Advertisement

Jobs; ಮುಂದಿನ ದಿನಗಳಲ್ಲಿ ರಾಜ್ಯದ 3 ಕಡೆ ಉದ್ಯೋಗ ಮೇಳ

11:24 PM Feb 28, 2024 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಸರಕಾರ ಆಯೋಜಿಸಿದ್ದ ಉದ್ಯೋಗ ಮೇಳ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ವಿಭಾಗವಾರು ಮೈಸೂರು, ಕಲಬುರಗಿ ಹಾಗೂ ಬೆಳಗಾವಿಯಲ್ಲೂ ನಡೆಸಲಾಗುವುದು ಎಂದು ಕೌಶಲಾಭಿವೃದ್ಧಿ ಹಾಗೂ ಜೀವನೋಪಾಯ ಸಚಿವ ಡಾ| ಶರಣಪ್ರಕಾಶ್‌ ಪಾಟೀಲ್‌ ಹೇಳಿದರು.

Advertisement

ವಿಕಾಸಸೌಧದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಭಾಗವಾರು ಉದ್ಯೋಗ ಮೇಳ ನಡೆಸುವ ಮಾದರಿಯಂತೆ ರಾಜ್ಯದ ಎರಡು ಕಡೆ ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿ ಕೇಂದ್ರ ಪ್ರಾರಂಭಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಹಾಗೂ ಮೈಸೂರಿನಲ್ಲಿ ಈ ಎರಡು ತರಬೇತಿ ಕೇಂದ್ರಗಳು ಪ್ರಾರಂಭವಾಗಲಿವೆ. ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ಮುಗಿಸಿದ ಸುಮಾರು 25 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುತ್ತದೆ. ಈಗಾಗಲೇ ಇದಕ್ಕೆ ಇಲಾಖೆ ವತಿಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ರಾಜ್ಯ ರಾಜಧಾನಿಯಲ್ಲಿ ಫೆ.26 ಮತ್ತು ಫೆ.27 ರಂದು ನಡೆದ ಯುವ ಸಮೃದ್ಧಿ ಸಮ್ಮೇಳನದಲ್ಲಿ ಸುಮಾರು 9,651 ಉದ್ಯೋಗ ಆಕಾಂಕ್ಷಿಗಳಿಗೆ ಸ್ಥಳದಲ್ಲೇ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ಬರೆದಿದ್ದೇವೆ. ಮೇಳದಲ್ಲಿ 53,913 ಪುರುಷರು, 32,494 ಮಹಿಳೆಯರು, ಇತರ 42 ಮಂದಿ ಸಹಿತ 86,451 ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಹೆಸರನ್ನು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 44,527 ಅಭ್ಯರ್ಥಿಗಳು ಹಾಜರಾಗಿದ್ದರು. ಆದರೆ ಸ್ಥಳದಲ್ಲೇ ನೋಂದಣಿ ಮಾಡಿಕೊಂಡವರ ಸಮಗ್ರ ಮಾಹಿತಿ ಕ್ರೋಢೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನಷ್ಟು ಸಂಖ್ಯೆ ಹೆಚ್ಚಳವಾಗಲಿದೆ ಎಂದರು.

16,865 ಅರ್ಜಿಗಳು ಮುಂದಿನ ಹಂತದ ಪರಿಗಣನೆಯಲ್ಲಿದೆ. 2,457 ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲಾಗಿದೆ. 15,461 ಅಭ್ಯರ್ಥಿಗಳ ಮಾಹಿತಿಯನ್ನು ಉದ್ಯೋಗದಾತ ಕಂಪೆನಿಗಳು ಇನ್ನಷ್ಟೆ ನೀಡಬೇಕಿವೆ ಎಂದರು.

ಎಸೆಸೆಲ್ಸಿಗಿಂತ ಕಡಿಮೆ ಓದಿದ 2,402, ಎಸೆಸೆಲ್ಸಿ 4,376, ಐಟಿಐ 6,584, ಡಿಪ್ಲೊಮಾ 6,449, ಪದವಿ 23,750, ಪಿಯುಸಿ 10,500, ಎಂಜಿನಿಯರಿಂಗ್‌ 19,721, ಮಾಸ್ಟರ್‌ ಆಫ್ ಟೆಕ್ನಾಲಜಿ 855, ಸ್ನಾತಕೋತ್ತರ ಪದವಿ 11,809 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಬೆಂಗಳೂರು ನಗರದಿಂದ 18,644 ಮಂದಿ, ಧಾರವಾಡ 5,802, ಬಳ್ಳಾರಿ 5,229, ಕಲಬುರಗಿಯಿಂದ 3,339 ಮಂದಿ ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಿಂದ ಹಾಗೂ ಬೇರೆ ರಾಜ್ಯಗಳ ಅಭ್ಯರ್ಥಿಗಳೂ ಭಾಗಿಯಾಗಿದ್ದರು ಎಂದರು.

Advertisement

ಸಮ್ಮೇಳನದಲ್ಲಿ ವೈಮಾನಿಕ ಮತ್ತು ನಾಗರಿಕ ವಲಯದಿಂದ 26, ಕೃಷಿ 6, ಉಡುಪು ವಲಯ 6, ಆಟೋಮೆಟಿವ್‌ 74, ಸೌಂದರ್ಯ ವಲಯ 3, ಆರೋಗ್ಯ ಕ್ಷೇತ್ರ 27, ಎಲೆಕ್ಟ್ರಾನಿಕ್‌ ವಲಯ 29, ಜವಳಿ 1, ಟೆಲಿಕಾಂ 19, ಸೇವಾ ವಲಯ 36, ಬಿಎಫ್ಎಸ್‌ಐ ವಲಯ 91, ಐಟಿ-ಐಟಿಎಸ್‌ಐ ವಲಯ 80, ಮೂಲಭೂತ ಉಪಕರಣಗಳ ವಲಯ 1 ಸಹಿತ ಒಟ್ಟು 598 ಕಂಪೆನಿಗಳು ಪಾಲ್ಗೊಂಡಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿದೇರ್ಶಕಿ ಎಂ.ಕನಗವಲ್ಲಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಸಿ.ಆರ್‌. ಕೃಷ್ಣ ಕುಮಾರ್‌ ಉಪಸ್ಥಿತರಿದ್ದರು.

ಐಬಿಎಂನಿಂದ 5 ಲಕ್ಷ ಮಂದಿಗೆ ತರಬೇತಿ
ಯುವ ಜನಾಂಗವನ್ನು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಲು ಕಲಿಕೆ ಜತೆ ಕೌಶಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪದವಿ ಅಥವಾ ಇನ್ನಿತರ ಕೋರ್ಸ್‌ ಓದುವಾಗಲೇ ಔದ್ಯೋಗಿಕ ಕ್ಷೇತ್ರಗಳಲ್ಲಿ ಬೇಕಾದ ಕೌಶಲಗಳನ್ನು° ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದೇ ಯೋಜನೆಯ ಉದ್ದೇಶವಾಗಿದೆ. ಈಗಾಗಲೇ 73 ಕಂಪೆನಿಗಳು ಮುಂದೆ ಬಂದಿವೆ. ಇದರ ಜತೆಗೆ ಉದ್ಯೋಗದ ತರಬೇತಿ ನೀಡಲು ಉದ್ದಿಮೆಗಳ ಜತೆ ಮಾತುಕತೆ ನಡೆಸಲಾಗಿದೆ. ಕೌಶಲ ಅಭಿವೃದ್ಧಿ ನಿಗಮದ ಜಾಲತಾಣದಲ್ಲಿ ನೋಂದಾಯಿಸಲಾದ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಕೆಲಸ ನೀಡುವ ಹೊಣೆಗಾರಿಕೆ ಕಂಪೆನಿಗಳು ವಹಿಸಿಕೊಂಡಿದ್ದು, ಈಗಾಗಲೇ ಸುಮಾರು 40 ಕಂಪೆನಿಗಳು ಮುಂದೆ ಬಂದಿವೆ. ಐಬಿಎಂ ಕಂಪೆನಿ 5 ಲಕ್ಷ ಮಂದಿಗೆ ತರಬೇತಿ ನೀಡಲು ಮುಂದೆ ಬಂದಿದೆ ಶರಣ ಪ್ರಕಾಶ್‌ ಪಾಟೀಲ್‌ ಹೇಳಿದರು.

ಸಾಗರೋತ್ತರ ಕಂಪೆನಿ ಪ್ರಾರಂಭ
ವಿದೇಶಿ ಕಂಪೆನಿಗಳಿಗೆ ಬೇಕಾದ ಮಾನವ ಸಂಪನ್ಮೂಲ ಒದಗಿಸಿಕೊಡಲು ಅನುಕೂಲವಾಗುವಂತೆ ರಾಜ್ಯ ಸರಕಾರವು ಕೇರಳ ಮಾದರಿಯಲ್ಲಿ ಸಾಗರೋತ್ತರ ಕಂಪೆನಿ ಪ್ರಾರಂಭಿಸಲಿದೆ ಎಂದು ಸಚಿವ ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next