Advertisement

ಲಿಂಗ ಮಧ್ಯೆ ಜಗತ್‌ ಸರ್ವಂ!

07:18 AM Feb 19, 2019 | |

ರಾಯಚೂರು: ಲಿಂಗ ಮಧ್ಯೆ ಜಗತ್‌ ಸರ್ವಂ ಎನ್ನುವಂತೆ ಇಡೀ ಭೂಮಂಡಲವೇ ಲಿಂಗದೊಳಗೆ ಅಡಗಿದಂತೆ ವೀರಘೋಟದಲ್ಲಿ ಸೋಮವಾರ ಮಹಾಮಂಡಲವೇ ನಿರ್ಮಾಣಗೊಂಡಿತ್ತು. ಅತಿ ಅಪರೂಪ ಎನಿಸುವ ಗಣ ಇಷ್ಟಲಿಂಗ ಪೂಜಾ ಕಾರ್ಯಕ್ರಮ ವೈಭವದಿಂದ ಜರುಗುವ ಮೂಲಕ ಅದೊಂದು ದಾಖಲೆಯಾಗಿ ಉಳಿಯಿತು. ಯಾರೂ ಕೂಡ ಊಹಿಸದ ರೀತಿಯಲ್ಲಿ ನಡೆದ ಈ ಕಾರ್ಯಕ್ರಮ ಈ ಭಾಗದಲ್ಲೇ ಒಂದು ಮೈಲುಗಲ್ಲು ನಿರ್ಮಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಲಕ್ಷಾಂತರ ಜನ ಏಕಕಾಲಕ್ಕೆ ಲಿಂಗಪೂಜೆ ಮಾಡಿಕೊಳ್ಳುವ ಮೂಲಕ ಮಂತ್ರಘೋಷ ಮೊಳಗಿಸಿದ್ದು, ಅತ್ತ ನದಿ, ಇತ್ತ ಬೆಟ್ಟಗಳ ಮಧ್ಯ ಪ್ರತಿಧ್ವನಿಸಿತು.

Advertisement

ಲಕ್ಷಾಂತರ ಜನ ಶ್ರದ್ಧೆ ಭಕ್ತಿಯಿಂದ ಲಿಂಗಪೂಜೆಗೆ ಆಗಮಿಸಿದ್ದರು. ದಂಪತಿ ಸಹಿತ ಬಂದವರೇ ಅಧಿಕವಾಗಿದ್ದು ವಿಶೇಷ. ಇನ್ನೂ ಅನೇಕರು ಇಡೀ ಕುಟುಂಬ ಸಹಿತರಾಗಿ ಪಾಲ್ಗೊಂಡಿದ್ದರು. ಆಬಾಲವೃದ್ಧರಾದಿಯಾಗಿ ಎಲ್ಲರೂ ಲಿಂಗಪೂಜೆಗೆ ಕುಳಿತಿದ್ದು ಕಂಡು ಬಂತು. ಒಬ್ಬರಿಗೆ 555 ರೂ. ನೋಂದಣಿ ಶುಲ್ಕ ಮಾಡಿದ್ದರೂ ಕೆಲವರು ಇಡೀ ಕುಟುಂಬ ಸದಸ್ಯರ ಹೆಸರು ನೋಂದಾಯಿಸಿದ್ದರು. ಹೀಗಾಗಿ 5/5 ಅಡಿ ಸ್ಥಳವನ್ನು ಒಂದು ಕುಟುಂಬಕ್ಕೆ ನೀಡಲಾಗಿತ್ತು.

ಸೋಮವಾರ ಬೆಳಗಿನ ಜಾವ ಮೂರು ಗಂಟೆಯ ಚುಮುಚುಮು ಚಳಿಯಲ್ಲೂ ಸಾಕಷ್ಟು ಜನ ಕೃಷ್ಣ ನದಿಯಲ್ಲಿ ಮಿಂದು ಪೂಜೆಗೆ ಆಗಮಿಸಿದರು. ಇನ್ನು ಜಿಲ್ಲೆಯ ಜನ ಮನೆಯಲ್ಲಿ ಸ್ನಾನ ಮುಗಿಸಿಕೊಂಡು ಬಂದು ಪೂಜೆಗೆ ಕುಳಿತರು. ಕೆಲವರು ಮಡಿ ಬಟ್ಟೆಯಿಂದ ಆಗಮಿಸಿದ್ದರೆ, ಬಹುತೇಕರು ಹೊಸ ವಸ್ತ್ರ ಧರಿಸಿ ಬಂದಿದ್ದರು. ಜಿಲ್ಲೆಯ ಪ್ರತಿ ಗ್ರಾಮದಿಂದ ಕನಿಷ್ಠ 8-10 ಹಾಗೂ ಗರಿಷ್ಠ 100 ಜನ ಲಿಂಗಪೂಜೆ ಮಾಡಿಕೊಂಡಿದ್ದಾರೆ ಎಂದು ಆಯೋಜಕರು ಮಾಹಿತಿ ನೀಡಿದರು.

ಸಿದ್ಧತೆ ಅಚ್ಚುಕಟ್ಟು: ಲಿಂಗಪೂಜೆಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಠದಿಂದ ಅಚ್ಚುಕಟ್ಟಾಗಿಯೇ ನಿರ್ವಹಿಸಲಾಗಿತ್ತು. ಪೂಜಾ ಸ್ಥಳದ ಸುತ್ತಲೂ ಟ್ರ್ಯಾಕ್ಟರ್‌ಗಳಲ್ಲಿ ಭಕ್ತರಿಗೆ ನೀಡಲು ಸಿದ್ಧಗೊಳಿಸಿದ್ದ ಪೂಜಾ ಸಾಮಗ್ರಿಗಳ ಪೊಟ್ಟಣಗಳನ್ನು ಇಡಲಾಗಿತ್ತು. ಬೆಂಗಳೂರಿನಿಂದ ಸೌಂಡ್‌ ಸಿಸ್ಟಮ್‌ ಹಾಗೂ ಕ್ಯಾಮೆರಾಗಳನ್ನು ತರಿಸಲಾಗಿತ್ತು. ಲಿಂಗಪೂಜೆ ಸ್ಥಳದಲ್ಲಿ ಸಾಕಷ್ಟು ಕಡೆ ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆ ಮೇಲೆ ಜಗದ್ಗುರು ಲಿಂಗಪೂಜೆ ಮಾಡಿಕೊಳ್ಳುವ ದೃಶ್ಯ ಎಲ್ಲರಿಗೂ ಕಾಣುವಂತೆ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಸುತ್ತಲಿನ ಐದು ಕಿ.ಮೀ. ವರೆಗೆ ಮೈಕ್‌ಗಳನ್ನು ಅಳವಡಿಸಲಾಗಿತ್ತು. ಎಲ್ಲ ಕಡೆಯೂ ಕಾರ್ಯಕ್ರಮದ ಮಾಹಿತಿ ಲಭ್ಯವಾಗುತ್ತಿತ್ತು. ಶ್ರೀಶೈಲ ಜಗದ್ಗುರುಗಳಿಗೆ ಲಿಂಗ ಪೂಜೆ ಮಾಡಿಕೊಳ್ಳಲು ರಜತ ಸಿಂಹಾಸನ ತರಲಾಗಿತ್ತು.

ಏನಂತಾರೆ ಭಕ್ತರು ಇದೊಂದು ವಿಶೇಷ ಕಾರ್ಯಕ್ರಮ. ನಮ್ಮ ಇಡೀ ಕುಟುಂಬದವರು ಪಾಲ್ಗೊಂಡಿದ್ದೆವು. ಇಷ್ಟು ಜನ ಪೂಜೆ ಮಾಡಿಕೊಳ್ಳುತ್ತಾರೆ ಎಂಬ ವಿಚಾರ ಕೇಳಿದ್ದೆವು. ಆದರೆ, ಇಂದು ನೋಡುವುದೇ ಮಾತ್ರವಲ್ಲ ನಾನು ಕೂಡ ಭಾಗಿಯಾದೆ ಎಂಬ ಖುಷಿ ಇದೆ.  ಸಂದೀಪ ಪಾಟೀಲ, ಹಟ್ಟಿ ಚಿನ್ನದ ಗಣಿ ನೌಕರ

Advertisement

ಇಂಥ ಕಾರ್ಯಕ್ರಮ 50 ವರ್ಷಗಳ ಹಿಂದೆ ಮಾಡಿದ್ದರು ಎಂದು ಕೇಳಿದ್ದೆವು. ಈಗ ಮಾಡುತ್ತಿರುವುದು ಕಂಡು ಖುಷಿಯಾಯಿತು. ಶರಣರು ಲೋಕಕಲ್ಯಾಣಾರ್ಥ ಇಂಥ ಕಾರ್ಯಕ್ರಮ ಆಗಾಗ ಮಾಡುತ್ತಿರುತ್ತಾರೆ. ಮಳೆ ಬೆಳೆ ಚನ್ನಾಗಿ ಬಂದು ರೈತರ ಕಷ್ಟ ತೀರಿದರೆ ಸಾಕು. 
 ಭೀಮಪ್ಪ ಪೂಜಾರಿ, ಮಾಚಿಗುಂಡ್ಲ, ಯಾದಗಿರಿ ಜಿಲ್ಲೆ

ಇದು ಸಣ್ಣಪುಟ್ಟ ಜನರಿಂದ ಆಗುವ ಕೆಲಸವಲ್ಲ. ಈ ಸ್ಥಾನ ಮಹಿಮೆ ಹಾಗೂ ಶರಣರ ಶಕ್ತಿಯಿಂದ ನಡೆಯುವ ಪವಾಡಗಳಿವು. ಇಷ್ಟು ಜನ ಸೇರಿ ಏಕಕಾಲಕ್ಕೆ ಲಿಂಗಪೂಜೆ ಮಾಡುವುದು ಹುಡುಗಾಟವಲ್ಲ. ಮತ್ತೆ ಇಂಥ ದೃಶ್ಯ ಕಣ್ತುಂಬಿಕೊಳ್ಳಲು ಎಷ್ಟು ವರ್ಷಗಳು ಬೇಕಾಗುತ್ತದೆಯೋ..?
 ಅಮರಪ್ಪ, ಐದಬಾವಿ 

ನಾವು ಪ್ರತಿ ವರ್ಷ ಮಠದ ಜಾತ್ರೆಗೆ ಬಂದು ಹೋಗುತ್ತೇವೆ. ಆದರೆ, ಈ ಬಾರಿ ಲಿಂಗಪೂಜೆ ಮಾಡಿಕೊಳ್ಳಲು ಬಂದಿದ್ದೇವೆ. ಜಾತ್ರೆಯಲ್ಲಿ ಇರುವುದಕ್ಕಿಂತ ಎರಡೂಮೂರು ಪಟ್ಟು ಜನ ಸೇರಿದ್ದಾರೆ. ನಿಜಕ್ಕೂ ಇದು ಅದ್ಭುತ ಕಾರ್ಯಕ್ರಮ.
 ಗುಂಡಮ್ಮ, ತಾಳಿಕೋಟೆ

ನಾವು ನೋಡೋಕೆ ಬಂದಿದ್ದೇವೆ. ಜಾತ್ರೆ ಹೊತ್ತಲ್ಲಿ ಇರುವ ಜನರಿಗೂ ಈಗ ಬಂದಿರುವ ಜನರಿಗೂ ಭಾರೀ ವ್ಯತ್ಯಾಸ ಇದೆ. ಇಷ್ಟಲಿಂಗ ಪೂಜೆ ಮಾಡುವುದು ನೋಡಿ ಖುಷಿಯಾಯಿತು. ಅಡವಿಲಿಂಗ ಸ್ವಾಮೀಜಿ ಮನಸ್ಸು ಮಾಡಿದರೆ ಏನಾದರೂ ಮಾಡಬಲ್ಲರು ಎನ್ನಲಿಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ.
 ತಿಮ್ಮಣ್ಣ ಗುತ್ತಿಹಾಳ, ಅಸ್ಕಿ, ವಿಜಯಪುರ ಜಿಲ್ಲೆ

ಸಾಗವಾನಿ ಪೀಠ ದೇಣಿಗೆ ವೀರಘೋಟದ ಆಸನಕಟ್ಟೆ ಮಠದ ಪೀಠಾಧಿ ಪತಿ ಶ್ರೀ ಅಡವಿಲಿಂಗ ಸ್ವಾಮೀಜಿಗೆ ಇಬ್ಬರು ಭಕ್ತರು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಸಾಗವಾನಿ ಪೀಠವನ್ನು ದೇಣಿಗೆ ನೀಡಲು ತರಲಾಗಿತ್ತು. ತಾಳಿಕೋಟೆ ತಾಲೂಕಿನ ಅಸ್ಕಿ ಗ್ರಾಮದ ಮೌನೇಶ ಬಡಿಗೇರ ಹಾಗೂ ರಾಮನಗೌಡ ಎನ್ನುವವರು ಸುಮಾರು 25 ಸಾವಿರ ಮೌಲ್ಯದ ಪೀಠವನ್ನು ತಯಾರಿಸಿಕೊಂಡು ಬಂದಿದ್ದರು. ಮೌನೇಶ ಬಡಿಗೇರ ಖುದ್ದು ಪೀಠ ತಯಾರಿಸಿದ್ದಾರೆ. ಪೀಠವನ್ನು ವಾಹನದ ಮೇಲೆ ಕಟ್ಟಿಕೊಂಡು ಗ್ರಾಮದ 50ಕ್ಕೂ ಹೆಚ್ಚು ಜನ ಆಗಮಿಸಿದ್ದರು. ಈ ಮಠಕ್ಕೆ ಜಂಬಗಿಮಠ ಎನ್ನುವ ಶಾಖಾ ಮಠವಿದ್ದು, ಗುರುಗಳು ಅಲ್ಲಿಗೆ ಪ್ರತಿ ವರ್ಷ ಬರುತ್ತಾರೆ. ಆಗ ನಮ್ಮೂರಿಗೆ ಬಂದು ಹೋಗುತ್ತಾರೆ ಎಂದು ವಿವರಿಸಿದರು ಗ್ರಾಮಸ್ಥರು.

ಟ್ರ್ಯಾಫಿಕ್‌ ಸಮಸ್ಯೆ ನಿವಾರಣೆಗೆ ಒತು ಜನರ ಆಗಮನ ನಿರೀಕ್ಷೆ ಹೆಚ್ಚಿದ್ದ ಕಾರಣ ಟ್ರ್ಯಾಫಿಕ್‌ ವಿಚಾರದಲ್ಲಿ ಮೊದಲೇ ಮುಂಜಾಗ್ರತೆ ವಹಿಸಲಾಗಿತ್ತು. ಯಾವುದೇ ಖಾಸಗಿ ವಾಹನಗಳನ್ನು 5 ಕಿ.ಮೀ. ದೂರದಲ್ಲೇ ನಿಲ್ಲಿಸುವ ವ್ಯವಸ್ಥೆ ಮಾಡಲಾಗಿತ್ತು. ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ವಿಐಪಿಗಳಿಗೆ ಮಾತ್ರ ನೇರವಾಗಿ ವೇದಿಕೆಗೆ ತೆರಳಲು ಪ್ರತ್ಯೇಕ ಮಾರ್ಗ ನಿರ್ಮಿಸಲಾಗಿತ್ತು. ಆದರೂ ಜನಸಂದಣಿ ವಿಪರೀತವಾಗಿತ್ತು. ಜನರಿಗೂ ಏಕಮುಖೀ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರೆ ಇನ್ನೂ ಅನುಕೂಲವಾಗುತ್ತಿತ್ತು

ಹೈರಾಣಾದ ಪೊಲೀಸರು ಜನಸಂದಣಿ ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾದರು. ಕಳೆದ ಫೆ.14ರಿಂದಲೇ ಇಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಪೊಲೀಸರನ್ನು ನಿಯೋಜಿಸಲಾಗಿತ್ತು. ಗಣ ಇಷ್ಟಲಿಂಗ ಪೂಜೆ ನಿಮಿತ್ತ ಸೋಮವಾರ 3,500ಕ್ಕೂ ಅಧಿಕ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಬೆಳಗಿನ ಮೂರು ಗಂಟೆಯಿಂದ ಬರುವ ವಾಹನಗಳನ್ನು, 10 ಗಂಟೆ ಬಳಿಕ ಹಿಂದಿರುಗುವ ವಾಹನಗಳನ್ನು ನಿಯಂತ್ರಿಸುವಲ್ಲಿ ಟ್ರ್ಯಾಫಿಕ್‌ ಪೊಲೀಸರು ಸುಸ್ತಾದರು. ಇನ್ನು ಮಠದಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರು, ನದಿಯತ್ತ ಓಡಾಡುವವರು, ಊಟದ ವ್ಯವಸ್ಥೆ, ಹೀಗೆ ನಾನಾ ಕಡೆ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾದರು.

Advertisement

Udayavani is now on Telegram. Click here to join our channel and stay updated with the latest news.

Next