Advertisement

ಹದಿನೈದೇ ದಿನದಲ್ಲಿ ಕನ್ನಡ ಕಲಿತ ಜಪಾನಿಗ

11:27 AM Aug 04, 2018 | Team Udayavani |

ಮಂಗಳೂರು: ಕನ್ನಡ ನಾಡಿನಲ್ಲಿದ್ದೂ ಹಲವರು ಇಂಗ್ಲಿಷ್‌ ವ್ಯಾಮೋಹಿಗಳಾಗಿದ್ದಾರೆ. ಅಂತದ್ದರಲ್ಲಿ ಜಪಾನ್‌ ಪ್ರಜೆಯೊಬ್ಬ ರೇಷ್ಮೆ ಬೆಳೆ ಕುರಿತು ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಬಂದು ಹದಿನೈದೇ ದಿನದಲ್ಲಿ ಕನ್ನಡ ಕಲಿತು ಕನ್ನಡ ಪ್ರೇಮ ಮೆರೆದಿದ್ದಾರೆ! ವಿಶೇಷವೆಂದರೆ ಸ್ಪಷ್ಟ ಕನ್ನಡ ಕಲಿತು ರಾಮನಗರದ ರೇಷ್ಮೆ ಬೆಳೆಗಾರರೊಂದಿಗೆ ಕನ್ನಡದಲ್ಲೇ ವ್ಯವಹರಿಸುವ ಇಚ್ಛೆ ಈ ಯುವಕನದ್ದು.

Advertisement

ಈತನಿಗೆ ಕನ್ನಡ ಕಲಿಸಿದವರು ಮಂಗಳೂರಿನ ಯುವಕ, ಪ್ರಸ್ತುತ ಹೊಸದಿಲ್ಲಿಯ ಡೆಲ್ಲಿ ಕನ್ನಡ ಸೀನಿಯರ್‌ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿರುವ ಅರವಿಂದ ಬಿಜೈ. ಈತ ಇಪ್ಪತ್ತೆರಡು ವರ್ಷದ ಕಝುಕಿ. ಜಪಾನ್‌ನ ಚಿಬಾ ಮೂಲದವರು. ಜಪಾನ್‌ನ ಝೈಕಾ ಕಂಪೆನಿಯ ಮುಖಾಂತರ ರೇಷ್ಮೆ ಕುರಿತು ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದಾರೆ.

ಜಪಾನ್‌ನಿಂದ ಹೊಸದಿಲ್ಲಿಗೆ ಬಂದ ಕಝುಕಿ, ಅಲ್ಲಿನ ಝುಬಾನ್‌ ಭಾಷಾ ಕಲಿಕಾ ಸಂಸ್ಥೆಯಲ್ಲಿ ತನ್ನ ಕನ್ನಡ ಕಲಿಕೆಯ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಅದರಂತೆ ಸಂಸ್ಥೆಯವರು ಅರವಿಂದ ಅವರನ್ನು ಸಂಪರ್ಕಿಸಿ ಆತನಿಗೆ ಕನ್ನಡ ಪಾಠ ಹೇಳಿಕೊಡುವಂತೆ ಮನವಿ ಮಾಡಿದ್ದರು.

ದಿನಕ್ಕೆ ನಾಲ್ಕು ಗಂಟೆಯಂತೆ ಒಟ್ಟು ಹದಿನೈದು ದಿನಗಳ ಕಾಲ ಅರವಿಂದ ಅವರು ಕಝುಕಿ ಅವರಿಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಆತನ ಕಲಿಕಾಸಕ್ತಿ ಹೇಗಿತ್ತೆಂದರೆ ಮೊದಲ ದಿನದಲ್ಲೇ ಕನ್ನಡ ವರ್ಣಮಾಲೆಯ “ಅ’ದಿಂದ “ಳ’ದವರೆಗೆ ಬರೆದು ತೋರಿಸಿದ್ದಾರೆ ಎನ್ನುತ್ತಾರೆ ಅರವಿಂದ್‌.

ಕನ್ನಡದಲ್ಲಿ ಟೈಪಿಂಗ್‌: ಕನ್ನಡ ಟೈಪಿಂಗ್‌ ಕಲಿಯಲು ಮೊಬೈಲ್‌ನಲ್ಲಿ ಲಿಪಿಕಾರ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿ ನುಡಿ ಸಾಫ್ಟ್‌ವೇರ್‌ನ್ನು ಅರವಿಂದ್‌ ಅವರು ಡೌನ್‌ಲೋಡ್‌ ಮಾಡಿ ಕೊಟ್ಟಿದ್ದಾರೆ. ಕಝುಕಿ ಅವರು ಸದ್ಯ ಕನ್ನಡ ಟೈಪಿಂಗ್‌ನೂ° ಕಲಿತಿದ್ದು, ತಮ್ಮ ಮಾರ್ಗದರ್ಶಕ ಅರವಿಂದ್‌ ಅವರೊಂದಿಗೆ ಮೊಬೈಲ್‌ ಮೂಲಕ ಕನ್ನಡದಲ್ಲೇ ಸಂದೇಶ ಸಂವಹನ ನಡೆಸುತ್ತಾರೆ.

Advertisement

ಕನ್ನಡ ಕಲಿಬೇಕೆಂದ ಮೊದಲ ವಿದೇಶಿಗ: ವಿಶೇಷವೆಂದರೆ ಹೊಸದಿಲ್ಲಿಯ ಝುಬಾನ್‌ ಭಾಷಾ ಕಲಿಕಾ ಸಂಸ್ಥೆಯಲ್ಲಿ ಕನ್ನಡ ಕಲಿಸಿ ಎಂದು ಕೇಳಿದ ಮೊದಲ ವಿದೇಶಿಗ ಬಹುಶಃ ಕಝುಕಿ ಅವರಾಗಿದ್ದಾರೆ ಎಂದು ಸಂಸ್ಥೆಯವರೇ ಹೇಳುತ್ತಾರಂತೆ.

ಈ ಸಂಸ್ಥೆಯಲ್ಲಿ ಹೊರ ರಾಜ್ಯ ಅಥವಾ ವಿದೇಶಗಳಿಂದ ಆಗಮಿಸಿದವರಿಗೆ ಭಾಷಾ ಕಲಿಕೆ ತರಬೇತಿಯನ್ನು ನೀಡಲಾಗುತ್ತದೆ. ಉರ್ದು, ಹಿಂದಿ, ಇಂಗ್ಲಿಷ್‌ ಸೇರಿದಂತೆ ವಿವಿಧ ಭಾಷೆಗಳನ್ನು ಇಲ್ಲಿ ಕಲಿಸಲಾಗುತ್ತದೆ. ಆದರೆ ಕನ್ನಡ ಭಾಷೆ ಕಲಿಸಲು ಸಂಪನ್ಮೂಲ ವ್ಯಕ್ತಿಗಳಿಲ್ಲದ ಹಿನ್ನೆಲೆಯಲ್ಲಿ ಅರವಿಂದ ಅವರ ಮೂಲಕ ಕನ್ನಡವನ್ನು ಕಲಿಸಲಾಗಿದೆ.

ಬಸವಣ್ಣನ ವಚನ ತಪ್ಪಿಲ್ಲದೇ ಓದುತ್ತಾರೆ: ಬಸವಣ್ಣನವರ “ಕಳಬೇಡ, ಕೊಲಬೇಡ..ಹುಸಿಯ ನುಡಿಯಲು ಬೇಡ..’ ವಚನವನ್ನು ಕಝುಕಿ ನಿರರ್ಗಳವಾಗಿ ಓದುತ್ತಾರೆ. ಇದನ್ನು ಅರವಿಂದ ಅವರು ತಮ್ಮ ಫೇಸುºಕ್‌ ಖಾತೆಯಲ್ಲಿ ವೀಡಿಯೋ ಸಮೇತ ಅಪ್‌ಲೋಡ್‌ ಮಾಡಿದ್ದಾರೆ.

“ನಮಸ್ಕಾರ’ ಎನ್ನುತ್ತ ಕನ್ನಡ ಮಾತನ್ನು ಆರಂಭಿಸುತ್ತಾರೆ. ಓದು ಮತ್ತು ಬರಹವನ್ನು ಶೀಘ್ರ ಕಲಿತಿರುವ ಕಝುಕಿ ಮಾತನಾಡುವಾಗ ಸ್ವಲ್ಪ ತಡವರಿಸುತ್ತಾರೆ. ಏನೇ ಕೇಳಿದರೂ ಯೋಚನೆ ಮಾಡಿ ಕನ್ನಡದಲ್ಲಿ ಉತ್ತರಿಸುತ್ತಾರೆ ಎನ್ನುತ್ತಾರೆ ಅವರು.

ನಾನು ರೇಷ್ಮೆ ಕುರಿತು ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಬಂದಿದ್ದೇನೆ. ಇಲ್ಲಿನ ವ್ಯಾವಹಾರಿಕ ಭಾಷೆ ಕನ್ನಡವಾದ್ದರಿಂದ ಅದೇ ಭಾಷೆಯಲ್ಲಿ ಜನರೊಂದಿಗೆ ಬೆರೆಯುವ ಇಚ್ಛೆ ನನ್ನದು. ಮುಂದೆ ರಾಮನಗರದಲ್ಲಿ ರೇಷ್ಮೆ ಬೆಳೆ ಕುರಿತು ಅಧ್ಯಯನ ಮಾಡಲಿದ್ದೇನೆ. ರಾಮನಗರದ ರೇಷ್ಮೆ ಬೆಳೆಗಾರ ರೈತರೊಂದಿಗೆ ಕನ್ನಡದಲ್ಲೇ ವ್ಯವಹರಿಸುತ್ತೇನೆ.
-ಕಝುಕಿ, ಕನ್ನಡ ಕಲಿತ ಜಪಾನಿಗ

* ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next