Advertisement

ಸೇನೆಗೆ ಸೇರುವುದೇ ಧ್ಯೇಯವಾಗಿತ್ತು!

10:02 AM Feb 28, 2018 | Team Udayavani |

ಆಕಾಂಕ್ಷೆಗಳು ಎಲ್ಲರಿಗೂ ಇರುತ್ತವೆ. ಆದರೆ ಸೈನಿಕನಾಗಿ ದೇಶಸೇವೆ ಮಾಡಬೇಕು ಎಂಬುದು ಕೆಲವರಲ್ಲಿ ಮಾತ್ರ ಇರಬಹುದು. ಹಾಗಿದ್ದೂ ಸೈನಿಕನಾಗುವ ಕನಸು ನನಸಾಗಿಸಲು ಕೆಲವರಿಗಷ್ಟೇ ಸಾಧ್ಯವಾಗುತ್ತದೆ. ಅಂತಹವರು, ಸಮಾಜಕ್ಕೆ, ಕುಟುಂಬದ ಪಾಲಿಗೆ ನಿಜಕ್ಕೂ ಹೆಮ್ಮೆ!

Advertisement

ಮೂಲ್ಕಿ: ಸೈನಿಕನಾಗಲೇಬೇಕೆಂಬ ಗುರಿಯನ್ನು ಹೊಂದಿದ್ದು ಮಾತ್ರವಲ್ಲ, ಅದನ್ನು ಛಲದಿಂದ ಈಡೇರಿಸಿಕೊಂಡವರು ಕಿಲ್ಪಾಡಿಯ ಲ್ಯಾನ್ಸ್‌ ನಾಯಕ್‌ ರೋಹಿತ್‌.


ರೋಹಿತ್‌ ಸ್ನೇಹಿತನೊಂದಿಗೆ

ಎಸೆಸೆಲ್ಸಿ ವಿದ್ಯಾಭ್ಯಾಸ ಪೂರೈಸುವಷ್ಟರಲ್ಲೇ ಸೈನಿಕನಾಗುವ ಅಚಲ ಕನಸು ಹೊಂದಿದ್ದ ಅವರು ದ್ವಿತೀಯ ಪಿಯುಗೆ ಕಾಲಿಡುತ್ತಲೇ ಸೈನಿಕನಾಗಲು ಯತ್ನಿಸಿದ್ದು, ಅದರಲ್ಲಿ ಯಶಸ್ವಿಯಾಗಿದ್ದರು. ರೋಹಿತ್‌ ಅವರು ಈಗ ಅಸ್ಸಾಂನಲ್ಲಿ ಭೂಸೇನೆಯ ಆರ್ಟಿಲರಿ ವಿಭಾಗದಲ್ಲಿ ಸೇವೆಗೈಯುತ್ತಿದ್ದಾರೆ.


     ಪತ್ನಿ ಗೀತಾ ಮತ್ತು ಮಗಳು ಹಿತಾಳೊಂದಿಗೆ.

ಅವಿಭಕ್ತ ಕುಟುಂಬದ ಯೋಧ
ದಿ| ಕೇಶವ ಮೂಲ್ಯ-ರಮಣಿ ದಂಪತಿಯ ಐವರು ಮಕ್ಕಳಲ್ಲಿ ರೋಹಿತ್‌ ನಾಲ್ಕನೆಯವರು. ರೋಹಿತ್‌ ಅವರು 2 ವರ್ಷಗಳ ಹಿಂದೆ ಗೀತಾ ಅವರ ಕೈ ಹಿಡಿದಿದ್ದು, ಇವರಿಗೆ ಪುಟ್ಟ ಮಗಳಿದ್ದು, ತಾಯಿ, ಸೋದರರೊಂದಿಗೆ ಅವರು ವಾಸವಿದ್ದಾರೆ.

ವಿದ್ಯಾಭ್ಯಾಸ
ರೋಹಿತ್‌ ಅವರು ನಾಲ್ಕನೇ ತರಗತಿವರೆಗೆ ಕಿಲ್ಪಾಡಿ ದ.ಕ. ಜಿ.ಪಂ. ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ್ದಾರೆ. ಬಳಿಕ ಪಿಯುಸಿವರೆಗೆ ಮೂಲ್ಕಿ ಸರಕಾರಿ ಜೂನಿಯರ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸೇನೆ ಸೇರ್ಪಡೆಗೆ ಅರ್ಜಿ ಹಾಕಿದ್ದರು. ಆರ್ಟಿಲರಿ ವಿಭಾಗಕ್ಕೆ ಆಯ್ಕೆಯಾದ ಬಳಿಕ ಹೈದರಾಬಾದ್‌ನಲ್ಲಿ ಆರಂಭಿಕ ತರಬೇತಿ ಪಡೆದಿದ್ದರು. ಬಳಿಕ ಜಮ್ಮು- ಕಾಶ್ಮೀರ, ದಿಲ್ಲಿ, ಪಶ್ಚಿಮ ಬಂಗಾಲಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

Advertisement

ತುಳುನಾಡಿನವರು ಕಡಿಮೆ
ಸೇನೆಯಲ್ಲಿ ದ.ಕದವರು ತುಂಬಾ ಕಡಿಮೆ. ತುಳುನಾಡಿನವರು 100ಕ್ಕೆ ಐವರೂ ಇರುವುದಿಲ್ಲ. ಕೊಡಗಿನವರು ಸ್ವಲ್ಪ ಹೆಚ್ಚು ಇದ್ದಾರೆ ಎನ್ನುತ್ತಾರೆ.

ಮನೆಯಿಂದ ಫೋನ್‌ ಮಾಡುವಂತಿಲ್ಲ!
ಸೇನೆಯ ಕೆಲಸವೆಂದರೆ ಮೈಯೆಲ್ಲ ಕಣ್ಣಾಗಿರುವುದು ಎನ್ನುವುದು ರೋಹಿತ್‌ ತಂದೆಯವರ ಅಭಿಪ್ರಾಯವಾಗಿತ್ತು. ಆದ್ದರಿಂದ ಅನಿವಾರ್ಯ ಸಂದರ್ಭ ಹೊರತು ಪಡಿಸಿ ಮನೆಯವರಾರೂ ಕರೆ ಮಾಡಬಾರದು. ಸಮಯವಿದ್ದಾಗ ರೋಹಿತ್‌ ಕರೆ ಮಾಡಬೇಕೆಂದು ಅವರ ತಂದೆ ಫ‌ರ್ಮಾನು ಹೊರಡಿಸಿದ್ದರು. ಅದು ಇಂದಿಗೂ ಪಾಲನೆಯಾಗುತ್ತಿದೆ. 2 ವರ್ಷಗಳ ಹಿಂದೆ ತಂದೆ ತೀರಿಕೊಂಡಿದ್ದಾಗ ಮಾತ್ರ ರೋಹಿತ್‌ ಮನೆಯಿಂದ ಕರೆ ಮಾಡಲಾಗಿತ್ತು. ತಾಯಿ ಆಸ್ಪತ್ರೆಯಲ್ಲಿದ್ದಾಗಲೂ ಹೇಳಿರಲಿಲ್ಲ ಎಂದು ಮನೆಯವರು ನೆನಪಿಸಿಕೊಳ್ಳುತ್ತಾರೆ.

ನೆರೆಮನೆಯವರು ಬೀಳ್ಕೊಟ್ಟದ್ದು!
ಸೇನೆಗೆ ಸೇರುವ ಸಂದರ್ಭ ಮಂಗಳೂರಿಗೆ ಹೋಗಿ ರೋಹಿತ್‌ನನ್ನು ಬೀಳ್ಕೊಟ್ಟದ್ದು ನೆರೆಮನೆಯ ಬಾಬು ದೇವಾಡಿಗ ಅವರು. ಮಂಗಳೂರಿಗೆ ತಮ್ಮನೊಂದಿಗೆ ಹೋಗಿದ್ದ ದೊಡ್ಡಣ್ಣ ಮಧ್ಯಾಹ್ನ ತನಕ ಅಲ್ಲಿದ್ದರೂ ಕೊನೆಯ ಹಂತದ ಕಾಗದಪತ್ರ, ಆರೋಗ್ಯ ತಪಾಸಣೆ ಮೊದಲಾದ ಕಾರ್ಯಗಳು ವಿಳಂಬವಾಗಿದ್ದರಿಂದ ಅನಿವಾರ್ಯವಾಗಿ ಕೆಲಸಕ್ಕೆ ಹೋಗಲೇಬೇಕಿದ್ದಾಗ ಬೀಳ್ಕೊಡಲು ಯಾರೂ ಇರಲಿಲ್ಲ. ತಂದೆ ಅಂತಹ ಧೈರ್ಯ ತೋರಲಿಲ್ಲ. ಉಳಿದ ತಮ್ಮಂದಿರು ಚಿಕ್ಕವರೂ ಆಗಿದ್ದರು. 

ಉಗ್ರರೊಂದಿಗೆ ಸೆಣಸಾಟದ ನೆನಪು
ಕರ್ತವ್ಯದ ಅವಧಿಯಲ್ಲಿ 2 ವರ್ಷ ಪಾಕಿಸ್ಥಾನ ಗಡಿಯಲ್ಲಿ ರೋಹಿತ್‌ ರಾಷ್ಟ್ರೀಯ ರೈಫ‌ಲ್ಸ್‌ನಲ್ಲಿ ಸೇವೆ ಸಲ್ಲಿಸಿದ್ದರು. ಈ ಸಂದರ್ಭ ಹಲವು ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಮೈ ಎಲ್ಲ ಕಣ್ಣಾಗಿರಬೇಕಾದ ಈ ಕಾರ್ಯಾಚರಣೆಗಳಲ್ಲಿ ಕೊರೆವ ಚಳಿಯಲ್ಲಿ ದೇಶ ರಕ್ಷಣೆ ಮಾಡುವುದು ಸವಾಲಿನದ್ದು ಎನ್ನುತ್ತಾರೆ ರೋಹಿ ತ್‌. ಅರೆ ಕ್ಷಣ ಮೈಮರೆತರೂ ಅಪಾಯ ತಪ್ಪಿದ್ದಲ್ಲ. ಉಗ್ರರನ್ನು ಸದೆಬಡಿದ ಕಾರ್ಯಾಚರಣೆಗಳು ರೋಚಕ ಎನ್ನುತ್ತಾರೆ ಅವರು. ಚಳಿಗಾಲದಲ್ಲಿ ಕಾಶ್ಮೀರ ಗಡಿಯ ಹಲವೆಡೆ ಆರೆಂಟು ಅಡಿ ಮಂಜು ಬೀಳುತ್ತದೆ. ಈ ವೇಳೆ ಎಚ್ಚರಿಕೆಯಿಂದಿರಬೇಕು. ಅತೀವ ಹಿಮಪಾತದ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಕಾರ್ಯಾಚರಣೆ ವಿಧಾನಗಳ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಕಾಶ್ಮೀರದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಕೆಲವೆಡೆಗಳಲ್ಲಿ ಎಲ್ಲದಕ್ಕೂ ಮಂಜುಗಡ್ಡೆಯೇ ಆಸರೆ. ಸ್ವವ್‌ನಲ್ಲಿ ಮಂಜುಗಡ್ಡೆಯನ್ನು ಕರಗಿಸಿ ಅದನ್ನು ಕುಡಿಯುವುದಕ್ಕೂ, ಸ್ನಾನಕ್ಕೂ ಅಡುಗೆಗೂ ಬಳಸಬೇಕಾದ ಅನಿವಾರ್ಯ ಇತ್ತು ಎನ್ನುತ್ತಾರೆ .

ನೆರೆ ಬಂದಾಗ 10 ದಿನ ಸುದ್ದಿ ಇರಲಿಲ್ಲ
ಕಾಶ್ಮೀರದಲ್ಲಿ ಕೆಲವು ವರ್ಷಗಳ ಹಿಂದೆ ಭಾರೀ ನೆರೆ ಬಂದಿದ್ದಾಗ 10 ದಿನ ರೋಹಿತ್‌ ಮನೆಯವರನ್ನು ಸಂಪರ್ಕಿಸಿರಲಿಲ್ಲ. ಈ ಸಂದರ್ಭ ಸಹೋದ್ಯೋಗಿಗಳು ಬೇರೆ ಮೂಲಗಳಿಂದ ಅವರವರ ಮನೆ ಸಂಪರ್ಕಕ್ಕೆ ಯತ್ನಿಸಿದ್ದರು. ಆದರೆ ರೋಹಿತ್‌, ಹೆತ್ತವರು ಗಾಬರಿಗೊಳ್ಳಬಹುದೆಂದು ಅಂತಹ ಪ್ರಯತ್ನವನ್ನೇ ಮಾಡಿರಲಿಲ್ಲ. ಒಂದೊಮ್ಮೆ ರೋಹಿತ್‌ ಅಣ್ಣ ಅವರು ಪ್ರಯತ್ನಿಸಿದ್ದರಾದರೂ ನಾಟ್‌ ರೀಚೆಬಲ್‌ ಇದ್ದುದರಿಂದ ಮನೆಯವರಿಗೆ ಹೇಳಿದರೆ ಗಾಬರಿಯಾಗುತ್ತದೆಂದು ಅವರೂ ನೆಟ್‌ವರ್ಕ್‌ ಕಟ್‌ ಆಗಿದೆ ಎಂದು ಹೇಳಿ ಸಮಾಧಾನಿಸಿದ್ದರು. ಬಳಿಕ ರೋಹಿತ್‌ ಅವರ ಫೋನ್‌ ಬಂದಾಗಲೇ ಎಲ್ಲರಿಗೂ ಸಮಾಧಾನ ಆಗಿತ್ತಂತೆ.

ಹೆಚ್ಚೆಚ್ಚು ಮಂದಿ ಸೇರಲಿ
ಕರಾವಳಿಯ ಹೆಚ್ಚೆಚ್ಚು ಜನ ಸೇನೆಗೆ ಸೇರುವಂತಾಗಬೇಕು. ಸೇನೆ ಸೇರಿದ ಬಳಿಕವೂ ಕಲಿಯಲು ಅವಕಾಶವಿದೆ. ಸೇನೆಗೆ ಸೇರಿದ ಬಳಿಕ ನಮಗೆ ಭಾರತಾಂಬೆಯ ಸೇವೆಯೇ ಮೊದಲ ಆದ್ಯತೆ. ಮನೆಯವರ ಪ್ರೋತ್ಸಾಹವೇ ನಮ್ಮ ಕೆಲಸಕ್ಕೆ ಸ್ಫೂರ್ತಿಯಾಗಿದೆ.
– ಲ್ಯಾ|ನಾ| ರೋಹಿತ್‌

ಹೆಮ್ಮೆ ಇದೆ
ಅಂದು ರೋಹಿತ್‌ ಸೇನೆಗೆ ಸೇರುವುದಕ್ಕೆ ನಮಗೆ ಮನಸಿದ್ದಿರಲಿಲ್ಲ. ಆದರೂ ಆತ ಧೈರ್ಯ ಮಾಡಿ ದೇಶಸೇವೆಗೆ ಹೊರಟಿದ್ದ. ಇಂದು ಆತ ದೇಶಸೇವೆ ಮಾಡುತ್ತಿರುವುದರ ಬಗ್ಗೆ ಅತೀವ ಹೆಮ್ಮೆ ಇದೆ.
– ರಮಣಿ, ತಾಯಿ

ಬದುಕಿನ ಪಾಠ
ರೋಹಿತ್‌ ದೇಶಸೇವೆ ಮಾಡುತ್ತಿರುವುದು ಊರಿಗೂ, ನಮಗೂ ಹೆಮ್ಮೆ. ನಮ್ಮಲ್ಲಿನ ಹೆಚ್ಚೆಚ್ಚು ಜನರು ಸೇನೆ ಸೇರುವಂತಾಗಬೇಕು. ಸೇನೆಯಲ್ಲಿನ ಶಿಸ್ತುಬದ್ಧ ಜೀವನ ಬದುಕಿನ ಅನುಭವ ಪಾಠವೂ ಆಗಿದೆ.
ಮಾಧವ ಪೂಜಾರಿ, (ಗೆಳೆಯ )
   ನಿವೃತ್ತ ಯೋಧ ಕಿಲ್ಪಾಡಿ 

ಸರ್ವೋತ್ತಮ ಅಂಚನ್‌ ಮೂಲ್ಕಿ 

Advertisement

Udayavani is now on Telegram. Click here to join our channel and stay updated with the latest news.

Next