Advertisement

ಆಹಾರ ಕಲಬೆರಕೆ ಮಾಡಿದರೆ ಜೈಲೂಟ

06:04 AM Jan 11, 2019 | Team Udayavani |

ಕಲಬುರಗಿ: ಮಕ್ಕಳು ಕುಡಿಯುವ ಹಾಲಿನಿಂದ ಹಿಡಿದು ಪ್ರತಿ ಆಹಾರವೂ ಕಲಬೆರಕೆಯಾಗುತ್ತಿದ್ದು, ಈ ರೀತಿ ಕಲಬೆರಕೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಎಚ್ಚರಿಕೆ ನೀಡಿದರು.

Advertisement

ನಗರದ ಜಿಲ್ಲಾ ಕೋರ್ಟ್‌ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಭವನದಲ್ಲಿ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲೆಯ ಗ್ರಾಹಕ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2018’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಹಾರ ಕಲಬೆರಕೆ ಪ್ರಕರಣ ಕಂಡುಬಂದರೆ ತಕ್ಷಣವೇ ಆಹಾರ ಸಂರಕ್ಷಣಾ ಅಧಿಕಾರಿಗಳಿಗೆ ಆಹಾರದ ಮಾದರಿ ಪಡೆದು ಪ್ರಯೋಗಾಲಯದಲ್ಲಿ ಪರೀಕ್ಷಿಸಿಸುವಂತೆ ತಿಳಿಸುತ್ತೇನೆ ಎಂದರು.

ಜಿಲ್ಲಾ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳಿಂದ ನಿರಪೇಕ್ಷಣಾ ಪತ್ರ (ಎನ್‌ಒಸಿ) ಪತ್ರ ಪಡೆಯದ ಹೊರತು ಯಾವುದೇ ಹೊಸ ಆಹಾರ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದಿಲ್ಲ. ಈ ಕುರಿತು ಆದೇಶ ಹೊರಡಿಸಲಾಗುವುದು. ಈಗಾಗಲೇ ಇರುವ ಅಂಗಡಿಗಳ ಮಾಲೀಕರು ಜ. 31 ರೊಳಗೆ 100 ರೂ. ಪಾವತಿಸಿ ಆಹಾರ ಸಂರಕ್ಷಣಾ ಅಧಿಕಾರಿಗಳಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು. ಈ ಅವಧಿಯೊಳಗೆ ನಿರಪೇಕ್ಷಣಾ ಪತ್ರ ಪಡೆಯದಿದ್ದರೆ ಅಂತಹ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಸುಳ್ಳಾಡಿ ಮಾರಮ್ಮ ದೇವಾಲಯದಲ್ಲಿ ವಿಷ ಆಹಾರ ಸೇವಿಸಿ ಭಕ್ತರು ಮೃತಪಟ್ಟಿರುವ ಪ್ರಕರಣ ಪ್ರಸ್ತಾಪಿಸಿದ ಜಿಲ್ಲಾಧಿಕಾರಿಗಳು ವಿಷಾಹಾರ ಸೇವನೆಯಿಂದ ಅನೇಕ ಗಂಭೀರ ಪರಿಣಾಮಗಳಾಗುತ್ತವೆ. ಕೆಲವು ಹೋಟೆಲ್‌ಗ‌ಳಲ್ಲಿ ರಾತ್ರಿ ಪದಾರ್ಥಗಳನ್ನು ಬೆಳಗ್ಗೆ ಬಿಸಿ ಮಾಡಿಕೊಡುತ್ತಿರುವ ನಿರ್ದೇಶನಗಳಿವೆ. ಹೀಗಾಗಿ ಎಲ್ಲ ಆಹಾರ ಮಳಿಗೆಗಳು ಪರವಾನಗಿ ಪಡೆಯುವುದು ಕಡ್ಡಾಯ ಎಂದು ಹೇಳಿದರು.

Advertisement

ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌. ಮಾಣಿಕ್ಯ, ಗ್ರಾಹಕರ ಹಿತರಕ್ಷಣಾ ಕಾಯ್ದೆ ಕುರಿತು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜಾ ಪಿ. ಮಾತನಾಡಿ, ಗ್ರಾಹಕರ ಹಿತರಕ್ಷಣಾ ಕಾಯ್ದೆ ಉಲ್ಲಂಘನೆಯಾದಲ್ಲಿ ಗ್ರಾಹಕರ ವೇದಿಕೆ ಮೂಲಕ ಸೂಕ್ತ ಪರಿಹಾರ ಪಡೆಯಲು ಗಮನಹರಿಸಬೇಕು. ಸೇವಾದಾರರು, ಸರಬರಾಜುದಾರರು ಗ್ರಾಹಕರ ಹಿತರಕ್ಷಣಾ ಕಾಯ್ದೆ ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ನೆಲ್ದಾಳ್‌ ಶರಣಪ್ಪ ಮಾತನಾಡಿ 1989ರಲ್ಲಿ ಕಲಬುರಗಿಯಲ್ಲಿ ಆರಂಭವಾದ ವೇದಿಕೆಗೆ ಇದುವರೆಗೂ 4155 ಪ್ರಕರಣಗಳು ಸಲ್ಲಿಕೆಯಾಗಿದ್ದು, 3969 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ತಮ್ಮ ಅವಧಿಯಲ್ಲಿ ಸಲ್ಲಿಕೆಯಾದ 218 ಅರ್ಜಿಗಳ ಪೈಕಿ 178 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.

ನ್ಯಾಯವಾದಿ ವೈಜನಾಥ ಝಳಕಿ ಮಾತನಾಡಿ, ಸುಶಿಕ್ಷಿತ ಗ್ರಾಹಕರೇ ದೇಶದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಬಲ್ಲರು. 20 ಲಕ್ಷ ರೂ. ವರೆಗಿನ ಪರಿಹಾರಕ್ಕೆ ಜಿಲ್ಲಾ ಗ್ರಾಹಕರ ವೇದಿಕೆಗೆ, 20 ಲಕ್ಷ ರೂ. ಗಳಿಂದ ಒಂದು ಕೋಟಿ ರೂ. ವರೆಗಿನ ಪರಿಹಾರಕ್ಕಾಗಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಆಯೋಗಕ್ಕೆ ಹಾಗೂ ಒಂದು ಕೋಟಿ ರೂ.ಗಿಂತ ಹೆಚ್ಚಿನ ಪರಿಹಾರಕ್ಕಾಗಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯ ನಾಗಶೆಟ್ಟಿ ಜಿ. ಗಂದಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ., ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ದೀಪಕ್‌, ವಿಶ್ವ ಸೇವಾ ಮಿಷನ್‌ನ ಅಧ್ಯಕ್ಷ ವಿಶ್ವನಾಥ ಸ್ವಾಮೀಜಿ ಹಾಗೂ ಜಿಲ್ಲೆಯ ಗ್ರಾಹಕರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹಿರಿಯ ಉಪನಿರ್ದೇಶಕ ಕೆ. ರಾಮೇಶ್ವರಪ್ಪ ಸ್ವಾಗತಿಸಿದರು, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ರಫೀಕ ಲಾಡಜಿ ವಂದಿಸಿದರು.

ಆಹಾರ ಕಲಬೆರಕೆ ಬಗ್ಗೆ ಗ್ರಾಹಕರಿಗೆ ವ್ಯಾಪಕವಾಗಿ ಅರಿವು ಮೂಡಿಸಬೇಕು. ಹಾಗಾದಾಗ ಮಾತ್ರ ಕಲಬೆರಕೆ ತಡೆಗಟ್ಟಲು ಸಾಧ್ಯ. ಕೇವಲ ಮಹಾನಗರ ಪಾಲಿಕೆಗಳಲ್ಲಿ ಮಾತ್ರ ಅಲ್ಲ. ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಡಿ, ಹೋಟೆಲ್‌ಗ‌ಳು ನಿರಪೇಕ್ಷಣಾ ಪತ್ರ ಪಡೆಯುವುದು ಕಡ್ಡಾಯ.
•ಆರ್‌. ವೆಂಕಟೇಶಕುಮಾರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next