ಬ್ರಹ್ಮಾವರ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿವೆ. ಪ್ರಸ್ತುತ ಉಡುಪಿ ಜಿಲ್ಲೆಯಾದ್ಯಂತ ಜೆಡಿಎಸ್ ಒಲವಿದ್ದು, 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭಿವೃದ್ದಿ ಕೆಲಸದ ಬಗ್ಗೆ ಬೂತ್ ಮಟ್ಟದಲ್ಲಿ ಜನರಿಗೆ ತಿಳಿಸಬೇಕೆಂದು ಜೆಡಿಎಸ್ ಉಡುಪಿ ವಿಧಾನಸಭಾಧ್ಯಕ್ಷ ಅಬ್ದುಲ್ ಖಾದರ್ ಕುಂಜಾಲು ಹೇಳಿದರು.
ಅವರು ಉಡುಪಿ ಕ್ಷೇತ್ರ ಜೆಡಿಎಸ್ ವತಿಯಿಂದ ಕರ್ಜೆಯಲ್ಲಿ ಸ್ಥಾನೀಯ ಹಾಗೂ ಬೂತ್ ಮಟ್ಟದ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಬಿರುಸಿನಿಂದ ನಡೆಯುತ್ತಿದ್ದು, ತಾವೆಲ್ಲರೂ ಸೇರಿ 2018ರಲ್ಲಿ ಕುಮಾರಸ್ವಾಮಿ ಅವರನ್ನು ಪುನಃ ಮುಖ್ಯಮಂತ್ರಿಯಾಗಿ ಆರಿಸಬೇಕೆಂದು ಹೇಳಿದರು.
ಅತಿಥಿಗಳಾಗಿ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ರೋಹಿತ್ ಕರಂಬಳ್ಳಿ, ಜಿಲ್ಲಾ ಎಸ್ಸಿಎಸ್ಟಿ ಘಟಕದ ಅಧ್ಯಕ್ಷ ಸಚಿನ್ ಉಡುಪಿ ಭಾಗವಹಿಸಿದ್ದರು. ಸಭೆಯಲ್ಲಿ ಬ್ರಹ್ಮಾವರ ವಲಯ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಮಂಜುನಾಥ ನಾಯ್ಕ ಕರ್ಜೆ, ರಮೇಶ್ ಪೂಜಾರಿ, ಸುನಿಲ್ ಪೂಜಾರಿ, ಕೃಷ್ಣ ನಾಯ್ಕ, ಪುಷ್ಪ ಪೂಜಾರಿ, ಸುಲೋಚನಾ, ಸರೋಜಾ, ಸುಶೀಲಾ ಮೊದಲಾದವರು ಉಪಸ್ಥಿತರಿದ್ದರು.