Advertisement

ಗದಗ: ಶಿವಮೊಗ್ಗ ಸಂಗೀತ ಪಾಠಶಾಲೆಗೆ “ಮಾನವತಾವಾದಿ ಬಸವೇಶ್ವರ’ ಪ್ರಶಸ್ತಿ

04:27 PM May 13, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಶಿವಮೊಗ್ಗದ ಡಾ| ಪುಟ್ಟರಾಜ ಗವಾಯಿಗಳ ಉಚಿತ ಸಂಗೀತ ಹಾಗೂ ಸಂಸ್ಕೃತ ಪಾಠಶಾಲೆಗೆ “ಮಾನವತಾವಾದಿ ಬಸವೇಶ್ವರ’ ಪ್ರಶಸ್ತಿ ನೀಡಿರುವ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಕಾರ್ಯ ಅಭಿನಂದನೀಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ| ಡಿ.ವಿ. ಪರಮಶಿವಮೂರ್ತಿ ಹೇಳಿದರು.

Advertisement

ನಗರದ ತೋಂಟದಾರ್ಯ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ “ಮಾನವತಾವಾದಿ ಬಸವೇಶ್ವರ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಮೊಗ್ಗದ ಡಾ| ಪುಟ್ಟರಾಜ ಗವಾಯಿಗಳ ಉಚಿತ ಸಂಗೀತ ಹಾಗೂ ಸಂಸ್ಕೃತ ಪಾಠಶಾಲೆಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಬಸವ ಜಯಂತಿಯಂದು ತೋಂಟದಾರ್ಯ ಮಠದಲ್ಲಿ ಬಸವಣ್ಣನಿಗೆ ಪ್ರಿಯವಾದ ಶ್ರಮಜೀವಿಗಳಿಗೆ ಸನ್ಮಾನ ಹಾಗೂ ಜ್ಞಾನದಾಸೋಹದಂತಹ ಸತ್ಕಾರ್ಯಗಳು ನಡೆದಿರುವುದು ವಿಶೇಷವಾಗಿದೆ. ವಿಜಯನಗರದ ಪ್ರಸಿದ್ಧ ದೊರೆ ಪ್ರೌಢದೇವರಾಯನ ಕಾಲದಲ್ಲಿ ಕನ್ನಡ ಸಾಹಿತ್ಯದ ಸ್ಥಿತಿಗತಿಗಳ ಕುರಿತು ವಿವರಣೆ ನೀಡುವ ಅಪರೂಪದ ಕೃತಿ ಬಿಡುಗಡೆಯಾಗಿರುವುದು ಸಂತಸದ ಸಂಗತಿ. ಡಾ| ತೋಂಟದ ಸಿದ್ಧರಾಮ ಮಹಾಸ್ವಾಮಿಗಳೇ ಈ ಕೃತಿಯ ಪರಿಷ್ಕರಣೆ ಕಾರ್ಯ ಮಾಡಿರುವುದು ಅವರ ಸಾಹಿತ್ಯ ಕಾಳಜಿಗೆ ಹಿಡಿದ ಕೈ ಗನ್ನಡಿಯಾಗಿದೆ ಎಂದರು.

ಬಸವಣ್ಣನವರ ಆದರ್ಶಗಳ ಕುರಿತು ಮಾತನಾಡಿದ ಅವರು, ಮಾನವಕುಲವನ್ನು ಕಾಡುತ್ತಿರುವ ಸಮಕಾಲೀನ ಸಮಸ್ಯೆಗಳಿಗೆ ಬಸವತತ್ವವು ಎಳೆ ಎಳೆಯಾಗಿ ಪರಿಹಾರ ಸೂಚಿಸಿದ್ದು, ಬಸವತತ್ವವವನ್ನು ಅಧ್ಯಯನ ಮಾಡುವ ವ್ಯವಧಾನ ನಮ್ಮಲ್ಲಿ
ಇಲ್ಲವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ರಾಗ-ದ್ವೇಷಗಳಿಲ್ಲದ ಸಮಾಜ ನಿರ್ಮಾಣವಾಗಬೇಕಾದರೆ ಬಸವತತ್ವಗಳು
ಅತ್ಯವಶ್ಯವಾಗಿವೆ ಎಂದರು.

ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರಕಾಶ ಲಿಂಬಯ್ಯಸ್ವಾಮಿಮಠ ಪ್ರಾಸ್ತಾವಿಕ ಮಾತನಾಡಿ, ಲಿಂಬಯ್ಯಸ್ವಾಮಿ ಪ್ರತಿಷ್ಠಾನ ನಮ್ಮ ತಂದೆಯವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಸದುದ್ದೇಶದಿಂದ ಸ್ಥಾಪಿಸಿದ ಸಂಸ್ಥೆಯಾಗಿದೆ. ಪರಿಸರವಾದಿಗಳು, ವಿಕಲಾಂಗ ಸಂಸ್ಥೆ ಹಾಗೂ ಆದರ್ಶ ದಂಪತಿಗಳು ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತಿದ್ದೇವೆ.

Advertisement

ಈ ಬಾರಿ ಡಾ| ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಮಾರ್ಗದರ್ಶನದ ಮೇರೆಗೆ ಶಿವಮೊಗ್ಗದ ಪುಟ್ಟರಾಜ ಗವಾಯಿಗಳ ಉಚಿತ ಸಂಗೀತ ಪಾಠಶಾಲೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜಕ್ಕೆ ಅರ್ಪಿತವಾದ ಸಂಸ್ಥೆಯೊಂದಕ್ಕೆ ಪ್ರಶಸ್ತಿ ನೀಡುತ್ತಿರುವುದು ತೃಪ್ತಿ ತಂದಿದೆ ಎಂದರು.

ಶಿವಮೊಗ್ಗದ ಡಾ| ಪುಟ್ಟರಾಜ ಕವಿ ಗವಾಯಿಗಳ ಉಚಿತ ಸಂಗೀತ ಮತ್ತು ಸಂಸ್ಕೃತ ಪಾಠಶಾಲೆಯ ಸಂಸ್ಥಾಪಕ ಆರ್‌.ಬಿ. ಸಂಗಮೇಶ್ವರ ಗವಾಯಿಗಳು ಮಾತನಾಡಿ, ಪುಟ್ಟರಾಜ ಗವಾಯಿಗಳ ಪ್ರೇರಣೆಯಿಂದ ಆಶ್ರಮ ಸ್ಥಾಪಿಸಿದ ಬಗೆಯನ್ನು
ವಿವರಿಸಿದರು.

ಡಾ| ಶಿವಾನಂದ ವಿರಕ್ತಮಠ ರಚಿಸಿದ “ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ’ ಲೋಕಾರ್ಪಣೆಗೊಂಡಿತು. ಹಂಪಿ ಕನ್ನಡ
ವಿಶ್ವವಿದ್ಯಾಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ| ಕೆ. ರವೀಂದ್ರನಾಥ ಗ್ರಂಥ ಲೋಕಾರ್ಪಣೆ ಮಾಡಿ ಗ್ರಂಥದ ವೈಶಿಷ್ಟ್ಯ ಗಳ ಕುರಿತು ಮಾತನಾಡಿದರು.

ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು. ರೇವಣಸಿದ್ದಯ್ಯ ಮರಿದೇವರಮಠ ಹಾಗೂ ಡಾ| ಪುಟ್ಟರಾಜ ಕವಿ ಗವಾಯಿಗಳ ಉಚಿತ ಸಂಗೀತ ಮತ್ತು ಸಂಸ್ಕೃತ  ಪಾಠಶಾಲೆಯ ಅಂಧ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನೆರವೇರಿತು. ಸಾಹಿತಿ ಜ್ಯೋತಿರ್ಲಿಂಗ ಹೊನಕಟ್ಟಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪುರ, ಅಮರೇಶ ಅಂಗಡಿ ಸೇರಿ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next