ಜಮ್ಮು: ಘೋರ ಚಳಿಯಲ್ಲೂ ಕಣಿವೆ ರಾಜ್ಯದಲ್ಲಿ ಉಗ್ರ ಶಿಕಾರಿಯನ್ನು ಭದ್ರತಾ ಪಡೆ ಮುಂದುವರಿಸಿದೆ. ಭಾನುವಾರ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಹೊಡೆದುರುಳಿಸಲಾಗಿದ್ದು, ಒಬ್ಬನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ.
ಪೂಂಛ್ ಜಿಲ್ಲೆಯ ಸುರಾನ್ಕೋಟ್ನಲ್ಲಿ ಭಾನುವಾರ ಈ ಗುಂಡಿನ ಚಕಮಕಿ ನಡೆದಿದೆ. ಹತ್ಯೆಗೀಡಾದ ಉಗ್ರರು ಲಷ್ಕರ್-ಇ- ತೊಯ್ಬಾ, ಜೈಶ್- ಇ- ಮೊಹಮ್ಮದ್ ಸಂಘಟನೆಗೆ ಸೇರಿದ್ದು, ಪಾಕ್ ಮೂಲದವರೆಂದು ಗುರುತಿಸಲಾಗಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಡಿಡಿಸಿ ಚುನಾವಣೆಗೆ ಭಂಗ ತರಲು ಹತಾಶ ಪಾಕಿಸ್ತಾನ ಇವರನ್ನು ಗಡಿ ನುಸುಳಲು ಕುಮ್ಮಕ್ಕು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ಒಳ್ಳೆ ವ್ಯಕ್ತಿಯೆಂದು ಅಂದುಕೊಂಡಿದ್ದು ತಪ್ಪಾಯಿತು; ವಿ ಸೋಮಣ್ಣ
“3 ದಿನಗಳ ಹಿಂದೆಯೇ ಇವರು ಪಿಒಕೆಯಿಂದ ಗಡಿಪ್ರವೇಶಕ್ಕೆ ಯತ್ನಿಸಿದ್ದು, ಹಿಮಪಾತ ಇವರ ಹಾದಿಗೆ ಅಡ್ಡಿಯಾಗಿತ್ತು. ಚಟ್ಟಾಪಾನಿ- ದುರ್ಗಾನ್ ಹಳ್ಳಿಯ ಹಿಮಾವೃತ ಪ್ರದೇಶದಲ್ಲಿ ಸಿಲುಕಿದ್ದ ಉಗ್ರರಿಗೆ ಶರಣಾಗತಿ ಆಗುವಂತೆ ಸೂಚಿಸಿದ್ದೆವು. ಇದಕ್ಕೆ ಒಪ್ಪದೆ ಗುಂಡಿನ ಚಕಮಕಿ ನಡೆಸಿದ್ದರಿಂದ ಎನ್ಕೌಂಟರ್ ಮಾಡಿದೆವು’ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಗ್ರರ ನುಸುಳುವಿಕೆ ಕುರಿತ ಖಚಿತ ಮಾಹಿತಿ ಆಧರಿಸಿ, ಕಾಶ್ಮೀರ ಪೊಲೀಸರೊಂದಿಗೆ ಭದ್ರತಾಪಡೆ ಈ ಕಾರ್ಯಾಚರಣೆ ನಡೆಸಿದೆ.