Advertisement

ಜಾನುವಾರುಗಳ ಹೊಟ್ಟೆ ಸೇರುತ್ತಿದೆ ವಿಷ!

10:35 AM Sep 12, 2018 | |

ಮಹಾನಗರ: ಸ್ವಚ್ಛ ಮಂಗಳೂರು ಯೋಜನೆ ಅನುಷ್ಠಾನವಾಗುತ್ತಿದ್ದರೂ, ನಗರದ ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್‌ ಎಸೆಯುವ ಪರಿಪಾಠ ಕಡಿಮೆಯಾಗಿಲ್ಲ. ಮನುಷ್ಯರ ಇಂತಹ ವರ್ತನೆಗಳಲ್ಲಿ ರಸ್ತೆ ಬದಿ ತ್ಯಾಜ್ಯ, ಪ್ಲಾಸ್ಟಿಕ್‌ಗಳು ದನ, ಕರು, ನಾಯಿಯ ಹೊಟ್ಟೆ ಸೇರುತ್ತಿವೆ. ಪರಿಣಾಮವಾಗಿ ನಗರದಲ್ಲಿ ಪ್ರಾಣಿಗಳ ಗೋಳು ಕೇಳುವವರೇ ಇಲ್ಲ ಅನ್ನುವಂತಾಗಿದೆ.

Advertisement

ನಗರದಲ್ಲಿ ಪ್ಲಾಸ್ಟಿಕ್‌ ಕೈಚೀಲಗಳ ಬಳಕೆಗೆ ನಿಷೇಧವಿದೆ. ಆದರೆ, ಈ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಇದರಿಂದಾಗಿ ಹೊಟೇಲ್‌ಗ‌ಳಲ್ಲಿ ಪ್ಲಾಸ್ಟಿಕ್‌ ಕವರ್‌ ಗಳ ಮೂಲಕ ಆಹಾರ ಕಟ್ಟಿಕೊಡುವುದು ಸಾಮಾನ್ಯವಾಗಿದೆ. ಬಳಸಿದ ಪ್ಲಾಸ್ಟಿಕ್‌ ಚೀಲಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಇವೆಲ್ಲವೂ ಗೋವುಗಳ ಉದರ ಸೇರಿ ಪ್ರಾಣ ತೆಗೆಯುತ್ತಿವೆ.

ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಎಸೆದ ಅನ್ನ, ತಿಂಡಿಯ ಪರಿಮಳಕ್ಕೆ ನಾಯಿ, ಗೋವುಗಳು ಅವನ್ನು ಪ್ಲಾಸ್ಟಿಕ್‌ ಸಮೇತ ತಿನ್ನುತ್ತವೆ. ಹೀಗೆ ತಿಂದ ಪ್ಲಾಸ್ಟಿಕ್‌ ಕರಗದೇ, ಹೊರಕ್ಕೂ ಹೋಗದೇ ಹೊಟ್ಟೆಯಲ್ಲಿ ಶೇಖರಣೆಯಾಗುತ್ತದೆ. ಕ್ರಮೇಣ ಇದು ಗೋವುಗಳಲ್ಲಿ ವಿವಿಧ ರೀತಿಯ ಕಾಯಿಲೆಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಎಸೆಯುವವರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಪರಿಸರವಾದಿಗಳು ಅದೆಷ್ಟು ಬಾರಿ ಮನವಿ ಮಾಡಿದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸುತ್ತಿಲ್ಲ.

ಕೆಲವು ದಿನಗಳ ಹಿಂದೆಯಷ್ಟೇ ಬೈಕಂಪಾಡಿ, ಪಣಂಬೂರು ಪರಿಸರದಲ್ಲಿ ಸುತ್ತಾಡುತ್ತಿದ್ದ ಗೂಳಿ ಕೊಂಬು ಕ್ಯಾನ್ಸರ್‌ ನಿಂದ ಸಾವನ್ನಪ್ಪಿತ್ತು. ಇದರ ಪೋಸ್ಟ್‌ ಮಾರ್ಟಂ ಮಾಡಿದಾಗ ಹೊಟ್ಟೆಯಲ್ಲಿ 20 ಕೆಜಿಗೂ ಅಧಿಕ ಪ್ಲಾಸ್ಟಿಕ್‌ ಮತ್ತು ಲೋಹದ ವಸ್ತುಗಳಿದ್ದವು. ಸಾರ್ವಜನಿಕರು ಎಸೆದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ತನಗರಿವಿಲ್ಲದಂತೆ ಮೇಯ್ದು ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದೆ. ಬೈಕಂಪಾಡಿಯ ಗೂಳಿಯ ಕೊಂಬಿನಲ್ಲಿ ಕಾಣಿಸಿಕೊಂಡ ಕ್ಯಾನ್ಸರ್‌ಗೆ ಅದು ತಿಂದ ಪ್ಲಾಸ್ಟಿಕ್‌ ತ್ಯಾಜ್ಯ ಮತ್ತು ರಾಸಾಯನಿಕ ಮಿಶ್ರಿತ ವಸ್ತುಗಳು ಕಾರಣ ಎನ್ನಲಾಗುತ್ತಿದೆ.

ಸ್ವಚ್ಛತೆಗೂ ಕೊಡಲಿಯೇಟು
ನಗರದ ರಸ್ತೆ, ಹೆದ್ದಾರಿ ಬದಿಯಲ್ಲಿ ಹುಲ್ಲು ಪೊದೆಗಳ ಬದಲು ಇಂಟರ್‌ಲಾಕ್‌ ಕಾಂಕ್ರೀಟ್‌ ಹಾಸಲಾಗಿದೆ. ಅದರ ಮೇಲೆ ಪ್ಲಾಸ್ಟಿಕ್‌ ರಾಶಿ ಸಾಮಾನ್ಯ. ನಗರದಲ್ಲಿ ಈಗ ಗೋವುಗಳೇ ಅಪರೂಪ. ಬೀಡಾಡಿ ಗೋವುಗಳು ಮಾತ್ರ ಈ ವಿಷಕಾರಿ ಪ್ಲಾಸ್ಟಿಕ್‌ ಸೇವಿಸಿ ರೋಗಗಳಿಂದ ಬಳಲಿ ಕೊನೆಗೆ ಅಸುನೀಗುತ್ತಿವೆ. ಇದರೊಂದಿಗೆ ನಗರದ ಸ್ವಚ್ಛತೆಗೂ ಇದರಿಂದ ಹಾನಿಯಾಗುತ್ತಿದೆ. ಬಳಸಿದ ಪ್ಲಾಸ್ಟಿಕ್‌ ಹಾಗೂ ಇತರ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡುವ ಹವ್ಯಾಸವನ್ನು ಜನರು ಮರೆತಂತಿದೆ. ಜಾನುವಾರುಗಳಿಗೆ ಈ ಬಗ್ಗೆ ಅರಿವಿಲ್ಲದಿರಬಹುದು ಆದರೆ ಪ್ಲಾಸ್ಟಿಕ್‌ ಹಾಗೂ ಇನ್ನಿತರ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವ ನಾಗರಿಕರು ಈ ಬಗ್ಗೆ ಚಿಂತಿಸಬೇಕಾಗಿದೆ.

Advertisement

ಪ್ಲಾಸ್ಟಿಕ್‌ ನಿಷೇಧ ಹೆಸರಿಗೆ ಮಾತ್ರ
ನಗರದಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನು ಬಳಸಬಾರದು ಎನ್ನುವ ನಿಯಮ ಹೆಸರಿಗೆ ಮಾತ್ರ ಇದ್ದಹಾಗಿದೆ. ನಗರದ ಎಲ್ಲ ಪ್ರಮುಖ ಹೊಟೇಲ್‌, ಅಂಗಡಿ ಮುಂಗಟ್ಟುಗಳಲ್ಲಿ ಪಾಸ್ಟಿಕ್‌ ಚೀಲಗಳನ್ನೇ ಬಳಸಲಾಗುತ್ತಿದೆ. ಬಳಸಿದ ಪ್ಲಾಸ್ಟಿಕ್‌ಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಪರಿಣಾಮ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕಠಿನ ಕ್ರಮ ಜರಗಿಸಿದರೆ ಇಂತಹ ಅಮಾಯಕ ಪ್ರಾಣಿಗಳು ಬಲಿಯಾಗುವುದು ತಪ್ಪುತ್ತದೆ.

ಪ್ಲಾಸ್ಟಿಕ್‌ ಉತ್ಪಾದನೆ ನಿಷೇಧಿಸಿ
ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವುದರ ಜತೆಗೆ ಮೂಕ ಪ್ರಾಣಿಗಳಿಗೂ ಹಾನಿಯಾಗುತ್ತಿರುವುದು ಶೋಚನೀಯ. ಸರಕಾರದ ಪ್ಲಾಸ್ಟಿಕ್‌ ನಿಷೇಧಾಜ್ಞೆಯ ಮಧ್ಯೆಯೂ ಪ್ಲಾಸ್ಟಿಕ್‌ ಮಾರಾಟ ಮತ್ತು ಬಳಕೆ ವ್ಯಾಪಕವಾಗುತ್ತಿರುವುದು ನಾಗರಿಕ ಸಮಾಜದಲ್ಲಿ ಉತ್ತಮ ಬೆಳವಣಿಗೆಯಲ್ಲ. ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳ ಉತ್ಪಾದನೆಯನ್ನು ಮೂಲದಲ್ಲಿಯೇ ನಿಷೇಧಿಸಬೇಕಾಗಿದೆ.
– ಏಕಗಮ್ಯಾನಂದ ಸ್ವಾಮೀಜಿ, ರಾಮಕೃಷ್ಣ ಮಠ

ಅರಿವು ಮೂಡಬೇಕು
ಪ್ಲಾಸ್ಟಿಕ್‌ ಬಳಕೆಯಿಂದ ಆಗುವ ಅಪಾಯ ಹಾಗೂ ಅದನ್ನು ಎಲ್ಲೆಂದರಲ್ಲಿ ಎಸೆದರೆ ಪ್ರಾಣಿಗಳ ಜೀವಕ್ಕೆ ಆಗುವ ತೊಂದರೆ ಬಗ್ಗೆ ಜನರಿಗೆ ಅರಿವು ಮೂಡಬೇಕು. ಅದನ್ನು ಹೊರತುಪಡಿಸಿ ಯಾವುದೇ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಏನೂ ಪ್ರಯೋಜನವಿಲ್ಲ.
– ಡಾ| ಎಸ್‌. ಮೋಹನ್‌,
ಉಪ ನಿರ್ದೇಶಕರು, ಪಶು ಪಾಲನಾ ಇಲಾಖೆ

ಪ್ರಜ್ಞಾ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next