Advertisement

ಜನಸಂಖ್ಯೆಯ ಸವಾಲುಗಳು

09:02 PM Jul 13, 2019 | Sriram |

1987ರ ಜುಲೈ 11ರಂದು ವಿಶ್ವದ ಜನಸಂಖ್ಯೆ 500 ಕೋಟಿಯನ್ನು ದಾಟಿತ್ತು. ಅಂದಿನಿಂದ ಜನಸಂಖ್ಯೆಯ ಹೆಚ್ಚಳ ಮತ್ತು ಅಸಮತೋಲನದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಇದೇ ದಿನಾಂಕವನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತಿದೆ.

Advertisement

ವಿಶ್ವ ಜನಸಂಖ್ಯೆಯು ಜುಲೈ ಹನ್ನೊಂದು 1987ರಂದು 500 ಕೋಟಿಯನ್ನು ತಲುಪಿದ ದಿನ. ಅಂದಿನಿಂದ ಜನಸಂಖ್ಯೆ ಹೆಚ್ಚಳ ಮತ್ತು ಜನಸಂಖ್ಯೆಯ ಅಸಮತೋಲನದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಪ್ರತೀ ವರ್ಷ ಈ ದಿನವನ್ನು ವಿಶ್ವ ಜನಸಂಖ್ಯಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷ ಈ ದಿನಾಚರಣೆಯ ಸಂದರ್ಭ 1994ರಲ್ಲಿ ನಡೆದ ವಿಶ್ವದ ಜನಸಂಖ್ಯಾ ಶೃಂಗಸಭೆಯ ನಿರ್ಣಯಗಳ ಜಾರಿಯತ್ತ ಗಮನ ನೀಡಲಾಗುತ್ತದೆ. ಜಗತ್ತಿನ ಜನಸಂಖ್ಯೆಯು ಕ್ರಿ.ಶ. 1ರಲ್ಲಿ, ಅಂದರೆ 2011 ವರ್ಷಗಳ ಹಿಂದೆ 20 ಕೋಟಿ ಇತ್ತು. ಕ್ರಿ.ಶ. 1804ರಲ್ಲಿ ಅದು 100 ಕೋಟಿ ತಲುಪಿತು, 1999ರಲ್ಲಿ 600 ಕೋಟಿ ತಲುಪಿತು, 2011ರಲ್ಲಿ 700 ಕೋಟಿಗೂ ಮಿಕ್ಕಿತ್ತು.

1947ರಲ್ಲಿ ಅಂದಾಜು 35 ಕೋಟಿಯಷ್ಟಿದ್ದ ಭಾರತದ ಜನಸಂಖ್ಯೆ 1951ರ ಜನಗಣತಿಯಲ್ಲಿ 36 ಕೋಟಿ, 2011ರ ಜನಗಣತಿ ಪ್ರಕಾರ 121 ಕೋಟಿ ಹಾಗೂ ಪ್ರಸ್ತುತ 136 ಕೋಟಿಗೂ ಮೀರಿ ಬೆಳೆದಿದೆ. ಪ್ರಪಂಚದಲ್ಲಿ ಕೇವಲ 10 ದೇಶಗಳು ಅಂದರೆ ಚೀನ, ಭಾರತ, ಅಮೆರಿಕ, ಇಂಡೋನೇಶ್ಯ, ಬ್ರೆಜಿಲ್‌, ಪಾಕಿಸ್ಥಾನ, ನೈಜೀರಿಯ, ಬಾಂಗ್ಲಾದೇಶ, ರಷ್ಯಾ, ಮೆಕ್ಸಿಕೊ ಪ್ರಪಂಚದ ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿವೆ.

ಪ್ರಸ್ತುತ ಚೀನ 142 ಕೋಟಿ ಜನಸಂಖ್ಯೆ ಹೊಂದಿದ್ದು, ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಭಾರತ ಜನಸಂಖ್ಯೆ 136 ಕೋಟಿ ಆಗಿದ್ದು 2ನೇ ಸ್ಥಾನದಲ್ಲಿದೆ. ಆದರೆ ಮುಂದಿನ 8 ವರ್ಷಗಳಲ್ಲಿ ಭಾರತವು ಚೀನವನ್ನು ಹಿಂದಕ್ಕಿ ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಗುರುತಿಸಿಕೊಳ್ಳಲಿದೆ ಎಂದು ವಿಶ್ವ ಸಂಸ್ಥೆಯು ಜನಸಂಖ್ಯಾ ಏರಿಳಿತ ಕುರಿತ “”ವಿಶ್ವ ಜನಸಂಖ್ಯೆ ನಿರೀಕ್ಷೆ 2019” ವರದಿಯಲ್ಲಿ ಉಲ್ಲೇಖೀಸಿದೆ.

ಜನಸಂಖ್ಯಾ ಅಸಮತೋಲನ
ನೈಜೀರಿಯಾ, ಭಾರತ, ಮೆಕ್ಸಿಕೋ, ಬಾಂಗ್ಲಾ ಕ್ರಮವಾಗಿ ಜನಸಂಖ್ಯೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಾಗಿವೆ. ನೆರೆಯ ಪುಟ್ಟದೇಶ ಬಾಂಗ್ಲಾದ ಜನಸಂಖ್ಯೆ ರಷ್ಯಾದ ಜನಸಂಖ್ಯೆಗಿಂತ ಸುಮಾರು 2 ಕೋಟಿಗೂ ಮಿಕ್ಕಿದೆ. ಇನ್ನೊಂದೆಡೆಯಲ್ಲಿ ಜಪಾನ್‌, ರಷ್ಯಾ ಮತ್ತು ಯುರೋಪಿನ ದೇಶಗಳ ಜನಸಂಖ್ಯೆಯಲ್ಲಿ ಕುಸಿತ ಕಂಡುಬರುತ್ತಿದೆ. ಇದರಿಂದಾಗಿ ಮುಂದೆ ಕೆಲಸ ಮಾಡುವ ಯುವ ಶಕ್ತಿ ಕಡಿಮೆಯಾಗಲಿದೆ. ಅಲ್ಲದೆ, ಹೆಚ್ಚುತ್ತಿರುವ ಜೀವಿತಾವಧಿಯಿಂದ ದೇಶಗಳಲ್ಲಿ ಶೇ.16 ಜನರ ವಯೋಮಾನ 65 ವರ್ಷಗಳಿಗಿಂತ ಅಧಿಕ ಆಗಲಿದೆ. ಅಸಮತೋಲಿತ ಜನಸಂಖ್ಯಾ ಬೆಳವಣಿಗೆ ಪ್ರಪಂಚಾದ್ಯಂತ ಜನರ ವಲಸೆಗೂ ಕಾರಣವಾಗಬಹುದು. ಯುರೋಪ್‌ ಮತ್ತು ಉತ್ತರ ಅಮೆರಿಕ ಭಾಗದಲ್ಲಿ ಹಿರಿಯ ನಾಗರಿಕರ ಪ್ರಮಾಣ ತೀರಾ ಹೆಚ್ಚಾಗಲಿದೆ (ಶೇ.25). ಅವರ ಅನಂತರ ಮರುಪೂರಣಕ್ಕೆ ತಕ್ಕ ಮಕ್ಕಳ ಜನನ ಆಗುತ್ತಿಲ್ಲ. ಅಂತಹ ದೇಶಗಳಲ್ಲಿ (ಜಪಾನ್‌, ಆಸ್ಟ್ರೇಲಿಯಾ, ಜರ್ಮನಿ) ಪ್ರಜೋತ್ಪತ್ತಿಗಾಗಿ ಸಹಾಯಧನ ನೀಡಲಾಗುತ್ತಿದೆ.

Advertisement

ಅಸಮತೋಲನ: ಭಾರತದ ಸ್ಥಿತಿಯೇನು?
ಇದಕ್ಕೆಲ್ಲ ಮುಖ್ಯ ಕಾರಣ ದೇಶಗಳಲ್ಲಿ ಜನಸಂಖ್ಯೆ ಬೆಳವಣಿಗೆ ಸ್ಥಳಾಂತರ ಮಟ್ಟ- ಮರುಪೂರಣ ದರ (Replacement rate)) 2.1ರಲ್ಲಿ ಇಲ್ಲದೇ ಇರುವುದು. ಭಾರತದಲ್ಲಿ ಈ ಟೋಟಲ್‌ ಫ‌ರ್ಟಿಲಿಟಿ ದರವು 1950ರಲ್ಲಿ ಸರಿಸುಮಾರು 6ರಷ್ಟಿದ್ದು (ಸರಾಸರಿ ಒಬ್ಬ ಮಹಿಳೆಗೆ 6 ಮಕ್ಕಳು), ಈಗ 2.4ರಷ್ಟಿದೆ. ಇನ್ನೂ ದೇಶದ ಜನ ಸಂಖ್ಯೆಯನ್ನು ಸ್ಥಿರಗೊಳಿಸಲು ಬೇಕಾದ 2.1 ಸ್ಥಳಾಂತರ ಮಟ್ಟಕ್ಕೆ ತಲುಪಿಲ್ಲ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶಗಳಲ್ಲಿ ಫ‌ಲವತ್ತತೆಯ ಪ್ರಮಾಣ ಸರಾಸರಿ 3ಕ್ಕಿಂತ ಹೆಚ್ಚಿದೆ. ದೇಶದ 7 ರಾಜ್ಯಗಳಲ್ಲಿರುವ 123 ಜಿಲ್ಲೆಗಳಲ್ಲಿ ಈ ಫ‌ಲವತ್ತತೆಯ ಪ್ರಮಾಣ 3ಕ್ಕಿಂತ ಹೆಚ್ಚಿದೆ. ಈ ಜಿಲ್ಲೆಗಳಲ್ಲಿಯೇ ರಾಷ್ಟ್ರದ ಜನಸಂಖ್ಯೆಯ ಶೇ.40ರಷ್ಟು ಜನರಿದ್ದಾರೆ. ಭಾರತದ ಕೆಲವು ರಾಜ್ಯಗಳ ಜನಸಂಖ್ಯೆಯು ಕೆಲವು ದೇಶಗಳ ಜನಸಂಖ್ಯೆಗೆ ಸರಿಸಮನಾಗಿದೆ. ಅವೆಂದರೆ, ಉತ್ತರಪ್ರದೇಶ (ಬ್ರೆಜಿಲ್‌), ಮಹಾರಾಷ್ಟ್ರ (ಜಪಾನ್‌), ಬಿಹಾರ (ಪಿಲಿಫೈನ್ಸ್‌), ಪಶ್ಚಿಮ ಬಂಗಾಲ (ವಿಯೆಟ್ನಾಮ್‌), ಮಧ್ಯಪ್ರದೇಶ (ಜರ್ಮನಿ), ತಮಿಳುನಾಡು (ಟರ್ಕಿ), ರಾಜಸ್ಥಾನ (ಟರ್ಕಿ), ಕರ್ನಾಟಕ (ಯುಕೆ), ಗುಜರಾತ್‌(ಫ್ರಾನ್ಸ್‌) ಮತ್ತು ಆಂಧ್ರಪ್ರದೇಶ (ಮ್ಯಾನ್ಮಾರ್‌).

ಭಾರತದಲ್ಲಿ ಪ್ರತೀ ಚ.ಕಿ.ಮೀ.ಗೆ 460 ಜನ
ಪ್ರಸ್ತುತ ಭಾರತದಲ್ಲಿ ಪ್ರತೀ ಚದರ ಕಿ.ಮೀ.ಯಲ್ಲಿ ಸರಾಸರಿ 460 ಜನ ವಾಸಿಸುತ್ತಿದ್ದರೆ ಅಮೆರಿಕದಲ್ಲಿ ಅಷ್ಟೇ ಜಾಗದಲ್ಲಿ 35 ಜನ ಹಾಗೂ ಆಸ್ಟ್ರೇಲಿಯಾದಲ್ಲಿ ಕೇವಲ 3 ಜನ ವಾಸಿಸುತ್ತಿದ್ದಾರೆ. ದೇಶದ ಜನಸಂಖ್ಯೆಗೆ ಪ್ರತೀ ವರ್ಷ ಸುಮಾರು 2.7 ಕೋಟಿ ಮಕ್ಕಳು (ಆಸ್ಟ್ರೇಲಿಯಾದ ಜನಸಂಖ್ಯೆಗಿಂತ ಹೆಚ್ಚು) ಸೇರ್ಪಡೆಯಾಗುತ್ತಿದ್ದಾರೆ. ಈ ವರ್ಷ ಜನವರಿ ಒಂದರಂದು ವಿಶ್ವಾದ್ಯಂತ 3,95,000 ಮಕ್ಕಳು ಜನಿಸಿದ್ದರೆ ಅದರಲ್ಲಿ 69,944 ಮಕ್ಕಳು ಭಾರತದಲ್ಲಿ, 44,940 ಮಕ್ಕಳು ಚೀನದಲ್ಲಿ, 25,685 ಮಕ್ಕಳು ನೈಜೀರಿಯಾದಲ್ಲಿ ಮತ್ತು 11,086 ಮಕ್ಕಳು ಅಮೆರಿಕದಲ್ಲಿ ಜನಿಸಿರುತ್ತಾರೆ.

ಕುಟುಂಬ ಕಲ್ಯಾಣ ಯೋಜನೆಗಳ ಮಾಹಿತಿಯಿಲ್ಲ
ನಮ್ಮ ದೇಶದಲ್ಲಿ ತೀವ್ರಗತಿಯಲ್ಲಿ ಜನಸಂಖ್ಯೆ ಬೆಳೆಯುತ್ತಿರುವುದಕ್ಕೆ ಸಾಮಾಜಿಕ, ಧಾರ್ಮಿಕ ಕಾರಣಗಳಲ್ಲದೆ ಜನಸಾಮಾನ್ಯರಿಗೆ ಕುಟುಂಬ ಕಲ್ಯಾಣ ಸೇವೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದು ಕೂಡ ಆಗಿದೆ. ಜನಸಂಖ್ಯಾ ನಿಯಂತ್ರಣಕ್ಕೆ ಇದುವರೆಗೆ ಯಾವುದೇ ಸರಕಾರ ಗಂಭೀರ ಪ್ರಯತ್ನ ಮಾಡದೇ ಇರುವುದು ಇಂದಿಗೂ ದೇಶ ಬಡತನದಲ್ಲಿ ಉಳಿಯಲು ಮುಖ್ಯ ಕಾರಣವಾಗಿದೆ. ಮಿತಿಮೀರಿದ ಜನಸಂಖ್ಯಾ ಬೆಳವಣಿಗೆಯಿಂದ ಎಲ್ಲ ಜನರಿಗೆ ಆಹಾರ, ವಸತಿ, ವಿದ್ಯೆ, ಉದ್ಯೋಗ, ಗುಣಮಟ್ಟದ ಆರೋಗ್ಯ ಸೇವೆಗಳನ್ನು ವಾತಾವರಣಕ್ಕೆ ಹಾನಿ ಮಾಡದೆ ನೀಡಲು ಸಾಧ್ಯವಾಗದು. ಅದಲ್ಲದೆ ಪ್ರಸ್ತುತ ದೇಶದಲ್ಲಿ ಜನಿಸುತ್ತಿರುವ ಪ್ರತಿ ಸಾವಿರ ಗಂಡುಮಗುವಿಗೆ ಸರಾಸರಿ ಕೇವಲ 930 ಹೆಣ್ಣು ಮಕ್ಕಳು ಹುಟ್ಟುತ್ತಿವೆ. ಹರಿಯಾಣದಲ್ಲಿ ಇದು ಅತ್ಯಂತ ಕಡಿಮೆಯಾಗಿದ್ದು, ಕೇವಲ 879 ಇದೆ. ಇದು ಕೂಡ ಮುಂದೆ ಸಮಾಜದಲ್ಲಿ ಅರಾಜಕತೆಗೆ ಕಾರಣವಾಗಬಹುದು. ನಮ್ಮ ದೇಶದಲ್ಲಿ ಪ್ರತಿ ವರ್ಷ ಸರಿಸುಮಾರು 3 ಕೋಟಿ ಮಹಿಳೆಯರು ಗರ್ಭಿಣಿಯರಾಗುತ್ತಿದ್ದು, ಸಮೀಕ್ಷೆಗಳ ಪ್ರಕಾರ ಶೇ.10-20 ಗರ್ಭದಾರಣೆ, ಅವರಿಗೆ ಕುಟುಂಬ ನಿಯಂತ್ರಣ ಸಾಧನಗಳ ಮಾಹಿತಿ ಇಲ್ಲದೇ ಇರುವುದು ಅಥವಾ ಅಂತಹ ಸಾಧನಗಳು ಕೈಗೆ ಸಿಗದೇ ಇರುವುದರಿಂದಾಗಿಯೋ ಅಥವಾ ಅಂತಹ ಸಾಧನಗಳ ವಿಫ‌ಲತೆಯಿಂದಲೋ ಆಗಿರುತ್ತದೆ.

ಪ್ರತೀ ದಿನ ನಮ್ಮ ದೇಶದಲ್ಲಿ 10 ಅಂತಹ ಮಹಿಳೆಯರು ಬೇಡವಾದ ಗರ್ಭವನ್ನು ಅವೈಜ್ಞಾನಿಕ ವಿಧವಾದ ಗರ್ಭಪಾತ ಮಾಡಿಸಿಕೊಳ್ಳುವಾಗ ಸಾವನ್ನಪ್ಪುತ್ತಿದ್ದಾರೆ.
ಕುಟುಂಬ ನಿಯಂತ್ರಣ ಯೋಜನೆಯಡಿ ಪ್ರತೀ ಮಹಿಳೆಗೆ ಕುಟುಂಬ ನಿಯಂತ್ರಣ ಸಾಧನಗಳು ಸಾರ್ವಜನಿಕ ಅಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿವೆ. ಇವುಗಳಲ್ಲಿ ಮುಖ್ಯವಾಗಿ 2 ವಿಧಗಳಿವೆ- ತಾತ್ಕಾಲಿಕ ಹಾಗೂ ಶಾಶ್ವತ. ಕುಟುಂಬ ನಿಯಂತ್ರಣದ ಬಗ್ಗೆ ಅರಿವಿರುವುದು ಅತೀ ಆವಶ್ಯಕ.
ಪ್ರಮುಖವಾದ ತಾತ್ಕಾಲಿಕ ಕುಟುಂಬ ಕಲ್ಯಾಣ ಸೌಲಭ್ಯಗಳು: ಕಾಂಡೋಮ್‌, ಬಾಯಿಯ ಮೂಲಕ ತೆಗೆದುಕೊಳ್ಳುವ ಗುಳಿಗೆಗಳು, ಇ-ಗುಳಿಗೆಗಳು, ಎಲ್‌ಯುಸಿಡಿ, ಪಿಪಿಐಯುಸಿಡಿ, ಛಾಯಾ ಹಾಗೂ ಇಂಜೆಕ್ಷನ್‌ ಅಂತರ. ಶಾಶ್ವತ ಕುಟುಂಬ ಕಲ್ಯಾಣ ಸೌಲಭ್ಯಗಳಲ್ಲಿ ಮುಖ್ಯವಾಗಿ ಮಹಿಳೆಯರಿಗೆ- ಉದರದರ್ಶನ ಶಸ್ತ್ರ ಚಿಕಿತ್ಸೆ ಮತ್ತು ಟುಬೆಕ್ಟಮಿ ಪುರುಷರಿಗೆ- ನೋ ಸ್ಕಾಲ್‌ ವ್ಯಾಸೆಕ್ಟಮಿ.

ಈ ಎಲ್ಲ ಜನಸಂಖ್ಯಾ ನಿಯಂತ್ರಣ ಸಲಹೆ ಸಲಕರಣೆಗಳನ್ನು ಪ್ರತಿಯೊಬ್ಬರೂ ಅರಿತು ಜನಸಂಖ್ಯಾ ನಿಯಂತ್ರಣ ಸೂತ್ರಗಳಂತೆ -“ಗಂಡಿರಲಿ ಹೆಣ್ಣಿರಲಿ ಕೇವಲ 2 ಮಕ್ಕಳು”- 3 ವರ್ಷಗಳ ಅಂತರದಲ್ಲಿ ತಾಯಿಯ 20-30 ವರ್ಷಗಳ ಒಳಗೆ ಪಡೆದು ಆರೋಗ್ಯವಂತ ಶ್ರೀಮಂತ ಸಮಾಜ ಸೃಷ್ಟಿಸಬೇಕಿದೆ. ಸುರಕ್ಷಿತ ಮತ್ತು ಪರಿಣಾಮಕಾರಿ ಗರ್ಭ ನಿರೋಧಕ ಬಳಕೆಯಿಂದ ಆಗುವ ಲಾಭಗಳು ಅನೇಕ. ಕಡಿಮೆ ಮರಣದರ ಹೊಂದುವುದು ದೇಶದ ಆರೋಗ್ಯ ಸ್ಥಿತಿಯನ್ನು ಬಿಂಬಿಸಿದರೆ ಜನನ ದರ ಕಡಿಮೆಯಾಗಿ ಕ್ರಮಬದ್ಧ ಮಾಡುವುದು ಪ್ರತೀ ನಾಗರೀಕರ, ಪ್ರತೀ ಸರಕಾರದ ಗುರಿಯಾಗಿರಬೇಕು. ಆ ಮೂಲಕ ಅಪೌಷ್ಟಿಕತೆ, ಬಡತನ, ಅನಾರೋಗ್ಯಗಳನ್ನು ತಡೆಯಬಹುದು.

– ಡಾ| ಅಶ್ವಿ‌ನಿ ಕುಮಾರ ಗೋಪಾಡಿ,
ಅಡಿಷನಲ್‌ ಪ್ರೊಫೆಸರ್‌,
ಕಮ್ಯುನಿಟಿ ಮೆಡಿಸಿನ್‌,
ಕೆಎಂಸಿ ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next