Advertisement

“ಜೈನಕಾಶಿ’ಯ ಸವಿ

09:45 PM Dec 13, 2019 | Lakshmi GovindaRaj |

ಜೈನ ಧರ್ಮದ ಉಚ್ಛಾಯ ಕಾಲದಲ್ಲಿ ನಾಡಿನಲ್ಲಿ ಹಲವು ಪುಣ್ಯ ಕ್ಷೇತ್ರಗಳು ಜನಪ್ರಿಯತೆ ಗಳಿಸಿದವು. ಹಾಗೆಯೇ, ಜೈನ ರಾಜರ ಅವನತಿಯೊಂದಿಗೆ ಈ ಕ್ಷೇತ್ರಗಳೂ ಕ್ರಮೇಣ ಪಾಳುಬಿದ್ದವು. ಆದರೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಂಚ, ಬಹು ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಪವಿತ್ರ ಯಾತ್ರಾ ಕ್ಷೇತ್ರವಾಗಿ, ಶ್ರೀ ಪದ್ಮಾವತಿಯ ಆವಾಸದಿಂದ ಅತಿಶಯ ಕ್ಷೇತ್ರವಾಗಿ, ಜೈನ ಧರ್ಮೀಯರ ಕಾಶಿಯಾಗಿ ನಿತ್ಯ ಹಿಂದೂ ಹಾಗೂ ಜೈನಭಕ್ತರನ್ನು ಸೆಳೆಯುತ್ತಿದೆ.

Advertisement

ಜೈನ ರುಚಿಯ ಇಲ್ಲಿನ ಭೋಜನಕ್ಕೆ ಮಾರುಹೋಗದವರೇ ಇಲ್ಲ. 1400 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರವು ರಾಜರ ಆಡಳಿತಕ್ಕೂ ಒಳಪಟ್ಟಿತ್ತು. ಅಂದಿನಿಂದಲೂ ದಾಸೋಹ ಪರಂಪರೆ ಇದೆ. ಸಾಂತರಸರು ಈ ಕ್ಷೇತ್ರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸಾವಿರ ವರ್ಷ ಆಳಿದ್ದರು. ನಂತರದ ಕಾಲದಲ್ಲೂ ಚತುರ್ವಿಧ ದಾನಗಳು ನಡೆಯುತ್ತಾ ಬಂದಿವೆ.

ನಿತ್ಯ ಅನ್ನಸಂತರ್ಪಣೆ: ಇಲ್ಲಿ ಮೂರು ಹೊತ್ತು ದಾಸೋಹ ನಡೆಯುತ್ತದೆ. ಪ್ರತಿನಿತ್ಯ ಕನಿಷ್ಠ 750 ಭಕ್ತಾದಿಗಳು ಶ್ರೀ ಪದ್ಮಾವತಿ ಸನ್ನಿಧಾನದ ಅನ್ನಪ್ರಸಾದವನ್ನು ಸವಿಯುತ್ತಾರೆ. ಶುಕ್ರವಾರ, ಅಮವಾಸ್ಯೆ, ಹುಣ್ಣಿಮೆ ಹಾಗೂ ರಜಾ ದಿನಗಳಂದು, 1500ಕ್ಕೂ ಹೆಚ್ಚು ಮಂದಿ ಭೋಜನ ಸ್ವೀಕರಿಸುತ್ತಾರೆ.

ಭೋಜನಶಾಲೆ ಹೇಗಿದೆ?”: ಹಲವು ಶತಮಾನಗಳಿಂದ, ಪಾರಂಪರಿಕವಾಗಿ ಇಲ್ಲಿ ದಾಸೋಹ ವ್ಯವಸ್ಥೆ ಇದ್ದರೂ, 2016ರಲ್ಲಿ ನೂತನ ಭೋಜನ ಶಾಲೆಯನ್ನು ತೆರೆಯಲಾಯಿತು. ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ “ಅಭೀಷ್ಠ ಪ್ರಸಾದ ಭವನ’ ನಿರ್ಮಾಣಗೊಂಡಿದೆ.

– ಸ್ಟೀಮ್‌ನಲ್ಲಿ ಅಡುಗೆ ವ್ಯವಸ್ಥೆ
– ಎರಡು ಮಹಡಿಯ ಭೋಜನಶಾಲೆ
– ಏಕಕಾಲದಲ್ಲಿ 500 ಮಂದಿ ಭೋಜನ ಸಾಮರ್ಥ್ಯ

Advertisement

ಭಕ್ಷ್ಯ ಸಮಾಚಾರ
– ಜೈನಶೈಲಿಯ ಭೋಜನ. ಈರುಳ್ಳಿ- ಬೆಳ್ಳುಳ್ಳಿ ಬಳಸದೆ ಅಡುಗೆ.
– ನಿತ್ಯದ ಊಟದಲ್ಲಿ ಅನ್ನ, ಸಾಂಬಾರು, ಪಲ್ಯ, ಪಾಯಸ, ಉಪ್ಪಿನಕಾಯಿ, ಮಜ್ಜಿಗೆ ಇರುತ್ತದೆ.
– ಜಾತ್ರೆ, ಶ್ರಾವಣ, ನವರಾತ್ರಿ, ಕಾರ್ತಿಕ ಮಾಸದ ವಿಶೇಷ ದಿನಗಳಲ್ಲಿ ಕೋಸಂಬರಿ, ಪ‌ಲಾವ್‌, ಜಿಲೇಬಿ, ಪುಳಿಯೊಗರೆ, ಹುಣಸೇಗಟ್ಟಿ, ಸಂಡಿಗೆ, ಮೊಸರುಬಜ್ಜಿ, ಚಟ್ನಿ ಇತ್ಯಾದಿ.
– ಪ್ರತಿದಿನ ಬೆಳಗ್ಗೆ ಉಪಾಹಾರವಾಗಿ ಉಪ್ಪಿಟ್ಟು, ಪೇಪರ್‌ ಅವಲಕ್ಕಿ, ಉಪ್ಪಿನಕಾಯಿ, ಟೀ- ಕಾಫಿ ವ್ಯವಸ್ಥೆ.
– ವಿಶೇಷ ದಿನಗಳಲ್ಲಿ ಉಪಾಹಾರಕ್ಕೆ ಇಡ್ಲಿ, ಸಾಂಬಾರ್‌, ಗೋದಿಹಲ್ವಾ.

ವೇಳಾಪಟ್ಟಿ
ಉಪಾಹಾರ: ಬೆಳಗ್ಗೆ 8ರಿಂದ 9.30ರವರೆಗೆ
ಮಧ್ಯಾಹ್ನ ಭೋಜನ: ಮಧ್ಯಾಹ್ನ 12ರಿಂದ 2
ರಾತ್ರಿ ಭೋಜನ: ಸಂಜೆ 4.30ರಿಂದ 6ರವರೆಗೆ

ಸಂಖ್ಯಾ ಸೋಜಿಗ
1- ಕ್ವಿಂಟಲ್‌ ಅಕ್ಕಿಯಿಂದ ಅನ್ನ
6- ಬಾಣಸಿಗರಿಂದ ಅಡುಗೆ ತಯಾರಿ
20- ಕಿಲೋ ತರಕಾರಿ ನಿತ್ಯ ಬಳಕೆ
750- ಮಂದಿಗೆ ನಿತ್ಯ ಭೋಜನ
1500 - ಮಂದಿ, ವಿಶೇಷ ದಿನಗಳಲ್ಲಿ ಭೋಜನ
2016- ನೂತನ ಭೋಜನ ಶಾಲೆ ಆರಂಭ
3,50,000- ಮಂದಿ, ಈ ವರ್ಷ ಭೋಜನ ಸ್ವೀಕಾರ

* ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next