Advertisement

ಜಗಜೀವನರಾಮ್‌ ಭವನ ನಿರುಪಯುಕ್ತ

02:37 PM Nov 20, 2019 | Suhan S |

ಕುಷ್ಟಗಿ: ಪಟ್ಟಣದ ಹೊರವಲಯದಲ್ಲಿರುವ ಡಾ|ಬಾಬು ಜಗಜೀವನರಾಮ್‌ ಭವನ ಉದ್ಘಾಟನೆ ಭಾಗ್ಯ ಕಂಡರೂ ನಿರುಪಯುಕ್ತವಾಗಿದ್ದು, ಸ್ಮಾರಕವಾಗಿ ನಿಂತಿದೆ.

Advertisement

ಸಮಾಜ ಕಲ್ಯಾಣ ಇಲಾಖೆಯ 2 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಈ ಬೃಹತ್‌ ಭವನವನ್ನು ಕಳೆದ ಜುಲೈ 9ರಂದು ಹಿಂದಿನ ಸಕ್ಕರೆ ಸಚಿವ ಆರ್‌.ಬಿ. ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಇ. ತುಕಾರಾಮ್‌ ಲೋಕಾ ರ್ಪಣೆಗೊಳಿಸಿದ್ದರು. ಭವನ ಮಂಜೂರಿ ಮಾಡಿದ್ದ ಹಿಂದಿನ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಇದಕ್ಕೆ ಸಾಕ್ಷಿಯಾಗಿದ್ದರು. ಸದರಿ ಭವ್ಯ ಭವನಕ್ಕಾಗಿ ಜಮೀನು ಖರೀದಿ,  ನಂತರ ಕಟ್ಟಡ ಕಾಮಗಾರಿಗೆ ತೋರಿದಷ್ಟು ಉತ್ಸುಕತೆಯನ್ನು ಕಟ್ಟಡ ಪೂರ್ಣಗೊಂಡ ಬಳಿಕ ಇಲ್ಲವಾಗಿದೆ.

ಭವನದ ಉದ್ಘಾಟನೆ ಸಮಾರಂಭ ಹೊರತು ಪಡಿಸಿದರೆ ಈವರೆಗೂ ಬಳಕೆಯಾಗದೇ ನಿರುಪಯುಕ್ತವಾಗಿದೆ. ಭವನ ಕಟ್ಟಡ ವಿಶಾಲ ವೇದಿಕೆ, ಸಭಾಂಗಣ, ಬಾಲ್ಕನಿ ವ್ಯವಸ್ಥೆ ಪ್ರತ್ಯೇಕ ಕೊಠಡಿ, ಬೆಳಕಿನ ವ್ಯವಸ್ಥೆ, ನೀರಿನ ವ್ಯವಸ್ಥೆ ಎಲ್ಲವೂ ಇದೆ. ತಹಶೀಲ್ದಾರ್‌ ಕಚೇರಿ ಹಿಂದುಗಡೆ ಇರುವ ಸದರಿ ಭವನ ಪಟ್ಟಣದ ಹೊರವಲಯದಲ್ಲಿದೆ. ಸಮಾಜ ಕಲ್ಯಾಣ ಇಲಾಖೆ ಅನುಮತಿ ನೀಡಿದರೂ ಭವನ ಬಳಕೆ ಮಾಡಲು ಯಾರೂ ಮುಂದೆ ಬಾರದೇ ಇರುವುದು ಅಚ್ಚರಿ ಮೂಡಿಸಿದೆ. ಸ

ತಾಲೂಕಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಗಳೂ ಸಹ ಈ ಭವನದಲ್ಲಿ ಸರ್ಕಾರ ಕಾರ್ಯಕ್ರಮ, ಮಹನೀಯರ ಜಯಂತಿ ಹಾಗೂ ತರಬೇತಿ ಇತ್ಯಾದಿ ಕಾರ್ಯಕ್ರಮಗಳಿಗೆ ಬಳಸಿಕೊಂಡಿಲ್ಲ. ಮದ್ಯ ವ್ಯಸನಿಗಳು ಕುಡಿದು ಬಾಟಲಿ ಬೀಸಾಡಿದ್ದು ಕಟ್ಟಡದ ಮೇಲುಸ್ತುವಾರಿ ಇಲ್ಲದಂತಾಗಿದೆ.

ಸಮಿತಿಗಾಗಿ ಪ್ರಸ್ತಾವನೆ:  ಡಾ|ಬಾಬು ಜಗಜೀವನರಾಮ್‌ ಭವನ ನಿರ್ವಹಣೆಗೆ ತಾಲೂಕು ಮಟ್ಟದ ಸಮಿತಿ ರಚಿಸಲಾಗಿದ್ದು, ತಹಶೀಲ್ದಾರ್‌ ಅಧ್ಯಕ್ಷರಾಗಿದ್ದು, ತಾಪಂ ಇಒ, ಜಿಪಂ ಎಇಇ, ಪುರಸಭೆ ಮುಖ್ಯಾಧಿಕಾರಿ, ಲೋಕೋಪಯೋಗಿ ಇಲಾಖೆಯ ಎಇಇ ಸದಸ್ಯರಾಗಿದ್ದಾರೆ. ಮೂವರನ್ನು ನಾಮನಿರ್ದೇಶಿತ ಸದಸ್ಯರಾಗಿ ನೇಮಿಸುವುದು ವಿಳಂಬವಾಗಿದೆ. ಮಾದಿಗ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಮೇಲಿನಮನಿ, ಕೃಷ್ಣಮೂರ್ತಿ ಟೆಂಗುಂಟಿ, ಹನುಮಂತಪ್ಪ ಇಂಡಿ ಅವರ ಹೆಸರನ್ನು ಕಳೆದ ನ.5ರಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಿಕೊಟ್ಟಿದೆ. ಈ ಸಮಿತಿ ನಾಮನಿರ್ದೇಶಿತ ಸದಸ್ಯರೆಂದು ಅನುಮೋದನೆ ಬಳಿಕ ಸದರಿ ಸಮಿತಿಗೆ ಡಾ| ಬಾಬು ಜಗಜೀವನರಾಮ್‌ ಭವನ ಹಸ್ತಾಂತರಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ತಾಲೂಕು ಅಧಿಕಾರಿ ದೇವಲ ನಾಯಕ್‌ ತಿಳಿಸಿದರು.

Advertisement

 

-ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next