Advertisement

ಕಸ್ತೂರಿರಂಗನ್‌ ವರದಿ ವಿರೋಧಿಸಿ ಜೆಡಿಎಸ್‌ ಮನವಿ

01:15 PM Aug 15, 2018 | Team Udayavani |

ಕಡಬ: ನೂತನ ಕಡಬ ತಾಲೂಕಿನ ಬಹುತೇಕ ಗ್ರಾಮಗಳು ಕಸ್ತೂರಿರಂಗನ್‌ ವರದಿಯಲ್ಲಿ ಸೇರಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಧ್ಯಪ್ರವೇಶಿಸಿ ಆ ಗ್ರಾಮಗಳನ್ನು ವರದಿಯಿಂದ ಕೈ ಬಿಡುವಂತೆ ಸುಪ್ರೀಂ ಕೋರ್ಟ್‌ಗೆ ಅಫಿದವಿತ್‌ ಸಲ್ಲಿಸಬೇಕೆಂದು ಕಡಬ ತಾಲೂಕು ಜೆಡಿಎಸ್‌ ಸೈಯದ್‌ ಮೀರಾ ಸಾಹೇಬ್‌ ಆಗ್ರಹಿಸಿದರು.

Advertisement

ಅವರು ಮಂಗಳವಾರ ಕಸ್ತೂರಿರಂಗನ್‌ ವರದಿ, ಗಾಡ್ಗೀಳ್‌ ವರದಿ, ವನ್ಯ ಜೀ ವಿ, ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್‌ ಯೋಜನೆಗಳ ಅನುಷ್ಠಾನದ ವಿರುದ್ಧ ಜೆಡಿಎಸ್‌ ವತಿಯಿಂದ ಕಡಬ ತಹಶೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು. ಬಲ್ಯ, ಕೌಕ್ರಾಡಿ, ಶಿರಾಡಿ, ಶಿಬಾಜೆ, ಕೊಂಬಾರು, ಬಿಳಿನೆಲೆ, ಸುಬ್ರಹ್ಮಣ್ಯ, ಐನೆಕಿದು, ಹರಿಹರ, ಕೊಲ್ಲಮೊಗ್ರು, ಏನೆಕಲ್‌, ಬಳ್ಪ, ಕೂತ್ಕುಂಜ ಗ್ರಾಮಗಳನ್ನು ಕಸ್ತೂರಿರಂಗನ್‌ ವರದಿಯಲ್ಲಿ ಸೇರಿಸಲಾಗಿದೆ. ಸರಕಾರ ಈವರೆಗೂ ನ್ಯಾಯಾಲಯಕ್ಕೆ ವರದಿಯ ಕುರಿತಾಗಿ ಯಾವುದೇ ಅಭಿಪ್ರಾಯ ತಿಳಿಸಿಲ್ಲ. ಸರಕಾರಗಳು ಸುಮ್ಮನಿದ್ದರೆ ಜನರಿಗೆ ಮಾರಕವಾಗುವ ಯೋಜನೆ ಅನುಷ್ಠಾನವಾಗುವುದು ಖಂಡಿತ. ಈ ಗ್ರಾಮಗಳನ್ನು ಕೈಬಿಡುವಂತೆ ಸರಕಾರ ಆ. 24ರೊಳಗೆ ಅಭಿಪ್ರಾಯ ತಿಳಿಸಬೇಕು. ಈ ಕುರಿತು ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೂ ಮನವಿ ನೀಡುವುದಾಗಿ ತಿಳಿಸಿದರು.

ವಿರೋಧ ಸಲ್ಲಿಸಬೇಕು
ಜೆಡಿಎಸ್‌ ಮುಖಂಡ ಚಂದ್ರಶೇಖರ ಗೌಡ ಕೋಡಿಬೈಲು ಮಾತನಾಡಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ವರದಿ ಅನುಷ್ಠಾನ ಆಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಏನೂ ಮಾಡಿಲ್ಲ, ವರದಿ ಅನುಷ್ಠಾನವಾದರೆ ಅದೆಷ್ಟೋ ಜನ ಬೀದಿಪಾಲಾಗುತ್ತಾರೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ತಮ್ಮ ವಿರೋಧವನ್ನು ಕೋರ್ಟಿಗೆ ಸಲ್ಲಿಸಬೇಕು ಎಂದು ಆಗ್ರಹಿಸಿದರು. 

ರೈತ ಮುಖಂಡ ವಿಕ್ಟರ್‌ ಮಾರ್ಟಿಸ್‌ ಮಾತನಾಡಿ, ಯೋಜನೆ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿ ಹಲವು ಬಾರಿ ಹೋರಾಟ ನಡೆಸಿದ್ದೇವೆ. ಆದರೆ ನಮ್ಮ ನಾಯಕರು ಏನು ಮಾಡುತ್ತಿದ್ದಾರೆಂದೇ ಅರ್ಥವಾಗುತ್ತಿಲ್ಲ. ಈ ಭಾಗದ ಜನರ ಸಮಸ್ಯೆ ಅರ್ಥ ಮಾಡಿಕೊಂಡು, ಯೋಜನೆಯಿಂದ ಈ ಗ್ರಾಮಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಜೆಡಿಎಸ್‌ ಮುಖಂಡರಾದ ಮೋಹನ ಗೌಡ ಪಂಜೋಡಿ, ಇ.ಜಿ. ವರ್ಗೀಸ್‌, ಶಶಿಧರ ಎಡಮಂಗಲ, ಲೂಸಿ ಮಾರ್ಟಿಸ್‌, ಹರಿಪ್ರಸಾದ ಎನ್ಕಜೆ ಹಾಜರಿದ್ದರು. ಕಡಬ ತಹಶೀಲ್ದಾರ್‌ ಜಾನ್‌ಪ್ರಕಾಶ್‌ ರೋಡ್ರಿಗಸ್‌ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಜೆಡಿಎಸ್‌ ಅಲ್ಪಸಂಖ್ಯಾಕ ವಿಭಾಗದ ಮುಂದಾಳು ಸ್ಕರಿಯ ಕಳಾರ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next