ಧಾರವಾಡ: ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಶ್ರೀಪಾಂಡೇಶ್ವರ ಪ್ರತಿಷ್ಠಾನದ ಸಹಯೋಗದಲ್ಲಿ ಶುಕ್ರವಾರ ಜರುಗಿದ ಕಾರ್ಯಕ್ರಮದಲ್ಲಿ ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಮೋಹನ ಹೆಗಡೆ ಅವರಿಗೆ ಐದು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕದ ಒಳಗೊಂಡ 2018ನೇ ಸಾಲಿನ ಪಾಂಡೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಮಾತನಾಡಿ, ಪತ್ರಿಕೋದ್ಯಮಿ ಆಗಬೇಕೆನ್ನುವವರು ಯಾವುದೇ ತೊಂದರೆ ತೆಗೆದುಕೊಳ್ಳಲು ಸಿದ್ಧರಾಗಿರಬೇಕು. ಪತ್ರಿಕೋದ್ಯಮ ಪವಿತ್ರ ಕ್ಷೇತ್ರವಾಗಿದ್ದು, ಪತ್ರಿಕಾ ಧರ್ಮ ಪಾಲಿಸಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿದ ಮೋಹನ ಹೆಗಡೆ ಮಾತನಾಡಿ, ಪತ್ರಿಕೋದ್ಯಮ ಇಂದು ಉದ್ಯಮವಾಗಿದ್ದು, ಪತ್ರಕರ್ತರ ಸ್ಥಿತಿಗತಿ ಸ್ವಲ್ಪ ಸುಧಾರಿಸಿದೆ. ಅವಕಾಶಗಳು ಈಗ ಹೆಚ್ಚಿವೆ. ಜೊತೆಗೆ ಪ್ರಾಮಾಣಿಕತೆ, ನಿಷ್ಠೆಯ ಕೊರತೆ ಹೊಸ ತಲೆಮಾರಿನ ಬಹಳಷ್ಟು ಜನ ಪತ್ರಕರ್ತರಲ್ಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಅವಿನಾಭಾವ ಸಂಬಂಧವಿದೆ ಎಂದರು. ವಿಭಾಗದ ಮುಖ್ಯಸ್ಥ ಡಾ| ಜೆ.ಎಂ.ಚಂದುನವರ ಸ್ವಾಗತಿಸಿ, ಪರಿಚಯಿಸಿದರು. ಪತ್ರಕರ್ತ ಮನೋಜ ಪಾಟೀಲ ಮಾತನಾಡಿದರು. ಎನ್.ಪಿ.ಭಟ್, ಆರ್.ಜಿ.ಪಾಂಡೇಶ್ವರ, ಬ್ರಿಗೇಡಿಯರ್ ಭಾಗವತ, ವಕೀಲ ವೆಂಕಟೇಶ ಕುಲಕರ್ಣಿ ಪಾಲ್ಗೊಂಡಿದ್ದರು. ಕಾವ್ಯಾ ಭಟ್ ಸ್ವಾಗತಗೀತೆ ಹಾಡಿದರು. ಪ್ರಭಾ ಹೆಗಡೆ ನಿರೂಪಿಸಿದರು. ಮಹಾಲಕ್ಷ್ಮೀ ಭೂಷಿ ವಂದಿಸಿದರು.