚಲಯ್ಯ, ಪ್ರ ಸಮನ್ವಿತಾ ಪ್ರಕಾಶನ, ಬೆಂಗಳೂರು- 85

ಪುರಾಣ ಪಾತ್ರಗಳ ಸ್ವಗತಲಹರಿ
ರಾಮಾಯಣ ಅಂದಾಕ್ಷಣ, ರಾಮ, ಲಕ್ಷ್ಮಣ, ಸೀತೆ, ಭರತ- ಶತ್ರುಘ್ನ, ಆಂಜನೇಯ, ರಾವಣ, ವಿಭೀಷಣ… ಹೆಚ್ಚಾಗಿ ಇವರಷ್ಟೇ ನೆನಪಾಗುವುದು. ಮಹಾಭಾರತ ಅಂದರೆ, ಪಾಂಡವರು, ಕೃಷ್ಣ, ದುರ್ಯೋಧನ, ಕರ್ಣ, ಭೀಷ್ಮ- ದ್ರೋಣರು ಸೇರಿದಂತೆ ಇನ್ನೊಂದೈದಾದರು ಪಾತ್ರಗಳಷ್ಟೇ ಕಣ್ಮುಂದೆ ಬರುತ್ತವೆ.

ಆದರೆ, ಈ ಎರಡೂ ಮಹಾಕಾವ್ಯಗಳಲ್ಲಿ ಮತ್ತಷ್ಟು ಅತಿಮುಖ್ಯ ಪಾತ್ರಗಳಿವೆ. ಇಡೀ ರಾಮಾಯಣಕ್ಕೆ ಅತಿಮುಖ್ಯ ತಿರುವು ಸಿಗಲು ಕಾರಣಳಾಗುವ ಕೈಕೇಯಿ; ಬಂಗಾರದ ಜಿಂಕೆಯಾಗುವ ಮಾರೀಚ, ರಾವಣನೊಂದಿಗೆ ಯುದ್ಧ ಮಾಡುವ ಜಟಾಯು ಪಕ್ಷಿ; ಕೃಷ್ಣನನ್ನು ಕಾಡುವ, ಕಾಯುವ, ಮೋಹಿಸುವ ರಾಧೆ; ಹೆತ್ತ ತಾಯಿಯಾದರೂ ಕೃಷ್ಣನಿಂದ ದೂರವೇ ಉಳಿಯುವ ಯಶೋಧೆ, ಸೋದರಳಿಯನಿಂದಲೇ ಸಾಯುವ ಕಂಸ, ಕಣ್ಣಿದ್ದೂ ಕುರುಡಿಯಂತೆ ಬಾಳುವ ಗಾಂಧಾರಿ, ಮಹಾರಾಜನ ಪತ್ನಿ ಅನ್ನಿಸಿಕೊಂಡರೂ, ಸಂಕಟದಲ್ಲೇ ಬದುಕು ಕಳೆಯುವ ಭಾನುಮತಿ… ಇಂಥ ಪಾತ್ರಗಳ ಅಂತರಂಗದ ಪಿಸುಮಾತು ಏನಿರಬಹುದು? ಈ ಪಾತ್ರಗಳಿಗೂ ಮಾತಾಡುವ ಅವಕಾಶ ಸಿಕ್ಕರೆ, ಅವು ಏನೆಲ್ಲ ಸಂಗತಿಯನ್ನು, ಸಂಭ್ರಮ- ಸಂಕಟಗಳನ್ನು ತೆರೆದಿಡಬಹುದು ಎಂಬ ಕುತೂಹಲಕ್ಕೆ ಉತ್ತರವೆಂಬಂತೆ, “ಅಂತರಂಗ’ ಸಂಕಲನವಿದೆ. ಮೇಲೆ ಹೆಸರಿಸಿದ ಪಾತ್ರಗಳಲ್ಲದೆ, ದೇವಯಾನಿ, ಶಂತನು, ಶರ್ಮಿಷ್ಠೆಯೂ ಸೇರಿದಂತೆ, ಹಲವು ಪಾತ್ರಗಳ ಅಂತರಂಗದ ಪಿಸುಮಾತು ಇಲ್ಲಿ ದಾಖಲಾಗಿದೆ. ಇಲ್ಲಿನ ಕಥನಶೈಲಿ ಅದೆಷ್ಟು ಸಶಕ್ತವಾಗಿದೆಯೆಂದರೆ, ಒಂದೊಂದು ಅಧ್ಯಾಯ ಓದುವಾಗಲೂ, ಆ ಪಾತ್ರವೇ ಕಣ್ಮುಂದೆ ನಿಂತು ಕಥೆ ಹೇಳಿಕೊಂಡಂತೆ ಭಾಸವಾಗುತ್ತದೆ.
ಅಂತರಂಗ, ಲೇ: ಸುರೇಖಾ ಭೀಮಗುಳಿ, ಪ್ರ: ಮಡಿಲು ಪ್ರಕಾಶನ, ಮೈಸೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next