Advertisement

ಸಾಮೂಹಿಕ ಯೋಗ ಪ್ರದರ್ಶನ, ಸರ್ವಧರ್ಮ ಪ್ರಾರ್ಥನೆಯೊಂದಿಗೆ ಜಾಂಬೂರಿ ಸಂಪನ್ನ

12:54 AM Dec 28, 2022 | Team Udayavani |

ಮೂಡುಬಿದಿರೆ: ಮುಂಜಾನೆಯ ಸೂರ್ಯರಶ್ಮಿ ಭೂಮಿಗೆ ಬೀಳುವ ಮುನ್ನ ಚುಮುಚುಮು ಚಳಿಯಲ್ಲಿ 40 ಸಾವಿರ ವಿದ್ಯಾರ್ಥಿಗಳಿಂದ ಬೃಹತ್‌ ಯೋಗ ಪ್ರದರ್ಶನ, ಅನಂತರ ಸರ್ವಧರ್ಮ ಪ್ರಾರ್ಥನೆ, ರಾಷ್ಟ್ರಧ್ವಜ ಸಹಿತ ವಿವಿಧ ಧ್ವಜಗಳ ಅವರೋಹಣ, ಧ್ವಜ ಹಸ್ತಾಂತರದೊಂದಿಗೆ ಅಳ್ವಾಸ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಒಂದು ವಾರಗಳ ಕಾಲ ಜರಗಿದ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ವಿಧ್ಯುಕ್ತ ತೆರೆ ಬಿದ್ದಿದೆ.

Advertisement

ಮಂಗಳವಾರ ಮುಂಜಾನೆ ಆರು ಗಂಟೆಯ ವೇಳೆಗೆ ವಿದ್ಯಾಗಿರಿಯ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. ಆಳ್ವಾಸ್‌ ನ್ಯಾಚುರೋಪಥಿ ಕಾಲೇಜಿನ 600 ವಿದ್ಯಾರ್ಥಿಗಳು ಜಾಂಬೂರಿಯ ಆರು ದಿನಗಳ ಕಾಲ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟು ಯೋಗಾಸನಗಳನ್ನು ಪ್ರದರ್ಶಿಸಿದರು. ಬಿಳಿ ಟಿ-ಶರ್ಟ್‌ ಮತ್ತು ಕಪ್ಪು ಪ್ಯಾಂಟ್‌ ಧರಿಸಿದ ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗಾಭ್ಯಾಸ ಮಾಡುವ ದೃಶ್ಯ ಮನಮೋಹಕವಾಗಿತ್ತು. ಹೊರ ರಾಜ್ಯ, ಕೆಲವು ವಿದೇಶಿ ವಿದ್ಯಾರ್ಥಿಗಳೂ ಪಾಲ್ಗೊಂಡರು.

ಜೈನ, ಮುಸ್ಲಿಂ, ಕ್ರೈಸ್ತ ಗುರುಗಳಿಂದ ಸಂದೇಶ
ಯೋಗ ಪ್ರದರ್ಶನದ ಬಳಿಕ ಜೈನ, ಮುಸ್ಲಿಂ, ಕ್ರೈಸ್ತ ಗುರುಗಳು ಸರ್ವಧರ್ಮ ಪ್ರಾರ್ಥನೆ ಹಾಗೂ ಸಂದೇಶ ನೀಡಿದರು. ಮಿಲಾಗ್ರಿಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಫಾ| ಫ್ರಾನ್ಸಿಸ್‌ ಕ್ಸೇವಿಯರ್‌ ಗೋಮ್ಸ್‌, ಸಮಸ್ತ ಸುನ್ನಿ ಯುವ ಜನ ಸಂಘದ ದ.ಕ. ಜಿಲ್ಲಾ ಪ್ರಮುಖರಾದ ಮೌಲಾನಾ ಹಾಜಿ ಅಬ್ದುಲ್‌ ಅಝೀಝ್ ಜಾರಿಮೀ ಚೊಕ್ಕಬೆಟ್ಟು ಹಾಗೂ ಮೂಡುಬಿದಿರೆ ಜೈನಮಠದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಸರ್ವ ಧರ್ಮ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಧ್ವಜಾವರೋಹಣ
ಜಾಂಬೂರಿಯ ಉದ್ಘಾಟನೆ ವೇಳೆ ಆರೋಹಣ ಮಾಡಲಾಗಿದ್ದ ರಾಷ್ಟ್ರಧ್ವಜ, ವಿಶ್ವ ಸ್ಕೌಟ್ಸ್‌ ಧ್ವಜ, ವಿಶ್ವ ಗೈಡ್ಸ್‌ ಧ್ವಜ, ವಿಶ್ವ ಗೈಡ್ಸ್‌ ಧ್ವಜ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಧ್ವಜ ಹಾಗೂ ಜಾಂಬೂರಿ ಧ್ವಜವನ್ನು ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಿರಿಯ ವಿದ್ಯಾರ್ಥಿಗಳು ಅವರೋಹಣ ಮಾಡಿದರು. ಬಳಿಕ ಈ ಧ್ವಜಗಳನ್ನು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ ಅವರಿಗೆ ಹಸ್ತಾಂತರಿಸಿದರು. ಅವರು ಜಾಂಬೂರಿ ಮುಕ್ತಾಯ ಘೋಷಿಸಿದರು. ಕಾರ್ಯಕ್ರಮದಲ್ಲಿ ವಿಶ್ವ ಜಾಂಬೂರಿ ಯಶಸ್ವಿನ ರೂವಾರಿ, ಆಳ್ವಾಸ್‌ ಶಿಕ್ಷಣ ಸಂಸ್ಥಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಲೀಡರ್‌ಗಳಿಗೆ ಗೌರವ
ಸಭಾ ಕಾರ್ಯಕ್ರಮದ ಬಳಿಕ ಡಾ| ಎಂ. ಮೋಹನ ಆಳ್ವ ಅವರು ಸ್ಕೌಟ್ಸ್‌ ಮತ್ತು ಗೈಡ್ಸ್‌ ಲೀಡರ್‌ಗಳನ್ನು ಗೌರವಿಸಿದರು. ಪ್ರತೀ ರಾಜ್ಯ, ಜಿಲ್ಲೆಯ ಪ್ರಮುಖರಿಗೆ ಸ್ಮರಣಿಕೆ ನೀಡಿದರು. ವಿದ್ಯಾರ್ಥಿ ತಂಡಗಳ ಮುಖ್ಯಸ್ಥರಿಗೆ ಮೆಚ್ಚುಗೆಯ ಪ್ರಮಾಣ ಪತ್ರ ಹಾಗೂ ಪ್ರಶಸ್ತಿ ವಿತರಿಸಲಾಯಿತು. ಪ್ರತೀ ಶಿಬಿರಾರ್ಥಿಗೂ ಜಾಂಬೂರಿಯ ನೆನಪಿಗಾಗಿ ಜಾಂಬೂರಿ ಪದಕ ಲಭಿಸಿತು. ವಿವಿಧ ಜಿಲ್ಲೆ, ರಾಜ್ಯಗಳ ವಿದ್ಯಾರ್ಥಿಗಳೂ ತಮ್ಮಲ್ಲಿರುವ ವಸ್ತುಗಳನ್ನು ಪರಸ್ಪರ ಹಂಚಿಕೊಂಡು ಸ್ನೇಹ ಬಾಂಧವ್ಯನ್ನು ಉಳಿಸಿಕೊಂಡರು.

Advertisement

ಊರಿಗೆ ತೆರಳಿದ ವಿದ್ಯಾರ್ಥಿಗಳು
ಒಂದು ವಾರದ ಜಾಂಬೂರಿಯ ನೆನಪಿನೊಂದಿಗೆ ಆಗಮಿಸಿದ್ದ 48 ಸಾವಿರ ಮಂದಿ ವಿದ್ಯಾರ್ಥಿಗಳು, 4 ಸಾವಿರಕ್ಕೂ ಅಧಿಕ ಮಂದಿಯ ಅಧಿಕಾರಿಗಳು, ಶಿಕ್ಷಕರ ತಂಡ ಆಳ್ವಾಸ್‌ ಕಾಲೇಜು ಕ್ಯಾಂಪಸ್‌ನಿಂದ ನಿರ್ಗಮಿಸಿದೆ. 700ಕ್ಕೂ ಅಧಿಕ ಕೆಎಸ್ಸಾರ್ಟಿಸಿ ಬಸ್‌ ಮತ್ತು 100ಕ್ಕೂ ಅಧಿಕ ಖಾಸಗಿ ಬಸ್‌ಗಳನ್ನು ಒದಗಿಸಲಾಗಿತ್ತು. ಆಯಾ ಶಾಲೆಗಳ ಹಾಗೂ ಆಳ್ವಾಸ್‌ ಕಾಲೇಜಿನ ಬಸ್‌ಗಳಲ್ಲೂ ವಿದ್ಯಾರ್ಥಿಗಳು ತೆರಳಿದರು. ದೂರದ ಊರುಗಳಿಗೆ ಹೋಗಬೇಕಾದ ವಿದ್ಯಾರ್ಥಿಗಳಿಗೆ ಊಟದ ಪೊಟ್ಟಣಗಳನ್ನು ವಿತರಿಸಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಯಿತು.

ಕ್ರಿಸ್ಮಸ್‌ ಹಬ್ಬವು ಎಲ್ಲರನ್ನೂ ಪ್ರೀತಿಸಿ ಮತ್ತು ಕ್ಷಮಿಸಿ ಎಂಬ ಸಂದೇಶ ಸಾರುತ್ತದೆ. ನಮ್ಮನ್ನು ನಾವು ಪ್ರೀತಿಸಿದಾಗ ಎಲ್ಲ ನಕಾರಾತ್ಮಕ ಭಾವನೆಗಳು ದೂರವಾಗಿ ಸದ್ಭಾವನೆಗಳು ಇಮ್ಮಡಿಯಾಗುವುದು. ಪ್ರೀತಿಯಿಂದ ಮಾತ್ರ ದ್ವೇಷ ತಾರತಮ್ಯ ತಪ್ಪು ತಿಳುವಳಿಕೆ ದೂರವಾಗಲು ಸಾಧ್ಯ. ವಿದ್ಯಾರ್ಥಿಗಳು ಜಾಂಬೂರಿಯಲ್ಲಿ ಕಲಿತ ಎಲ್ಲ ವಿಚಾರಗಳನ್ನು ಜೀವನದಲ್ಲಿ ಆಳವಡಿಸಿಕೊಂಡು ಮುಂದುವರಿಯಬೇಕು.
– ವಂ| ಫ್ರಾನ್ಸಿಸ್‌ ಕ್ಸೇವಿಯರ್‌ ಗೋಮ್ಸ್‌ ಮಿಲಾಗ್ರಿಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next