Advertisement

ಜನತಂತ್ರ -ಸಂಸದೀಯ ಸತ್‌ ಸಂಪ್ರದಾಯ

11:07 PM Apr 14, 2021 | Team Udayavani |

ಸ್ವತಂತ್ರ ಭಾರತ ತನ್ನ 75ನೇ ಸಂವತ್ಸರದ ಹೊಸ್ತಿಲಲ್ಲಿ ನಿಂತಿರುವ ಈ ಕಾಲಘಟ್ಟದಲ್ಲಿ ನಮ್ಮ ಪ್ರತಿನಿಧೀಕರಣ ಅಥವಾ ಪರೋಕ್ಷ ಜನತಂತ್ರ ವ್ಯವಸ್ಥೆಯನ್ನೊಮ್ಮೆ ಸಿಂಹಾವಲೋಕನ ಮಾಡಬೇಕಾಗಿದೆ. ಭಾರತ, ಸಂವಿಧಾನಾತ್ಮಕ ನೆಲೆಗಟ್ಟಿನಲ್ಲೇ ಪ್ರಜಾಪ್ರಭುತ್ವವನ್ನು ಅಂಗೀಕರಿಸಿದ ವಿಶ್ವದ ಅತ್ಯಂತ ಹಿರಿಯ ರಾಷ್ಟ್ರ. ಭಾರತೀಯರು ಪ್ರಜಾತಂತ್ರ ವ್ಯವಸ್ಥೆ ನಿಭಾಯಿಸಲು ಅಸಮರ್ಥರು -ಇದು ಬ್ರಿಟಿಷ್‌ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ ಎತ್ತಿದ್ದ ಉದ್ಗಾರ. ಆ ಟೀಕೆಯನ್ನು ಮೆಟ್ಟಿನಿಂತು ನಾವು ಜನತಂತ್ರ ಪಥದಲ್ಲಿ ಸಾಕಷ್ಟು ದೂರ ಸಾಗಿದ್ದೇವೆ ಎಂಬ ತೃಪ್ತಿಯಿದೆ. ಅನಕ್ಷರತೆ, ಬಡತನ, ಜನಸಂಖ್ಯಾ ಬಾಹುಳ್ಯ, ರಾಷ್ಟ್ರ ವೈಶಾಲ್ಯ, ಬಹುಪಕ್ಷ ಪದ್ಧತಿ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯ- ಇವೆಲ್ಲವನ್ನೂ ನಿಭಾಯಿಸಿಕೊಂಡೇ ನಾವು ನಾವಾಗಿ ಉಳಿದಿದ್ದೇವೆ, ಬೆಳೆದಿದ್ದೇವೆ.

Advertisement

ಆದರೆ ಇಲ್ಲಿ ಎಲ್ಲವೂ ಕ್ಷೇಮ ಎಂಬ ಒಕ್ಕಣೆಯನ್ನು ನಾವಿಂದು ಪ್ರಜಾಪ್ರತಿನಿಧಿತ್ವ, ಶಾಸನ ಸಭೆಗಳ ಕಾರ್ಯ ನಿರೂಪಣೆ ಬಗೆಗೆ ಬರೆಯುವಂತಿಲ್ಲ. ನಮ್ಮಲ್ಲಿ ಸ್ವಿಡ್ಜರ್‌ಲ್ಯಾಂಡಿನ ಸಂವಿಧಾನ ನಿರೂಪಿಸಿದ ಯಾವುದೇ ನೇರ ಅಥವಾ ಪ್ರತ್ಯಕ್ಷ ಪ್ರಜಾಪ್ರಭುತ್ವದ ವಿಧಿ ಬಿಂದುಗಳಿಲ್ಲ. ಬದಲಾಗಿ ಚುನಾವಣ ಸಂದರ್ಭ, ಮತ”ದಾನ’ದ ಗುಂಡಿ ಒತ್ತುವ ಪ್ರಕ್ರಿಯೆ ಮುಗಿದ ಬಳಿಕ ಮುಂದಿನ ಪಂಚವಾರ್ಷಿಕ ಅವಧಿಯಲ್ಲಿ ಜನಸಾಮಾನ್ಯರು ಬಹುತೇಕ ಮೂಕ ಪ್ರೇಕ್ಷಕರಂತೆಯೇ ಸರಿ. ಹೊಸದಿಲ್ಲಿಯ ಸಂಸತ್ತಿನಿಂದ ಹಿಡಿದು ಹಳ್ಳಿಯ ಪಂಚಾಯತ್‌ವರೆಗೆ ನಮ್ಮ ಪ್ರತಿನಿಧಿಗಳದ್ದೇ ಕಾರುಬಾರು. ಅಧಿವೇಶನದುದ್ದಕ್ಕೂ ಕಲಾಪದಲ್ಲಿ ಗದ್ದಲ, ಪ್ರತಿಭಟನೆ, ಆಹೋರಾತ್ರಿ ಧರಣಿ, ಕಿರುಚಾಟ, ಅಂಗಿ ಹರಿದಾಟ, ಕೈ ಕೈ ಮಿಲಾಯಿಸುವಿಕೆ, ಅಪಶಬ್ದಗಳ ಧಾರಾಳ ಬಳಕೆ – ಇವೆಲ್ಲವುಗಳನ್ನು ನಮ್ಮ ಸ್ವಾತಂತ್ರ್ಯೋತ್ತರ ಭಾರತದ ಕಿರು ಇತಿಹಾಸ ಧಾರಾಳವಾಗಿ ದಾಖಲಿಸಿದೆ. ಇಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳು ವಾಹನದ ಎರಡು ಗಾಲಿಗಳಂತೆ ಪೂರಕ ಚಲನೆಗೆ ಸಿದ್ಧವಾಗಬೇಕು ಎಂಬ ಜನತಂತ್ರೀಯ ಮೂಲ ಸಿದ್ಧಾಂತದ ಅರಿವು ಜಾರುವ ದಾರಿಯಲ್ಲಿದೆ.

ಆಡಳಿತ ಪಕ್ಷದ ನೇತಾರರಿಗೆ ಮುಖ್ಯವಾಗಿ ಬೇಕಾದುದು ವಿಪಕ್ಷದ ಸಾಲಿನಿಂದ ಬರುವ ಟೀಕೆ ಟಿಪ್ಪಣಿಗಳನ್ನೂ ಸ್ವೀಕರಿಸುವ ಮನೋಭೂಮಿಕೆ. ಕನ್ನಡಿಯ ಮುಂದೆ ನಿಂತಾಗ ನಮ್ಮ ಪ್ರತಿಬಿಂಬ ಸುಂದರವಾಗಿ ಕಾಣಲಿಲ್ಲ ಎಂಬುದಕ್ಕಾಗಿ ಕನ್ನಡಿಯನ್ನೇ ಘಾತಿಸುವ ಕಾರ್ಯಯೋಗ್ಯವಲ್ಲ. ಬಹುಮತವಿದೆ ಎಂದು ತಾನು ಮಾಡಿದ್ದೆಲ್ಲ ಸರಿ, ಆನೆ ನಡೆದದ್ದೇ ಹಾದಿ ಎಂಬ ಧೋರಣೆ ಆಡಳಿ ತಾರೂಢ ಪಕ್ಷದ್ದಾಗಿರಬಾರದು. ಇನ್ನು ಸರಕಾರದ ಓರೆಕೋರೆಗಳನ್ನು ಶಾಸಕರ ಸಭಾಂಗಣದಲ್ಲಿ ಪುಂಖಾನುಪುಂಖವಾಗಿ ಬಿಚ್ಚಿಡುವ ಹಾಗೂ ತನ್ಮೂಲಕ ಜನತೆಯ ಕಷ್ಟಕಾರ್ಪಣ್ಯಗಳನ್ನು ಸದನದಲ್ಲಿ ಆಡಳಿತಾರೂಢ ವ್ಯಕ್ತಿಗಳಿಗೆ ಮನದಟ್ಟು ಮಾಡುವ ಜವಾಬ್ದಾರಿ ವಿಪಕ್ಷದ ಸಾಲಿನವರದು. ಇಲ್ಲಿ “ವಿಪಕ್ಷಗಳು’ ಸದಾ ವಿಪಕ್ಷಗಳೇ ಆಗಿರಬೇಕೇ ಎಂಬುದು ತಾತ್ವಿಕ ಪ್ರಶ್ನೆ.

ಇದರ ಉತ್ತರಕ್ಕೆ ಚಲಿಸಿದಾಗ ವಿಪಕ್ಷಗಳ ಮೂರು ಘನತರವಾದ ಜವಾಬ್ದಾರಿಗಳು ಮಿಂಚುತ್ತವೆ. ಆಡಳಿತ ಪಕ್ಷ ಉತ್ತಮ ಕಾರ್ಯ ನಡೆಸಿದಾಗ ಮೆಚ್ಚುಗೆ ಸೂಚಿಸುವಿಕೆ, ತಪ್ಪು ದಾರಿ ತುಳಿದಾಗ ಎಚ್ಚರಿಸುವ ಕಾರ್ಯ, ಅದೇ ರೀತಿ ಕವಲು ದಾರಿಯಲ್ಲಿದ್ದಾಗ ಸುಯೋಗ್ಯ ಸಲಹೆ ನೀಡುವ ತ್ರಿವಿಧ ಪಾತ್ರ ವಿಪಕ್ಷಗಳಿಗೆ ಇವೆ. ಈ ಜನತಂತ್ರೀಯ ಸೂತ್ರಗಳೆಲ್ಲವೂ ಈ ದಿನಗಳಲ್ಲಿ ಶಾಸನ ಸಭಾಂಗಣದೊಳಗೆ ಆವಿಯಾಗುತ್ತಿದ್ದು, ಸದನದ ಬಾವಿ ರಣಾಂಗಣ ವಾಗುತ್ತಿರುವುದು ನಮ್ಮ ವ್ಯವಸ್ಥೆಯ ಮುಂದಿರುವ ಗಂಭೀರ ಸವಾಲು.

ಸಂಸತ್ತಿನಲ್ಲಿ ಆಡಳಿತ ಪಕ್ಷದ ಸಾಲಿನಲ್ಲಿ ಭಾರತದ ಪ್ರಪ್ರಥಮ ಪ್ರಧಾನಿ ಆಗಿದ್ದ ಪಂಡಿತ್‌ ನೆಹರೂ ಭಾಗವಹಿಸಿದ್ದ ಆ ದಿನಗಳ ಬಗೆಗೆ ಒಂದಿಷ್ಟು ಕ್ಷಕಿರಣ ಹಾಯಿಸಬಹುದು. ವಿಪಕ್ಷಗಳ ಸಾಲಿನಿಂದ ಆಚಾರ್ಯ ಕೃಪಲಾನಿ, ರಾಮಮ ನೋಹರ ಲೋಹಿಯಾ, ಪ್ರೊ| ಮಧು ದಂಡವತೆ, ಭೂಪೇಶ ಗುಪ್ತಾ, ಎಸ್‌.ಎ. ಡಾಂಗೆ, ಅಟಲ್‌ ಬಿಹಾರಿ ವಾಜಪೇಯಿ, ಪ್ರೊ| ಬಲರಾಜ್‌ ಮಧೋ ಕ್‌- ಹೀಗೆ ಸಾಲು ಸಾಲು ವಿವಿಧ ಪಕ್ಷದ ಮುತ್ಸದ್ಧಿಗಳು ಟೀಕಾ ಪ್ರಹಾರ ನಡೆಸುವಾಗ ನೆಹರೂ ಸದನದಲ್ಲಿ ಹಾಜರಿದ್ದು ಆಲಿಸುತ್ತಿದ್ದರು. ಅದೇ ರೀತಿ ಗುಲ್ಜಾರಿಲಾಲ್‌ ನಂದಾ, ಲಾಲ್‌ ಬಹದ್ದೂರ್‌ ಶಾಸ್ತ್ರಿ, ವೈ.ಬಿ. ಚವ್ಹಾಣ್‌ ಅಂಥವರು ಆಡಳಿ ತದ ಮೇಲ್ಪಂಕ್ತಿ ಹಾಕಿದುದೂ ಇದೆ. ಕಾಶ್ಮೀರ ಸಮಸ್ಯೆ, ಗೋವಾ ವಿಮೋಚನೆ, 1962ರ ಚೀನಾ ದಾಳಿಯನ್ನು ನಿಭಾಯಿಸಿದ ಪರಿಯ ಬಗ್ಗೆ ಕೇವಲ ವಿಪಕ್ಷಗಳು ಮಾತ್ರವಲ್ಲ ಆಡಳಿತ ಪಕ್ಷದ ಸಾಲಿನಿಂ ದಲೂ ಪ್ರಬಲ ಟೀಕೆಗಳು ಹೊಮ್ಮಿದುದು ಈಗ ಇತಿಹಾಸ.

Advertisement

ವಿಪಕ್ಷಗಳ ಪ್ರಧಾನ ಭೂಮಿಕೆ ಇರುವುದು ಸರಕಾರದ ಚುಕ್ಕಾಣಿ ಹಿಡಿದವರು ದಾರಿ ತಪ್ಪದಂತೆ ಎಚ್ಚರ ಕಾಯ್ದುಕೊಳ್ಳುವುದು. ಬ್ರಿಟನ್‌ನಲ್ಲಿ ನೆರಳು ಸಚಿವ ಸಂಪುಟ (Shadow cabinet) ಎಂಬ ವಿಪಕ್ಷೀಯ ಸಾಂಪ್ರದಾಯಿಕ ವ್ಯವಸ್ಥೆಯಿದೆ. ಟ್ರೆಜರಿ ಬೆಂಚಿನ ಒಬ್ಬೊಬ್ಬ ಸಚಿವನ ಕಾರ್ಯ ವಿಧಾನದ ಮೇಲೆಯೂ ಕಣ್ಣಿರಿಸಲು ದ್ವಿಪಕ್ಷ ಪದ್ಧತಿಯ ಆ ರಾಷ್ಟ್ರ ನಿರೂಪಿಸಿಕೊಂಡ ಬಗೆ ಅದು. ವಿಪಕ್ಷಗಳ ಪಾತ್ರ ಆಡಳಿತ ವ್ಯವಸ್ಥೆ ಹದಗೆಟ್ಟು ಜಾರುವ ದಾರಿಯಲ್ಲಿದ್ದಾಗ ಬ್ರೇಕ್‌ನಂತೆ ಇರಬೇಕೇ ವಿನಾ ಉತ್ತಮ ಆಡಳಿತದ ಏರುಗತಿಯಲ್ಲಿದ್ದಾಗ “ತಡೆ’ ಒಡ್ಡುವ ಕಾರ್ಯತಂತ್ರ ಎನಿಸಬಾರದು. ಪ್ರತಿನಿಧಿತ್ವವನ್ನು ಮರೆತು “ಕೋರಂ’ ಕೂಡಾ ಇಲ್ಲದಷ್ಟು ಸದಸ್ಯರ ಗೈರು ಹಾಜರಿ, ಕೇವಲ ಸಹಿ ನಮೂದಿಸಿ ಸದನದಿಂದ ನಿರ್ಗಮನ ಹಾಗೂ ಕೋಲಾಹಲ ಸೃಜಿಸಿ ಅಮೂಲ್ಯ ಸಮಯ ನುಂಗುವ ಪರಿ- ಇವೆಲ್ಲವೂ ನಮ್ಮ ವ್ಯವಸ್ಥೆಯ ಗಂಭೀರ, ಅನಪೇಕ್ಷಣೀಯ ಇತಿ ವೃತ್ತಾಂತಗಳು. ಲಕ್ಷಗಳಲ್ಲಿ ಅಲ್ಲ ಕೋಟಿ ರೂಪಾಯಿಗಳಲ್ಲಿ ತೆರಿಗೆಯ, ಜನಸಾಮಾನ್ಯರ, ಖಜಾನೆಯ ಹಣ, ಕಲಾಪಗಳನ್ನು ಬಲಿ ತೆಗೆದುಕೊಳ್ಳುವಿಕೆಯಿಂದ ನೀರುಪಾಲಾಗುತ್ತಿ ರುವುದು ವಾಸ್ತವಿಕ ಕಟುಸತ್ಯ.

ಈ ಬಗ್ಗೆ ಸಾರ್ವಜನಿಕ ದಿವ್ಯಮೌನ, ಇದೊಂದು ಮಾಮೂಲು ಸಂಗತಿ ಎನ್ನುವ ಚತುರ್ಥ ರಂಗ- ಮಾಧ್ಯಮಗಳ ದಿವ್ಯ ನಿರ್ಲಕ್ಷ್ಯ. ಇವೆಲ್ಲವೂ 75ರ ಪ್ರೌಢಿಮೆಯ ನಮ್ಮ ಜನತಂತ್ರ ವ್ಯವಸ್ಥೆಗೆ ಶೋಭೆಯಲ್ಲ. ಕೇಂದ್ರ ಹಾಗೂ ರಾಜ್ಯಗಳ ಸದನಗಳ ಸಭಾಪತಿ ಸ್ಥಾನವನ್ನು ಅಲಂಕರಿಸಿದವರೂ ಸಮದೃಷ್ಟಿಯ, ಸಂಸದೀಯ ಪರಿಜ್ಞಾನದ, ಮಿತ-ಚತುರ ಭಾಷಿ “ಸ್ಪೀಕರ್‌’ ಆಗಿರಬೇಕು. ಬಜೆಟ್‌ ಮೇಲಿನ ಚರ್ಚೆ, ವಂದನಾ ನಿರ್ಣಯ, ಪ್ರಶ್ನೋತ್ತರ, ನಿಲುವಳಿ ಸೂಚನೆ, ವಿಶೇಷ ಚರ್ಚಾ ಸೂಚನೆ , ಶೂನ್ಯ ವೇಳೆ – ಹೀಗೆ ಒಂದಲ್ಲ ಹಲವು ಸಂಸದೀಯ ಅವಕಾಶಗಳ ಜತೆಗೇ ಅವಿಶ್ವಾಸ ಠರಾವಿನ ವರೆಗಿನ ಅಸ್ತ ಪ್ರಯೋಗಕ್ಕೆ ವಿಪಕ್ಷಗಳಿಗೆ ವಿಪುಲ ಅವಕಾಶವಿದೆ. ಆದರೆ ಅವೆಲ್ಲವುಗಳನ್ನು ಜಾಣ್ಮೆಯಿಂದ ಉಪಯೋಗಿಸುವ ಸಂಸದೀಯ ಪಟುತ್ವ ಮಾತ್ರ ಇಂದಿನ ಹಾಗೂ ಮುಂದಿನ ಆವಶ್ಯಕತೆ. ಬದಲಾಗಿ ಕಲಾಪ ನುಂಗುವ, ಸಾರ್ವಜನಿಕ ಹಿತಕ್ಕೆ ಒಂದಿ ನಿತೂ ಪ್ರಯೋಜನಕರವಲ್ಲದ ಖಜಾನೆಯ ಹಣ ಮತ್ತು ಅಮೂಲ್ಯ ಸಮಯ ಪೋಲು ಮಾಡುವ ಪರಿ ತೀರಾ ಅನಪೇಕ್ಷಣೀಯ. ಇದೇ ತೆರದಲ್ಲಿ ರಾಜಕೀಯ ವಾಸ್ತವಿಕತೆ ಬರಲಿರುವ ನಾಳೆಗಳ “ಸದನ-ಸಂಸ್ಕಾರ’ಗಳೂ ಮುಂದುವರಿದರೆ ಸಮಗ್ರ ಸಂಸದೀಯ ವ್ಯವಸ್ಥೆಯೇ ಬಹುತೇಕ “ಶೂನ್ಯ ಸಂಪಾದನೆ’ಯ ಪಥಗಾಮಿಯಾದೀತು.

– ಡಾ| ಪಿ. ಅನಂತಕೃಷ್ಣ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next