Advertisement

ರಾಯಚೂರಲ್ಲಿ ಜೆಡಿಎಸ್‌ಗೆ ಪರ್ವಕಾಲ

06:09 PM Aug 09, 2021 | Team Udayavani |

ರಾಯಚೂರು: ಬಿಜೆಪಿ ಹೊಸ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ರಾಷ್ಟ್ರೀಯ ಪಕ್ಷಗಳ ಬಗೆಗಿನ ಜನಾಕ್ರೋಶ ಹೆಚ್ಚಾಗಿದೆ. ಕಾಂಗ್ರೆಸ್‌ ಆಗಲಿ ಬಿಜೆಪಿಯಾಗಲಿ ಅಧಿ ಕಾರಕ್ಕೆ ಬಂದರೆ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸುತ್ತಿದ್ದು, ಜನತಾ ಪರಿವಾರವೇ ಲೇಸು ಎಂಬ ಅನುಕಂಪದ ಅಲೆಯೊಂದು ಎದ್ದಿದೆ.

Advertisement

ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಟೀಕಿಸಿ ಪೋಸ್ಟ್‌ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ, ಜಿಲ್ಲೆಗೆ ಶನಿವಾರ ಭೇಟಿ ನೀಡಿದ ಸಚಿವರಿಗೂ ಅನೇಕ ಸಂಘಟನೆಗಳು ಮನವಿ ಸಲ್ಲಿಸಿ ಇದೇ ತಾರತಮ್ಯ ಮುಂದುವರಿದರೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಬಿಜೆಪಿಗೆ ಕರ್ನಾಟಕದಲ್ಲಿ ರಾಯಚೂರು ಜಿಲ್ಲೆ ಇದೆ ಎಂಬುದು ನೆನಪಿದೆಯೇ ಎಂದು ಪ್ರಶ್ನಿಸಿ ಪೋಸ್ಟ್‌ ಹಾಕುತ್ತಿದ್ದಾರೆ.

ಬಿಜೆಪಿ ಸರ್ಕಾರ ಮೊದಲ ಅವಧಿಯಲ್ಲಿ ಜಿಲ್ಲೆಗೆ ಸಚಿವ ಸ್ಥಾನ ನೀಡದಿದ್ದರೂ ಈ ಜನಾಕ್ರೋಶ ಕಂಡು ಬಂದಿರಲಿಲ್ಲ. ಆದರೆ, ಎರಡನೇ ಅವಧಿಯಲ್ಲಿ ಸ್ಥಾನ ನೀಡದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ. 2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಕೂಡ ಐದು ವರ್ಷ ಪೂರ್ಣಾವಧಿ ಆಡಳಿತ ನಡೆಸಿದರೂ ಜಿಲ್ಲೆಗೆ ಸಚಿವ ಸ್ಥಾನ ನೀಡಲಿಲ್ಲ. ಕಾಂಗ್ರೆಸ್‌, ಬಿಜೆಪಿ ಅಧಿ ಕಾರಕ್ಕೆ ಬಂದಾಗಲೊಮ್ಮೆ ಈ ರೀತಿ ಜಿಲ್ಲೆಗೆ ಅನ್ಯಾಯವಾಗುತ್ತಲೇ ಇದೆ.

ಇದರ ಬದಲು ಜೆಡಿಎಸ್‌ ಎಷ್ಟೋ ವಾಸಿ. ಜಿಲ್ಲೆಗೆ ಸಾಕಷ್ಟು ಬಾರಿ ಸಚಿವ ಸ್ಥಾನ ನೀಡಿದೆ. ಹಿಂದೆ ಜನತಾದಳ ಸರ್ಕಾರ ಅಧಿಕಾರಕ್ಕೆ ಬಂದಾಗ ಎಂ.ಎಸ್‌.ಪಾಟೀಲ್‌, ಹನುಮಂತಪ್ಪ ಆಲ್ಕೋಡ್‌ ಜೆಡಿಎಸ್‌ನಿಂದ ಸಚಿವರಾಗಿದ್ದರು. ಅವಿಭಜಿತ ಕೊಪ್ಪಳ ಜಿಲ್ಲೆಯಲ್ಲಿ ಮಲ್ಲಿಕಾರ್ಜುನ ನಾಗಪ್ಪ ಸಾಲೋನಿ, ರಾಯರಡ್ಡಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಪೂರ್ಣ ಪ್ರಮಾಣದಲ್ಲಿ ಆಡಳಿತಕ್ಕೆ ಬರದಿದ್ದರೂ ಜಿಲ್ಲೆಗೆ ಸ್ಥಾನ ನೀಡುವ ಜೆಡಿಎಸ್‌ ಎಷ್ಟೋ ವಾಸಿ ಎನ್ನುತ್ತಿದ್ದಾರೆ ಜಿಲ್ಲೆಯ ಜನ.

ಸಂಘಟನೆಗೆ ಸುಸಮಯ: ಜೆಡಿಎಸ್‌ಗೆ ಜಿಲ್ಲೆಯಲ್ಲಿ ಮಿಶ್ರ ಬೆಂಬಲವಿದೆ. ಪಕ್ಷ ಸಂಘಟನೆಯಲ್ಲಿ  ಒಗ್ಗಟ್ಟಿನ ಕೊರತೆ ಎದುರಿಸುತ್ತಿರುವ ಜೆಡಿಎಸ್‌ ಹಿಂದುಳಿಯುತ್ತಿದೆ ಬಿಟ್ಟರೆ ಸದೃಢ ನಾಯಕತ್ವದಡಿ ಪಕ್ಷ ಸಂಘಟಿಸಿದರೆ ಮತ್ತೂಮ್ಮೆ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಪ್ರಾಬಲ್ಯ ಸಾ ಧಿಸಬಹುದು. ಇರುವ ಏಳು ಕ್ಷೇತ್ರಗಳಲ್ಲಿ ಮೂರರಲ್ಲಿ ಕಾಂಗ್ರೆಸ್‌ ಇದ್ದರೆ, ತಲಾ ಎರಡು ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್‌ ಆಡಳಿತದಲ್ಲಿವೆ. ಈ ಪರಿಸ್ಥಿತಿ ಕಳೆದ ದಶಕದಿಂದಲೂ ಇದೆ. ಆದರೆ, ಲಿಂಗಸೂಗೂರು ಕ್ಷೇತ್ರದಲ್ಲಿ ಕಡಿಮೆ ಮತಗಳ ಅಂತರದಿಂದ ಜೆಡಿಎಸ್‌ ಸೋಲುಂಡಿದ್ದರೆ, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲೂ ಉತ್ತಮ ಮತ ಗಳಿಸಿದ್ದನ್ನು ಸ್ಮರಿಸಬಹುದು.

Advertisement

ಜಿಲ್ಲೆಯಲ್ಲಿ ಜೆಡಿಎಸ್‌ ವ್ಯಕ್ತಿಯಾಧಾರಿತ ಪ್ರಾಬಲ್ಯ ಹೊಂದಿದೆಯೇ ವಿನಃ ಪಕ್ಷಾಧಾರಿತ ಸಂಘಟನೆಯಲ್ಲಿ ಹಿಂದುಳಿಯುತ್ತಿದೆ. ಈಗ ರಾಷ್ಟ್ರೀಯ ಪಕ್ಷಗಳ ಬಗ್ಗೆ ಎದ್ದಿರುವ ವಿರೋಧಿ ಅಲೆಯನ್ನೇ ಬಳಸಿಕೊಂಡು ಜೆಡಿಎಸ್‌ ತನ್ನ ಪ್ರಭಾವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ನಿಟ್ಟನಲ್ಲಿ ಹೆಜ್ಜೆ ಹಾಕಿದರೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಇನ್ನೂ ಗಟ್ಟಿಯಾಗಬಹುದು.

ಅಭಿವೃದ್ಧಿಗೆ ಜೆಡಿಎಸ್‌ ಹೆಸರು: ಅಭಿವೃದ್ಧಿ ಎಂದು ಬಂದಾಗ ಜೆಡಿಎಸ್‌ ಹೆಸರು ಜಿಲ್ಲೆಯಲ್ಲಿ ಕೇಳಿ ಬರುವುದು ನಿಜ. ದೇವದುರ್ಗ ತಾಲೂಕಿನಲ್ಲಿ ನೀರಾವರಿ ಮಾಡಲು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರೇ ಕಾರಣ ಎಂದು ಅಲ್ಲಿನ ರೈತರು ಇಂದಿಗೂ ಸ್ಮರಿಸುತ್ತಾರೆ. ರೈತನೊಬ್ಬ ತನ್ನ ಜಮೀನಿನಲ್ಲಿ ದೇವೇಗೌಡರ ಪ್ರತಿಮೆ ನಿರ್ಮಿಸಿ ಅಭಿಮಾನ ಮೆರೆದಿದ್ದಾನೆ. ಜಿಲ್ಲೆಯಲ್ಲಿ ಎಸ್‌ಟಿ ಸಮುದಾಯ ಹೆಚ್ಚಾಗಿದೆ. ಕೇಂದ್ರದಲ್ಲಿ ಅವರಿಗೆ ಶೇ.7.5 ಮೀಸಲಾತಿ ಸಿಗಲು ಕೂಡ ದೇವೇಗೌಡರೇ ಕಾರಣ ಎಂದೂ ಜನ ಸ್ಮರಿಸುತ್ತಾರೆ. ಈಚೆಗೆ ಎಚ್‌. ಡಿ. ಕುಮಾರಸ್ವಾಮಿ ತಮ್ಮ ಗ್ರಾಮ ವಾಸ್ತವ್ಯಕ್ಕೂ ಜಿಲ್ಲೆಯನ್ನು ಆಯ್ಕೆ ಮಾಡಿದ್ದನ್ನು ಸ್ಮರಿಸಬಹುದು.

ಸದಾ ನಿರ್ಣಾಯಕ ಪಕ್ಷ: ರಾಜ್ಯ ರಾಜಕಾರಣ ಮಾತ್ರವಲ್ಲ ಜಿಲ್ಲಾ ರಾಜಕಾರಣದಲ್ಲೂ ಜೆಡಿಎಸ್‌ ಸಾಕಷ್ಟು ಬಾರಿ ನಿರ್ಣಾಯಕ ಪಾತ್ರ ನಿಭಾಯಿಸುತ್ತಿದೆ. ನಗರಸಭೆ, ಜಿಪಂ ಸೇರಿದಂತೆ ಸಾಕಷ್ಟು ಸ್ಥಳೀಯ ಸಂಸ್ಥೆಗಳಲ್ಲಿ ಅಧಿ ಕಾರ ಚುಕ್ಕಾಣಿ ಹಿಡಿಯಲು ಜೆಡಿಎಸ್‌ ಸಹಕಾರ ಅತ್ಯಗತ್ಯ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಆದರೆ, ಜೆಡಿಎಸ್‌ ಶಾಸಕರಿರುವ ಭಾಗದಲ್ಲೂ ಪೂರ್ಣ ಪ್ರಮಾಣದಲ್ಲಿ ಅಧಿ ಕಾರ ಪಡೆಯುವಲ್ಲಿ ಹಿಂದುಳಿಯುತ್ತಿದೆ. ಮೈಸೂರು, ಮಂಡ್ಯ ಭಾಗ ಹೊರತಾಗಿಸಿ ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು ಒಲವು ಹೊಂದಿರುವ ಜೆಡಿಎಸ್‌ಗೆ ರಾಯಚೂರು ಉತ್ತಮ ವೇದಿಕೆ ಎನ್ನುವುದರಲ್ಲಿ ಶಂಕೆ ಬೇಡ.

ಬರೀ ಹೊರಗಿನವರಿಗೆ ಉಸ್ತುವಾರಿ
ಕಳೆದ 13 ವರ್ಷಗಳಿಂದಲೂ ಬೇರೆ ಜಿಲ್ಲೆಗಳ ಸಚಿವರೇ ಜಿಲ್ಲೆಯ ಉಸ್ತುವಾರಿ ಹೊತ್ತಿದ್ದಾರೆ. 2018ರಲ್ಲಿ ಅಧಿ ಕಾರಕ್ಕೆ ಬಂದ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ವೆಂಕಟರಾವ್‌ ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಆ ಸರ್ಕಾರ ಹೆಚ್ಚು ದಿನ ಇರಲಿಲ್ಲ. ಅದು ಬಿಟ್ಟರೆ ಹಿಂದೆ ಜಿಲ್ಲೆಯ ಉಸ್ತುವಾರಿ ಹೊತ್ತವರಲ್ಲಿ ಹೊರಗಿನವರೇ ಹೆಚ್ಚು. ಹಾವೇರಿ ಜಿಲ್ಲೆಯ ಸಿ.ಎಂ.ಉದಾಸಿ, ಕಾರವಾರದ ಸಚಿವ ಆನಂದ ಅಸ್ನೋಟಿಕರ್‌, ಬೆಳಗಾವಿಯ ಬಾಲಚಂದ್ರ ಜಾರಕಿಹೊಳಿ, ಉಮಾಶ್ರೀ, ಬಳ್ಳಾರಿಯ ಬಿ. ಶ್ರೀರಾಮುಲು, ಮೈಸೂರು ಜಿಲ್ಲೆಯ ತನ್ವೀರ್‌ ಸೇಠ್, ಕಲಬುರಗಿಯ ಸಚಿವ ಡಾ| ಶರಣಪ್ರಕಾಶ ಪಾಟೀಲ್‌, ಎಚ್‌.ಎಂ.ರೇವಣ್ಣ, ಬೆಳಗಾವಿಯ ಲಕ್ಷ್ಮಣ ಸವದಿ ಅವರಿಗೆ ಜಿಲ್ಲೆಯ ಉಸ್ತುವಾರಿ ವಹಿಸಲಾಗಿತ್ತು.

ಸಿದ್ದಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next