Advertisement

ವಿಧಾನ ಪರಿಷತ್ ಅಭ್ಯರ್ಥಿಗಳ ಗೆಲುವಿಗೆ ರಣಕಹಳೆ ಮೊಳಗಿಸಿದ ಸಿಎಂ

05:55 PM Nov 18, 2021 | Team Udayavani |

ಕೊಪ್ಪಳ: ರಾಜ್ಯದಲ್ಲಿನ 25 ವಿಧಾನ ಪರಿಷತ್ ಸದಸ್ಯ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಬಿಜೆಪಿಯು ಜನ ಸ್ವರಾಜ್ ಸಮಾವೇಶದ ಮೂಲಕ ರಣಕಹಳೆ ಮೊಳಗಿಸಿದ್ದು,ಸಿಎಂ ಬಸವರಾಜ ಬೊಮ್ಮಾಯಿ ಅವರು ಮೊದಲ ಸಮಾವೇಶವನ್ನು ಕೊಪ್ಪಳದಲ್ಲಿ ಕಹಳೆ ಮೊಳಗಿಸಿ ಚಾಲನೆ ನೀಡಿದರು.

Advertisement

ಕೊಪ್ಪಳದ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಅವರು ಅಭಿವೃದ್ಧಿ, ಕೋವಿಡ್‌ನಲ್ಲಿ ಮೋದಿ ಅವರ ಆಡಳಿತ, ಕಾಂಗ್ರೆಸ್ ದುರಾಡಳಿತ, ಬಿಟ್ ಕಾಯಿನ್ ವಿಚಾರ ಪ್ರಸ್ತಾಪಿಸಿದರಲ್ಲದೇ, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಮತದಾರರು ಆಶೀರ್ವದಿಸುವಂತೆ ಮನವಿ ಮಾಡಿದರು.

ಸಮಾವೇಶದಲ್ಲಿ ಮಾತನಾಡಿ, ನೀರಾವರಿ ವಿಚಾರದಲ್ಲಿ ಕೃಷ್ಣೆಯ ಮೇಲೆ ಆಣೆ ಮಾಡಿದ್ದ ಕಾಂಗ್ರೆಸ್ ಪಾದಯಾತ್ರೆ ನಡೆಸಿತು. ಆದರೆ 5 ವರ್ಷದಲ್ಲಿ 7500 ಕೋಟಿ ಕೊಟ್ಟಿದ್ದು ಬಿಟ್ಟರೆ ಮತ್ತೆ ಹಣವನ್ನೇ ಕೊಟ್ಟಿಲ್ಲ. ಇದರಿಂದಲೇ ಅವರು ಅಧಿಕಾರ ಕಳೆದುಕೊಂಡರು. ನಾವು ಜನಪರ ಆಡಳಿತ ಕೊಡುತ್ತಿದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನ್ಯಾಯವಾಗದಂತೆ ನೋಡಿಕೊಂಡಿದ್ದೇವೆ. ಹೈಕ ಭಾಗವನ್ನು ಕಲ್ಯಾಣ ಕರ್ನಾಟಕವೆಂದು ಘೋಷಿಸಿ, ಪ್ರತಿ ವರ್ಷ 3 ಸಾವಿರ ಅನುದಾನ ಕೊಡಲು ನಿರ್ಧರಿಸಿದೆ. ನಾವು ಸುರಕ್ಷಿತ ಹಾಗೂ ಸಂಪತ್ಭರಿತ ನಾಡನ್ನು ಕಟ್ಟಲು ಸಂಕಲ್ಪ ಮಾಡಿದ್ದೇವೆ ಎಂದರು.

1500 ಗ್ರಾಪಂಗಳಿಗೆ ಅಮೃತ್ ಯೋಜನೆ ವಿಸ್ತರಣೆ
ಈ ವರ್ಷ 750 ಗ್ರಾಪಂಗಳನ್ನು ಅಮೃತ್ ಯೋಜನೆಯಡಿ ತಂದು ಅಭಿವೃದ್ಧಿ ಕೈಗೊಂಡಿದ್ದೇವೆ. ಅವೆಲ್ಲವೂ ವೇಗವಾಗಿ ಅಭಿವೃದ್ಧಿ ಕಂಡರೆ ಮುಂದಿನ ವರ್ಷ 1500 ಗ್ರಾಪಂಗಳನ್ನು ಅಮೃತ್ ಯೋಜನೆಯನ್ನು ವಿಸ್ತರಣೆ ಮಾಡಿ ಗ್ರಾಮಗಳ ಅಭಿವೃದ್ಧಿಯ ಸಂಕಲ್ಪ ಮಾಡಿದ್ದೇವೆ. ರಾಜ್ಯದ ಆದಾಯ ಹೆಚ್ಚಳವಾಗಬೇಕೆಂದರೆ ಮಹಿಳಾ ಜೀವನಮಟ್ಟ ಸುಧಾರಿಸಬೇಕು. ಪ್ರತಿಯೊಬ್ಬರ ತಲಾ ಆದಾಯ ಹೆಚ್ಚಾಗಬೇಕು. ದುಡಿದರೆ ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ ಎಂದರು.

Advertisement

ಬಿಟ್ ಕಾಯಿನ್‌ನಲ್ಲಿ ಕೆಸರೆರಚುವ ಕೆಲಸ
ಬಿಎಸ್‌ವೈ ಹಾಗೂ ನಮ್ಮ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಇದರಿಂದ ಕಾಂಗ್ರೆಸ್ ಅಧಿಕಾರದ ಕನಸು ಭಗ್ನವಾಗಿದೆ. ಹಾಗಾಗಿ ನಮ್ಮ ಮೇಲೆ ಮಣ್ಣು, ಕೆಸರು ಎರಚುವ ಕೆಲಸಕ್ಕೆ ನಿಂತಿದೆ. ನಮಗೆ ಕೆಸರು ಎರಚುವುದಕ್ಕೂ ಮೊದಲು ಅವರ ಕೈಸರಾಗಲಿದೆ ಎನ್ನುವ ಅರಿವೂ ಅವರಿಗಿಲ್ಲ. ಬಿಟ್ ಕಾಯಿನ್ ಏನೋ ನನಗೆ ಗೊತ್ತಿಲ್ಲ. ಈ ಹಗರಣ ೨೦೧೬-೧೭, ೨೦೧೮ರಲ್ಲಿ ನಡೆದಿದೆಂದು ಕಾಂಗ್ರೆಸ್‌ನ ಸುರ್ಜೇವಾಲ ಅವರೇ ಆರೋಪಿಸಿದ್ದಾರೆ. ಆಗ ಸಿದ್ದರಾಮಯ್ಯ ಸರ್ಕಾರ ಈ ಬಗ್ಗೆ ಯಾಕೆ ಮಾತನಾಡಲಿಲ್ಲ. ಶ್ರೀಕಿಯನ್ನು ಯಾಕೇ ಬಂಧಿಸಿ, ತನಿಖೆ ಮಾಡಲಿಲ್ಲ. ಅವರು ಮಾಡದ ಕೆಲಸವನ್ನು ನಾವು ಮಾಡಿದ್ದೇವೆ. ಅವರು ಬಿಟ್ಟರು. ನಾವು ಹಿಡಿದು ತನಿಖೆಗೆ ಕೊಟ್ಟಿದ್ದೇವೆ. ಅದನ್ನು ಪೊಲೀಸರು ನೋಡಿಕೊಳ್ಳುತ್ತಿದ್ದಾರೆ. ನಮ್ಮ ನೀತಿ ಹಾಗೂ ನಿಯತ್ತು ಸ್ಪಷ್ಟವಾಗಿದೆ. ಬಿಟ್‌ಕಾಯಿನ್‌ನಲ್ಲಿ ಯಾರೇ ಇದ್ದರೂ ಮುಲಾಜೇ ಇಲ್ಲ. ಅವರಿಗೆ ಕಠಿಣ ಕ್ರಮವಾಗಲಿದೆ ಎಂದರಲ್ಲದೇ, ವಿಧಾನ ಪರಿಷತ್‌ನಲ್ಲಿ ನಮ್ಮ ಬಲ ಹೆಚ್ಚಿಸಿ. ಪ್ರಗತಿಪರ ವಿಚಾರಕ್ಕೆ ಪರಿಷತ್‌ನಲ್ಲಿ ಬಲ ಬೇಕಿದೆ. ಮತದಾರರು ನಮ್ಮ ಅಭ್ಯರ್ಥಿಗಳನ್ನ ಆಯ್ಕೆ ಮಾಡಿ, ನಾವು ಸಮಗ್ರ ಅಭಿವೃದ್ಧಿಗೆ ಬದ್ದರಿದ್ದೇವೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಮಾತನಾಡಿ, ರಾಜ್ಯದಲ್ಲಿ ಗ್ರಾಪಂಗಳಿಗೆ ಮೊದಲ ಬಾರಿಗೆ ಅನುದಾನ ಕೊಟ್ಟಿದ್ದು ಬಿಜೆಪಿ ಸರ್ಕಾರ. ನರೇಗಾದಡಿ ಹೆಚ್ಚು ಅನಿದಾನ ಕೊಟ್ಟಿದ್ದು ಮೋದಿ ಸರ್ಕಾರ. ಗ್ರಾಪಂ ಸದಸ್ಯರಿಗೆ ಸ್ವಾಭಿಮಾನ ಬದುಕು ಕೊಟ್ಟಿದ್ದು ನಮ್ಮ ಸರ್ಕಾರ. ಗ್ರಾಪಂ ಸದಸ್ಯರ ಗೌರವಧನವನ್ನ ೧೦ ಸಾವಿರ ಹಾಗೂ ವಾಹನ ಕೊಡಲು ಸಿಎಂ ಜೊತೆ ಚರ್ಚಿಸುವೆನು. ಈ ವರ್ಷ ೭೫೦ ಗ್ರಾಪಂಗೆ ಅಮೃತ್ ಯೋಜನೆ ಕೈಗೊಂಡಿದೆ. ಮುಂದಿನ ಬಜೆಟ್‌ನಲ್ಲಿ ರಾಜ್ಯದ ಎಲ್ಲ ಗ್ರಾಪಂಗಳಿಗೂ ಅಮೃತ ಯೋಜನೆ ವಿಸ್ತರಣೆಯಾಗಲಿದೆ. ಈ ಅಭಿವೃದ್ಧಿಗಾಗಿ ಬಿಜೆಪಿ ವಿಪ ಸದಸ್ಯರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಮೋಸ, ವಂಚನೆ ಸುಳ್ಳು ಕಾಂಗ್ರೆಸ್ ರಕ್ತದಲ್ಲಿದೆ
ಕಾಂಗ್ರೆಸ್‌ನಲ್ಲಿ ಮೋಸ, ಸುಳ್ಳು, ವಂಚನೆ ಎನ್ನುವುದು ಕಾಂಗ್ರೆಸ್‌ನ ರಕ್ತದಲ್ಲಿದೆ.60 ವರ್ಷವು ಬರಿ ಸುಳ್ಳು, ಮೋಸ, ವಂಚನೆ ಮಾಡಿದೆ. ಜನರ ದಾರಿ ತಪ್ಪಿಸುವ ಕೆಲಸ ಮಾಡಿದೆ. ಚುನಾವಣೆಯಲ್ಲಿ ಅವರು ಏಷ್ಟೇ ಗಲಾಟೆ, ಟೀಕೆ ಮಾಡಿದ್ರೂ ನಾವೇ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ. ಗ್ರಾಪಂನಲ್ಲಿ ನಾವು ಹೆಚ್ಚು ಬೆಂಬಲಿತ ಸದಸ್ಯರನ್ನು ಗೆದ್ದಿದ್ದೇವೆ. ರಫೇಲ್ ವರದಿಯಲ್ಲಿ ಯುಪಿ ಕಾಲಘಟ್ಟದಲ್ಲಿ ಹಗರಣದ ವರದಿ ಬಯಲಾಗಿದೆ ಎಂಧರು.
ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ಬರಿ ಸುಳ್ಳು ಹೇಳುತ್ತಿದೆ. ಈ ಹಗರಣ ನಡೆದಿದ್ದು ಸಿದ್ದರಾಮಯ್ಯರ ಕಾಲದಲ್ಲಿ. ಹಗರಣದ ಬಗ್ಗೆ ಈಶ್ವರಪ್ಪ, ಜಗದೀಶ್ ಶೆಟ್ಟರ್ ಸದನದಲ್ಲಿ ಮಾತಾಡಿದ್ದಾರೆ. ಹೆಚ್‌ಡಿಕೆಯೂ ಆಗಲೇ ಬಿಟ್ ಕಾಯಿನ್ ಮಾತಾಡಿದ್ದಾರೆ. ನಿಮ್ಮ ಕಾಲಘಟ್ಟದಲ್ಲಿ ಡ್ರಗ್ ಮಾಫಿಯಾ ಇತ್ತು. ನಾವು ಡ್ರಗ್ ಮಾಫಿಯಾ ನಿಯಂತ್ರಿಸಿದ್ದೇವೆ. ಬಿಟ್‌ಕಾಯಿನ್‌ನಲ್ಲಿ ಯಾರೇ ಇದ್ರೂ ನಾವು ಜೈಲಿಗೆ ಕಳಿಸ್ತೇವೆ. ಸಿದ್ದು ಜನರ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಕಾಂಗ್ರೆಸ್ ಒಳ ಜಗಳದಲ್ಲಿ ಬಿದ್ದು ಹೋಗಿದೆ. ಬೊಮ್ಮಾಯಿ ಸರ್ಕಾರ ರೈತರ ಪರವಾದ ಕೆಲಸ ಮಾಡ್ತಿದೆ ಎಂದರು.

ಕೈ ಅಧಿಕಾರಕ್ಕೆ ಬಂದ್ರೆ ಕರ್ನಾಟಕ ತಾಲಿಬಾನ್ ಆಗುತ್ತೆ
ಸಂಸದ ಪ್ರತಾಪ ಸಿಂಹ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಅವರು ತಾಲಿಬಾನ್ ಮಾಡ್ತಾರೆ. ಸಭ್ಯ ಸರ್ಕಾರ ಬರಲ್ಲ. ಆರ್‌ಎಸ್‌ಎಸ್ ಒಂದು ಸಿದ್ದಾಂತದ ಮೇಲಿದೆ. ನಮಗೆ ನಮ್ಮ ಸಿದ್ದಾಂತವಿದೆ. ಆದರೆ ಕಾಂಗ್ರೆಸ್ ಬ್ರಿಟೀಷರಿಗೆ ಹುಟ್ಟಿದೆ. ಈಗ ಸಿದ್ದು, ಡಿಕೆಶಿ, ಪ್ರಿಯಾಂಕ್ ಖರ್ಗೆಗೆ ಬೇರೆ ಕೆಲಸಾನೇ ಇಲ್ಲ. ಬಿಟ್ ಕಾಯಿನ್ ವಿಷಯ ತೆಗೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಡಿಕೆಶಿ, ಸಿದ್ದು ಎರಡು ಬಣ ಇವೆ. ನಮ್ಮಲ್ಲಿ ಬೊಮ್ಮಾಯಿ ನೇತೃತ್ವದ ಒಂದೇ ಬಣವಿದೆ. ನಮ್ಮ ನಾಯಕ ಬೊಮ್ಮಾಯಿ ಎಂದು ಹೇಳ್ಕೊಳ್ತೇವೆ. ನಿಮ್ಮಲ್ಲಿ ಯಾರು ನಾಯಕ ಎಂದು ಹೇಳ್ಕೊಳ್ಳಿ. ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ಒಂದಾದರೂ ದಾಖಲೆ ಕೊಡಲಿ. ಪ್ರಿಯಾಂಕ ಖರ್ಗೆಗೆ ಹೆಣ್ಣೋ.. ಗಂಡೋ ಎಂದು ಕೇಳಿದೆ. ಅವರು ಸ್ತ್ರೀಲಿಂಗವೋ.. ಅಥವಾ ಪುಲ್ಲಿಂಗವೋ.. ಪ್ರಿಯಾಂಕ ಅಂದ್ರೆ ಯಾವ ಲಿಂಗ ಎಂದು ಕೇಳಿದೆ. ಅದಕ್ಕವರು ಉತ್ತರ ಕೊಟ್ಟಿಲ್ಲ. ಸದಾಶಿವ ನಗರ, ವಸಂತ ನಗರ ಸೇರಿ ಇತರೆಯಡಿ ಮನೆ ಇವೆಯಲ್ಲ ಅವುಗಳಿಗೆ ಉತ್ತರ ಕೊಡಲಿ. ಚುನಾವಣಾ ಆಯೋಗಕ್ಕೆ ರಾಮಸ್ವಾಮಿ ಪಾಳ್ಯದ ಮನೆ ಇರುವ ಬಗ್ಗೆ ಮಾಹಿತಿನೇ ಕೊಟ್ಟಿಲ್ಲ. ಅಂತವುಗಳಿಗೆ ಮೊದಲು ಉತ್ತರ ಕೊಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next