Advertisement

ರಸ್ತೆ ದುರಸ್ತಿ ಮಾಡುವಂತೆ ಜೈ ಕನ್ನಡಿಗರ ಸೇನೆ ಮನವಿ

05:11 PM Aug 31, 2022 | Team Udayavani |

ಕಲಬುರಗಿ: ನಗರದ ವಾರ್ಡ್‌ ನಂ. 12ರಲ್ಲಿ ಬರುವ ನಗರೇಶ್ವರ ಶಾಲೆಯ ಎದುರಗಡೆ ಇರುವ ರಸ್ತೆಯು ತುಂಬಾ ಹದಗೆಟ್ಟಿದ್ದು ಕೂಡಲೇ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಜೈ ಕನ್ನಡಿಗರ ಸೇನೆ ಘಟಕದ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಲಾಯಿತು.

Advertisement

ಈ ರಸ್ತೆಯು ನಗರೇಶ್ವರ ಶಾಲೆಯಿಂದ ವಿಆರ್‌ಎಲ್‌ ಕಚೇರಿ ವರೆಗೆ ಹದಗೆಟ್ಟಿದೆ. ಈ ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು, ಸಾರ್ವಜನಿಕರು, ವಯೋವೃದ್ಧರು ಓಡಾಡುವುದು ತುಂಬಾ ಕಷ್ಟವಾಗಿದೆ. ಹಲವು ಬಾರಿ ಮಕ್ಕಳು ಮತ್ತು ವೃದ್ಧರು ಬಿದ್ದು ಗಾಯಗೊಂಡಿದ್ದಾರೆ. ಈಗಂತೂ ಮಳೆಗಾಲ ಇರುವುದರಿಂದ ರಸ್ತೆ ತುಂಬೆಲ್ಲ ನೀರು, ಕೆಸರು ತುಂಬಿ ಓಡಾಡಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕುಲಗೆಟ್ಟು ಹೋಗಿದೆ. ಆದರೂ ಅನಿವಾರ್ಯ ಬೇರೆ ದಾರಿ ಇಲ್ಲದೇ ಜನರು ಮನೆಗಳಿಗೆ ಸೇರುವಂತಹ ಪರಿಸ್ಥಿತಿ ಏರ್ಪಟ್ಟಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಪಾಲಿಕೆ ಅಧಿಕಾರಿಗಳು ರಸ್ತೆ ವೀಕ್ಷಣೆ ಮಾಡಬೇಕು. ಮಣ್ಣು ಹಾಕಿ ಇನ್ನಷ್ಟು ಕೆಸರು ಮಾಡುವ ಬದಲು ಕೂಡಲೇ ರಸ್ತೆಯನ್ನು ಟಾರ್‌ ಹಾಕುವ ಮೂಲಕ ದುರಸ್ತಿ ಮಾಡಬೇಕು ಎಂದು ಮನವಿ ಮಾಡಿದರು.

ಜೈ ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ದತ್ತು ಹೆಚ್‌. ಭಾಸಗಿ, ಜಗನ್ನಾಥ ಸೂರ್ಯವಂಶಿ, ರಾಮಾ ಪೂಜಾರಿ, ಹುಸೇನ, ಚೈತನ ಸಾಂಗೈಕರ್‌, ಕವಿರಾಜ, ಸಂಜು, ಉಮೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next