Advertisement

ಜಟ್ಟೂರು-ಕಾಗಿಣಾ ಬಾಂದಾರು ಸೇತುವೆ ಕಾಮಗಾರಿ ಪೂರ್ಣ

06:46 PM Jun 12, 2020 | Naveen |

ಚಿಂಚೋಳಿ: ತಾಲೂಕಿನ ಜಟ್ಟೂರು ಗ್ರಾಮದ ಬಳಿ ಹರಿಯುವ ಮುಲ್ಲಾಮಾರಿ ಕಾಗಿಣಾ ನದಿಗೆ ನಿರ್ಮಿಸಲಾಗುತ್ತಿದ್ದ ಬಾಂದಾರು (ಬ್ರಿಡ್ಜ್ ಕಂ ಬ್ಯಾರೇಜ್‌) ಕಾಮಗಾರಿ ಪೂರ್ಣವಾಗಿದ್ದು, ತೆಲಂಗಾಣ ಗಡಿ ಭಾಗಕ್ಕೆ ತೆರಳು ಮತ್ತು ನೀರಾವರಿ ಸೌಲಭ್ಯಕ್ಕೆ ಅನುಕೂಲವಾಗಲಿದೆ.

Advertisement

ಜಟ್ಟೂರ ಗ್ರಾಮದ ಬಳಿಯಿರುವ ಮುಲ್ಲಾಮಾರಿ ಮತ್ತು ಕಾಗಿಣಾ ನದಿ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಹೀಗಾಗಿ ಈ ಭಾಗದ ಗ್ರಾಮಸ್ಥರು ನೆರೆಯ ತೆಲಂಗಾಣ ರಾಜ್ಯದ ತಾಂಡೂರ, ಬಶಿರಾಬಾದ ನಗರ ಪ್ರದೇಶಗಳಿಗೆ ವ್ಯಾಪಾರಕ್ಕಾಗಿ ಮತ್ತು ಆಸ್ಪತ್ರೆಗೆ ಹೋಗುವಾಗ ನದಿಯಲ್ಲಿ ಈಜಿ ಹೋಗುವ ಸ್ಥಿತಿಯಿತ್ತು. ಈ ವೇಳೆ ಕೆಲವರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಘಟನೆಗಳು ನಡೆದಿದ್ದವು. ಜಟ್ಟೂರ, ಹಲಕೋಡಾ, ಪೋತಂಗಲ್‌ ಗ್ರಾಮಸ್ಥರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಕೇಂದ್ರ ಮಾಜಿ ಸಚಿವ ಡಾ| ಮಲ್ಲಿಕಾರ್ಜುನ ಖರ್ಗೆ, ಸೇಡಂ ಕ್ಷೇತ್ರದ ಮಾಜಿ ಶಾಸಕ ಡಾ| ಶರಣಪ್ರಕಾಶ ಪಾಟೀಲ ಪರಿಶ್ರಮದಿಂದಾಗಿ 26.6 ಕೋಟಿ ರೂ. ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್‌ ಮಂಜೂರಿಯಾಗಿತ್ತು.

ಈ ಬಾಂದಾರ ಹಾಗೂ ಸೇತುವೆ ನಿರ್ಮಿಸಬೇಕು ಎನ್ನುವುದು ಮಾಜಿ ಮುಖ್ಯಮಂತ್ರಿ ದಿ| ವೀರೇಂದ್ರ ಪಾಟೀಲ ಅವರ ಕನಸಾಗಿತ್ತು. ಮಾಜಿ ಸಚಿವ ದಿ| ವೈಜನಾಥ ಪಾಟೀಲ ಮತ್ತು ಮಾಜಿ ಶಾಸಕ ಕೈಲಾಶನಾಥ ಪಾಟೀಲ ಕೂಡ ಪ್ರಯತ್ನ ನಡೆಸಿದ್ದರು.

ತಾಲೂಕಿನ ಗಡಿಗ್ರಾಮ ಜಟ್ಟೂರು, ತೆಲಂಗಾಣ ರಾಜ್ಯದ ಜೀವಣಗಿ ಗ್ರಾಮಗಳ ಮಧ್ಯೆ ಹರಿಯುವ ಮುಲ್ಲಾಮಾರಿ ನದಿಗೆ 192ಮೀಟರ್‌ ಉದ್ದ, ಏಳು ಮೀಟರ್‌ ಎತ್ತರದ ಸೇತುವೆ ನಿರ್ಮಾಣವಾಗಿದೆ. ಬಾಂದಾರ್‌ನಲ್ಲಿ ಮೂರು ಮೀಟರ್‌ ಎತ್ತರದ ವರೆಗೆ ನೀರು ಸಂಗ್ರಹಿಸಲು ಉದ್ದೇಶಿಸಲಾಗಿದೆ. ಇದು ಒಟ್ಟು 70 ಗೇಟುಗಳನ್ನು ಹೊಂದಿದೆ. ಬಾಂದಾರ ನಿರ್ಮಾಣದಿಂದಾಗಿ ಜಟ್ಟೂರ ಗ್ರಾಮದಿಂದ 5.75 ಕಿ.ಮೀ ವರೆಗೆ ಹಿನ್ನೀರು ಸಂಗ್ರಹ ಆಗಲಿದೆ. ಅಲ್ಲದೇ ಒಟ್ಟು 1408.7 ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. 26.6 ಕೋಟಿ ರೂ. ಟೆಂಡರ್‌ದಲ್ಲಿ 23.66 ಕೋಟಿ ರೂ. ವೂತ್ತಕ್ಕೆ ಬೆಂಗಳೂರಿನ ಅಮೃತಾ ಕಂಪನಿ ಗುತ್ತಿಗೆ ಪಡೆದಿತ್ತು. ಒಟ್ಟು 18 ತಿಂಗಳಲ್ಲಿ ಈ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣವಾಗಿದೆ. ಇದರಿಂದಾಗಿ ತಾಲೂಕಿನ ಜಟ್ಟೂರ, ಕರ್ಚಖೇಡ, ಛತ್ರಸಾಲ ಗ್ರಾಮಗಳ ರೈತರು ಹಾಗೂ ತೆಲಂಗಾಣ ರಾಜ್ಯದ ರೈತರಿಗೆ ನೀರಾವರಿ ಬೆಳೆ ಬೆಳೆಯಲು ನೆರವಾಗಲಿದೆ.

ಜಟ್ಟೂರ ಗ್ರಾಮದ ಬಳಿ ಹರಿಯುವ ಮುಲ್ಲಾಮಾರಿ ನದಿಗೆ ನಿರ್ಮಿಸಲಾಗುತ್ತಿದ್ದ ಬ್ಯಾರೇಜ್‌ ಕಾಮಗಾರಿ ಪೂರ್ಣಗೊಂಡಿದ್ದು, ಎಲ್ಲ ಗೇಟ್‌ಗಳನ್ನು ಅಳವಡಿಸಿ ನೀರನ್ನು ತಡೆಹಿಡಿಯಲಾಗಿದೆ. ಬ್ಯಾರೇಜ್‌ ಕಾಮಗಾರಿ ಪೂರ್ಣಗೊಂಡಿದ್ದರಿಂದ ತೆಲಂಗಾಣದ ಗಡಿಭಾಗಕ್ಕೆ ಹೋಗಲು ಹಾಗೂ ನೀರಾವರಿ ಸೌಲಭ್ಯ ಒದಗಿಸಲು ಅನುಕೂಲವಾಗಿದೆ.
ನಾಗಪ್ಪ, ಜೆಇ,
ಸಣ್ಣ ನೀರಾವರಿ ಇಲಾಖೆ

Advertisement

ಬ್ರಿಡ್ಜ್ ಕಮ್‌ ಬ್ಯಾರೇಜ್‌ ನಿರ್ಮಾಣದಿಂದ ಕಡಿಮೆ ಅಂತರದಲ್ಲಿ ತಾಂಡೂರ, ಬಶೀರಾಬಾದ್‌ ನಗರ ಪ್ರದೇಶಗಳಿಗೆ ಸಂಚರಿಸಲು ಹಾಗೂ ತೆಲಂಗಾಣದ ಜೀವಣಗಿ, ಕ್ಯಾದಗೇರಾ, ಬಶಿರಾಬಾದ ಮತ್ತು ಕರ್ನಾಟಕದ ಜಟ್ಟೂರು, ಪೋತಂಗಲ್‌, ಹಲಕೋಡಾ, ಛತ್ರಸಾಲ, ಕರ್ಚಖೇಡ, ನಿಡಗುಂದಾ ಗ್ರಾಮಗಳ ನೀರಾವರಿಗೆ ಅನುಕೂಲವಾಗಲಿದೆ.
ವೆಂಕಟರೆಡ್ಡಿ ಪಾಟೀಲ ಜಟ್ಟೂರ,
ತಾ.ಪಂ ಸದಸ್ಯ, ಶಿರೋಳಿ

ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next