Advertisement

Jayanthi: ಅಪರೂಪದ ಬಹುಮುಖ ಪ್ರತಿಭೆ ಕೋಟ ಡಾ.ಶಿವರಾಮ ಕಾರಂತ

05:33 AM Oct 10, 2024 | Team Udayavani |

ಕಡಲತಡಿಯ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದವರು ಜ್ಞಾನಪೀಠ ಪುರಸ್ಕೃತ ಡಾ| ಕೋಟ ಶಿವರಾಮ ಕಾರಂತರು. “ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಬರೆಯದ ಸಾಹಿತ್ಯ ಪ್ರಕಾರವಿಲ್ಲ’ ಎಂಬುದು ಕೇವಲ ಕಾರಂತರ ಗುಣಗಾನಕ್ಕಾಗಿ ಸೃಷ್ಟಿಯಾದ ಮಾತಲ್ಲ. ಅವರ ಸಾಹಿತ್ಯ ಕೃಷಿ ಕಡಲಿನಷ್ಟೇ ಅಗಾಧವಾದುದು.

Advertisement

96 ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ, ರಾಜಕೀಯ, ನಾಟಕ, ಸಿನೆಮಾ, ಪರಿಸರ, ಯಕ್ಷಗಾನ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಡವರು. ಡಾ| ಕಾರಂತರನ್ನು, ಡಾ| ಹಾ.ಮಾ. ನಾಯಕರು “ಯಾವ ಮಾನದಂಡದಿಂದ ಅಳೆದರೂ ಕಾರಂತರು ವಿಶ್ವ ಲೇಖಕರ ಪಟ್ಟಿಯಲ್ಲಿ ಸೇರಬಲ್ಲ ಮಹಾನ್‌ ಲೇಖಕ’ ಎಂದು ಬಣ್ಣಿಸಿರುವುದು ವಾಸ್ತವಕ್ಕೆ ಹಿಡಿದ ಕನ್ನಡಿ ಎನ್ನಲಡ್ಡಿ ಇಲ್ಲ.

1902 ಅಕ್ಟೋಬರ್‌ 10 ರಂದು ಉಡುಪಿ ಜಿಲ್ಲೆಯ ಕೋಟದಲ್ಲಿ ಶೇಷ ಕಾರಂತ ಮತ್ತು ಲಕ್ಷ್ಮಮ್ಮ ದಂಪತಿಯ 5ನೆಯ ಸುಪುತ್ರನಾಗಿ ಜನಿಸಿದ ಶಿವರಾಮ ಕಾರಂತರು ಶಿಕ್ಷಣವನ್ನು ಕುಂದಾಪುರ ಮತ್ತು ಮಂಗಳೂರಿನಲ್ಲಿ ಪೂರೈಸಿದರು. ಗಾಂಧೀಜಿಯ ತಣ್ತೀಗಳಿಂದ ಪ್ರಭಾವಿತರಾಗಿ ಕಾಲೇಜಿನಲ್ಲಿರುವಾಗಲೇ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು. ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ 1927ರ ವರೆಗೆ ಖಾದಿ ಮತ್ತು ಸ್ವದೇಶಿ ವಸ್ತುಗಳಿಗಾಗಿ ತನ್ನನ್ನು ಮುಡಿಪಾಗಿರಿಸಿಕೊಂಡರು. ಆ ಹೊತ್ತಿಗೆ ಕಾರಂತರು ಕಥೆ, ಕಾದಂಬರಿಗಳನ್ನು ಬರೆಯಲು ಆರಂಭಿಸಿದರು.

ತನ್ನ ಜೀವಿತಾವಧಿಯಲ್ಲಿ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕಾದಂಬರಿಯೂ ಸೇರಿದಂತೆ 427ಕ್ಕಿಂತಲೂ ಹೆಚ್ಚು ಪುಸ್ತಕ ರಚನೆಯನ್ನು ಮಾಡಿದ್ದಾರೆ. ತನ್ನ 96ನೇ ವಯಸ್ಸಿನಲ್ಲಿ ಕೂಡ ಹಕ್ಕಿಗಳ ಕುರಿತು ಒಂದು ಪುಸ್ತಕವನ್ನು ಬರೆದಿದ್ದು, ಇದು ವಿಶ್ವದಾಖಲೆಗೆ ಅರ್ಹವಾಗಿರುವ ಸಾಧನೆ. ಅವರ ಕೃತಿಗಳಿಲ್ಲಿ ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಯಕ್ಷಗಾನ ಬಯಲಾಟ, ಸಿರಿಗನ್ನಡ ಅರ್ಥಕೋಶ, ಹುಚ್ಚು ಮನಸ್ಸಿನ ಹತ್ತು ಮುಖಗಳು, ಮೂಕಜ್ಜಿಯ ಕನಸುಗಳು, ಜೋಮನ ದುಡಿ ಮುಂತಾದ ಕೃತಿಗಳು ಕನ್ನಡ ಸಾಹಿತ್ಯ ಪ್ರಪಂಚದಲ್ಲೇ ಮೈಲುಗಲ್ಲಿನ ಕೃತಿಗಳಾಗಿವೆ.

ಕರ್ನಾಟಕದ ಪ್ರಮುಖ ಜಾನಪದ ಕಲೆಯಾದ ಯಕ್ಷಗಾನದ ನಿಜವಾದ ಉಳಿವಿಗೆ ಪ್ರಯತ್ನಿಸಿ, ಸ್ವತಃ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವ ಮೂಲಕ ಹಲವು ಪ್ರಯೋಗಗಳನ್ನು ಮಾಡಿ, ದೇಶ ವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಪಸರಿಸಿದವರು ಡಾ| ಕಾರಂತರು. ರಾಮಚಂದ್ರ ಗುಹಾರವರು ಕಾರಂತರನ್ನು ಭಾರತದ “ಆಧುನಿಕ ರವೀಂದ್ರನಾಥ ಠಾಗೋರ್‌’ ಎಂದು ಕರೆದರು. ಭಾರತದಲ್ಲಿ ನೀಡಿರುವ ಅತ್ಯುನ್ನತ ಸಾಹಿತ್ಯ ಗೌರವವಾದ ಜ್ಞಾನಪೀಠ ಪ್ರಶಸ್ತಿಯನ್ನು ಅಲಂಕರಿಸಿದ ಕನ್ನಡದ 3ನೆಯ ಶ್ರೇಷ್ಠ ಬರಹಗಾರರಾಗಿದ್ದಾರೆ.

Advertisement

1930ರ ದಶಕದಲ್ಲಿ ಕೆಲವು ವರ್ಷಗಳ ಕಾಲ ಮುದ್ರಣ ತಂತ್ರದಲ್ಲಿ ತೊಡಗಿಸಿಕೊಂಡು, ತಮ್ಮ ಹಲವು ಕಾದಂಬರಿಗಳನ್ನು ಮುಖಪುಟ ಚಿತ್ರ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಕಾರಂತರದ್ದು. ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮ ಕಾರಂತರವರು ಚಿತ್ರರಂಗದಲ್ಲಿ ಕೂಡ ತಮ್ಮ ಪ್ರಯೋಗವನ್ನು ಆರಂಭ ಮಾಡಿದ್ದು, ಮೂಕಿ ಚಿತ್ರ ನಿರ್ಮಾಣ ಮಾಡುವ ಮೂಲಕ ಹರಿಜನರ ಬದುಕನ್ನು ಆಧರಿಸಿದ “ಡೊಮಿಂಗೋ’ ಚಿತ್ರವನ್ನೂ ಚಿತ್ರೀಕರಿಸಿ ಅಭಿನಯಿಸಿ ನಿರ್ದೇಶಿಸಿದರು.

ಕಾರಂತರ ಕಾದಂಬರಿಗಳಲ್ಲಿ ಪರಿಸರ ಚಿತ್ರಣ ಗಾಢವಾಗಿದೆ. ನಿಜ ಜೀವನದಲ್ಲಿ ಪರಿಸರದ ಜೀವಿಗಳಿಗೆ ಹೋರಾಡಿದ ಕಾರಂತರು, ಕೈಗಾ ಅಣು ವಿದ್ಯುತ್‌ ಸ್ಥಾವರದ ವಿರುದ್ಧ ಹೋರಾಟಕ್ಕೆ ನಾಯಕತ್ವ ವಹಿಸಿದ್ದು ಪ್ರಖ್ಯಾತವಾಗಿದೆ. ಅಸಂಖ್ಯ ಗೋಷ್ಠಿಗಳು, ಸಮ್ಮೇಳನಗಳು, ಅಧ್ಯಕ್ಷ ಪಟ್ಟಗಳು, ಸಮ್ಮಾನಗಳು ಕಾರಂತರನ್ನು ಅರಸಿಕೊಂಡು ಬಂದವು. ಜ್ಞಾನಪೀಠ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ವಿವಿಧ ವಿಶ್ವವಿದ್ಯಾನಿಲಯಗಳ ಡಾಕ್ಟರೆಟ್‌ ಪ್ರಶಸ್ತಿಗಳು ಇವುಗಳಲ್ಲಿ ಪ್ರಮುಖವಾದವುಗಳು.

ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ ಕಾರಂತಜ್ಜರನ್ನು, ಕವಿ ಗೋಪಾಲಕೃಷ್ಣ ಅಡಿಗರು “ಕಾರಂತರ ಪರಿಚಯ ಮಾಡಿ ಕೊಡುವುದೂ ಒಂದೇ, ನೇಸರನನ್ನು ಸೊಡರಿನಿಂದ ತೋರಿಸುವುದೂ ಒಂದೇ’ ಎಂದು ಹೇಳಿದ್ದು ಅರ್ಥಪೂರ್ಣವಾಗಿದೆ. ಪುತ್ತೂರಿನಲ್ಲಿ ನೆಲೆಸಿದ ಕಾರಂತರ ಆಗಿನ ಮನೆ, ಪ್ರಸ್ತುತ ಈಗ ವಸ್ತು ಸಂಗ್ರಹಾಲಯ, ಉದ್ಯಾನವನ ಮತ್ತು ಮನೋರಂಜನ ಕೇಂದ್ರವಾಗಿದೆ. ಇದೊಂದು ಆಕರ್ಷಣೀಯ ಪ್ರವಾಸಿ ಕೇಂದ್ರವಾಗಿದ್ದು, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಟ್ರಸ್ಟಿನ ಜಿಲ್ಲಾಡಳಿತದ ಸುಪರ್ದಿಯಲ್ಲಿ ನಿರ್ವಹಿಸಲ್ಪಡುತ್ತಿದೆ.

ಮಕ್ಕಳಿಂದ ವಯೋವೃದ್ಧರ ವರೆಗೆ ಸಾಹಿತ್ಯ ಕೃಷಿ ಮಾಡಿ ಚಿಂತಿಸಿದ ಕಾರಂತರು ದೇಶಕ್ಕೆ ದೊಡ್ಡ ನಿಧಿಯಗಿದ್ದು, ಅವರ ಜನ್ಮ ಸ್ಥಳ ಉಡುಪಿಯ ಕೋಟದಲ್ಲಿ “ಶಿವರಾಮ ಕಾರಂತ ಥೀಮ್‌ ಪಾರ್ಕ್‌’ ಅನ್ನು ಕಾರಂತರ ಸವಿನೆನಪಿಗಾಗಿ 2011ರಲ್ಲಿ ಕೋಟದ ಕೋಳ್ಕೆರೆಯಲ್ಲಿ “ಕಾರಂತರ ಅಭಿಮಾನಿ ಸಮಾನ ಮನಸ್ಕರ ತಂಡ’ ನಿರ್ಮಾಣ ಮಾಡಿದ್ದು, ಅಲ್ಲಿ ಕಾರಂತರ ಇಡೀ ಜೀವನಕ್ಕೆ ಸಂಬಂಧಿಸಿದ ವಿಷಯ ಸಂಗ್ರಹವಿದೆ.

ಪ್ರತೀ ವರ್ಷ ಕೋಟದಲ್ಲಿ ಒಂದು ವಾರ ಶಿವರಾಮ ಕಾರಂತರ ಜನ್ಮ ದಿನವನ್ನು ಆರ್ಥಪೂರ್ಣವಾಗಿ ಆಚರಿಸಿ, ಆವರ ಜನ್ಮದಿನವಾದ ಅಕ್ಟೋಬರ್‌ 10ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಓರ್ವ ಶ್ರೇಷ್ಠ ವ್ಯಕ್ತಿಗೆ “ಶಿವರಾಮ ಕಾರಂತ ಪ್ರಶಸ್ತಿ’ಯನ್ನು ನೀಡುವ ಮೂಲಕ, ಕಾರಂತರ ನೆನಪನ್ನು ಸದಾ ಹಸುರಾಗಿಸುವ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುವ “ಕಾರಂತ ಥೀಮ್‌ ಪಾರ್ಕ್‌’ ತಂಡದ ಕಾರ್ಯ ಸ್ತುತ್ಯರ್ಹವಾಗಿದೆ.

– ಕನ್ನಾರು ಕಮಲಾಕ್ಷ ಹೆಬ್ಬಾರ್‌

Advertisement

Udayavani is now on Telegram. Click here to join our channel and stay updated with the latest news.

Next