Advertisement

ಜನತಾ ಕರ್ಫ್ಯೂ: ಕಾರ್ಕಳದಲ್ಲಿ ಅಭೂತಪೂರ್ವ ಬೆಂಬಲ

11:28 PM Mar 22, 2020 | Sriram |

ಕಾರ್ಕಳ: ಕೋವಿಡ್‌ 19 ವೈರಸ್‌ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ಜನತಾ ಕರ್ಫ್ಯೂಗೆ ರವಿವಾರ ಕಾರ್ಕಳದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸಂಪೂರ್ಣ ಸ್ತಬ್ಧ ವಾಗಿತ್ತು. ಸ್ವಯಂ ಪ್ರೇರಣೆಯಿಂದ ಬೆಂಬಲ ಸೂಚಿಸಿದ ನಾಗರಿಕರು ಮನೆಯಲ್ಲೇ ಹೆಚ್ಚಿನ ಕಾಲ ಕಳೆದರು.

Advertisement

ನಗರ ವ್ಯಾಪ್ತಿಯ ಬಂಗ್ಲೆಗುಡ್ಡೆಯಿಂದ ಕರಿಯಕಲ್ಲುವರೆಗಿನ ಹೊಟೇಲ್‌, ಅಂಗಡಿ- ಮುಂಗಟ್ಟು ಬಂದ್‌ ಆಗಿತ್ತು. ಪೆಟ್ರೋಲ್‌ ಬಂಕ್‌ಗಳು ಕೂಡ ಬಂದ್‌ ಆಗಿದ್ದರೆ, ನಗರದಲ್ಲಿ ಒಂದೆರಡು ಮೆಡಿಕಲ್‌ ಶಾಪ್‌ ತೆರೆದಿತ್ತು. ನಿತ್ಯ ಜನರಿಂದ ಗಿಜಿಗುಡುತ್ತಿದ್ದ ತರಕಾರಿ ಹಾಗೂ ಮೀನಿನ ಮಾರ್ಕೆಟ್‌, ಬಾರ್‌, ವೈನ್‌ ಶಾಪ್‌, ಬೇಕರಿ, ಚಿನ್ನಾಭರಣ ಮಳಿಗೆ, ಹೂವಿನ-ಹಣ್ಣಿನ ಅಂಗಡಿಗಳು ಮುಚ್ಚಿದ್ದವು. ಮುಂಜಾನೆ ವೇಳೆ ಎಂದಿನಂತೆ ಪತ್ರಿಕೆ, ಹಾಲು ದೊರೆಯುತ್ತಿದ್ದರೂ ಅಷ್ಟೇ ವೇಗವಾಗಿ ಸ್ಥಗಿತಗೊಂಡಿತು.

ಬಿಕೋ ಎನ್ನುತ್ತಿದ್ದ
ಬಸ್‌ ನಿಲ್ದಾಣ- ರಸ್ತೆ
ಕಾರ್ಕಳ ನಗರದ ಬಸ್‌ ನಿಲ್ದಾಣ ಬಸ್‌, ಪ್ರಯಾಣಿಕರಿಲ್ಲದೇ ಖಾಲಿ ಖಾಲಿಯಾಗಿತ್ತು. ರಸ್ತೆಗಳು ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು. ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿ ತಮ್ಮ ಸೇವೆ ಸ್ಥಗಿತಗೊಳಿಸಿದ್ದರು.

ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಬಾಹುಬಲಿ ಗೋಮಟೇಶ್ವರ ಬೆಟ್ಟ, ಚತುರ್ಮುಖ ಬಸದಿ, ಕೋಟಿ-ಚೆನ್ನಯ ಥೀಮ್‌ ಪಾರ್ಕ್‌, ಆನೆಕೆರೆ ಪಾರ್ಕ್‌, ಸ್ವಿಮ್ಮಿಂಗ್‌ ಪೂಲ್‌, ಥಿಯೇಟರ್‌ಗಳನ್ನು ಮಾ. 17ರಂದೇ ಪುರಸಭೆ ಬಂದ್‌ ಮಾಡಿದ ಹಿನ್ನೆಲೆಯಲ್ಲಿ ಆ ಪ್ರದೇಶಗಳತ್ತಲೂ ಜನರು ಆಗಮಿಸಿಲ್ಲ.

ರವಿವಾರ ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್‌ ಆಗಲಿದೆ ಎಂಬ ಹಿನ್ನೆಲೆಯಲ್ಲಿ ಶನಿವಾರವೇ ದಿನಸಿ ಸಾಮಗ್ರಿ, ಅಗತ್ಯ ವಸ್ತುಗಳನ್ನು ಪಡೆಯಲು ಜನತೆ ಹೆಚ್ಚು ಉತ್ಸುಕ ರಾಗಿರುವುದು ಕಂಡುಬಂತು. ವಾರಗಟ್ಟಲೇ ಅಂಗಡಿಗಳು ಬಂದ್‌ ಆಗಲಿವೆ ಎಂಬ ಆತಂಕ ದಿಂದ ತಿಂಗಳಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿಯನ್ನು ಪಡೆಯುತ್ತಿರುವ ದೃಶ್ಯವೂ ಶನಿವಾರ ಕಂಡುಬಂತು. ಹೀಗಾಗಿ ನಗರದಲ್ಲಿ ಜನಸಂದಣಿ ಹೆಚ್ಚಿತ್ತು.

Advertisement

ದೇಗುಲದಲ್ಲಿ ತೀರ್ಥ ಪ್ರಸಾದ ಸ್ಥಗಿತ
ಮುಜರಾಯಿ ಇಲಾಖೆಗೊಳಪಡುವ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅನಂತಶಯನ ಶ್ರೀ ಅನಂತಪದ್ಮನಾಭ ದೇವಸ್ಥಾನ, ಮಾರಿಗುಡಿ ದೇವಸ್ಥಾನ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ತೀರ್ಥ, ಪ್ರಸಾದ ವಿತರಣೆಯನ್ನು ಸ್ಥಗಿತಗೊಳಿಸಲಾಗಿತ್ತು.

ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು.ವಿದೇಶದಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗೆ ಊರಿಗೆ ಬಂದವರು ಮತ್ತು ಪದೇ ಪದೇ ವಿದೇಶಕ್ಕೆ ಭೇಟಿ ನೀಡಿ ಬರುವವರು 14 ದಿನಗಳ ಕಾಲ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಬಾರದು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಕೇಳಿಬಂತು.

ವೈನ್‌ ಶಾಪ್‌ಗೆ ಮುಗಿಬಿದ್ದ ಮದ್ಯಪ್ರಿಯರು
ಶನಿವಾರ ಸಂಜೆ 6 ಗಂಟೆಗೆ ಬಾರ್‌ ಬಂದಾದ ಹಿನ್ನೆಲೆ ಮತ್ತು ರವಿವಾರ ಮದ್ಯ ಸಿಗಲ್ಲ ಎಂಬ ನಿಟ್ಟಿನಲ್ಲಿ ಶನಿವಾರ ವೈನ್‌ ಶಾಪ್‌ಗ್ಳತ್ತ ಜನ ಮುಗಿಬಿದ್ದು ಮದ್ಯ ಖರೀದಿಯಲ್ಲಿ ತೊಡಗಿದ್ದರು.

ಬೆಂಬಲ
ಪ್ರಧಾನ ಮಂತ್ರಿಯವರ ಕರೆಗೆ ಓಗೊಟ್ಟ ಜನತೆ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇದರಿಂದ ಕೋವಿಡ್‌ 19 ವೈರಾಣು ಸರಪಳಿ ತಡೆಯಲು ಸಾಧ್ಯವಿದ್ದು, ಮುಂದಿನ ದಿನಗಳಲ್ಲೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
-ಮಹಾವೀರ ಹೆಗ್ಡೆ,
ಬಿಜೆಪಿ ಕ್ಷೇತ್ರಾಧ್ಯಕ್ಷರು, ಕಾರ್ಕಳ

ಸೇವೆ ಸ್ತುತ್ಯರ್ಹ
ಕೋವಿಡ್‌ 19 ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಜಾಗೃತಿ ಮೂಡಿಸುವಲ್ಲಿ ಜನತಾ ಕರ್ಫ್ಯೂ ಒಂದೊಳ್ಳೆಯ ಹೆಜ್ಜೆ. ಸರಕಾರ ಮುಂದಿನ ಪರಿಸ್ಥಿತಿ ತಿಳಿದುಕೊಂಡು ಇಂತಹದ್ದೇ ಪರಿಣಾಮಕಾರಿ ಕಾರ್ಯಸೂಚಿ ನೀಡಬೇಕು. ವೈದ್ಯರ, ದಾದಿಯರ, ಆರೋಗ್ಯ ಇಲಾಖೆಯವರ ಸೇವೆ ಸ್ತುತ್ಯರ್ಹ. ಸಮಾಜ ಅವರ ಕಾರ್ಯವನ್ನು ಅಭಿನಂದಿಸಬೇಕು.
-ಬಿಪಿನ್‌ ಚಂದ್ರಪಾಲ್‌,
ಕಾಂಗ್ರೆಸ್‌ ವಕ್ತಾರರು

ಪರಿಣಾಮಕಾರಿ
ಮಹಾಮಾರಿ ಕೊರೊನಾದಿಂದಾಗಿ ಚೀನಾ, ಇಟಲಿ ಮೊದಲಾದ ದೇಶಗಳು ತತ್ತರಿಸಿ ಹೋಗಿವೆ. ಭಾರತದಲ್ಲೂ ಕೋವಿಡ್‌ 19 ಭೀತಿ ಎದುರಾಗುತ್ತಿರುವ ಸಂದರ್ಭ ದೇಶವನ್ನು ಕೋವಿಡ್‌ 19ದಿಂದ ಮುಕ್ತವಾಗಿಸುವ ನಿಟ್ಟಿನಲ್ಲಿ ಜನತಾ ಕರ್ಫ್ಯೂನಂತ ನಿರ್ಧಾರ ಬಹಳ ಪರಿಣಾಮಕಾರಿ.
-ವೇದವ್ಯಾಸ ನಾಯಕ್‌,
ಅಧ್ಯಕ್ಷರು, ಜೆಡಿಎಸ್‌ ಕಾರ್ಕಳ

ಕೋವಿಡ್‌ 19 ನಿರ್ಮೂಲನೆಗೆ ಪಣ
ಕೋವಿಡ್‌ 19 ನಿರ್ಮೂಲನೆಗೆ ಪಣ ತೊಟ್ಟ ಕಾರ್ಕಳದ ಜನತೆ ರವಿವಾರ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಮನೆಯಲ್ಲೇ ಕಾಲ ಕಳೆದರು. ಮಿಯ್ನಾರು, ದುರ್ಗ, ಸಾಣೂರು, ಅಯ್ಯಪ್ಪ ನಗರ, ಜೋಡುರಸ್ತೆ, ಜೋಡುಕಟ್ಟೆ, ಜಯಂತಿನಗರ ಜಂಕ್ಷನ್‌ಗಳಲ್ಲಿ ಜನ ಸಂಚಾರ ಇರಲಿಲ್ಲ. ಉಳಿದಂತೆ ಪೇಟೆಯತ್ತ ಜನ ಮುಖ ಮಾಡಲೇ ಇಲ್ಲ.

ವೃತ್ತಿಪರತೆ ಮೆರೆದ ವೈದ್ಯರು-ದಾದಿಯರು
ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ವಿರಳವಾಗಿತ್ತು. ಆದರೂ ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು, ಆರೋಗ್ಯ ಇಲಾಖೆಯ ಸಿಬಂದಿ ಕಾರ್ಯನಿರ್ವಹಿಸುವ ಮೂಲಕ ವೃತ್ತಿಪರತೆ ಮೆರೆದರು. ಈ ನಿಟ್ಟಿನಲ್ಲಿ ವೈದ್ಯರ, ಆಸ್ಪತ್ರೆ ಸಿಬಂದಿ ಕಾರ್ಯಕ್ಕೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗುತ್ತಿತ್ತು.

ಅಜೆಕಾರು ಸಂಪೂರ್ಣ ಬಂದ್‌
ಅಜೆಕಾರು: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಅಜೆಕಾರು ಪರಿಸರದಲ್ಲಿ ವ್ಯಾಪಕ ಬೆಂಬಲ ವ್ಯಕ್ತಪಡಿಸಿ ಸಂಪೂರ್ಣ ಬಂದ್‌ ನಡೆಸಲಾಗಿದೆ.
ಅಜೆಕಾರು ಪೇಟೆಯ ಎಲ್ಲ ಅಂಗಡಿ, ಹೊಟೇಲ್‌ಗ‌ಳು ಬಂದ್‌ ಆಗಿದ್ದವು. ಆಟೋರಿಕ್ಷಾಗಳು ರಸ್ತೆಗಿಳಿಯದೆ ಬೆಂಬಲ ನೀಡಿದರು.

ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬಂದಿ ಕರ್ತವ್ಯ ನಿರತರಾಗಿದ್ದರು; ಆಸ್ಪತ್ರೆಯಲ್ಲಿ ಬೆರಳೆಣಿಕೆಯ ರೋಗಿಗಳಿದ್ದರು.

ಪೊಲೀಸ್‌ ವಾಹನಗಳು ಪೇಟೆ ಹಾಗೂ ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಗಸ್ತು ತಿರುಗುತ್ತಿದ್ದವು.ಅಜೆಕಾರು, ಅಂಡಾರು, ಶಿರ್ಲಾಲು, ಕೆರ್ವಾಶೆ, ಮುಂಡ್ಲಿ, ಮುನಿಯಾಲು, ವರಂಗ, ದೊಂಡೇರಂಗಡಿ, ಕಡ್ತಲ, ಎಣ್ಣೆಹೊಳೆ, ಹಿರ್ಗಾನ ಸೇರಿದಂತೆ ಎಲ್ಲ ಗ್ರಾಮೀಣ ಭಾಗಗಳಲ್ಲಿಯೂ ಸಂಪೂರ್ಣ ಬಂದ್‌ ವಾತಾವರಣವಿತ್ತು. ಕೆಲವೇ ಕೆಲವು ದ್ವಿಚಕ್ರ ವಾಹನಗಳು ಸಂಚಾರ ನಡೆಸುತ್ತಿದ್ದವು.ಬೆಳಗ್ಗೆ ಹಾಲು, ಮೆಡಿಕಲ್‌, ಪತ್ರಿಕಾ ಸ್ಟಾಲ್‌ಗ‌ಳು ತೆರೆದಿದ್ದು, ಅನಂತರ ಬಾಗಿಲು ಮುಚ್ಚಿದ್ದವು.ಗ್ರಾಮೀಣ ಭಾಗಗಳಲ್ಲಿ ಜನರು ಮನೆಯಿಂದ ಹೊರಬಾರದೆ ಜನತಾ ಕರ್ಫ್ಯೂಗೆ ಬೆಂಬಲ ನೀಡಿದರು.

ಬಜಗೋಳಿ ಪೇಟೆ ಸಂಪೂರ್ಣ ಸ್ತಬ್ಧ
ಬಜಗೋಳಿ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಬಜಗೋಳಿ ಪೇಟೆ ಹಾಗೂ ಸುತ್ತಮುತ್ತಲಿನ ಮಾಳ, ಹೊಸ್ಮಾರ್‌ ಮುಡಾರು, ಈದು, ನಲ್ಲೂರು ಗ್ರಾಮೀಣ ಭಾಗಗಳಲ್ಲಿಯೂ ಉತ್ತಮ ರೀತಿಯಲ್ಲಿ ಸಾರ್ವಜನಿಕರು ಸ್ಪಂದಿಸಿದ್ದು ಸಾರ್ವಜನಿಕರು ಮನೆಯಿಂದಲೇ ಹೊರಗೆ ಬರದೆ ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲವನ್ನು ನೀಡಿದ್ದಾರೆ. ಬಜಗೋಳಿ ಪೇಟೆಯು ಮೊದಲ ಬಾರಿಗೆ ಜನಸಂಚಾರವಿಲ್ಲದೆ ಸ್ತಬ್ಧಗೊಂಡಿತ್ತು.

ಜನತಾ ಕರ್ಫ್ಯೂಗೆ ಜನರು, ಉದ್ಯಮಿಗಳು, ಸಾರಿಗೆ ವಲಯ, ಅಂಗಡಿ ಮುಂಗಟ್ಟು, ಮಾರುಕಟ್ಟೆ, ಹೋಟೆಲ್‌ ಇತ್ಯಾದಿ ವಲಯಗಳ ಸಹಕಾರ-ಬೆಂಬಲವನ್ನು ಉತ್ತಮವಾಗಿ ನೀಡಿದ್ದರು.

ಬಿಕೊ ಅನ್ನುತ್ತಿದ್ದ ರಸ್ತೆಗಳು, ವಾಹನಗಳು ಇಲ್ಲದೆ ರಸ್ತೆಗಳು ಖಾಲಿ ಖಾಲಿಯಾಗಿದ್ದವು.

ಇಡೀ ದೇಶ ಸ್ತಬ್ಧವಾಗಿರಬೇಕಾದರೆ ಬೆಳಗ್ಗಿನಿಂದ ಸಂಜೆವರೆಗೆ ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಈದು ಪ್ರಾಥಮಿಕ ಆರೋಗ್ಯ ಕೇಂದ್ರ, ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂದಿನಂತೆ ಸೇವೆಯಲ್ಲಿ ವೈದ್ಯರು, ನರ್ಸ್‌, ನಿರತರಾಗಿದ್ದರು.

ಜನತಾ ಕರ್ಫ್ಯೂಗೆ ಎಲ್ಲವೂ ಸ್ತಬ್ಧಗೊಂಡ ಕಾರಣ ಜನ ಮನೆಯಿಂದ ಹೊರಬರದೆ ಇಡೀ ದಿನದ ಟೈಮ್‌ಪಾಸ್‌ಗೆ ಜನರು ಪೇಪರ್‌ ಓದಿದರು ಹಾಗೂ ಕೆಲವರು ಮನೆಯಲ್ಲೇ ಕಾಲ ಕಳೆದರು. ಮಕ್ಕಳು ಒಳಾಂಗಣ ಆಟಗಳ ಮೂಲಕ ಕಾಲ ಕಳೆದರು. ಮಕ್ಕಳನ್ನು ಪೋಷಕರು ಹೊರ ಹೋಗದಂತೆ ಎಚ್ಚರಿಕೆ ವಹಿಸಿದ್ದರು.

ಯಾವತ್ತು ಕೂಡ ಸೇವೆಗೆ ರಜೆ ಮಾಡದ ಆಟೋ ಚಾಲಕರು, ಬಸ್‌ ಚಾಲಕರು, ನಿರ್ವಾಹಕರು ಅಕ್ಷರಶಃ ಮನೆಯಲ್ಲೇ ಇದ್ದರು.

ಜನತಾ ಕರ್ಫ್ಯೂ: ಹೆಬ್ರಿ ಪರಿಸರ ಸಂಪೂರ್ಣ ಬಂದ್‌
ಹೆಬ್ರಿ: ಜನತಾ ಕರ್ಫ್ಯೂ ಕರೆಗೆ ಹೆಬ್ರಿ ಪರಿಸರದಲ್ಲಿ ಸಾರ್ವತ್ರಿಕ ಬೆಂಬಲ ವ್ಯಕ್ತವಾಗಿದ್ದು ಸಂಪೂರ್ಣ ಬಂದ್‌ ಆಗಿತ್ತು.ರವಿವಾರ ಬೆಳಗ್ಗಿನಿಂದಲೆ ಹೆಬ್ರಿ ಸುತ್ತಮುತ್ತಲಿನ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದು, ರಿಕ್ಷಾ, ಕಾರು, ಬಸ್‌ ಸಹಿತ ಯಾವುದೇ ವಾಹನ ಗಳು ರಸ್ತೆಗಿಳಿಯದೆ ಬೆಂಬಲ ವ್ಯಕ್ತ ಪಡಿಸಿವೆ. ಹೆಬ್ರಿ ತಾಲೂಕಿನ ಮುದ್ರಾಡಿ, ವರಂಗ, ಸೋಮೇಶ್ವರ, ಕುಚ್ಚಾರು, ಬೇಳಂಜೆ, ಶಿವಪುರ, ಕಬ್ಬಿನಾಲೆ, ಚಾರ, ಮಡಾಮಕ್ಕಿ, ಬೆಳ್ವೆ ಸುತ್ತಮುತ್ತಲಿನ ಜನಜೀವನ ಸಂಪೂರ್ಣ ಸ್ತಬ್ಧವಾಗಿದ್ದು ಜನ ಮನೆಯೊಳಗಿದ್ದೇ ಕುಟುಂಬದ ಜತೆ ಕಾಲ ಕಳೆದರು.

ಇದುವರೆಗೆ ಇಂತಹ ಬಂದ್‌ ನಡೆದಿರಲಿಲ್ಲ. ಯಾವುದೇ ಪೊಲೀಸ್‌ ಬಂದೋಬಸ್ತ್ ಇಲ್ಲದೆ ಜನರು ಸ್ವಯಂ ಪ್ರೇರಿತವಾಗಿ ಬಂದ್‌ ನಡೆಸಿದ್ದು ಇತಿಹಾಸದಲ್ಲಿ ಮೊದಲು. ಜನಜೀವನ ಕಷ್ಟವಾದರೂ ಕೊರೊನಾ ವೈರಸ್‌ನಿಂದ ಬಚಾವ್‌ ಆಗಲೂ ಇಂತ ಕರ್ಫ್ಯೂ ಇನ್ನು ಅಗತ್ಯವಿದೆ ಎಂದು ಹೆಬ್ರಿ ಪರಿಸರದ ಜನಸಾಮನ್ಯರು ಮಾತನಾಡುತ್ತಿದ್ದು ಗಮನಕ್ಕೆ ಬಂತು.

ಬಿಕೋ ಎಂದ ರಸ್ತೆಗಳು
ಜನ ಹಾಗೂ ವಾಹನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮೆಡಿಕಲ್‌ ಶಾಪ್‌ಗ್ಳು, ಆಸ್ಪತ್ರೆಗಳು, ಖಾಸಗಿ ಕ್ಲಿನಿಕ್‌ಗಳು ತೆರದಿದ್ದವು. ಸಮುದಾಯ ಆರೋಗ್ಯ ಕೇಂದ್ರದಲ್ಲಿ 15 ರೋಗಿಗಳು ತುರ್ತು ಚಿಕಿತ್ಸೆಗಾಗಿ ಬಂದಿದ್ದು ಬಿಟ್ಟರೆ ಆಸ್ಪತ್ರೆ ಕೂಡ ಬಿಕೋ ಎನ್ನುತ್ತಿತ್ತು.

ಸಕಾಲಿಕ ನಿರ್ಧಾರ
ಕೋವಿಡ್‌ 19 ಬಗ್ಗೆ ನಮ್ಮ ದೇಶದಲ್ಲಿ ಇಂದು ತೆಗೆದುಕೊಂಡ ನಿರ್ಧಾರ ಸಕಾಲಿಕ. ಇದಕ್ಕೆ ಜನರು ಬೆಂಬಲ ನೀಡಿದ್ದಾರೆ. ಆದರೆ ಜನಸಾಮಾನ್ಯರ ಜನಜೀವನ ಅಸ್ತವ್ಯಸ್ತವಾಗುವುದರ ಜತೆಗೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅಂತಹವರಿಗೆ ಒಂದು ಪ್ಯಾಕೇಜ್‌ ನೀಡಿದರೂ ಉತ್ತಮ.
-ಎಂ. ಮಂಜುನಾಥ ಪೂಜಾರಿ,
ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌,ಹೆಬ್ರಿ

ಐತಿಹಾಸಿಕ
ಇವತ್ತಿನ ನಿರ್ಧಾರ ಐತಿಹಾಸಿಕವಾಗಿದೆ. ಕೋವಿಡ್‌ 19 ವಿರುದ್ಧ ಸ್ವಯಂಪ್ರೇರಿತವಾಗಿ ಮುಂದಾಗಿರುವುದು ಮೋದಿಯವರ ನಿರ್ಧಾರಕ್ಕೆ ಬೆಂಬಲವಾಗಿ ನಿಂತಿರುವುದು ಸಂತೋಷದ ಸಂಗತಿ. ಹೆಬ್ರಿ ಇತಿಹಾಸದಲ್ಲಿ ಮೊದಲ ಬಾರಿಗೆ ಮಧ್ಯರಾತ್ರಿಯ ವಾತಾವರಣ ಇಂದು ಹಗಲಿಡೀ ಇತ್ತು.
-ಸುಧಾಕರ್‌ ಹೆಗ್ಡೆ,
ಅಧ್ಯಕ್ಷರು, ಬಿಜೆಪಿ ಸ್ಥಾನೀಯ ಸಮಿತಿ, ಹೆಬ್ರಿ

Advertisement

Udayavani is now on Telegram. Click here to join our channel and stay updated with the latest news.

Next