Advertisement

ಜೋನಾಥನ್‌ ಜಾಡು ಹಿಡಿದು…

12:53 PM May 12, 2018 | |

ಅಮ್ಮನ ನೆನಪೆನ್ನುವುದು ಅಂತಿಂಥ ದೇವರ ಧ್ಯಾನವಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಬೆಂಗಳೂರಿನ ಅನಾಥಾಶ್ರಮದಿಂದ 6 ವರ್ಷದ ಬಾಲಕನನ್ನು ದತ್ತು ತೆಗೆದುಕೊಂಡು ಹೋಗ್ತಾರೆ. ಅವನೇ ಜೋನಾಥನ್‌. ಮುಂದೊಂದು ದಿನ (2000) ಆತ ಭಾರತಕ್ಕೆ ಮರಳಿ, ತನ್ನ ತಾಯಿಯನ್ನು ಸೇರುವ ಕತೆ ಇದು. ಅವನನ್ನು ತಾಯಿಯ ಮಡಿಲಿಗೆ ಸೇರಿಸಿದ್ದು, ಅಂದಿನ ಎಸಿಪಿ ಲವಕುಮಾರ್‌. ಆದರೆ, ಅಂದು ಅಮ್ಮನ ಮುಖ ನೋಡಿ ವಾಪಸು ಹೋದ ಜೋನಾಥನ್‌ ಮತ್ತೆ ಮರಳಲೇ ಇಲ್ಲ. ಆ ತಾಯಿ ಕಾಯುತ್ತಲೇ ಇದ್ದಾಳೆ. “ವಿಶ್ವ ಅಮ್ಮಂದಿರ ದಿನ’ದ ಈ ವೇಳೆ ಆ ತಾಯಿಯ ಮನೆಗೆ ಭೇಟಿ ಕೊಟ್ಟಾಗ…

Advertisement

ಒಂದು ಟಾಕ್‌ ಶೋಗೆ ಕಿವಿಗೊಟ್ಟು ಕುಳಿತಿತ್ತು ಸ್ವೀಡನ್‌. 31ರ ಜೋನಾಥನ್‌ ಅಲ್ಲಿ ಕೊರಳುಬ್ಬಿಸಿ ಮಾತಾಡುತ್ತಿದ್ದ; “ದೇವರು ನನಗೆ ಯಾವುದಕ್ಕೂ ಕಮ್ಮಿ ಮಾಡಿದೋನಲ್ಲ. ಕೇಳದೇ, ಎಲ್ಲವನ್ನೂ ಮೊಗೆದು ಕೊಟ್ಟ. ಪಾಕೀಟು ಪೂರಾ ಹಣ, ಜುಮ್ಮೆನುತಾ ತೇಲಿಸುವ ಕಾರು, ದೊಡ್ಡ ಬಂಗಲೆಯ ನೆರಳು… ಎಲ್ಲ. ಆದರೆ, ಅಮ್ಮ ಕೆಲವೊಮ್ಮೆ ನನ್ನ ತಬ್ಬಿ, ಬಿಕ್ಕುವಳು. ನನ್ನ ಹೊಟ್ಟೆಯÇÉೇ ನೀನು ಹುಟ್ಟಬಾರದಿತ್ತೇ… ಎಂದು ಮರುಗುವಳು. ನಾನು ಭಾರತ ಮೂಲದವನಂತೆ. 6 ವರ್ಷವಿ¨ªಾಗ ಬೆಂಗಳೂರಿನಿಂದ ನನ್ನ ದತ್ತು ತಂದರಂತೆ. ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ಆದರೆ, ಭಾರತದ ಹೆತ್ತಮ್ಮನನ್ನು ಒಮ್ಮೆ ನೋಡಬೇಕು ಎಂಬ ಇಂಗಿತ ನನ್ನೊಳಗೆ ತಟಪಟ ಎನ್ನುತ್ತಿದೆ. ಅಷ್ಟು ದೊಡ್ಡ ದೇಶಕ್ಕೆ ಹೋಗೋದು ಹೇಗೆಂಬ ಕೊರಗು ನನ್ನನ್ನು ನಿದ್ರಿಸಲೂ ಬಿಡುತ್ತಿಲ್ಲ…’ ಅಂತ ಮಾತು ಮುಗಿಸಿದ್ದ ಜೋನಾಥನ್‌.

  ಸ್ವೀಡನ್ನರ ಕಣ್ಣಾಲಿಗಳು ಒದ್ದೆಯಾಗಿ ಆರುವ ಮೊದಲೇ ಆ ಚಾನೆಲ್ಲಿಗೆ ಬಂತೊಂದು ಫೋನು. ಟಿವಿ ಚಾನೆಲ್ಲುಗಳಿಗೆ ಡಾಕ್ಯುಮೆಂಟರಿ ಮಾಡಿಕೊಡುವ ತೋಬೆ ತೊವ್ಯಾಸರ್‌ ಎಂಬ ನಿರ್ದೇಶಕಿಯ ಕರೆ; “ಈಗಷ್ಟೇ ನಿಮ್ಮ ಟಾಕ್‌ ಶೋನಲ್ಲಿ ಮಾತಾಡಿದನಲ್ಲ, ಆ ಜೋನಾಥನ್‌… ದಯವಿಟ್ಟು ಅವರ ನಂಬರ್‌ ಕೊಡ್ತೀರಾ?’. ಚಾನೆಲ್ಲು ಸ್ಪಂದಿಸಿತು. ಜೋನಾಥನ್‌ ಸಿಕ್ಕಿದ. “ನೀನು ಇವತ್ತೇ ಬೆಂಗಳೂರಿಗೆ ಹೊರಡು, ನಾನೂ ಬರ್ತೀನಿ. ನಿನ್ನ ಊಟ, ತಿಂಡಿ, ಪ್ರಯಾಣ, ಅಲ್ಲಿ ತಂಗುವ ಖರ್ಚುಗಳ ಮಂಡೆಬಿಸಿ ಬಿಡು, ಅದನ್ನೆಲ್ಲ ನಾನೇ ಕೊಡ್ತೀನಿ. ನಿನ್ನ ತಾಯಿಯನ್ನು ಹುಡುಕುವ ಪ್ರತಿ ಹೆಜ್ಜೆಯನ್ನೂ ಲೈವ್‌ ಆಗಿ ಶೂಟ್‌ ಮಾಡೋಣ. ನಿನ್ನ ಹೆತ್ತಮ್ಮ ಸಿಕ್ಕೇ ಸಿಗ್ತಾಳೆ’ ಅಂದಾಗ, ಇವನು “ಮನೇಲಿ ಕೇಳಿ ಹೇಳ್ತೀನಿ’ ಎಂದಷ್ಟೇ ಹೇಳಿದ್ದ.

   ಮಗ ಭಾರತಕ್ಕೆ ಹೊರಡ್ತಾನೆ ಅನ್ನೋ ಸುದ್ದಿ ಕೇಳಿ, ಸಾಕುತಾಯಿಯ ಹೃದಯ ಅಲ್ಲೇ 
ಲಂಗರು ಹಾಕಿ ನಿಂತಂತಾಯಿತು. “ಬೇಡ ಮಗನೆ… ಇಂಡ್ಯಾ ದೊಡ್ಡ ಸಾಗರ ಇದ್ಹಂಗೆ. ನಿಂಗೆ ಹಿಂದಿ ಬರಲ್ಲ, ಅರೆಬರೆ ಇಂಗ್ಲಿಷು ಕಟ್ಕೊಂಡು, ಸ್ವೀಡಿಷ್‌ ಭಾಷೆ ನಂಬ್ಕೊಂಡು  ಅಲ್ಲಿ ಓಡಾಡಕ್ಕಾಗಲ್ಲ. ಅಲ್ಲಿಗೆ ಹೋದ್ರೆ ಮತ್ತೆ ಕಳೆದುಹೋಗ್ತಿàಯ. ಇಷ್ಟ್ ವರ್ಷ ಆದ್ಮೇಲೆ ನಿನ್ನ ಅಮ್ಮ ಅದೆಲ್ಲಿ ಸಿಗ್ತಾಳೆ?’. ಜೋನಾಥನ್‌ ಅಮ್ಮನನ್ನು ಅವುಚಿಕೊಂಡ. ತಲೆ ನೇವರಿಸುತ್ತಾ ಹೇಳಿದ: “ಮಮ್ಮಿ ನೀನು ಚಿಂತೆ ಮಾಡ್ಬೇಡ, ಬೇಗ ವಾಪಸು ಬಂದಿºಡ್ತೀನಿ. ತೋಬೆ ಮೇಡಂ ಜತೆಗಿರ್ತಾರೆ’. ಟೂತ್‌ ಬ್ರಶುÏ, ಪೇಸ್ಟು, ಪಾಕೀಟು, ಬಟ್ಟೆ, ಪುಟ್ಟ ಕನ್ನಡಿಗಳನ್ನೆಲ್ಲ ಒಂದೊಂದಾಗಿಯೇ ಬ್ಯಾಗಿನೊಡಲು ಸೇರಿಸುವಾಗ, ಅಮ್ಮನ ಕಣ್ಣು ಆದ್ರìವಾಗುತ್ತಿತ್ತು. 

ಇವೆಲ್ಲ ಘಟಿಸಿದ್ದು 2000ದ ಇಸವಿಯಲ್ಲಿ. ಜೋನಾಥನ್‌ ಬೆಂಗಳೂರಿನಲ್ಲಿ ಇಳಿದಾಗ ಇಲ್ಲಿನ ಫ‌ುಟ್‌ಪಾತ್‌ನಲ್ಲಿ ರಾತ್ರಿ ಕಳೆದಿದ್ದ ದೃಶ್ಯಗಳೆಲ್ಲ ನೆನಪಿನ ತಿಜೋರಿಯನ್ನು ಸಿಡಿದು ಹೊರಬಂದವು. ಈಗ ಅವನ ಜತೆಗಿದ್ದಿದ್ದು, ಎರಡೇ; ಬಾಲ್ಯದ ಒಂದು ಬ್ಲಾಕ್‌ ಆ್ಯಂಡ್‌ ವೈಟ್‌ ಫೋಟೋ, ಒಂದಷ್ಟು ಮಾಸಿದ ನೆನಪುಗಳಷ್ಟೇ. ಮೂಲ ಹೆಸರು ಗೊತ್ತಿಲ್ಲ. ಊರುಕೇರಿಯ ವಿಳಾಸ ಮೊದಲೇ ಇಲ್ಲ. ಮಾತೃಭಾಷೆಯೂ ನಾಲಿಗೆ ಮೇಲೆ ನಿಂತೇ ಇಲ್ಲ. ಪರವೂರಿನ ಫ‌ಕೀರನಂತೆ ಬಂದಿದ್ದ. ತನ್ನನ್ನು ದತ್ತುವಾಗಿ ಕೊಟ್ಟ, ಬಸವನಗುಡಿಯ ಅನಾಥ ಶಿಶು ನಿವಾಸದ ಕದಬಡಿದ. ಇಪ್ಪತ್ತೈದು ವರ್ಷದ ಹಿಂದಿನ ತನ್ನ ದಾಖಲೆಗಳನ್ನೆಲ್ಲ ತೆಗೆಸಿದ. “ರಿಮ್ಯಾಂಡ್‌ ಹೋಮ್‌ನಿಂದ ನಿನ್ನನ್ನ ಕರೆತಂದೆವು. ಅದುಬಿಟ್ಟರೆ ಬೇರಾವ ಮಾಹಿತಿಗೂ ನಮ್ಮಲ್ಲಿಲ್ಲ’ ಅಂದುಬಿಟ್ಟರು ಅವರು. ನಿರಾಶೆಯಿಂದ ಹೊರಬಂದ. ಅಲ್ಲಿ ತಾನಾಡಿದ ಜಾರುಬಂಡಿ, ಜೋಕಾಲಿಗಳು ತನ್ನನ್ನೇ ನೋಡಿ ಪಿಸುಗುಟ್ಟಿದಂತೆ ಅನ್ನಿಸಿತು. 

Advertisement

  ಮಡಿವಾಳದ ರಿಮ್ಯಾಂಡ್‌ ಹೋಮ್‌ನಲ್ಲೂ ಬೆಳಕು ಕಾಣಲಿಲ್ಲ. “ಬೀದಿಯಲ್ಲಿ ಸಿಕ್ಕವನು ನೀನು’ ಅಂತಷ್ಟೇ ಹೇಳಿ, ಅವನ ಕಡತ ಮುಚ್ಚಿಬಿಟ್ಟರು. ಅಂಗೈ ತೋರಿಸಿ, ಭವಿಷ್ಯವನ್ನೂ ಕೇಳಿಬಿಡೋಣವೆಂದು, ಒಬ್ಬರು ಜ್ಯೋತಿಷಿಯ ಬಳಿ ಹೋದ. ಆತನೋ, “ನಿನ್ನ ಹೆತ್ತವರಲ್ಲಿ ಒಬ್ಬರು ಕೈಲಾಸ ಸೇರಿ¨ªಾರೆ. ಇನ್ನೊಬ್ಬರು ಆಸ್ಪತ್ರೆ ಸೇರಿ¨ªಾರೆ. ಇನ್ನು ಮೂರು ವರ್ಷ ಹೆತ್ತವರು ನಿನಗೆ ಸಿಗೋದೇ ಇಲ್ಲ. ವಾಪಸು ನಿನ್ನ ದೇಶಕ್ಕೆ ಹೊರಟುಬಿಡು’ ಎಂದು ಭವಿಷ್ಯ ಹೇಳಿ, ಇವನ ಎದೆಯಲ್ಲಿ ಭಯದ ವಿಭೂತಿ ಹಚ್ಚಿದ.

  ಆಗ ಜೋನಾಥನ್‌ ಹೋಗಿದ್ದು, ಅಂದಿನ ಪೊಲೀಸ್‌ ಕಮಿಷನರ್‌ ರೇವಣ ಸಿದ್ದಯ್ಯರ ಬಳಿ. ಅಂದು ಎಸಿಪಿ ಆಗಿದ್ದ ಲವಕುಮಾರ್‌ ಅವರ ಹೆಗಲಿಗೆ ಈ ಹುಡುಕಾಟದ ಹೊಣೆ ಬಿತ್ತು. ಅಲ್ಲಿಯ ತನಕ ಪೊಲೀಸರೆಂದರೆ, ಪಾತಕಿಗಳನ್ನು ಹಿಡಿಯೋರು, ಲಾಠಿಯೆತ್ತಿ ಬಾರಿಸೋರು ಎನ್ನುವ ಮಾತಿತ್ತು. ಈ ಒಂದು ಪ್ರಕರಣದಿಂದ, ಪೊಲೀಸರಿಗೂ ಒಂದು ಹೃದಯವಿದೆ, ಅದರೊಳಗೆ ಮಾನವೀಯತೆಯ ಬಡಿತವಿದೆ ಇದೆ ಅನ್ನೋದನ್ನು ಜಗತ್ತಿಗೆ ಸಾರಿಬಿಟ್ಟರು ಬೆಂಗಳೂರು ಪೊಲೀಸರು.
     
ಜೋನಾಥನ್‌ನ ಬಾಲ್ಯದ ಒಂದೊಂದೇ ನೆನಪಿಗೆ ಕೈಹಾಕಿದರು ಲವಕುಮಾರ್‌. “ನನ್ನ ಅಪ್ಪ ರೈಲ್ವೆಯಲ್ಲಿ ಹಮಾಲಿ ಆಗಿದ್ದ. ಅವರಿಗೆ ಊಟ ಕೊಡಲು ಬಂದಿದ್ದೆ. ಸುಮ್ಮನೆ ರೈಲಿನಲ್ಲಿ ಕುಳಿತಿದ್ದೆ. ರೈಲು ಹೊರಟಿದ್ದೇ ಗೊತ್ತಾಗಲಿಲ್ಲ. ಮರುದಿನ ಬೆಳಗ್ಗೆ ಬೆಂಗಳೂರಿನಲ್ಲಿ¨ªೆ’ ಎಂದು ತನ್ನ ಹಿಂದಿನ ಒಂದೆಳೆ ಕತೆಯನ್ನು ಹೇಳಿದ. ಯಾವ ಊರಿಂದ ಹೊರಟೆ ಎನ್ನುವುದು ಆತನಿಗೆ ಅಸ್ಪಷ್ಟ. ಊಟ ಕೊಡಲು ಬಂದಿದ್ದ ಅಂತಾದರೆ, ಅದು ಮಧ್ಯಾಹ್ನವೇ ಆಗಿರುತ್ತೆ. ಮರುದಿನ ಬೆಳಗ್ಗೆಯೆಂದರೆ, 18 ಗಂಟೆಗಳ ಪ್ರಯಾಣ ಮಾಡಿದ್ದಾನಿರಬಹುದು. 25 ವರ್ಷದ ಹಿಂದೆ, 1975ರ ಸುಮಾರಿನಲ್ಲಿ ರೈಲ್ವೆಯ ವೇಗವೆಷ್ಟಿತ್ತು ಎಂಬುದನ್ನು ತಿಳಿಯಲು, ರೈಲ್ವೆ ತಜ್ಞರೊಬ್ಬರನ್ನು ಸಂಪರ್ಕಿಸಿದರು. “ಆಗ ನ್ಯಾರೋ ಗೇಜ್‌ ಇತ್ತು ಸಾಹೇಬ್ರೆ… ರೈಲು ಗಂಟೆಗೆ ಹೆಚ್ಚಂದ್ರೆ 30 ಕಿ.ಮೀ. ಓಡ್ತಿತ್ತು’ ಅಂದಾಗ, ಜೋನಾಥನ್‌ 350 400 ಕಿ.ಮೀ. ಪ್ರಯಾಣಿಸಿರಬಹುದೆಂಬ ಅಂದಾಜು ಸಿಕ್ಕಿತು.

  ಆದರೆ, ಅದು ಯಾವ ದಿಕ್ಕಿನಿಂದ? ಯಕ್ಷಪ್ರಶ್ನೆ. ಆಗ ನ್ಯಾರೋ ಗೇಜ್‌ ಇದ್ದಿದ್ದು, ಬೆಂಗಳೂರಿನಿಂದ ಆಂಧ್ರದ ಗುಂತಕಲ್‌ ಭಾಗಕ್ಕೆ, ಇನ್ನೊಂದು ಹುಬ್ಬಳ್ಳಿ ಕಡೆಗೆ. ಇವನು ಯಾವ ಭಾಗದವನು? ಅವನನ್ನು ಮನೆಗೆ ಕರಕೊಂಡು ಹೋಗಿ, ಅಣ್ಣಾವ್ರ ಹಳೇ ಚಿತ್ರಗಳನ್ನು ತೋರಿಸಿ, “ನಿಮ್ಮಪ್ಪ ಈ ಥರ ಡ್ರೆಸ್ಸು ಹಾಕ್ತಿದ್ರಾ?’ ಕೇಳಿದರು. ಅವನಿಗೆ ಪತ್ತೆ ಹಚ್ಚೋದು ಕಷ್ಟವೇ ಆಯಿತು.
ಜೋನಾಥನ್‌ ಎದುರು ಒಂದೊಂದೇ ಆಹಾರಗಳನ್ನು ತಂದಿಟ್ಟರು. ರಾಗಿಮು¨ªೆ ಮುರಿಯಲು ಸಾಹಸಪಟ್ಟ. ಅನ್ನ ಅವನಿಗೆ ರುಚಿಸಲಿಲ್ಲ. ಸ್ನೇಹಿತರೊಬ್ಬರ ಮನೆಯಲ್ಲಿ ಜೋಳದ ರೊಟ್ಟಿ ತಿನ್ನಿಸಲು ಕರೆದೊಯ್ದರು ಲವಕುಮಾರ್‌. ಅವರು ರೊಟ್ಟಿ ತಟ್ಟುವ ಶಬ್ದಕ್ಕೆ ಜೋನಾಥನ್‌ ಕಿವಿಗಳು ನಿಮಿರಿದವು. ರೊಟ್ಟಿಯನ್ನು ಇಷ್ಟಪಟ್ಟು ತಿಂದು, “ಇದನ್ನು ಹಿಂದೆ ಯಾವತ್ತೋ ತಿಂದ ನೆನಪು’ ಎಂದ. ಜೋಳದ ಕಾಳುಗಳನ್ನು ಸಲೀಸಾಗಿ ಬಿಡಿಸಿ, ತಿನ್ನುವ ಕಲೆಯನ್ನೂ ಅವನು ಮರೆತಿರಲಿಲ್ಲ.
 ಅಲ್ಲಿಗೆ ಒಂದು ಪಕ್ಕಾ ಆಯಿತು. ಇಂವ ಹುಬ್ಬಳ್ಳಿ ದಿಕ್ಕಿನವ! ಅಲ್ಲಿನ ರೈಲ್ವೆ ಸ್ಟೇಷನ್ನಿನ ಹಮಾಲಿಗಳನ್ನು ವಿಚಾರಿಸಲು, ಲವಕುಮಾರ್‌ ಹೊರಟರು. ಜೋನಾಥನ್‌, ತೊಬೆ, ಆಕೆಯ ಕ್ಯಾಮೆರಾಮನ್‌ ಕೂಡ ಅವರ ಜತೆಗೆ ಹೆಜ್ಜೆಯಿಟ್ಟರು.

ಹಾವೇರಿ, ಹುಬ್ಬಳ್ಳಿ, ಧಾರವಾಡ ಎನ್ನುತ್ತಾ, ಲೋಂಡಾ ವರೆಗೂ ಪ್ರತಿ ಸ್ಟೇಷನ್ನಿನ ಹಮಾಲಿಗಳನ್ನು ಕೇಳುತ್ತಾ ಹೋದರು: “25 ವರ್ಷದ ಹಿಂದೆ ನಿಮ್ಮ ಸ್ನೇಹಿತರ ಮಗ ಯಾರಾದರೂ ಮಿಸ್ಸಾಗಿದ್ನಾ?’. ಎಲ್ಲರ ಉತ್ತರ “ಗೊತ್ತಿಲ್ರೀ…’. ಅದಾಗಲೇ ಹುಡುಕುತ್ತಾ, ಮೂರು ದಿನ ಕಳೆದಿತ್ತು. ದಣಿವಾಗಿತ್ತು. ವಾಪಸು ಹುಬ್ಬಳ್ಳಿಗೆ ಬಂದು, ರೈಲ್ವೆ ಸ್ಟೇಷನ್ನಿನ ಗೋಡೆಗೊರಗಿ, ಇನ್ನೇನು ಮಾಡೋದು ಎಂದು ಲವಕುಮಾರ್‌ ಚಿಂತೆಗೆಟ್ಟು ಕುಳಿತಿರುವಾಗ, ಪಕ್ಕದಲ್ಲಿ ಹಮಾಲಿಯೊಬ್ಬ ಬಿಡಿ ಹಚ್ಚಿಕೊಂಡು ನಿಂತಿದ್ದ. ಅವನು ಪಕ್ಕದ ಗೂಡ್‌ಶೆಡ್‌ ಹಮಾಲಿಗಳನ್ನು ವಿಚಾರಿಸಲು ಹೇಳಿದನಂತೆ.

  ಲವಕುಮಾರ್‌ ಅಲ್ಲಿಗೂ ಹೋದರು. ಅಲ್ಲೊಬ್ಬರು ಹಮಾಲಿ: “ನಮ್‌ ದೌಲಾಸಾಬ್‌ ಮಗ, ರೈಲಲ್ಲೇ ಹೊಂಟೊಗಿ 25 ವರ್ಷ ಆಯ್‌¤ ರೀ’ ಅಂದಾಗ, ಲವಕುಮಾರ್‌ಗೆ ಮೈಯೊಮ್ಮೆ ರೋಮಾಂಚನವಾಯ್ತು. ಆದರೆ, ದೌಲಾಸಾಬ್‌ ಬದುಕಿರಲಿಲ್ಲ. ಅಲ್ಲಿಯೇ ಹಮಾಲಿಯಾಗಿದ್ದ ಅವನ ಮಗ ರಾಜಾಸಾಬ್‌ನನ್ನು ಭೇಟಿಮಾಡಿದರು. ಆ ರಾಜಾಸಾಬ್‌ ನೋಡಿದ್ರೆ, ಥೇಟ್‌ ಜೋನಾಥನ್‌ ರೀತಿಯೇ ಇದ್ದ. ಮನೆಗೆ ಕರಕೊಂಡು ಹೋಗಿ, ಅಮ್ಮನನ್ನು ತೋರಿಸಲು ಹೇಳಿದರು.

  ಅಷ್ಟರಲ್ಲಾಗಲೇ ಆ ಸುದ್ದಿ ಮನೆಯಲ್ಲಿದ್ದ ತಾಯಿ ಮೆರೂನಿಬೀ ಅವರ ಕಿವಿಗೆ ಬಿದ್ದಾಗಿತ್ತು. ಯಾರೋ ಪೊಲಿಸ್ರು, ಮಗನನ್ನು ವಿಚಾರಣೆ ನಡೆಸ್ತಿದ್ದಾರೆ ಅಂತ ತಪ್ಪಾಗಿ ತಿಳಿದು, ಆತಂಕಗೊಂಡಿದ್ದಳು ಆಕೆ. ಹುಬ್ಬಳ್ಳಿಯ ಗಣೇಶಪೇಟೆ ಸಮೀಪದ ಅವರ ಪುಟ್ಟ ಗುಡಿಸಲೆದುರು ಇಳಿಯುತ್ತಿದ್ದಂತೆ, ಆ ತಾಯಿ “ಇಲ್ರೀ… ನನ್‌ ಮಗ ಯಾವ ತಪ್ಪೂ ಮಾಡಿಲ್ರೀ…’ ಅಂತ ಬೊಬ್ಬೆ ಹಾಕತೊಡಗಿದಳು. ನೂರಾರು ಜನ ಸೇರಿದರು. ಲವಕುಮಾರ್‌ ಅವರನ್ನೆಲ್ಲ ಸಂತೈಸಿ, ಬಂದ ಉದ್ದೇಶ ಅದಲ್ಲ ಎಂದು ಹೇಳಿ, ಸುಮ್ಮನಾಗಿಸಿದರು. 

ಜೋನಾಥನ್‌ ತಂದಿದ್ದ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ಫೋಟೋ ಜತೆ ಬೇರೆ ಐದಾರು ಪುಟಾಣಿಗಳ ಫೋಟೋಗಳನ್ನು ಆ ತಾಯಿಯ ಎದುರಿಟ್ಟರು. “ಇದರಲ್ಲಿ ನಿನ್ನ ಮಗ ಯಾರು?’ ಅಂತ ಕೇಳಿದರು ಲವಕುಮಾರ್‌. ತಾಯಿ ಒಂದೊಂದೇ ಫೋಟೋ ಕೈಗೆತ್ತಿಕೊಂಡು ಇವನಲ್ಲ, ಇವನಲ್ಲ ಎನ್ನುತ್ತಾ, ಜೋನಾಥನ್‌ನ ಬಾಲ್ಯದ ಫೋಟೋವನ್ನು ಕಂಡು, “ಇವನೇ’ ಎಂದು ನಗು ಚಿಮ್ಮಿಸಿ ಹೇಳಿದಳು. ಲವಕುಮಾರ್‌, ಜೋನಾಥನ್‌ ಮುಖ ನೋಡಿ, ಮನಸ್ಸಿನಲ್ಲೇ “ಭಲೇ ಮಗನೆ’ ಅಂತಂದುಕೊಂಡರಂತೆ. ನಂತರ ಆ ಕುಟುಂಬದ ರಕ್ತದ ಗುಂಪನ್ನು ಜೋನಾಥನ್‌ನ ರಕ್ತದ ಜತೆಗೆ ಹೋಲಿಸುವ ಕೆಲಸವೂ ಆಯಿತು. 

“ಕಳೆದುಹೋದ ನಿನ್ನ ಮಗನಿಗೆ ಯಾವುದಾದರೂ ಗುರುತುಗಳಿದ್ದವಾ?’ ಎಂಬ ಮುಂದಿನ ಪ್ರಶ್ನೆಗೆ, “ಅಂವ ಚಿಕ್ಕಂದಿನಲ್ಲಿ ಬಿದ್ದು ತಲೆ ಹಿಂದೆ ಪೆಟ್ಟು ಮಾಡ್ಕೊಂಡಿದ್ದಾರೀ’ ಅಂದಳು ತಾಯಿ. ಜೋನಾಥನ್‌ ತಲೆಯ ಹಿಂದೆ ಆ ಗಾಯದ ಗುರುತು ಹಾಗೆಯೇ ಇತ್ತು. 

  ಜೋನಾಥನ್‌ನನ್ನು ಆ ತಾಯಿಯ ಮಡಿಲಿಗೆ ಒಪ್ಪಿಸುವ ಕ್ಷಣವೇ ರೋಮಾಂಚನ. ಎಷ್ಟೋ ವರ್ಷಗಳಿಂದ ಹೆಪ್ಪುಗಟ್ಟಿದ ತಾಯಿಯ ದುಃಖ ಒಮ್ಮೆಲೆ ಒಡೆದು, ಹೃದಯ ಹಗುರಾಗಿತ್ತು. ಒಂದು ದಿನ ಇದ್ದ ಜೋನಾಥನ್‌ಗೆ ಜೋಳದ ರೊಟ್ಟಿ, ಮೀನು ಸಾರು, ಕೊಬ್ಬರಿ ಚಟ್ನಿಯನ್ನು ಮಾಡಿದ್ದಳು ತಾಯಿ. ಆಕೆಗೆ ಕೆನರಾ ಬ್ಯಾಂಕಿನಲ್ಲೊಂದು ಖಾತೆ ಮಾಡಿಸಿ, ಐದು ಸಾವಿರ ರೂ. ಕೈಗಿಟ್ಟು, ವಾಪಸು ತನ್ನ ದೇಶಕ್ಕೆ ಹೊರಟು ಹೋದ ಜೋನಾಥನ್‌, ಮತ್ತೆ ಅದೇ ವರ್ಷ ಒಂದೆರಡು ಬಾರಿ ಮನೆಗೆ ಬಂದಿದ್ದು ಬಿಟ್ಟರೆ, 18 ವರ್ಷಗಳಿಂದ ಆತ ಭಾರತಕ್ಕೆ ಬರಲೇ ಇಲ್ಲ!
  80 ವರುಷದ ಜೋನಾಥನ್‌ ತಾಯಿ ಹಣ್ಣಾಗಿದ್ದಾಳೆ. ಮಗ ಬರುತ್ತಾನೆಂದು ಕಾಯುತ್ತಾ, ಮೈ ತುಂಬಾ ಕಣ್ಣಾಗಿದ್ದಾಳೆ…!

ಒಮ್ಮೆ ಬಾರೋ ಮಗನೇ…
ಅವತ್ತು 2000ದ ಇಸವಿಯಲ್ಲಿ ಜೋನಾಥನ್‌, ಲವಕುಮಾರ್‌ ಓಡಾಡಿದ ಜಾಗಕ್ಕೆ ಮೊನ್ನೆ “ಉದಯವಾಣಿ’ ಮರು ಭೇಟಿ ನೀಡಿತ್ತು. ಜೋನಾಥನ್‌ನ ತಾಯಿ ಮನೆಗೆ ಹೋದಾಗ, ಅಲ್ಲಿ ಕಂಡಿದ್ದೂ ಅವತ್ತಿನ ಬಡತನವೇ. ಆ ತಾಯಿಗೆ ಈಗ 80 ವರುಷ. ಕೊನೆ ಮಗಳ (ಜೋನಾಥನ್‌ ತಂಗಿ) ಮದುವೆ ಆಗಬೇಕಿದೆ ಅನ್ನೋ ಕೊರಗು ಕಾಡುತ್ತಿದೆ. ಜೋನಾಥನ್‌ ಮತ್ತೆ ಬರಲಿಲ್ಲ ಎಂಬ ಚಿಂತೆಯೇ ಆಕೆಯ ಆರೋಗ್ಯ ಹದಗೆಡುವಂತೆ ಮಾಡಿದೆ.

  “ಅವ್ನು ಬಂದು 18 ವರ್ಷ ಆಯ್ತುರೀ… ಕೊನೆ ಬಾರಿ ಬಂದಾಗ ಮಟನ್‌ ಸಾರು ಮಾಡಿದ್ದೆ. ಹೋಗೋವಾಗ 25 ಕಿಲೋ ಅಕ್ಕಿ ಕೊಡಿಸಿ, ಕೈಗೆ 5 ಸಾವಿರ ರೊಕ್ಕ ಕೊಟ್ಟು ಹೋಗಿದ್ದಾರೀ. ಹೊಳ್ಳಿ ಬತ್ತೀನಿ ಅಂದವ್ನು ಇಲ್ಲಿಯ ತನಕ ಬಂದಿಲ್ಲ’ ಎನ್ನುತ್ತಾರೆ ತಾಯಿ ಮೆರೂನಿಬೀ. 
 ಜೋನಾಥನ್‌ ಕೊಟ್ಟಿದ್ದ ಅಡ್ರೆಸ್ಸು, ಫೋಟೋಗಳನ್ನೆಲ್ಲ ಗುಡಿಸಲಿನಲ್ಲಿ ಇಟ್ಟಿದ್ದರಂತೆ. ಅಂದ್ಯಾವತ್ತೋ ಜೋರು ಮಳೆ ಬಂದು, ಎಲ್ಲವೂ ಕೊಚ್ಚಿ ಹೋದವಂತೆ. ಆದರೆ, ಒಂದೇ ಒಂದು ಫೋಟೋ ಅವನ ತಂಗಿಯ ಬಳಿ ಸೇಫ್ ಆಗಿತ್ತು.

  “ಪ್ರತಿ ರಂಜಾನಿಗೂ ಅಂವ ನೆನಪಾಗ್ತಾನ್ರೀ… ಈದ್‌ ದಿನ ಬೆಳಗ್ಗಿ ಅಂವಗೆ ಝಳಕ ಮಾಡಿಸ್ತಿದ್ದಿ. ಅಣ್ಣ ಕೊಡಿಸ್ತಿದ್ದ ಅರಿವಿ ಹಾಕ್ತಿದ್ದಿ. ಪಕ್ಕದ ಮನಿಯಿಂದ ಕನ್ನಡಿ ತಂದು ಕ್ರಾಪು ತೆಗೀತಿದ್ದಿ’ ಎಂದು ಹಳೆಯ ನೆನಪು ತೆಗೀತಾರೆ.

  “ಅಂವ ಎಲ್ಲಿದ್ರೂ ಚೊಲೋ ಇರಲಿ, ಅವನ ಆಸ್ತಿಪಾಸ್ತಿ ನಮಗ ಬ್ಯಾಡ್ರೀ… ಆದ್ರ ಒಮ್ಮೆ ಬಂದ್‌ಹೋಗ್ಲಿ…’ ಎನ್ನುವ ಕರುಳಿನ ಕೂಗು ಅವರದು.
  ಈ ಕೂಗು ಸ್ವೀಡನ್ನಿಗೆ ತಲುಪಿತಾದರೂ ಹೇಗೆ?

 ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next