Advertisement

ಮರೆಗೆ ಸರಿದ ಯಕ್ಷಗಾನದ ಪ್ರಾಚೀನ ಆವಿಷ್ಕಾರ ಜೋಡಾಟ

06:00 AM Dec 07, 2018 | |

ಸುಮಾರು ಹದಿನೈದು ವರ್ಷಗಳ ಹಿಂದೆ ಮಂಗಳೂರಿನ ಪುರಭವನದಲ್ಲಿ ಕಟೀಲು ಮೇಳದವರು ಕೆಲವು ಹೆಸರಾಂತ ಕಲಾವಿದರೊಂದಿಗೆ ಪ್ರದರ್ಶಿಸಿದ “ಶ್ರೀ ದೇವಿ ಮಹಾತ್ಮೆ’ಯೇ ಈ ಭಾಗದಲ್ಲಿ ನಡೆದ ಕೊನೆಯ ಜೋಡಾಟ ಎಂದು ಕಾಣಿಸುತ್ತದೆ. ಇದರ ಸಂಘಟಕರು ಯಾರೆಂದು ನೆನಪಾಗದಿದ್ದರೂ ಅದೊಂದು ಅದ್ಭುತ ಪ್ರದರ್ಶನವಾಗಿತ್ತು. ಪುರಭವನದ ದೊಡ್ಡ ವೇದಿಕೆಯನ್ನು ಮಧ್ಯೆ ಹಗ್ಗ ಕಟ್ಟಿ ಇಬ್ಟಾಗಗೊಳಿಸಲಾಗಿತ್ತು. ಬಲಭಾಗದಲ್ಲಿ ಒಂದು ಮೇಳ , ಎಡಭಾಗದಲ್ಲಿ ಮತ್ತೂಂದು. ಕಿಕ್ಕಿರಿದು ತುಂಬಿದ ಪ್ರೇಕ್ಷಕರು. ಜಿಟಿಜಿಟಿ ಮಳೆಯ ಹೊತ್ತಿನ ಮನರಂಜನೆಯಾದುದರಿಂದ ಏನೋ ಒಂದು ರೀತಿಯ ಪುಳಕ. ಪದ್ಧತಿ, ಕಟ್ಟುಪಾಡುಗಳಂತೆ ಸ್ತ್ರೀ ವೇಷ, ಕಟ್ಟೆ ವೇಷ ಇತ್ಯಾದಿಗಳ ಪಾಡಿಲ್ಲದೆ ನೇರ ಪ್ರಸಂಗಕ್ಕೆ ಚಾಲನೆ ನೀಡಲಾಯಿತು. ಕಟೀಲು ಮೇಳದ ಬಲಿಪ ಭಾಗವತರು “ಅಂಬುದುಹದಳನೇತ್ರೆ…’ ಎಂದು ಪ್ರಸಂಗಕ್ಕೆ ಚಾಲನೇ ನೀಡಿದರು. ಭೀಮ ಭಟ್ಟರ ದೇವಿ, ಗುಡ್ಡಪ್ಪ ಗೌಡರ ರಕ್ತಬೀಜ, ಪಡ್ರೆ ಕುಮಾರರ ವಿಷ್ಣು ಮೊದಲಾದವರ ಸಹಜತೆಯ ಮುಂದೆ ಹೆಸರಾಂತ ಕಲಾವಿದರು ಸತ್ವ ಕಳೆದುಕೊಂಡಂತಿತ್ತು.ಶ್ರೀದೇವಿ ಉಯ್ನಾಲೆಯಲ್ಲಿ ಕುಳಿತು ತೂಗುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. 

Advertisement

ಹೀಗೆ ಹೊಸ ಅನುಭವವನ್ನು ನೀಡುತ್ತಿದ್ದ ಜೋಡಾಟ ಮರೆಯಾಗಿ ವರ್ಷಗಳೇ ಕಳೆಯಿತು. ಯಾವ ಮಾಧ್ಯಮದಲ್ಲೂ ಜೋಡಾಟದ ಬಗ್ಗೆ ಕನಿಷ್ಠ ಪ್ರಸ್ತಾಪವೂ ಆಗದಿರುವುದನ್ನು ಕಂಡಾಗ ಜೋಡಾಟವೆಂಬ ಈ ಅಪೂರ್ವ ಯಕ್ಷಗಾನ ಸ್ಪರ್ಧಾಕೂಟ ಅವಸಾನಗೊಂಡಿತೇನೋ ಎಂದನಿಸುತ್ತದೆ. ಕಲಾವಿದರಲ್ಲಿ ಸ್ಫೂರ್ತಿ ತುಂಬಲು ಮತ್ತು ಸಾಮರ್ಥ್ಯ ಅಳೆಯಲು ಈ ರೀತಿಯ ಜೋಡಾಟಗಳನ್ನು ಏರ್ಪಡಿಸಲಾಗುತ್ತಿತ್ತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಿದ್ದಾರೆ. ಮೇಳಗಳನ್ನು ಕಟ್ಟಿ ಹೊರಡಿಸುವ ಕೆಲವು ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಮಠಗಳು, ಸಾಮಾಜಿಕ-ಧಾರ್ಮಿಕ ಮುಖಂಡರು, ಶ್ರೀಮಂತ ಕಲಾಪೋಷಕರು , ಅರಸೊತ್ತಿಗೆಯವರು, ಗುತ್ತು ಮನೆತನದ ಜಮೀನಾªರರು ಜೋಡಾಟಗಳನ್ನು ಏರ್ಪಡಿಸಿ ಒಂದು ರೀತಿಯ ಗಮ್ಮತ್ತಿನ ಮನರಂಜನೆ ನೀಡುತ್ತಿದ್ದರಂತೆ.

ಸ್ಪರ್ಧಾ ಕಣವಾಗಿದ್ದ ಜೋಡಾಟ 
 ಜೋಡಾಟದ ಮೂಲಕ ಒಬ್ಬ ಉತ್ತಮ ಭಾಗವತ, ಉತ್ತಮ ನಾಟ್ಯಗಾರ, ಉತ್ತಮ ಹಾಸ್ಯಗಾರ, ಉತ್ತಮ ವಾಗ್ಮಿಯೆ ಮೊದಲಾದ ಪಟು ಓರ್ವನನ್ನು ಆಯ್ಕೆ ಮಾಡುವ ಪ್ರಯತ್ನ ಇದರ ಹಿಂದಿನ ಉದ್ದೇಶವಾಗಿತ್ತು ಎಂದು ಕೆಲವು ಯಕ್ಷಗಾನ ಪಂಡಿತರು ನೆನಪಿಸಿಕೊಳ್ಳುವುದಿದೆ.  ಯಕ್ಷಗಾನ ಎಂದರೆ ಒಂದು ಸಮಷ್ಟಿ ಕಲೆ. ನಾಟ್ಯ, ಗಾನ, ಹಿಮ್ಮೇಳ, ನವರಸ ಭಾವ, ಸಂಗೀತ, ನಾಟಕ, ವರ್ಣ, ಅಲಂಕಾರ ಎಲ್ಲ ಒಂದೆಡೆ ಮೇಳೈಸಿದ ಅಪೂರ್ವ ಕಲೆಯೇ ಯಕ್ಷಗಾನ. “ಪ್ರಾಪಂಚಿಕ ಮಟ್ಟದಲ್ಲಿ ಸಂಶೋಧನೆ ನಡೆಸಿದರೂ ಕಲೆಗಳ ಸರ್ವ ಪ್ರಕಾರವೂ ಏಕತ್ರವಾಗಿರುವ ಕಲೆಯೊಂದು ಇರುವುದಾದರೆ ಅದು ಯಕ್ಷಗಾನ’ ಎಂದು ಜ್ಞಾನಪೀಠ ಪುರಸ್ಕೃತ ಡಾ| ಶಿವರಾಮ ಕಾರಂತರೇ ತಮ್ಮ “ಯಕ್ಷಗಾನ ಗ್ರಂಥ’ದಲ್ಲಿ ಉಲ್ಲೇಖೀಸಿದ್ದಾರೆ. ಇಂಥ ಅಪೂರ್ವ ಕಲೆಯಾದ ಯಕ್ಷಗಾನದಲ್ಲಿ ಸಮಷ್ಟಿತ್ವವನ್ನು ಹೊಂದಿದ ಕಲಾವಿದನನ್ನು ಹುಡುಕುವ ಬಗೆಯಾಗಿ ಈ ಜೋಡಾಟ ಒಂದು ಯತ್ನವಾಗಿರಲು ಸಾಧ್ಯವಿದೆ. 

ಕಟೀಲು ದೇವಾಲಯದಲ್ಲಿ ಕೊಡೆತ್ತೂರು ಗುತ್ತು ಕೋಟಿ ಶೆಟ್ಟಿ ಎಂಬವರು ಆಡಳಿತಗಾರರಾಗಿದ್ದ ಸಂದರ್ಭದಲ್ಲಿ ಕೆಲವೊಮ್ಮೆ ಜೋಡಾಟಗಳನ್ನು ನಡೆಸುತ್ತಿದ್ದರಂತೆ. ಅದೇ ರೀತಿ ಮುಲ್ಕಿ ಸೀಮೆಯ ಸಾಮಂತರಸರು ಕೂಡಾ ಈ ರೀತಿಯ ಸ್ಪರ್ಧಾತ್ಮಕ ಯಕ್ಷಗಾನ ಕೂಟದ ಪ್ರೋತ್ಸಾಹಕರಾಗಿದ್ದರು ಎಂದು ಕೆಲವು ಹಿರಿಯ ತಲೆಗಳು ನೆನಪಿಸಿಕೊಳ್ಳುತ್ತಿವೆ. ಆಗಿನ ಕಾಲದಲ್ಲಿ ಕಲಾವಿದನೋರ್ವ ಶಹಬಾಸ್‌ ಎನಿಸಿಕೊಳ್ಳುವುದು ಅವನ ಗಿರಕಿ ಹೊಡೆಯುವ ಲೆಕ್ಕಚಾರದಿಂದ. ಯುದ್ಧದ ಸಂದರ್ಭದಲ್ಲಿನ ಈ ಗಿರಕಿ ಹೊಡೆಯುವುದೇನೋ ಅಷ್ಟು ಸುಲಭದ ಕುಣಿತವಲ್ಲ. ನೂರು, ಇನ್ನೂರು, ಮುನ್ನೂರರವರೆಗೂ ಹಠಕಟ್ಟಿ ಗಿರಕಿ ಹೊಡೆದು ಅದ್ಭುತ ಪ್ರದರ್ಶನ ನೀಡಿ ಭಲೇ ಎನಿಸಿಕೊಂಡ ಕೆಲವು ಕಲಾವಿದರು ಇಂದು ಮೂಲೆ ಸೇರಿದ್ದಾರೆ. 

ಜೋಡಾಟಗಳು ಈಗ ರಂಗದಿಂದ ನಿಷðಮಿಸಿವೆಯೇ? ಒಂದು ವೇಳೆ ಇದು ಹೌದಾಗಿದ್ದರೆ ಅದರ ಹಿಂದಿನ ಕಾರಣವೇನು? ಯಕ್ಷಗಾನ ರಂಗದ ಪ್ರಾಚೀನ ಆವಿಷ್ಕಾರ ವೊಂದು ಈ ರೀತಿಯಾಗಿ ಸದ್ದುಗದ್ದಲವಿಲ್ಲದೆ ಮರೆಗೆ ಸರಿದಿರುವುದು ಸರಿಯಲ್ಲ. ದೃಶ್ಯಮಾಧ್ಯಮಗಳ ಜನಪ್ರಿಯತೆಯಿಂದಾಗಿ ಯಕ್ಷಗಾನ ಒಂದು ರೀತಿಯ ಸಂಕೀರ್ಣತೆಗೆ ಒಳಗಾಗಿರುವುದು ನಿಜ. ಹರಕೆಯ ಸೇವೆಯಾಟಗಳು ನಿರಂತರವಾಗಿ ನಡೆಯುತ್ತಿದ್ದರೆ ಟೆಂಟ್‌ ಆಟಗಳಿಗೆ ಅಂಕದ ಪರದೆ ಎಳೆಯಲಾಗಿದೆ. ಯಕ್ಷಗಾನ ಸಂಘಟಕರು ಸಂಯೋಜಿಸುವ ಹೊಸ ಹೊಸ ಪ್ರಸಂಗಗಳು, ನೂತನ ಕಲಾವಿದರ ಮೂಲಕ ಹೊರಗೆಡಹಲು ಯತ್ನಿಸುವ ಹೊಸ ಬಗೆತಗಳು ಈಗ ಮರೀಚಿಕೆಯಾಗಿಬಿಟ್ಟಿದೆ. ಇಂಥ ಕಾಲಘಟ್ಟದಲ್ಲಿ ಜೋಡಾಟದ ಕುರಿತು ಒಂದು ಕಮ್ಮಟ ಅಥವಾ ಒಂದು ಚಿಂತನ ಸಭೆ ನಡೆಸಿ ಮರುಜೀವ ನೀಡುವ ಯತ್ನ ಮಾಡಬಾರದೇಕೆ?

Advertisement

ಮೋಹನದಾಸ ಸುರತ್ಕಲ್‌ 

Advertisement

Udayavani is now on Telegram. Click here to join our channel and stay updated with the latest news.

Next