Advertisement

ಯೇಸು ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡಲ್ಲ

10:12 AM Jan 15, 2020 | Lakshmi GovindaRaj |

ಕನಕಪುರ: ದೇವರ ಹೆಸರಿನಲ್ಲಿ ಮತಾಂತರ ಮಾಡು ವವರಿಗೆ ಡಿಕೆ ಸಹೋದರರು ಬೆಂಬಲ ಕೊಡುತ್ತಿದ್ದಾರೆ. ಆದರೆ, ಹಿಂದೂ ಧರ್ಮದ ಉಳಿವಿಗಾಗಿ ನಾವು ಬಲಿದಾನಕ್ಕೂ ಸಿದ್ಧರಿದ್ದೇವೆ. ಕಪಾಲ ಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ಯೇಸು ಪ್ರತಿಮೆ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಬದಲಿಗೆ ಮುನೇಶ್ವರ ಬೆಟ್ಟದಲ್ಲಿ ಮುನೇಶ್ವರ ದೇವಾಲಯವನ್ನು ನಿರ್ಮಾಣ ಮಾಡುತ್ತೇವೆ ಎಂದು ಕಲ್ಕಡ್ಕ ಪ್ರಭಾಕರ್‌ ಭಟ್‌ ಅವರು ಡಿ.ಕೆ.ಸಹೋದರರಿಗೆ ಸವಾಲು ಹಾಕಿದ್ದಾರೆ.

Advertisement

ಮುನೇಶ್ವರನ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ದಕ್ಷಿಣ ಪ್ರಾಂತದ ಹಿಂದೂ ಜಾಗರಣ ವೇದಿಕೆ ಸೋಮವಾರ ಹಮ್ಮಿಕೊಂಡಿದ್ದ “ಕನಕಪುರ ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದೂ ಸಮಾಜವನ್ನು ಒಡೆದು, ಶಾಂತಿಯ ಹೆಸರಿನಲ್ಲಿ ಅಶಾಂತಿಯನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಡಿಕೆ ಸಹೋದರರು ಕೈಹಾಕಿ ನಿದ್ರೆಯಲ್ಲಿದ್ದ ಹಿಂದೂ ಸಮಾಜವನ್ನು ಎಬ್ಬಿಸಿದ್ದಾರೆ. ಮಹಾತ್ಮ ಗಾಂಧಿ ಪ್ರತಿಮೆ ಮಾಡಲು ನಮ್ಮ ಅಡ್ಡಿ ಇಲ್ಲ.

ಆದರೆ, ತಾಲೂಕಿನಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡಿ ದೊಡ್ಡ ಪ್ರಮಾಣದಲ್ಲಿ ಹಿಂದೂ ಸಮಾಜವನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡುವ ದೊಡ್ಡ ಪ್ರಯತ್ನ ನಡೆಯುತ್ತಿದೆ. ದೇವರ ಹೆಸರಿನಲ್ಲಿ ಮತಾಂತರ ಮಾಡುವವರಿಗೆ ಡಿಕೆ ಸಹೋದರರು ಬೆಂಬಲ ಕೊಡುತ್ತಿದ್ದಾರೆ. ಮುಂದಿನ ಪೀಳಿಗೆ ಹಿಂದೂವಾಗಿ ಉಳಿಯ ಬೇಕಾ ದರೆ ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ದೊಡ್ಡ ಸವಾಲು ನಮ್ಮ ಮುಂದಿದೆ. ಯೇಸುವಿನ ಪ್ರತಿಮೆ ಬೇಡ. ಅದರ ಬದಲು ಬಸವೇಶ್ವರ, ಬಾಲಗಂಗಾಧರ, ಪೇಜಾವರ ಅಥವಾ ದೇಶಕ್ಕೋಸ್ಕರ ಹೋರಾಡಿದವರ ಪ್ರತಿಮೆ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದರು.

ಪ್ರತಿಮೆ ಕಾರ್ಯ ಕೈಬಿಡಿ: ಓಟು, ನೋಟು, ಸೀಟಿಗೋಸ್ಕರ ಇಂತಹ ಕಾರ್ಯಕ್ಕೆ ಕೈ ಹಾಕುವುದು ಸರಿಯಲ್ಲ. ಈಗಾಗಲೇ ತಪ್ಪು ಮಾಡಿ ಜೈಲುವಾಸ ಅನುಭವಿಸಿದ ನಿಮಗೆ ಹಿಂದೂ ಸಮಾಜ ಬೇಡದೆ ಇರಬಹುದು. ಆದರೆ, ನಮ್ಮ ಮುಂದಿನ ಪೀಳಿಗೆಗೆ ಹಿಂದೂ ಸಮಾಜ ಬೇಕು. ಹಾಗಾಗಿ, ಇದರ ವಿರುದ್ಧ ಹೋರಾಡುತ್ತೇವೆ. ಯಾವುದೇ ಪಕ್ಷದ ಪರವಾಗಿ ನಾವು ಬಂದಿಲ್ಲ. ಕೆಟ್ಟ ರಾಜಕಾರಣದ ವಿರುದ್ಧ ನಮ್ಮ ಹೋರಾಟ. ಗೋಮಾಳವನ್ನು ಕ್ರೈಸ್ತ ಸಮುದಾಯಕ್ಕೆ ಕೊಟ್ಟು ಮತಾಂತರ ಮಾಡುತ್ತಿರುವುದು ಸರಿಯಲ್ಲ.

ಡಿಕೆ ಸಹೋದರರು ಪ್ರತಿಮೆ ಕಾರ್ಯವನ್ನು ಕೈಬಿಡಬೇಕು. ಹಾರೋಬಲೆ ಪಕ್ಕದಲ್ಲಿರುವ ಜಲಾಶಯವನ್ನು ಪಾದ್ರಿ ಕೆರೆಯೆಂದು ನಾಮಕರಣ ಮಾಡಲು ಬಂದರೆ ನಿಮ್ಮನ್ನು ಅದರಲ್ಲಿ ಮುಳುಗಿಸಿ ಬಲಿ ಕೊಡಬೇಕಾಗುತ್ತದೆ. ಇದು ಮುಂದುವರಿದರೆ ಕೊನೆಯವರೆಗೂ ಹೋರಾಟ ಮಾಡಿಯೇ ತೀರುತ್ತೇವೆ ಎಂದು ಡಿಕೆ ಸಹೋದರರಿಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದರು. ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್‌, ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಗಜೇಂದ್ರಸಿಂಗ್‌, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

ಕಪಾಲ ಬೆಟ್ಟದಲ್ಲಿ ಬಿಜೆಪಿಯಿಂದ ರಾಜಕಾರಣ
ಬೆಂಗಳೂರು: ಕಪಾಲ ಬೆಟ್ಟದ ವಿಷಯದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಆದಿಚುಂಚನಗಿರಿಯ ಬಾಲಗಂಗಾಧರ ನಾಥ ಸ್ವಾಮೀಜಿ ಪ್ರತಿಮೆಗೂ ಗೋಮಾಳ ಜಮೀನು ನೀಡಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತ ನಾಡಿದ ಅವರು, ಮೈತ್ರಿ ಸರ್ಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಶಿವಕುಮಾರ ಸ್ವಾಮೀಜಿ ಪ್ರತಿಮೆ ನಿರ್ಮಾಣಕ್ಕೆ 16 ಎಕರೆ ಗೋಮಾಳ ಜಾಗ ಹಾಗೂ ಬಾಲಗಂಗಾಧರ ನಾಥ ಸ್ವಾಮೀಜಿಗಳ ಪ್ರತಿಮೆ ನಿರ್ಮಾಣಕ್ಕೆ ಗೋಮಾಳ ಜಮೀನು ನೀಡಲಾಗಿದೆ. ಈ ಬಗ್ಗೆ ಸಂಪುಟದಲ್ಲಿ ಒಪ್ಪಿಗೆಯನ್ನೂ ಪಡೆಯಲಾಗಿದೆ. ಮಾಗಡಿಯಲ್ಲಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಐದು ಎಕರೆ ಜಮೀನನ್ನು ಕೆಂಪೇಗೌಡ ಪ್ರಾಧಿಕಾರ ಮಾಡಲು ಪಡೆಯಲಾಗಿದೆ ಎಂದು ಹೇಳಿದರು.

ಬಿಜೆಪಿಯವರಿಗೆ ಅಧಿಕಾರ ಇದೆ. ಹೇಗೆ ಬೇಕಾದರೂ ಬಳಸಿಕೊಳ್ಳಲಿ, ಕನಕಪುರವನ್ನು ಮತ್ತೂಂದು ಮಂಗಳೂರನ್ನಾದರೂ ಮಾಡಲಿ, ಮತ್ತೂಂದು ಭಾರತ ವನ್ನಾದರೂ ಮಾಡಿಕೊಳ್ಳಲಿ ಎಂದು ಹೇಳಿದರು. ಅವರ ಬಳಿ ಅಧಿಕಾರವಿದೆ. ಪ್ರತಿಭಟನೆಗೆ ಎಲ್ಲಿಂದ ಎಷ್ಟು ಜನ ಇದ್ದಾರೆ ಎಂದು ಗೊತ್ತಿದೆ. ಮಾಜಿ ಸಚಿವರೇ ನನಗೆ ಎಲ್ಲ ಮಾಹಿತಿ ನೀಡಿದ್ದಾರೆ. ಮಂತ್ರಿ ಆಗಬೇಕು ಎನ್ನುವವರು ಏನೆಲ್ಲ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ರಾಜಕಾರಣದಲ್ಲಿ ಯಾರೂ ಯಾರನ್ನೂ ನಂಬಲು ಆಗುವುದಿಲ್ಲ. ಯಾರು, ಯಾವಾಗ ಬೇಕಾದಾಗ, ಎಲ್ಲಿ ಬೇಕಾದರೂ ಇರಬಹುದು. ರಾಜಕಾರಣದಲ್ಲಿ ನಮ್ಮ ನೆರಳನ್ನೇ ನಾವು ನಂಬಲು ಆಗುವುದಿಲ್ಲ ಎಂದು ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್‌ಗೆ ಟಾಂಗ್‌ ಕೊಟ್ಟರು.

ಪ್ರತಿಭಟನೆಗೆ ಹೋದವರು ಅಭಿವೃದ್ಧಿ ನೋಡಲಿ: ಕನಕಪುರವನ್ನು ಕ್ಲೀನ್‌ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಬಿಜೆಪಿ 150 ಸ್ಥಾನ ಗೆಲ್ಲಲಿ. ಬಿಜೆಪಿ ಎಂದರೆ ನನಗೆ ಗಡ ಗಡ ನಡುಕು ಬರುತ್ತದೆ ಎಂದು ವ್ಯಂಗ್ಯವಾಡಿದ ಅವರು, ನಾನು ಬೆಂಗಳೂರಿಗೆ ಏಕೆ ಬಂದೆ ಎನ್ನುವುದು ಯಾರಿಗೂ ಗೊತ್ತಿಲ್ಲ ಎಂದರು. ಕನಕಪುರದಲ್ಲಿ ಸೋಲಾರ್‌ ವ್ಯವಸ್ಥೆ, ಕಾವೇರಿ ನೀರು, ರೈತರಿಗೆ ಟಾನ್ಸ್‌ಫಾರ್ಮರ್‌, ಕಪಾಲ ಬೆಟ್ಟದಲ್ಲಿ ನೀರಿನ ಟ್ಯಾಂಕ್‌ ನಿರ್ಮಾಣ ಮಾಡಲಾಗಿದೆ. ಪ್ರತಿಭಟನೆಗೆ ಹೋದವರು ಅಭಿವೃದ್ಧಿಯನ್ನು ನೋಡಿಕೊಂಡು ಬರಲಿ ಎಂದರು.

ಡಿಕೆಶಿ ಸ್ವಂತ ಜಾಗ ಕೊಡಲಿ, ಸರ್ಕಾರದ ಜಾಗವೇಕೆ?
ಹುಬ್ಬಳ್ಳಿ: ಕನಕಪುರ ಕಪಾಲಿ ಬೆಟ್ಟದಲ್ಲಿ ರಾಜಕೀಯ ಮಾಡುವವರು ಜಾತಿ-ಧರ್ಮದ ಮೇಲೆ ಏಕೆ ರಾಜಕೀಯ ಮಾಡಬೇಕು?ಸ್ವಂತ ಜಾಗವಿದ್ದಲ್ಲಿ ಕೊಡಲಿ, ನಮ್ಮದು ಯಾವುದೇ ಸಮಸ್ಯೆ ಇಲ್ಲ. ಸಮಾಜದಲ್ಲಿ ಸಂಘರ್ಷಕ್ಕೆ ಕಾರಣರಾಗುತ್ತಿರುವವರು ಡಿ.ಕೆ.ಶಿವಕುಮಾರ್‌ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿ ದರು. ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಜಾಗವನ್ನು ಮಂಜೂರು ಮಾಡಿಸುವಂತಹ ಕಾರ್ಯಕ್ಕೆ ಅವರು ಯಾಕೆ ಮುಂದಾದರೆಂದು ತಿಳಿಯುತ್ತಿಲ್ಲ. ಈ ಕುರಿತು ಹಿಂದೂ ಸಂಘಟನೆಗಳು ಹೋರಾಟ ಮಾಡುತ್ತಿವೆ. ಇದನ್ನು ಡಿಕೆಶಿ ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಮಾತನಾಡಲು ಯಾವುದೇ ವಿಷಯಗಳಿಲ್ಲದೆ ಕಾಂಗ್ರೆಸ್‌ನವರು ಅಪಪ್ರಚಾರ ಮಾಡಲು ಹೊರಟಿದ್ದಾರೆ ಎಂದರು.

ಕ್ರೈಸ್ತರ ಬಗ್ಗೆ ಬಿಜೆಪಿಯದ್ದು ದ್ವಂದ್ವ ನಿಲುವು
ನವದೆಹಲಿ: “ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು, ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ನಿರಾಶ್ರಿತರಾಗಿ ಬಂದಿರುವ ವಿದೇಶಿ ಕ್ರೈಸ್ತರಿಗೆ ಆಶ್ರಯ ನೀಡುವ ಮಾತುಗಳನ್ನಾಡುತ್ತದೆ. ಆದರೆ, ಕರ್ನಾಟಕದಲ್ಲಿ ಯೇಸು ಕ್ರಿಸ್ತನ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ’ ಎಂದು ಹಿಂದಿ ಚಿತ್ರರಂಗದ ಹೆಸರಾಂತ ಸಾಹಿತಿ ಜಾವೇದ್‌ ಅಖ್ತರ್‌ ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರ, 2014ರ ಡಿಸೆಂಬರ್‌ಗೂ ಮುನ್ನ ಹಿಂದೆ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿಂದ ಭಾರತಕ್ಕೆ ಬಂದು ನೆಲೆಸಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ಸಿಗಲಿದೆ.

ಇದಕ್ಕೆ ವಿರೋಧ ಎದ್ದಿದ್ದರೂ, ಬಿಜೆಪಿ, ಆರ್‌ಎಸ್‌ಎಸ್‌ ಸಂಘಟನೆಗಳು ಇದರ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿವೆ. ಇತ್ತ, ಕರ್ನಾಟಕದ ರಾಮನಗರದ ಹಾರೋಬೆಲೆ ಹಳ್ಳಿಯಲ್ಲಿನ ಕಪಾಲ ಬೆಟ್ಟದಲ್ಲಿ ಯೇಸು ಕ್ರಿಸ್ತನ ಪ್ರತಿಮೆಯನ್ನು ನಿರ್ಮಿಸಲು ಹೊರಟಿರುವ ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಅವರ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಶತಾಯಗತಾಯ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದೆ. ಟ್ವಿಟರ್‌ನಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಿರುವ ಅಖ್ತರ್‌, ಬಿಜೆಪಿ ಮಾತ್ರವಲ್ಲದೆ, ಆರ್‌ಎಸ್‌ಎಸ್‌ ಹಾಗೂ ಇನ್ನಿತರ ಬಲಪಂಥೀಯ ಸಂಘಟನೆಗಳು ಕ್ರೈಸ್ತರ ವಿಚಾರದಲ್ಲಿ ತಳೆದಿರುವ ವಿರೋಧಾಭಾಸದ ನಿಲುವುಗಳನ್ನು ಪ್ರಶ್ನಿಸಿದ್ದಾರೆ.

ಕಲ್ಲಡ್ಕ ಪ್ರಭಾಕರ ಭಟ್‌ ಯಾರು ಅಂತ ನನಗೆ ಗೊತ್ತಿಲ್ಲ. ಅವರ ಹೆಸರನ್ನು ನಾನು ಕೇಳಿಲ್ಲ. ಮಾನವ ಧರ್ಮಕ್ಕೆ ಜಯವಾಗಲಿ ಎಂದು ಗುರುಗಳು ನನಗೆ ದೀಕ್ಷೆ ಕೊಟ್ಟಿದ್ದಾರೆ. ನಾನು ಮಾನವ ಧರ್ಮದಲ್ಲಿ ನಂಬಿಕೆ ಇಟ್ಟವನು. ಯಾರು ಬೇಕಾದರೂ ಅಶಾಂತಿ ವಾತಾವರಣ ಸೃಷ್ಠಿ ಮಾಡಲಿ. ನಾನೇನು ಮಾತನಾಡುವುದಿಲ್ಲ.
-ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ

ಈ ಹಿಂದೆ ಜಮೀರ್‌ ಅಹ್ಮದ್‌ ಅವರು ಯಡಿಯೂರಪ್ಪ ಸಿಎಂ ಆದರೆ ಅವರ ಮನೆ ವಾಚ್‌ಮನ್‌ ಆಗುತ್ತೇನೆ ಎಂದಿದ್ದರು. ತಮ್ಮ ಹೇಳಿಕೆಯಂತೆ ಮೊದಲು ಆ ಕೆಲಸ ಮಾಡಲಿ, ನಂತರ ಸೋಮಶೇಖರ ರೆಡ್ಡಿ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಲಿ.
-ಜಗದೀಶ ಶೆಟ್ಟರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next