Advertisement
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಲೋಕಸಭಾ ಉಪ ಚುನಾವಣೆಯನ್ನು ಮೈತ್ರಿಯಾಗಿಯೇ ಕಾಂಗ್ರೆಸ್-ಜೆಡಿಎಸ್ ಎದುರಿಸಲು ನಿರ್ಧರಿಸಿದ್ದರೂ, ಪ್ರಚಾರದಲ್ಲಿ ಕಾಂಗ್ರೆಸ್ ನಾಯಕರು ಹೈಕಮಾಂಡ್ ಆದೇಶ ಧಿಕ್ಕರಿಸಿದ್ದಾರೆ. ಜತೆಗೆ ನಾಗಮಂಗಲದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಎಲ್ಲ ಕಾಂಗ್ರೆಸ್ ನಾಯಕರಿಗೆ ಆಹ್ವಾನವಿದ್ದರೂ, ಕಾಂಗ್ರೆಸ್ ಮುಖಂಡರು ಸಭೆಗೆ ಗೈರಾಗುವ ಮೂಲಕ ಸಾಂಪ್ರದಾಯಿಕ ಸ್ಪರ್ಧೆ ಕಾಪಾಡಿಕೊಂಡಿದ್ದಾರೆ. ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಲಕ್ಷ್ಮೀ ಅಶ್ವಿನ್ಗೌಡ ಪ್ರಚಾರ ಸಭೆಗೆ ಗೈರು ಹಾಜರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಪ್ರಚಾರಸಭೆಯಲ್ಲಿ ಮಾತನಾಡಿದ ಶಿವರಾಮೇಗೌಡ, ಗಂಗಾಧರಮೂರ್ತಿ ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕೆಲವರು ದ್ವೇಷಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಈ ಪ್ರಕರಣ ಹೈಕೋರ್ಟ್ನಲ್ಲಿ ಖುಲಾಸೆಯಾಗಿದೆ. ಇಪ್ಪತ್ತು ವರ್ಷದಿಂದ ನನಗೆ ಅಧಿಕಾರವಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ನಾಯಕರು ಈ ಅವಕಾಶ ಕೊಟ್ಟಿದ್ದಾರೆ. ಜಿಲ್ಲೆಯ ಮತದಾರರೆಲ್ಲರೂ ನನ್ನನ್ನು ಬೆಂಬಲಿಸಿ ಆಶೀರ್ವದಿಸಿ ಎಂದು ಪ್ರಚಾರ ಸಭೆ ವೇದಿಕೆಯಲ್ಲಿ ಕಣ್ಣೀರಿಟ್ಟರು.