Advertisement

ಕಾಲವನ್ನೇ ಜೀಕಿ ಆಡುವ ಮಾತಿನ ಜೋಕಾಲಿ !

03:45 AM Jul 02, 2017 | Harsha Rao |

ಒಂದು ನಿರ್ದಿಷ್ಟ ಕಾಲ-ದೇಶಗಳಲ್ಲಿ ಸಿಕ್ಕಿ ಸಾಗುವ ಬದುಕು, ಕಾರಣವಿದ್ದೋ ಇಲ್ಲದೆಯೋ ಅಲ್ಲಲ್ಲಿನ ಅಂದಂದಿನ ಪರಿಸ್ಥಿತಿಗಳಲ್ಲಿ “ಮೌಲ್ಯ’ವೆಂದೋ “ಧರ್ಮ’ವೆಂದೋ ಅಂದುಕೊಂಡ ಯಾವುದೋ ಒಂದನ್ನು ಅನುಸರಿಸಬೇಕಾದ ಅನಿವಾರ್ಯವಿರುತ್ತದೆ. ಆದರೂ ಬದುಕು ದೊಡ್ಡದು, ಅದರ ಮನಸೂ ದೊಡ್ಡದು. ಮನಸು ಮಾತಾಡುತ್ತದೆ, ಅಲ್ಲಲ್ಲಿನ ಅಂದಂದಿನ ಮೌಲ್ಯ, ರಾಜಕಾರಣ, ಧರ್ಮಗಳ ಅನಿವಾರ್ಯಗಳನ್ನು ಮೀರಿ ತನಗಷ್ಟೇ ಸರಿ ಎನಿಸಿದ ಸೂಕ್ಷ್ಮವೊಂದನ್ನು ಮಾತಿನ ಮೂಲಕವೇ ಆಡುತ್ತ ಆಡುತ್ತ ಪೊರೆಯುತ್ತಿರುತ್ತದೆ. ಈ ಸೂಕ್ಷ್ಮಗಳಿಗೆ ಕಿವಿಗೊಡುವ ಮಂದಿ ಎಲ್ಲ ಕಾಲದಲ್ಲೂ ಇರುತ್ತಾರೆ ಎನ್ನುವುದು ತನ್ನನ್ನು ಆಡುವ ಜನಪದದಲ್ಲಿ, ಮಾತು ಇಟ್ಟಿರುವ ನಂಬಿಕೆ.

Advertisement

ವಾಲ್ಮೀಕಿಯದ್ದಲ್ಲವೆಂದು ಹೇಳಲಾಗುವ ಉತ್ತರ ರಾಮಾಯಣದಲ್ಲಿ ರಾಮ, ಶೂದ್ರ ತಪಸ್ವಿಯಾದ ಶಂಬೂಕನನ್ನು ಕೊಲ್ಲುವ ಕಥೆಯೊಂದಿದೆ.  ರಾಮರಾಜ್ಯದಲ್ಲಿ ಬ್ರಾಹ್ಮಣನ ಮಗನೊಬ್ಬ ಅಕಾಲಿಕವಾಗಿ ಮರಣ ಹೊಂದಿ¨ªಾನೆ. ಶೂದ್ರನೊಬ್ಬನು ತಪಸ್ಸು ಮಾಡುತ್ತಿರುವುದೇ ಇಂಥ ಅಪಚಾರವು ರಾಮರಾಜ್ಯದಲ್ಲಿ ಸಂಭವಿಸಿದ್ದಕ್ಕೆ ಕಾರಣವೆಂದು ರಾಮನಿಗೆ ಯಾರೋ ತಿಳಿಸುತ್ತಾರೆ. ಮಂದಿಯ ಮಾತಿಗೆ ಬೆಲೆಕೊಟ್ಟು ಸೀತೆಯನ್ನೇ ಕಾಡಿಗೆ ಕಳಿಸಿದ್ದ ರಾಮ, ಈಗಲೂ ಕಾಡಿಗೆ ತೆರಳಿ ತಪಸ್ಸು ಮಾಡುತ್ತಿರುವ ಶಂಬೂಕನನ್ನು ಕೊಲ್ಲುತ್ತಾನೆ. ರಾಮನ ಕೈಯಿಂದ ದಕ್ಕಿದ ಸಾವೇ ಶಂಬೂಕನ ಬಿಡುಗಡೆಯೆಂದೂ ಶೂದ್ರ ತಪಸ್ವಿಯು ರಾಮನ ಕೈಯಿಂದ ಹತನಾದ ಕೂಡಲೇ ಆತ ದಿವ್ಯಪುರುಷನಾಗಿ ಬದಲಾಗಿ ಶಾಶ್ವತ ಲೋಕಕ್ಕೆ ತೆರಳಿದನೆಂದೂ ಕಥೆ ತಿಳಿಸುತ್ತದೆ.  

ಜನಪದಕ್ಕೆ ಕಥೆಯೊಂದನ್ನು ಮತ್ತೆ ಮತ್ತೆ ಹೇಳುವ, ಕೇಳುವ ಬಯಕೆ. ಜನಪದದಿಂದಲೇ ಮೂಡಿಬಂದ ರಾಮನ ಕಥೆ ವಾಲ್ಮೀಕಿಯ ಕೈಯಲ್ಲಿ ದೊಡª ಕಾವ್ಯವಾಗಿ ಮೂಡಿ ಮತ್ತೆ ಯಾರೋ ಬರೆದ ಪ್ರಕ್ಷಿಪ್ತದಲ್ಲಿ ಜನಪದದ್ದೇ ಕಥೆಯೊಂದು ಉತ್ತರ ರಾಮಾಯಣವಾಗಿ ಮತ್ತೆ ಆ ದೊಡª ಕಾವ್ಯಕ್ಕೆ ಸೇರಿಕೊಂಡಿದೆ. 

ನಂತರ ಎಷ್ಟೋ ಕಾಲದ ನಂತರ ಭವಭೂತಿಯಂಥ ಇನ್ನೊಬ್ಬ ಅಪೂರ್ವ ಕವಿ, ನಾಟಕಕಾರ ಉತ್ತರರಾಮಚರಿತ ವಾಗಿ ಇದೇ ಕಥೆಯನ್ನೇ ಕೈಗೆತ್ತಿಕೊಂಡು ಹೊಸದಾಗಿ ಬರೆಯುತ್ತಾನೆ. ಈ ಕಥೆಯಲ್ಲಿ ಆಗುವ ಇಂಥ ಅನ್ಯಾಯವೊಂದನ್ನು ಹಾಗೆ ಸುಮ್ಮನೆ “ಹೀಗಾಯ್ತು’ ಎಂದಷ್ಟೇ ಹೇಳಿ ಬಿಟ್ಟು ಬಿಡಲು ಉತ್ತರರಾಮಚರಿತದ ಕರ್ತೃ ಭವಭೂತಿಯ ಕವಿಮನ ಒಪ್ಪುವುದಿಲ್ಲ. ಆದರೆ, ಇದನ್ನು ಹೆಚ್ಚು ಲಂಬಿಸುವುದನ್ನು ಕಾಲ ಒಪ್ಪುತ್ತದೋ ಇಲ್ಲವೋ ಎಂಬ ಸಂದೇಹವೂ ಕವಿಮನದಲ್ಲಿರಬಹುದು. ಮನಸ್ಸು ನುಡಿಯುತ್ತಿರುವ ಮಾತಿನ ಈ ಸೂಕ್ಷ್ಮವೊಂದರ ಘನತೆ ಕಳೆಯದಂತೆ ಅದನ್ನು ಅಷ್ಟೇ ಸೂಕ್ಷ್ಮವಾಗಿ ಕವಿ ಹೇಳಬೇಕಿದೆ.  ಹೀಗಾಗಿ ಈ ನಾಟಕದಲ್ಲಿ ರಾಮ ಶಂಬೂಕನನ್ನು ಕೊಲ್ಲಲು ಕತ್ತಿ ಎತ್ತುವ ವೇಳೆಗೆ ಅವನ ಕೈ ನಡುಗಿದೆ, ಮನದಲ್ಲಿ ಶೂದ್ರ ತಪಸ್ವಿಯ ಕುರಿತು ಕನಿಕರ ತುಂಬಿದೆ. ಕೊಲ್ಲಲೆಂದು ಎತ್ತಿದ ಕೈ ನಡುಗುತ್ತಿರುವುದನ್ನು ಕಂಡು ರಾಮ ಹೇಳುತ್ತಿದ್ದಾನೆ,
ಓವೊ ಬಲಗೈಯೆ, ಹಾರುವನ ಸತ್ತ ಮಗನ ಬದುಕಿಸಲು
ತೂರಿಬಿಡು ಕತ್ತಿ ಶೂದ್ರಮುನಿಯತ್ತ |
ನೀನು ರಾಮನ ತೋಳು, ತುಂಬು ಬಸಿರಿಗೆ ನೊಂದ
ಸೀತೆಯನು ತೊರೆದಂಥ ನಿನಗೆಂಥ ಕರುಣೆ ||10||
                      (ಮತ್ತೆ ರಾಮನ ಕತೆ- ಬನ್ನಂಜೆಯವರ ಅನುವಾದದಲ್ಲಿ)

ಶೂದ್ರನಾಗಿ ಹುಟ್ಟಿ ದಂಡಕಾರಣ್ಯದಲ್ಲಿ ತಪಸ್ಸನ್ನು ಆಚರಿಸಿದ ಎಂಬ ಕಾರಣಕ್ಕೆ ತಾನಿವನನ್ನು ಕೊಲ್ಲಬೇಕಾಗಿ ಬಂದದ್ದಕ್ಕೆ ಹಿಂಜರಿದು, ಭವಭೂತಿಯ ರಾಮನ ಮನ ಕಂಪಿಸಿ, ಕೈ ನಡುಗಿದ್ದೂ ಅಲ್ಲದೆ, ತುಂಬು ಬಸುರಿ ಸೀತೆಯನ್ನು ತೊರೆದ ತಾನು “ಕಾರುಣ್ಯ ಹೀನ’ ಎಂಬ ಮಾತನ್ನೂ ಕವಿ, ರಾಮನ ಬಾಯಲ್ಲಿ ಆಡಿಸುತ್ತಾನೆ. ಎರಡನೆಯ ಅಂಕದಲ್ಲಿ ಬರುವ ಈ ಮಾತು ಮೊದಲನೆಯ ಅಂಕದ ರಾಮ ಸೀತೆಯರಾಡುವ ಸರಸದ ಮಾತುಕತೆಗೆ, ಅವರಿಬ್ಬರ ನಡುವಿದ್ದ ಪ್ರೀತಿಗೆ ಹೊಂದಿಕೊಳ್ಳುತ್ತದೆ. ನಾಲ್ಕು ಸಾಲಿನ ಈ ಪುಟ್ಟ ಶ್ಲೋಕವೊಂದು, ಮೌಲ್ಯವೆಂದು ಆದರಿಸುವ ಘೋರ ಅನ್ಯಾಯವೊಂದನ್ನೂ ಯಾವ ತರ್ಕಕ್ಕೂ ಸಿಕ್ಕದ ಪ್ರೀತಿಯ ಆಳದ ನೋವೊಂದನ್ನೂ ಅದು ಇರುವ ಹಾಗೆಯೇ ಕಾಣಿಸುವ ಪ್ರಯತ್ನವೊಂದನ್ನು ಮಾಡುತ್ತದೆ. 

Advertisement

ಕವಿಯ ಈ ಸೂಕ್ಷ್ಮತೆ ಓದುಗನಿಗೂ ಇದ್ದಾಗ ಮಾತ್ರ ಈ ಮಾತು ಅವನನ್ನು ತಲುಪಬಹುದು, ಇಲ್ಲದಿದ್ದರೆ ಇಲ್ಲ. ತನ್ನ ಓದುಗನಿಗೆ ಇಂಥಾ ಸಹೃದಯತೆ ಇದೆಯೋ ಇಲ್ಲವೋ ತಿಳಿಯುವುದು ಕೂಡ ಕವಿಗೆ ಸಾಧ್ಯವಾಗದೆಯೂ ಹೋಗಬಹುದು. ಆಡಿದ ಮಾತು ತಾನು ತಲುಪಬೇಕಾದಲ್ಲಿ ತಲುಪಿತೋ ಇಲ್ಲವೋ ತಿಳಿಯುವ ಅದೃಷ್ಟವಾದರೂ ಸಿಗುವುದು ಎಎಲ್ಲೋ ಕೆಲವರಿಗೆ ಮಾತ್ರ. ಈ ಕುರಿತು ಭವಭೂತಿಯೇ ಆಡಿದ ಮಾತೊಂದಿದೆಯಂತೆ. ಅದರಲ್ಲಿ ಕವಿ ಹೇಳುತ್ತಾನೆ: “ನಾನು ಆಡಿದ್ದನ್ನು ಅರಿಯುವ ಸಹೃದಯಿಯೊಬ್ಬ ನನಗೆ ಸಿಕ್ಕೇ ಸಿಗುತ್ತಾನೆ. ಅಂಥವನು ಇಲ್ಲಿಲ್ಲದಿದ್ದರೆ ಮತ್ತೆಲ್ಲಾದರೂ ಇರಬಹುದು, ಈಗಲ್ಲದಿ¨ªಾರೆ ಮುಂದೆ ಇನ್ನೆಂದಾದರೂ ಬರಬಹುದು. ಯಾಕೆಂದರೆ ಭೂಮಿ ವಿಸ್ತಾರವಾಗಿದೆ, ಕಾಲ ಅನಂತವಾಗಿದೆ’  ಇಂಥ ಅದ್ಭುತ ನಿರಾಳತೆಯೊಂದು ಹುಟ್ಟಲು ಕವಿಯ ಮನ  ಒಂದೋ ಅತೀವ ವಿಶ್ವಾಸದಲ್ಲಿ ಅಥವಾ ಘೋರ ಸಂದೇಹದಲ್ಲಿ ಸಿಲುಕಿ¨ªಾಗಿರಬೇಕೇನೋ! ಈ ಆತಂಕ ಕೇವಲ ಕವಿಗಷ್ಟೇ ಅಲ್ಲ, ಆ ಕಾಲಕ್ಕೆ ಹೊಸತು’ ಎಂಬ ಯೋಚನೆಯೊಂದು ಮೂಡುವ ಎಲ್ಲ ಮನಗಳದ್ದೂ ಕೂಡ. ಆದರೆ ಯಾವುದೇ ವಿಚಾರವೊಂದು ಯಾರದೋ ಮನದಲ್ಲಿ ಬಂತೆಂದರೆ ಆ ಕಾಲ ಅದನ್ನು ಆಗಮಾಡಿದೆ ಎಂದೇ ಅರ್ಥ ಎನಿಸುತ್ತಿದೆ. ಅದನ್ನು ಅರ್ಥ ಮಾಡಿಕೊಳ್ಳುವವರು ಆ ಕಾಲದಲ್ಲೇ ಇದ್ದಾರೆ ಆದರೆ ಅವರು ಸಿಗುತ್ತಾರೋ ಇಲ್ಲವೋ ಎನ್ನುವುದು ಸಂದೇಹ. ಮಾತಿಗೆ ಕೇಳುವ ಕಿವಿಯೊಂದು ಬೇಕು, ಅರಿತು ಮಿಡಿಯುವ ಮನವೊಂದು ಬೇಕು. ಸಿಕ್ಕರೆ ಸರಿ, ಸಿಗದಿದ್ದರೂ ಮನದಲ್ಲಿ ಮೂಡಿದ ಮಾತು, ಹೊರಬರಲೇ ಬೇಕು. 

ಪ್ರಕ್ಷಿಪ್ತ ಬರೆದ ಕವಿಯ ಮನದಲ್ಲೂ ಆದ ಎಲ್ಲ ಅನಾಹುತಗಳ ಕುರಿತು ಹೇವರಿಕೆ ಇದೆ. ರಾಮನಿಗೆ ಲವ-ಕುಶರು ದೊರೆತು, ಸೀತೆಯನ್ನು ರಾಮ ಕ್ಷಮಿಸುವಂತೆ ಕೇಳಿಕೊಂಡ ಮೇಲೂ ರಾಮನ ಜೊತೆಗೆ ನಡೆದು ಬಿಡಲು ಸೀತೆ ಒಪ್ಪುವುದಿಲ್ಲ. ರಾಮನ ಮೇಲಿನ ಪ್ರೀತಿ ಅವಳೆದೆಯಲ್ಲಿ ಈಗಲೂ ಜೀವಂತ. ಪ್ರೀತಿ ಕಡಲಿನ ಹಾಗೆ. ಅಲ್ಲಿ ಮುತ್ತುರತ್ನವೂ ಇದೆ, ಬೆಂಕಿಯುಗುಳುವ ಜ್ವಾಲಾಮುಖೀಯೂ ಇದೆ. ಕಳೆದುಕೊಂಡವರೆಲ್ಲರೂ ಮತ್ತೆ ಒಬ್ಬರಿಗೊಬ್ಬರು ಸಿಕ್ಕಿ, ಸಮಾಗಮವಾಗಿ ಅಯೋಧ್ಯಗೆ ತೆರಳಿ ನೆಮ್ಮದಿಯಿಂದ “ಕಡೆಗೆ ಎಲ್ಲರೂ ಸುಖವಾಗಿದ್ದರು’ ಎಂದು ಕವಿ ಕತೆಯನ್ನು ಮುಗಿಸಿಬಿಡದೆ, ಸೀತೆ ರಾಮನಿಗೆ ಬೆನ್ನು ಹಾಕಿ ನಡೆದು ತನ್ನ ತಾಯಿಯ ಮಡಿಲಿನಲ್ಲಿ ಸೇರಿಹೋದಳು ಎನ್ನುತಾನೆ. ಜನಪದದ ಮನದಲ್ಲಿ ರಾಮ ಕಡೆಗೆ ನದಿಯಲ್ಲಿ ಹಾರಿಕೊಂಡು ಸಾಯುತ್ತಾನೆ.

ಎಲ್ಲಾ ಕಾಲದಲ್ಲೂ ಇಂಥ ಸೂಕ್ಷ್ಮಗಳಿಗೆ ಮಿಡಿಯುವ ಮನವೊಂದು ಜನಪದದ ಹೃದಯದಾಳದಲ್ಲೆಲ್ಲೋ ಹುದುಗಿರುತ್ತದೆ ಎಂಬ ನಂಬಿಕೆಗೆ, ಇಂಥಾ ಕತೆಗಳ ನೂರಾರು ಸಾವಿರಾರು ರೂಪಗಳು ಕಾಲಾಂತರಗಳಲ್ಲಿ ಒಂದನ್ನೊಂದು ಆತುಕೊಂಡು ಬಿಡದೆ ಸಾಗಿಬರುವುದೇ ಸಾಕ್ಷಿ. ಬದುಕಿನ ಅಸಂಗತತೆ, ಪ್ರೀತಿಯ ತಲ್ಲಣಗಳು, ಮಾನವ ಜೀವನ ಏಕಕಾಲಕ್ಕೆ ಕ್ಷುಲ್ಲಕವೂ ಮಹತ್ತೂ ಆಗಿ ತೋರುವ ವಿಸ್ಮಯ ಇದಾವುದನ್ನೂ ಗಮನಿಸದೆ, ಇದನ್ನು ಕೇವಲ ರಾಮನ ದೌರ್ಬಲ್ಯವೆಂದೋ ಸೀತೆ‌ಯಂಥಾ ಹೆಣ್ಣುಗಳ ಕಣ್ಣೀರ ಕಥೆಯೆಂದೋ ಗಂಡಸರ ಅಹಂಕಾರ-ಹೆಂಗಸರ ಕಷ್ಟ ಎಂದೋ ಗುರುತಿಸ ಹೊರಟಾಗ ಮಾತ್ರ, ಮಾತಿನ ಸೂಕ್ಷ್ಮಾತಿಸೂಕ್ಷ್ಮ ತಿಳುವಳಿಕೆಗಳೆಲ್ಲ ಮೊಂಡಾಗಿ ಅದು ಸುಮ್ಮನೆ ದಣಿಯುವಂತಾಗುತ್ತದೆ. 

ಕಾಲವನ್ನೇ ಜೀಕಿ, ಜೋಕಾಲಿಯಾಡುತ್ತ ಜನಪದದ ಬೆರಗು, ಅರಿವು ಮಾತಿನ ಮೂಲಕವೇ ತನ್ನತ್ತ ಸುಯ್ದು ಬರುವಾಗ ಅದು ಪಿಸುಗುಡುವ ಇನ್ಯಾವುದೋ ಗುಟ್ಟೊಂದಕ್ಕೆ ಕಿವಿಗೊಡುವ ಮನಸ್ಸು, ಸೂಕ್ಷ್ಮತೆೆ ಸದಾ ಕಾಲವೂ ಸಹೃದಯನಿಗಿರಲಿ. ಕೇಳುಗನ ಮನದಾಳದ ಈ ಆದ್ರìತೆ ಮಾತನ್ನು ಎಂದೂ ಬಿಡದೆ ಪೊರೆದಿರಲಿ. 

– ಮೀರಾ ಪಿ. ಆರ್‌., ನ್ಯೂಜೆರ್ಸಿ

Advertisement

Udayavani is now on Telegram. Click here to join our channel and stay updated with the latest news.

Next