Advertisement

ರಣಕಣದೊಳಗೆ ದಳಪತಿಗಳ ಅಬ್ಬರದ ಪ್ರಚಾರ

02:58 PM Apr 12, 2019 | keerthan |

ಮಂಡ್ಯ: ರಣಕಣವಾಗಿರುವ ಮಂಡ್ಯ ಚುನಾವಣಾ ಕಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ಮೈತ್ರಿಕೂಟ ಅಭ್ಯರ್ಥಿ ನಿಖೀಲ್‌ ಪರವಾಗಿ ಪ್ರಚಾರ ನಡೆಸಿದರೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಶ್ರೀರಂಗಪಟ್ಟಣದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.

Advertisement

ಇವರ ಪರವಾಗಿ ದರ್ಶನ್‌, ಅಭಿಷೇಕ್‌ ವಿವಿಧೆಡೆ ಪ್ರಚಾರ ಕೈಗೊಂಡರೆ, ಮೈತ್ರಿ ಅಭ್ಯರ್ಥಿ ನಿಖೀಲ್‌ಗೆ ದಳಪತಿಗಳು ಬೆಂಬಲ ನೀಡಿ ಮತಯಾಚನೆ ಮಾಡಿದ್ದು ವಿಶೇಷವಾಗಿತ್ತು. ಮದ್ದೂರು, ಮಳವಳ್ಳಿ, ಮಂಡ್ಯ ವಿಧಾನ ಸಭಾ
ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರೋಡ್‌ ಶೋ ನಡೆಸುವ ಮೂಲಕ ತಮ್ಮ ಪುತ್ರನ ಪರವಾಗಿ ಮತಯಾಚನೆ ಮಾಡಿದರು.

ಎಳನೀರು ಸೇವಿಸಿದ ಸಿಎಂ: ಮದ್ದೂರು ತಾಲೂಕು ಬೆಸಗರಹಳ್ಳಿ ಗ್ರಾಮದಲ್ಲಿ ರೋಡ್‌ ಶೋ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುಮಾರು 38
ಡಿಗ್ರಿ ಸುಡುಬಿಸಿನಲ್ಲೂ ನಿಖೀಲ್‌ ಪರ ಪ್ರಚಾರ ನಡೆಸಿ ಮತಯಾಚಿಸಿದರು. ದಣಿವಾರಿಸಿಕೊಳ್ಳಲು ಮಾರ್ಗ ಮಧ್ಯೆ ಎಳನೀರು ಸೇವಿಸಿ ತೃಪ್ತಿ ಪಟ್ಟುಕೊಂಡರು. ಬಳಿಕ ಮತ್ತೆ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.

ಬೆಸಗರಹಳ್ಳಿ ಬಸ್‌ ನಿಲ್ದಾಣದಲ್ಲಿ ಬಿರುಸಿನ ಪ್ರಚಾರ ನಡೆಸಿದ ಸಿಎಂ ಕುಮಾರಸ್ವಾಮಿ ಅವರಿಗೆ ಭಾರೀ ಗಾತ್ರದ ಸೇಬಿನ ಹಾರವನ್ನು ಅಭಿಮಾನಿಗಳು, ಕಾರ್ಯಕರ್ತರು ಅರ್ಪಿಸಿದರು. ಆದರೆ ಕುಮಾರಸ್ವಾಮಿ ಅವರು ಸೇಬಿನ ಹಾರವನ್ನು ಸ್ವೀಕರಿಸಲು ನಿರಾಕರಿಸಿ ದೂರ ತಳ್ಳಿದ್ದು ಕಂಡುಬಂತು. ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಸಾಥ್‌ ನೀಡಿದರು.

ನಿಖೀಲ್‌ ಮತಯಾಚನೆ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ನಿಖೀಲ್‌ ಕುಮಾರಸ್ವಾಮಿ ಅವರು ಇದು ಮಂಡ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಬೆಳಗ್ಗೆ 8-30ಕ್ಕೆ ತಾಲೂಕಿನ ಹನಕೆರೆ ಗೇಟ್‌ನಿಂದ ಪ್ರಾರಂಭವಾದ ನಿಖೀಲ್‌ ಪ್ರಚಾರ ಯಾತ್ರೆ, ಬಿ. ಗೌಡಗೆರೆ, ಹುಚ್ಚಲಗೆರೆ, ಕನ್ನಲಿ, ಕಾಗೇಹಳ್ಳದದೊಡ್ಡಿ, ಮಲ್ಲಯ್ಯನದೊಡ್ಡಿ, ಬೂದನೂರು, ಹೊಸ ಬೂದನೂರು, ಶ್ರೀನಿವಾಸಪುರ, ಚಿಕ್ಕಮಂಡ್ಯ, ಸಾತನೂರು, ಕೊಮ್ಮೇರಹಳ್ಳಿ, ಹೊನಗಾನಹಳ್ಳಿ, ಉಮ್ಮಡಹಳ್ಳಿ, ಬೆಳ್ಳುಂಡಗೆರೆ, ಕೀಲಾರ, ಆಲಕೆರೆ, ಮುದ್ದಂಗೆರೆ, ಡಣಾಯನಕನಪುರ, ಈಚಗೆರೆ, ಹೊಡಾಘಟ್ಟ, ಶಿವಾರ, ಮಾರಗೌಡನಹಳ್ಳಿ, ಹಂಚಹಳ್ಳಿ, ಕೆ. ಗೌಡಗೆರೆ, ಹೆಚ್‌. ಕೋಡಿಹಳ್ಳಿ,
ಗೋಪಾಲಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮಂಡ್ಯ ಕ್ಷೇತ್ರದ ಶಾಸಕ ಎಂ. ಶ್ರೀನಿವಾಸ್‌, ಮಾಜಿ ಸಚಿವ ಕಾಂಗ್ರೆಸ್‌ ಮುಖಂಡ ಎಂ.ಎಸ್‌. ಆತ್ಮಾನಂದ ಅವರು ನಿಖೀಲ್‌ಗೆ ಸಾಥ್‌ ನೀಡಿದರು. ನಿಖೀಲ್‌ ಭೇಟಿ ನೀಡಿದ ಕೆಲವು ಗ್ರಾಮಗಳಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಹೂಮಳೆಗರೆದರೆ, ಮತ್ತೆ ಕೆಲವೆಡೆ ಭಾರೀ ಗಾತ್ರದ ಹೂವಿನ ಹಾರ ಹಾಗೂ ಸೇಬಿನ ಹಾರ ಅರ್ಪಿಸಿದರು. ಈ ವೇಳೆ ಮತದಾರರನ್ನುದ್ದೇಶಿಸಿ ಮಾತನಾಡಿದ ನಿಖೀಲ್‌, ತಮ್ಮ ತಂದೆ ರಾಜ್ಯದ ಮುಖ್ಯಮಂತ್ರಿ ಎಚ್‌ .ಡಿ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ 8 ಸಾವಿರ ಕೋಟಿಗೂ ಅ—ಕ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ನಾನು ಆಯ್ಕೆಯಾದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲು ಅನುಕೂಲವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ನನ್ನನ್ನೇ ಆಯ್ಕೆ ಮಾಡುವಂತೆ ಮನವಿ ಮಾಡಿದರು.

Advertisement

ತಾಲೂಕಿನ ಬಿ. ಗೌಡಗೆರೆಯಲ್ಲಿ ನಿಖೀಲ್‌ ಪ್ರಚಾರದ ವೇಳೆ ಮಹಿಳೆಯರು ಅದ್ದೂರಿಯಾಗಿ ಸ್ವಾಗತಿಸಿದರು. ಕಳಸ, ಹೊಸೆ ಹೊತ್ತ ಮಹಿಳೆಯರು ಇದ್ದರು. ಈ ವೇಳೆ ನಿಖೀಲ್‌ಗೆ ಅಭಿಮಾನಿಗಳು ಪ್ರೀತಿಯಿಂದ ಮುತ್ತಿಟ್ಟು ಆಶೀರ್ವದಿಸಿದರು. ಚಿಕ್ಕಮಂಡ್ಯದಲ್ಲಿ ಮಧ್ಯಾಹ್ನದ ಬಳಿಕ ಅಭಿಷೇಕ್‌ ಅಂಬರೀಶ್‌ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡದಲ್ಲಿರುವ ತಮ್ಮ ತಾಯಿ ಸುಮಲತಾ ಅಂಬರೀಶ್‌ ಪರ ಪ್ರಚಾರ ಕೈಗೊಂಡರು.

ಅಂಬರೀಶ್‌ ಮೇಲಿನ ಅಭಿಮಾನ ಗೆಲ್ಲಬೇಕು. ಆ ಮೂಲಕ ಜಿಲ್ಲೆಯ ಸ್ವಾಭಿಮಾನ ಉಳಿಯಬೇಕಿದೆ. ಅದಕ್ಕಾಗಿ ನನ್ನ ತಾಯಿ ಸುಮಲತಾ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ನನ್ನ ತಾಯಿ ಸ್ವಾರ್ಥ ರಾಜಕಾರಣ ಮಾಡಲು ಬಂದಿಲ್ಲ. ಜನರ ಮಧ್ಯದಲ್ಲಿದ್ದು ರಾಜಕಾರಣ ಮಾಡಲು ಬಂದಿದ್ದಾರೆ. ಅಧಿಕಾರ, ಹಣ ಗಳಿಸುವ ಆಸೆ ನಮಗಿಲ್ಲ. ಒಳ್ಳೆಯ ರಾಜಕಾರಣ ಮಾಡಿಕೊಂಡು ನಮ್ಮ ತಂದೆಯ ಹೆಸರನ್ನು ಉಳಿಸಿ, ಶಾಶ್ವತವಾಗಿರಸಲು ಬಂದಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next