ಬೆಂಗಳೂರು: ನೆಟ್ಟಗೆ ಆಡಳಿತ ನಡೆಸಲು ಬಾರದ ರಾಜ್ಯ ಬಿಜೆಪಿ ಸರ್ಕಾರದ ಕುಕೃತ್ಯಗಳಿಗೆ ಬೌದ್ಧಿಕ ಪೋಷಾಕು ತೊಡಿಸಿ, ಸಮರ್ಥನೆಗೆ ಇಳಿಯುವ ಮೊಂಡುವಾದಿ ಸಚಿವ ಮಾಧುಸ್ವಾಮಿ ಅವರೇ, ದೇವೇಗೌಡರ ಬಗ್ಗೆ ಮಾತನಾಡದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲವೆ? ಅಥವಾ ಈ ರೀತಿ ಮಾತಿನ ಬೇಧಿಯಿಂದ ಪ್ರಚಾರ ಗಿಟ್ಟಿಸಿಕೊಳ್ಳುವ ಹುನ್ನಾರವೆ ಎಂದು ಜೆಡಿಎಸ್ ಪ್ರಶ್ನಿಸಿದೆ.
ಈ ಬಗ್ಗೆ ಜೆಡಿಎಸ್ ಅಧಿಕೃತ ಹ್ಯಾಂಡಲ್ ನಿಂದ ಟ್ವೀಟ್ ಮಾಡಿದ್ದು, ಆಡಳಿತ ನಡೆಸುವ ಬದಲು ಸರ್ಕಾರವು ಏನೋ ಒಂದು ನಿಭಾವಣೆ ಮಾಡುತ್ತಾ, ಕಾಲತಳ್ಳುತ್ತಿದ್ದೆ ಎಂದು ಹೇಳಿದ ಭೂಪ ನೀವೇ ಅಲ್ಲವೆ? 40% ಕಮಿಷನ್ ಸರ್ಕಾರವೆಂದೆ ಕುಖ್ಯಾತವಾಗಿರುವ ನಿಮ್ಮ ಸರ್ಕಾರ ದೋಚುತ್ತಿರುವ ಸಾರ್ವಜನಿಕರ ಹಣದ ಬಗ್ಗೆ ಲೆಕ್ಕ ಇದೆಯೆ? ಯಾವ ಮುಖ ಇಟ್ಟುಕೊಂಡು ದೇವೇಗೌಡರ ಕುಟುಂಬದ ಬಗ್ಗೆ ಜನತೆಯ ಮುಂದೆ ಹಸಿಸುಳ್ಳು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ:ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ರೀಲ್ಸ್ ಮಾಡಿದ ಯುವತಿಗೆ 17 ಸಾವಿರ ದಂಡ
ಮಾಧುಸ್ವಾಮಿ ಅವರೇ, ದೇವೇಗೌಡರು ಕೆಳಮಟ್ಟದಿಂದ ಬೆಳೆದು ದೇಶದ ಪ್ರಧಾನಿ ಸ್ಥಾನ ಅಲಂಕರಿಸಿದವರು. ರಾಜ್ಯದ ಜನತೆಯ ಸ್ವಾಭಿಮಾನ ಮತ್ತು ನೆಮ್ಮದಿ ಕಾಪಾಡಲು ಈ ಇಳಿವಯಸ್ಸಲ್ಲೂ ಅವರು ಕೆಲಸ ಮಾಡುತ್ತಿದ್ದಾರೆ. ಸವೆಸಿದ ಹಾದಿಯ ಬಗ್ಗೆ ದೇವೇಗೌಡರ ಕುಟುಂಬಕ್ಕೆ ಹೆಮ್ಮಯಿದೆ. ಹಲಾಲುಟೋಪಿ ಕೆಲಸ ಮಾಡುತ್ತಾ, ಮೇಲೆ ಬಂದವರಲ್ಲ ಅವರು. ಸೋಲು-ಗೆಲುವುಗಳಿಂದ ಯಾರೂ ಹೊರತಾಗಿಲ್ಲ. ಆದರೆ, ಅಧಿಕಾರವಿಲ್ಲದಿದ್ದರೂ ಕನ್ನಡಿಗರ ಏಳ್ಗೆಗೆ ಪ್ರಾಮಾಣಿಕವಾಗಿ ದುಡಿಯುವ ದೇವೇಗೌಡರ ಬಗ್ಗೆ ನಾಲಿಗೆ ಹರಿಬಿಟ್ಟರೆ, ಜನತೆ ನಿಮಗೆ ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ. ನಿಮ್ಮ ದುರಹಂಕಾರದ ಕತೆ ರಾಜ್ಯದ ಜನತೆಗೆ ಗೊತ್ತೇ ಇದೆ ಎಂದು ಜೆಡಿಎಸ್ ಪ್ರಶ್ನಿಸಿದೆ.