Advertisement

ಕುತೂಹಲವೇ ಅಪಘಾತಕ್ಕೆ ಕಾರಣ!

10:23 AM Jan 31, 2020 | Suhan S |

ಬೆಂಗಳೂರು: ಬೆಂಗಳೂರಿನ ವೈಶಿಷ್ಟ್ಯವೇ ಅಂತಹದ್ದು. ಕಣ್ಮುಂದೆ ಹಾದುಹೋಗುವ “ನಮ್ಮ ಮೆಟ್ರೋ’, ಆಗಸಕ್ಕೆ ಮುತ್ತಿಕ್ಕುವ ಕಟ್ಟಡಗಳು, ಅದೇ ಆಗಸಕ್ಕೆ ನುಗ್ಗುವ ಲೋಹದಹಕ್ಕಿಗಳು ಇಂತಹ ಹಲವಾರು ಸಂಗತಿಗಳ ಸಂಪುಟ. ಗ್ರಾಮೀಣ ಭಾಗದಿಂದ ಉದ್ಯೋಗ ಅರಸಿ ಇಲ್ಲಿಗೆ ಬರುವವರಿಗೆ ಅದೆಲ್ಲವೂ ಕುತೂಹಲದ ಕೇಂದ್ರಬಿಂದು. ಆ ಕೌತುಕವೇ ಜೀವಕ್ಕೆ ಎರವಾದರೆ ಹೇಗೆ?

Advertisement

ಜಕ್ಕೂರು ಏರೋಡ್ರ್ಯಾಂ (ವಿಮಾನ ಹಾರಾಟ ತರಬೇತಿ ಕೇಂದ್ರ) ಈಗ ಅಂತಹದ್ದೊಂದು ಕೌತುಕದ ಕೇಂದ್ರಬಿಂದುವಾಗಿದೆ. ಅದಕ್ಕೆ ಆಕರ್ಷಿತರಾಗುತ್ತಿರುವವರು ಯಲಹಂಕದಿಂದ ಹೆಬ್ಟಾಳದ ಎಸ್ಟೀಮ್‌ ಮಾಲ್‌ಗೆ ಬಂದಿಳಿಯುವ ಜಕ್ಕೂರು ಮೇಲ್ಸೇತುವೆಯಲ್ಲಿ ಬರುವ ವಾಹನ ಸವಾರರು. ಅಲ್ಲಿ ತಮ್ಮ ತಲೆಯ ಮೇಲೆಯೇ ಹಾರಿಹೋಗುವ ವಿಮಾನಗಳು, ಹೆಲಿಕಾಪ್ಟರ್‌ಗಳು, ಗ್ಲೆ„ಡರ್‌, ಪ್ಯಾರಾಚೂಟ್‌ಗಳನ್ನು ನೋಡಲು ಮುಗಿಬೀಳುವ ವಾಹನ ಸವಾರರು ಯಾಮಾರಿ ಅಪಘಾತಗಳಿಗೆ ಈಡಾಗುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಮೂಲಕ ಜಕ್ಕೂರು ಏರೋ ಡ್ರ್ಯಾಂ (ವಿಮಾನ ಹಾರಾಟ ತರಬೇತಿ ಕೇಂದ್ರ) ಪರೋಕ್ಷವಾಗಿ ಅಪಘಾತಗಳಿಗೆ ಕಾರಣವಾಗುತ್ತಿದೆ!

ಜಕ್ಕೂರು ಮೇಲ್ಸೇತುವೆಯಲ್ಲಿ ನಿಂತು ನೋಡಿದರೆ, ಕೇಂದ್ರದ ಕಲಿಕಾ ಈ ಭಾಗಕ್ಕೆ ಬರುತ್ತಿದ್ದಂತೆ ಬೈಕ್‌ ಸವಾರರು ಪಕ್ಕಕ್ಕೆ ನಿಲ್ಲಿಸಿ ಕಣ್ಣು ಹಾಯಿಸುತ್ತಿದ್ದು, ಈ ಸಂದರ್ಭದಲ್ಲಿ ಅಪಘಾತಗಳಾಗುತ್ತಿವೆ. ಜಕ್ಕೂರು ಮೇಲ್ಸೇತುವೆಯು ಸಮೀಪವೇ ಜಕ್ಕೂರು ಏರೋಸ್ಕೂಲ್‌ ಇದ್ದು ವಿಮಾನಗಳ ಹಾರಾಟ ನೋಡುವ ಕುತೂಹಲದಿಂದ ವಾಹನ ಸವಾರರು ದಿಢೀರನೆ ಬೈಕ್‌ ಗಳನ್ನು ನಿಲ್ಲಿಸುತ್ತಿದ್ದು, ಅಪಘಾತಗಳಿಗೆ ಎಡೆಮಾಡಿಕೊಡುತ್ತಿವೆ.ಯಲಹಂಕ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಪಘಾತದಲ್ಲಿ 131 ಜನ ಸಾವನ್ನಪ್ಪಿದ್ದಾರೆ! ಅಲ್ಲದೆ, 656ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಉದಾಹರಣೆಯೂ ಇದೆ.

 ನೋ ಫೋಟೋಗ್ರಫಿ’ ಮುಂದೆಯೇ ಸೆಲ್ಫಿ!: ಜಕ್ಕೂರು ಮೇಲ್ಸೇತುವೆಯ ಎಡ ಬದಿಯಲ್ಲಿ ವಿಮಾನ ತರಬೇತಿ ಕೇಂದ್ರದ ಮುಂಭಾಗದಲ್ಲಿ ಅಲ್ಲಲ್ಲಿ, ನೋ ಪೋಟೋಗ್ರಾಫಿ ಎಂಬ ಎಚ್ಚರಿಕಾ ಫ‌ಲಕಗಳನ್ನು ಅಳವಡಿಸಲಾಗಿದೆ. ಆದರೆ, ವಿಪರ್ಯಾಸದ ಸಂಗತಿ ಎಂದರೆ, ಈ ಭಾಗದಲ್ಲಿ ವಾಹನ ಚಲಾಹಿಸುವ ಕೆಲವರು ವಾಹನ ಮೇಲ್ಸೇತುವೆ ಬದಿಗೆ ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳುತ್ತಾರೆ.

ಅಪಘಾತ ವಲಯ: ಯಲಹಂಕ ಸಂಪರ್ಕಿಸುವ ಜಕ್ಕೂರು ಮೇಲ್ಸೇತುವೆ ಮಾತ್ರವಲ್ಲ, ಹೆಬ್ಟಾಳದ ಮೇಲ್ಸೇತುವೆ ಸಮೀಪದ ರಸ್ತೆಯನ್ನೂ ಸಂಚಾರ ಪೊಲೀಸರು ಅಪಘಾತ ವಲಯ ಎಂದು ಗುರುತಿಸಿದ್ದಾರೆ. ಕೆಲವೇ ವರ್ಷಗಳ ಹಿಂದೆ ಈ ಭಾಗದಲ್ಲಿ ರಸ್ತೆ ದಾಟುವ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದಾದ ಮೇಲೆ ಸಂಚಾರ ಪೊಲೀಸರು ಹಾಗೂ ಬಿಬಿಎಂಪಿ ಸುಧಾರಣ ಕ್ರಮ ತೆಗೆದುಕೊಂಡಿದ್ದು, ಎಸ್ಟೀಮ್‌ ಮಾಲ್‌ನ ಮುಂಭಾಗದಲ್ಲಿ ಎತ್ತರಿಸಿದ ಮೇಲ್ಸೇತುವೆ ನಿರ್ಮಾಣ ಮಾಡಿದೆ. ಆದರೆ, ಈ ಮಾರ್ಗವು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವುದರಿಂದ ವೇಗವಾಗಿ ವಾಹನಗಳು ಸಂಚಾರಿಸುತ್ತಿರುತ್ತವೆ. ಅಲ್ಲದೆ, ಹೈದರಾಬಾದ್‌, ತುಮಕೂರು ಹೋಗುವ ವಾಹನಗಳೂ ಇದೇ ಮಾರ್ಗದಲ್ಲಿ ಸಾಗುತ್ತವೆ. ಹೀಗಾಗಿ, ಈ ಭಾಗದಲ್ಲಿ ಅಪಘಾತಗಳಿಗೆ ಕಡಿವಾಣ ಹಾಕುವುದು ಸವಾಲಾಗಿ ಪರಿಣಮಿಸಿದೆ.

Advertisement

ಅಪಘಾತ ತಡೆಯಲು ಯಾವುದೇ ಕ್ರಮವಿಲ್ಲ :  “ವಿಮಾನ ಕಂಡುಹಿಡಿದು ಶತಮಾನವೇ ಕಳೆದಿದೆ. ಆದರೂ ಮನುಷ್ಯನಿಗೆ ಕೆಟ್ಟ ಕುತೂಹಲ ಕರಗುತ್ತಿಲ್ಲ. ತಲೆಯ ಮೇಲೆ ವಿಮಾನ ಹಾರುವ ಶಬ್ದ ಕೇಳಿದರೆ ಸಾಕು ತಲೆ ಎತ್ತಿ ನೋಡುವುದು, ಏರ್‌ಪೋರ್ಟ್‌, ಏರ್ಪೋರ್ಸ್‌ಗಳ ಪಕ್ಕದ ರಸ್ತೆಯಲ್ಲಿ ಓಡಾಡುವಾಗ ನಿಂತು ನೋಡುವುದು ಹಾಗೂ ಬೈಕ್‌ ಓಡಿಸುವಾಗಲೂ ನೋಡಿಕೊಂಡು ವಾಹನ ಚಾಲನೆ ಮಾಡುತ್ತಿರುವುದರಿಂದ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಜಕ್ಕೂರು ಮೇಲ್ಸೇತುವೆ ಭಾಗದಲ್ಲಿ ಸದಾ ಅಪಘಾತಗಳಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರವಾಗಲಿ, ಸಂಚಾರ ಪೊಲೀಸರಾಗಲಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕವಿ ವಿ.ಆರ್‌. ನರಸಿಂಹಮೂರ್ತಿ ಅವರು ಇತ್ತೀಚೆಗೆ ಮುಖಪುಟದಲ್ಲಿ ಬರೆದುಕೊಂಡಿದ್ದು, ಹೆದ್ದಾರಿ ಪ್ರಾಧಿಕಾರ ಹಾಗೂ ಸಂಚಾರ ಪೊಲೀಸರಿಗೆ ಟ್ಯಾಗ್‌ ಮಾಡಿದ್ದಾರೆ.

ಜಕ್ಕೂರು ಮೇಲ್ಸೇತುವೆ ಭಾಗದಲ್ಲಿ ವಿಮಾನ ನೋಡಲು ವಾಹನ ನಿಲ್ಲಿಸುತ್ತಿರುವುದರಿಂದ ಸಮಸ್ಯೆ ಆಗುತ್ತಿರುವುದು ನಿಜ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದ್ದು, ಪೆಟ್ರೋಲಿಂಗ್‌ ವಾಹನ ವ್ಯವಸ್ಥೆ ಮಾಡಲು ಕೋರಲಾಗಿದೆ.  – ರವಿಕಾಂತೇಗೌಡ, ಹೆಚ್ಚುವರಿ ಸಂಚಾರ ಪೊಲೀಸ್‌ ಆಯುಕ್ತ

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next