Advertisement

ಖಾತೆಗೆ 15 ಲಕ್ಷ ರೂ. ಎಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೇರಿದ್ದ ಬಿಜೆಪಿ

12:04 AM Apr 15, 2024 | Team Udayavani |

ಚಿಕ್ಕಮಗಳೂರು: ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ, ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಭಾರತೀಯರ ಪ್ರತಿ ಕುಟುಂಬದ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದ್ದರು. ಬಿಜೆಪಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಬಂದು 10 ವರ್ಷ ಕಳೆದಿದೆ. ಆದರೆ ಕಪ್ಪು ಹಣ ಕಪ್ಪಾಗಿಯೇ ಉಳಿಯಿತು. ಅದು ಬಿಳಿ ಆಗಲೇ ಇಲ್ಲವೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಜಯಪ್ರಕಾಶ್‌ ಹೆಗ್ಡೆ ಲೇವಡಿ ಮಾಡಿದರು.

Advertisement

ರವಿವಾರ ಜಿಲ್ಲೆಯ ಅಜ್ಜಂಪುರ ತಾಲೂಕಿನ ಜೋಡಿ ಬೋಕಿಕೆರೆ, ಸೊಕ್ಕೆ, ಬಗ್ಗವಳ್ಳಿ, ನಾಗಮಂಗಲ, ಗೌರಾಪುರ, ಸೊಲ್ಲಾಪುರ, ಬೇಗೂರು, ಮುಗಳಿ, ಗಡೀಹಳ್ಳಿ, ಶಿವನಿ, ತ್ಯಾಗದಕಟ್ಟೆ, ಚೀರನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚುನಾವಣ ಪ್ರಚಾರ ಕೈಗೊಂಡು ಮತಯಾಚನೆ ಮಾಡಿ ಅವರು ಮಾತನಾಡಿದರು.

ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಖಾತೆಗೆ ಹಾಕುವುದಾಗಿ ಕೇಂದ್ರದ ಬಿಜೆಪಿ ಸರಕಾರ ಭರವಸೆ ನೀಡಿತ್ತು. ಆದರೆ ಇದುವರೆಗೂ ಯಾರ ಖಾತೆಗೂ ನಯಾ ಪೈಸೆ ಬಂದಿಲ್ಲ. ಆದರೆ ರಾಜ್ಯ ಸರಕಾರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ನಮ್ಮ ಗ್ಯಾರಂಟಿಗಳು ಜನರಲ್ಲಿ ಆಶಾದಾಯಕ ಭಾವನೆಯನ್ನು ಮೂಡಿಸಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾನು ಸಂಸದನಾಗಿದ್ದ ಅವಧಿಯಲ್ಲಿ ಅಡಿಕೆಗೆ ಐತಿಹಾಸಿಕ ಧಾರಣೆ
ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಮತ್ತು ಬಯಲುಸೀಮೆ ಪ್ರದೇಶವನ್ನು ಒಳಗೊಂಡಿದೆ. ಇಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಅಡಿಕೆಯನ್ನು ಬೆಳೆಯಾಗುತ್ತಿದೆ. ನಾನು ಎರಡು ವರ್ಷಗಳ ಕಾಲ ಸಂಸದನಾಗಿದ್ದ ಅವಧಿಯಲ್ಲಿ ಅಡಿಕೆ ಬೆಳೆಗಾರರ ಪರ ಪ್ರಾಮಾಣಿಕ ಪ್ರಯತ್ನ ಮಾಡಿದರ ಫ‌ಲವಾಗಿ ಅಡಿಕೆಗೆ ಉತ್ತಮ ಧಾರಣೆ ದೊರೆಯಿತು ಎಂದರು.

ಸಂಸದನಾಗಿದ್ದ ಅವಧಿಯಲ್ಲಿ ಅಡಿಕೆ ವಿದೇಶಿ ಆಮದು ಶುಲ್ಕ ಕೇವಲ 35 ರೂ. ಇತ್ತು. 2012ರಲ್ಲಿ ಅಂದಿನ ಮನಮೋಹನ್‌ ಸಿಂಗ್‌ ಸರ್ಕಾರದ ಮೇಲೆ ಒತ್ತಡ ಹೇರಿದ ಫ‌ಲವಾಗಿ ಅಡಿಕೆ ವಿದೇಶಿ ಆಮದು ಶುಲ್ಕ 75 ರೂ.ಗೆ ಏರಿಕೆ ಕಂಡಿತು. ಮತ್ತೆ 2013ರಲ್ಲಿ ಈ ಶುಲ್ಕವನ್ನು 110 ರೂ.ಗೆ ಏರಿಕೆ ಮಾಡಿದ್ದರಿಂದ ಅಡಿಕೆ ಕಳ್ಳಸಾಗಣೆಗೆ ಕಡಿವಾಣ ಹಾಕಲು ಸಾಧ್ಯವಾಯಿತು. ಅಡಿಕೆಗೆ ಐತಿಹಾಸಿಕ ಧಾರಣೆ ಕಂಡಿತು ಎಂದು ತಿಳಿಸಿದರು.

Advertisement

ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ
ಕೇಂದ್ರ ಸರ್ಕಾರಕ್ಕೆ ಜಿಎಸ್‌ಟಿ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ನಮಗೆ ನೀಡ ಬೇಕಾದ ಜಿಎಸ್‌ಟಿ ಪಾಲು ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ದಕ್ಷಿಣ ಭಾರತಕ್ಕೆ ಕಡಿಮೆ ಹಣವನ್ನು ನೀಡುವ ಮೂಲಕ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ಮಲ ತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.

ಶೋಭಾ ಕರಂದ್ಲಾಜೆ ಜನರ ಸಮಸ್ಯೆಗಳನ್ನು ಆಲಿಸಲಿಲ್ಲ
ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮತ ಪಡೆದುಕೊಂಡು ಎರಡು ಬಾರೀ ಸಂಸದೆಯಾಗಿ ಪ್ರತಿನಿಧಿಸಿದ ಶೋಭಾ ಕರಂದ್ಲಾಜೆ ಅವರು ನಿಮ್ಮ ಸಮಸ್ಯೆಗಳನ್ನು ಆಲಿಸಲಿಲ್ಲ. ಮೋದಿಯವರು ನಿಮ್ಮ ಕಷ್ಟಗಳಿಗೆ ಸ್ಪಂಧಿಸಲಿಲ್ಲ. ಶೋಭಾ ಅವರು ಕ್ಷೇತ್ರಕ್ಕೆ ಬರಲಿಲ್ಲ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದರು.

ಇಲ್ಲಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನೀರಾ ವರಿ ಸೌಲಭ್ಯವನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ.

ಈ ಸಂದರ್ಭದಲ್ಲಿ ತರೀಕೆರೆ ಕ್ಷೇತ್ರದ ಶಾಸಕ ಜಿ.ಎಚ್‌. ಶ್ರೀನಿವಾಸ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ|ಕೆ.ಪಿ.ಅಂಶುಮಂತ್‌, ಎಂ.ಸಿ.ಶಿವಾನಂದ ಸ್ವಾಮಿ, ಎಚ್‌.ಎಂ.ಗೋಪಿಕೃಷ್ಣ, ದಯಾನಂದ ಸೇರಿದಂತೆ ಅನೇಕರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next