Advertisement

‘ಬಿಜೆಪಿ ಸರಕಾರ ಕೋಮುವಾದ ಬಿತ್ತುತ್ತಿದೆ ‘

11:42 AM Dec 03, 2018 | Team Udayavani |

ಮಂಗಳೂರು : ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸುವುದರ ಜತೆಗೆ ಕೋಮುವಾದ ಬಿತ್ತುತ್ತಿದೆ ಎಂದು ದಿನೇಶ್‌ ಅಮೀನ್‌ ಮಟ್ಟು ಅವರು ಹೇಳಿದರು. ಅಭಿಮತ ಆಶ್ರಯದಲ್ಲಿ ನಂತೂರಿನ ಶಾಂತಿ ಕಿರಣದಲ್ಲಿ ರವಿವಾರ‌ ನಡೆದ ‘ಜನ ನುಡಿ 2018’ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಸಂಸತ್‌ ಚುನಾವಣೆಯಲ್ಲಿ ಬಿಜೆಪಿ ಶೇ.31ರಷ್ಟು ಮತ ಪಡೆದರೆ, ಅದರ ವಿರುದ್ಧ ಶೇ.69ರಷ್ಟು ಮತ ಬಿದ್ದಿವೆ. ಆದರೆ ಅವೆಲ್ಲ ಹಂಚಿಹೋಗಿರುವುದರಿಂದ ಬಿಜೆಪಿ ಗೆಲುವು ಸಾಧಿಸಿದೆ. ಈಗ ನಾವು ಶೇ.69ರಷ್ಟು ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು ಎಂದರು.

Advertisement

ಮಹಾತ್ಮಾ ಗಾಂಧೀಜಿ ಹತ್ಯೆಯ ತನಿಖೆಯ ಬಳಿಕ ಅತ್ಯಂತ ಬದ್ಧತೆಯಿಂದ ನಡೆದ ತನಿಖೆ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯದ್ದು. ಗೌರಿ ಹತ್ಯೆಯ ಸೂತ್ರಧಾರರ ಕುರಿತು ತನಿಖಾ ಸಂಸ್ಥೆ ಬೊಟ್ಟು ಮಾಡುತ್ತಿದೆ. ಕೋಮುವಾದಿಗಳು ಸೈದ್ಧಾಂತಿಕವಾಗಿ ಎದುರಿಸಲಾಗದೆ ಗೌರಿ ಲಂಕೇಶ್‌, ಪನ್ಸಾರೆ, ಕಲ್ಬುರ್ಗಿ ಹತ್ಯೆ ಮಾಡಿದ್ದಾರೆ. ಗೌರಿ ಹತ್ಯೆಯ ಕುರಿತು ಸರಿಯಾದ ತನಿಖೆಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ತನಿಖೆ ತಾರ್ಕಿಕ ಅಂತ್ಯ ಕಂಡಿದೆ ಎಂದರು. ಬಿಜೆಪಿಯನ್ನು ಕಮ್ಯುನಿಸ್ಟ್‌ ಪಕ್ಷಕ್ಕೆ ಮಾತ್ರ ಎದುರಿಸಲು ಸಾಧ್ಯ. ಆದರೆ ಕಮ್ಯುನಿಸ್ಟರಿಗೆ ಹೋರಾಟ ಮಾತ್ರ ಗೊತ್ತು ವಿನಾ ರಾಜಕೀಯ ಗೊತ್ತಿಲ್ಲ. ಕಮ್ಯುನಿಸ್ಟರು ಪ್ರಾದೇಶಿಕವಾಗಿ ಇನ್ನಷ್ಟು ಬೆಳೆಯುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ದಲಿತ ಹೋರಾಟಗಾರ ಮಾವಳ್ಳಿ ಶಂಕರ್‌ ಮಾತನಾಡಿ, ಸಂವಿಧಾನ ವಿರೋಧಿಗಳನ್ನು ನಾವು 2019ರ ಚುನಾವಣೆಯಲ್ಲಿ ಸರಿಯಾಗಿ ಎದುರಿಸಬೇಕು ಎಂದರು. ದಿಲ್ಲಿಯ ಜವಾಹರಲಾಲ್‌ ನೆಹರೂ ವಿವಿಯ ನಿವೃತ್ತ ಪ್ರಾಧ್ಯಾಪಕ, ರಾಜ್ಯಶಾಸ್ತ್ರಜ್ಞ ಪ್ರೊ| ವಲೇರಿಯನ್‌ ರೋಡ್ರಿಗಸ್‌ ಸಮಾರೋಪ ಭಾಷಣ ಮಾಡಿ, ಬಹುತ್ವವನ್ನು ರಕ್ಷಿಸುವುದಕ್ಕಾಗಿ ಗಟ್ಟಿಯಾದ ಪರ್ಯಾಯಗಳನ್ನು ಕಂಡುಕೊಳ್ಳುವ ಅನಿವಾರ್ಯ ಸ್ಥಿತಿಯನ್ನು ದೇಶ ಈಗ ಎದುರಿಸುತ್ತಿದೆ ಎಂದರು. ಕಾರ್ಮಿಕ ಹೋರಾಟಗಾರ್ತಿ ಎಸ್‌. ವರಲಕ್ಷ್ಮೀ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next