Advertisement

ನಿರುದ್ಯೋಗಿಗಳಿಗೆ ಆಶಾಕಿರಣವಾದ ಉದ್ಯೋಗ ಮೇಳ

12:21 PM Dec 09, 2019 | Suhan S |

ಕಲಘಟಗಿ: ಗ್ರಾಮೀಣ ಭಾಗದ ನಿರುದ್ಯೋಗಿ ಯುವ ಸಮೂಹದಲ್ಲಿ ಉಜ್ವಲ ಭವಿಷ್ಯದ ಬದುಕಿನಲ್ಲಿ ಏನನ್ನಾದರೂ ಸಾಧಿಸಬಲ್ಲೆವು ಎಂಬ ಆಶಾ ಮನೋಭಾವನೆ ತುಂಬಿದ ಆತ್ಮತೃಪ್ತಿ ಈ ಉದ್ಯೋಗ ಮೇಳದ ಯಶಸ್ಸಿನಿಂದ ದೊರಕಿದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.

Advertisement

ಪಟ್ಟಣದ ಗುಡ್‌ ನ್ಯೂಸ್‌ ಕಾಲೇಜು ಆವರಣದಲ್ಲಿ ರವಿವಾರ ನಡೆದ ಬೃಹತ್‌ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾವಿರಾರು ಪ್ರತಿಭಾನ್ವಿತನಿರುದ್ಯೋಗಿ ಯುವಕಯುವತಿಯರು ಉದ್ಯೋಗಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿರುವುದು ನಿರುದ್ಯೋಗ ಸಮಸ್ಯೆ ಎತ್ತಿ ತೋರಿಸುತ್ತಲಿದೆ. ನೋಂದಣಿಯನ್ನು 1934 ಅಭ್ಯರ್ಥಿಗಳು ಮಾಡಿದ್ದು, ಕೊನೆ ಕ್ಷಣದಲ್ಲಿ ಬಂದಂತಹ ನೂರಾರು ಅಭ್ಯರ್ಥಿಗಳಿಗೂ ಸಂದರ್ಶನದ ಅವಕಾಶ ನೀಡಲಾಗಿದೆ. ಸಂದರ್ಶನಕ್ಕೆ ಭಾಗವಹಿಸಿದವರಲ್ಲಿ 784 ನಿರುದ್ಯೋಗ ಯುವಕಯುವತಿಯರಿಗೆ ವಿವಿಧ ಕಂಪನಿಗಳ ಆಯ್ಕೆ ಪತ್ರ ನೀಡಲಾಗಿದೆ ಎಂದರು.

ಪ್ರಥಮ ಬಾರಿ ನಡೆಸಿದ ಉದ್ಯೋಗ ಮೇಳದ ಅಭೂತ ಪೂರ್ವ ಯಶಸ್ಸಿಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಪಡೆ, ಅಧಿಕಾರಿಗಳು ಹಾಗೂ ಸಂಘಟಿಕರು ಕಳೆದ ಹಲವು ತಿಂಗಳುಗಳಿಂದ ಪಟ್ಟ ಪರಿಶ್ರಮದ ಫಲವೇ ಕಾರಣವಾಗಿದೆ. ಸಣ್ಣ ಪ್ರಯತ್ನಕ್ಕೆ ದೊಡ್ಡ ಯಶಸ್ಸನ್ನು ದೊರಕಿಸಿಕೊಡಲು ಶ್ರಮಿಸಿದ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

ಗುಡ್‌ ನ್ಯೂಸ್‌ ಸಂಸ್ಥೆ ಆವರಣದಲ್ಲಿ ನಡೆದ ಉದ್ಯೋಗ ಮೇಳಕ್ಕೆ ಕೇವಲ ತಾಲೂಕು ಹಾಗೂ ಮತಕ್ಷೇತ್ರದವರಲ್ಲದೇ ಕಾರವಾರ, ಬೆಳಗಾವಿ, ಹಾವೇರಿ, ಗದಗ, ಧಾರವಾಡ, ಹಳಿಯಾಳ ಮತ್ತು ಶಿರಸಿ ಸೇರಿದಂತೆ ಇತರೆ ಜಿಲ್ಲೆಗಳ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾವಂತ ನಿರುದ್ಯೋಗಿಗಳು ಭಾಗವಹಿಸಿದ್ದು ಸಂತಸ ತಂದಿದೆ ಎಂದು ಗುಡ್‌ ನ್ಯೂಸ್‌ ಆಡಳಿತಾಧಿಕಾರಿ ಬ್ರ. ನಿಜು ಥಾಮಸ್‌ ತಿಳಿಸಿದರು.

ಕೌಶಲ ಅಭಿವೃದ್ಧಿ ಸಂಯೋಜಕ ಎ.ಎಂ.ಎಸ್‌. ಗ್ರುಪ್ಸ್‌ನ ಬಿ.ಟಿ. ತೇಜಸ್ವಿ ಮಾತನಾಡಿ, ಈ ಬೃಹತ್‌ ಉದ್ಯೋಗ ಮೇಳಕ್ಕೆ ಪ್ರಮುಖ ಕಾರ್ಪೋರೇಟ್‌ ಕಂಪನಿಗಳಾದ ಇನ್ಫೊಸಿಸ್‌, ಹೊಂಡಾ, ಎಚ್‌. ಆರ್‌.ಎಸ್‌, ಜಿಂದಾಲ್‌, ಟೆಕ್ಸನಾ, ಜಿಟಿಟಿಸಿ ಸೇರಿದಂತೆ 70ಕ್ಕೂ ಅಧಿಕ ಕಂಪನಿಗಳು ಭಾಗವಹಿಸಿ ಸಂದರ್ಶನವನ್ನು ನಡೆಸಿರುವುದು ಉದ್ಯೋಗ ಮೇಳ ಯಶಸ್ವಿಗೆ ಸಾಕ್ಷಿಯಾಗಿದೆ. ಕಾರ್ಪೋರೇಟ್‌ ಕಂಪನಿಗಳು ಸಂದರ್ಶನದ ಫಲಿತಾಂಶವನ್ನು ಸ್ಥಳದಲ್ಲಿಯೇ ಪ್ರಕಟಿಸಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶದ ಭರವಸೆ ಪತ್ರ ನೀಡಲಾಗಿದೆ ಎಂದರು.

Advertisement

ಗುಡ್‌ ನ್ಯೂಸ್‌ ಕಾಲೇಜಿನ ಪ್ರಾಂಶುಪಾಲ ಡಾ| ಬಿ.ಜಿ. ಬಿರಾದರ, ಫ್ರೋ ಬಿ.ಜಿ ಬಿದರಿ,ಪ್ರೊ ಜಿ.ಸಿ.ಗುಮ್ಮಗೋಳಮಠ, ಡಾ| ಮಹೇಶ ಹೊರಕೇರಿ, ಫ್ರೋ| ಕುಸುಗಲ್‌, ಬಿಜೆಪಿ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಶಾಸಕರ ಆಪ್ತ ಸಹಾಯಕ ಮಾರುತಿ  ಹಂಚಿನಮನಿ, ತಾಪಂ ಅಧ್ಯಕ್ಷೆ ಸುನಿತಾ ಮ್ಯಾಗಿನಮನಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, .ಸಿ ಗೋಕುಲ, ಎಸ್‌. ಎಂ. ಚಿಕ್ಕಣ್ಣವರ, ನರೇಶ ಮಲಾ°, ಶಶಿಧರ ಹುಲಿಕಟ್ಟಿ, ಬಸವರಾಜ ಶೇರೆವಾಡ, ವಜ್ರಕುಮಾರ ಮಾದನಭಾವಿ, ಲಿಂಗರಾಜ ತಿರ್ಲಾಪುರ, ರಾಜು ಚಿಕ್ಕಮಠ, ಮಹಾಂತೇಶ ಅಂಬಲಿ, ಬಸವರಾಜ ಹೊನ್ನಳ್ಳಿ, ಪರಶುರಾಮ ರಜಪೂತ, ಸುರೇಶ ಶೀಲವಂತರ, ಅಶೋಕ ಆಡಿನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next