Advertisement
“” ವೆಂಕಣ್ಣಯ್ಯ… ವೆಂಕಣ್ಣಯ್ಯ…” ಹೊರಗಿನಿಂದ ಯಾವುದೋ ಪರಿಚಿತ ಸ್ವರ ಕೇಳಿಬಂತು. “”ಯಾರು ನೋಡು” ಎಂಬಂತೆ ಹೆಂಡತಿಗೆ ಕಣ್ಣುಸನ್ನೆ ಮಾಡಿದ ವೆಂಕಣ್ಣ. “”ವೆಂಕಣ್ಣಯ್ಯ ಇಲ್ವಾ ರಾಜಕ್ಕ?” ರಾಜೇಶ್ವರಿ ದೇವರ ಕೋಣೆಯಿಂದ ಹೊರಗೆ ಬರುತ್ತಲೇ ಕೇಳಿದನು ಶ್ರೀನಿವಾಸ. “”ಓ… ಸೀನಣ್ಣ ಬನ್ನಿ ಕೂರಿ” ಎನ್ನುತ್ತ ಕುರ್ಚಿಯೊಂದನ್ನು ಶ್ರೀನಿವಾಸನ ಬಳಿಗೆ ದೂಡಿದಳು ರಾಜಕ್ಕ. “”ಇರಲಿ, ರಾಜಕ್ಕ ಕೆಳಗೆ ಕೂರುತ್ತೇನೆ” ಎನ್ನುತ್ತ ತಣ್ಣಗಿನ ಕೆಂಪು ಹಾಸಿನ ನೆಲದ ಮೇಲೆ ಕುಳಿತ ಶ್ರೀನಿವಾಸ.
Related Articles
Advertisement
“” ಈ ಹಲಸಿನ ತೋಟಕ್ಕೆ ನಿನ್ನ ಅಪ್ಪನೆ ಒಂದು ರೀತಿ ಕಾರಣ. ಹತ್ತಲ್ಲ, ಹದಿನೈದು ಬೇಕಾದರೂ ಕೊಂಡುಹೋಗು. ಕುಹಕ ನುಡಿದನು ವೆಂಕಣ್ಣ. ಮತ್ತೆ ಬೊಂಬಾಯಿ ಬದುಕು ಹೇಗೆ ಉಂಟು?” ಎಂದು ವೆಂಕಣ್ಣನ ಪ್ರಶ್ನೆ.
“” ಪರವಾಗಿಲ್ಲ ವೆಂಕಣ್ಣ. ನೆಮ್ಮದಿ ಇದೆ. ಆದರೆ, ತೃಪ್ತಿ ಇಲ್ಲ” ಹೀಗೆ, ಒಂದಿಷ್ಟು ಹೊತ್ತು ಮಾತುಕತೆಯ ನಂತರ ಶ್ರೀನಿವಾಸ ಹೊರಟ. “”ಅಣ್ಣ , ನಾಡಿದ್ದು ತಪ್ಪಿಸಬೇಡಿ ಬನ್ನಿ” ಊಟಕ್ಕೆ ಮತ್ತೂಮ್ಮೆ ಆಹ್ವಾನ ಕೊಟ್ಟನು ಶ್ರೀನಿವಾಸ. ಅವನನ್ನು ಕಳುಹಿಸಿಕೊಟ್ಟು ವೆಂಕಣ್ಣ ಚಾವಡಿಯ ಕಂಬಕ್ಕೆ ಒರಗಿ ಕುಳಿತನು. ಹಿಂದಿನದೆಲ್ಲ ನೆನಪಿಗೆ ಬಂದಂತೆ ಆಯಿತು. ಸಾಮಾನ್ಯನಾಗಿದ್ದ ವೆಂಕಣ್ಣ “ಹಲಸಿನ ವೆಂಕಣ್ಣ’ ಆದ ಕಥೆ ಅದು..
ಆಗ ವೆಂಕಣ್ಣನಿಗೆ ಸುಮಾರು ಹದಿನೆಂಟು ವರ್ಷ ಬದುಕಿನಲ್ಲಿ ನಷ್ಟ ತುಂಬಿ ಹೋಗಿತ್ತು. ಓದುವ ಮನಸ್ಸಿದ್ದರೂ ಓದಲು ಹಣವಿಲ್ಲದ ಕಾರಣ ಏಳನೆಯ ತರಗತಿಗೆ ಓದು ಮೊಟಕುಗೊಂಡಿತ್ತು. ಅಸ್ತಮಾದ ಕಾರಣದಿಂದ ವೆಂಕಣ್ಣನ ಅಪ್ಪ ಬೇಗನೆ ತೀರಿಕೊಂಡಿದ್ದರು. ಎರಡು ತಂಗಿಯರ ಜವಾಬ್ದಾರಿ ಹೊತ್ತ ವೆಂಕಣ್ಣ ಅದು ಇದು ಕೆಲಸ ಮಾಡಿಕೊಂಡು ಕುಟುಂಬದ ಪಾಲನೆ ಮಾಡುತ್ತಿದ್ದನು. ಅದು ಯಾಕೋ ಒಂದು ದಿನ ಹಲಸಿನ ಹಣ್ಣಿನ ಕಡುಬು ತಿನ್ನುವ ಆಸೆಯಾಯಿತು. ತನ್ನ ಮನೆಯಲ್ಲಿ ಹಲಸಿನ ಮರ ಇಲ್ಲದ ಕಾರಣ ಆ ಪ್ರಾಂತ್ಯದಲ್ಲಿ ಹಲಸಿನ ಹಣ್ಣು ರುಚಿಯಾಗಿದ್ದ ಕೃಷ್ಣಣ್ಣರ ಮನೆಗೆ ಹೋಗಿ ಕೇಳಿದನು. ಆದರೆ ಕೃಷ್ಣಣ್ಣ ಹಣ್ಣು ಕೊಡದೆ, ಅವಮಾನ ಮಾಡಿ ಕಳುಹಿಸಿದ್ದ. ಮೊದಲಿನಿಂದಲೂ ಕೃಷ್ಣಣ್ಣನಿಗೆ ಬಡವರನ್ನು ಕಂಡರೆ ತಾತ್ಸಾರ. ಅದೇ ಕೃಷ್ಣಣ್ಣನ ಮೇಲಿನ ಹಗೆಗೆ ಬಿಸಿರಕ್ತದ ವೆಂಕಣ್ಣ ಕಷ್ಟಪಟ್ಟು ಹಗಲು ರಾತ್ರಿ ಎನ್ನದೆ ದುಡಿದು ಹಲಸಿನ ತೋಟ ಮಾಡಿದ್ದ. ಆತನ ತೋಟದ ಹಲಸು ಅದೆಷ್ಟು ಜನಜನಿತವಾಯಿತು ಎಂದರೆ, ಆ ಪ್ರಾಂತ್ಯದಲ್ಲಿ ಹಲಸಿನ ವೆಂಕಣ್ಣ ಎಂದೇ ಹೆಸರುವಾಸಿಯಾಗಿದ್ದ. ಯಾರ ಮನೆಯಲ್ಲಿ ವಿಶೇಷವಾದರೂ ಈತನ ಮನೆಯ ಹಲಸಿನಿಂದ ಮಾಡಿದ ಖಾದ್ಯ ಇದ್ದೇ ಇರುತ್ತಿತ್ತು. ಮದುವೆ, ಸೀಮಂತ, ಉಪನಯನದಿಂದ ಹಿಡಿದು ವೈಕುಂಠ, ಶ್ರಾದ್ಧ ಮುಂತಾದ ಸಮಾರಂಭಗಳಿಗೂ ವೆಂಕಣ್ಣನ ಹಲಸು ಇರಲೇಬೇಕು ಎಂಬಂತೆ ಆಯಿತು. ಹಲಸಿನ ತೋಟದಿಂದಲೇ ವೆಂಕಣ್ಣನ ಸುಖ, ನೆಮ್ಮದಿ ಶ್ರೀಮಂತಿಕೆ. ಅದಕ್ಕಾಗಿಯೇ ಆ ತೋಟವನ್ನು ವೆಂಕಣ್ಣ ಸನ್ನಿಧಾನ ಎನ್ನುತ್ತಿದ್ದನು. ಅದೇ ಕೃಷ್ಣಣ್ಣರ ಮಗ ಶ್ರೀನಿವಾಸ. ಕೃಷ್ಣಣ್ಣ ಸತ್ತು ಸುಮಾರು ಐದು ವರ್ಷಗಳಾಗಿತ್ತು. “”ಊಟಕ್ಕೆ ಬನ್ನಿ… ತಟ್ಟೆ ಇಟ್ಟಿದ್ದೇನೆ…” ರಾಜೇಶ್ವರಿ ಸ್ವರ ಬಂದಾಗಲೇ ಕಂಬಕ್ಕೆ ಒರಗಿ ಕುಳಿತ ವೆಂಕಣ್ಣನಿಗೆ ಎಚ್ಚರವಾದಂತಾಗಿ ಅಡುಗೆ ಮನೆಯೆಡೆಗೆ ಊಟ ಮಾಡಲು ಹೆಜ್ಜೆ ಹಾಕಿದನು.
.
ವೆಂಕಣ್ಣನಿಗೆ ಮುಪ್ಪು ಬಂದಿತು. ಹೆಂಡತಿಯ ವಿಯೋಗವಾಗಿ ನಾಲ್ಕು ವರ್ಷಗಳಾಗಿತ್ತು. ಮಕ್ಕಳಿಬ್ಬರೂ ಮದುವೆಯಾಗಿ ವಿದೇಶದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದರು. ಆದ್ದರಿಂದ ಮನೆಯಲ್ಲಿ ವೆಂಕಣ್ಣನೊಬ್ಬನೇ ಇದ್ದ. ಇತ್ತೀಚೆಗೆ ಆತನಿಗೂ ವಯಸ್ಸಿನ ಕಾಯಿಲೆ ಬಾಧಿಸುತ್ತಿತ್ತು. ಒಬ್ಬನೆ ಮಗನಾದ ಕಾರಣ ಮಗ ಊರಿಗೆ ಬಂದು ತನ್ನೊಡನೆ ಇರಬಹುದು ಎಂಬ ಕಾರಣದಿಂದ ಮಗನ ಹೆಸರಿಗೆ ತನ್ನ ಎಲ್ಲ ಆಸ್ತಿಯನ್ನು ಬರೆದು ಹಾಕಿದ್ದ. ಆದರೆ, ಮಗನ ವಿದೇಶದ ವ್ಯಾಮೋಹ ಅವನನ್ನು ಊರಿಗೆ ಬರಲು ಬಿಡಲಿಲ್ಲ. ಮಗಳನ್ನಂತೂ ಕರೆಯುವ ಹಾಗೆ ಇಲ್ಲ. ಹೇಗೋ ಇದ್ದಷ್ಟು ದಿನ ಈ ನನ್ನ ಸನ್ನಿಧಾನದಲ್ಲಿಯೇ ಕಳೆಯುತ್ತೇನೆ ಎಂದು ಯಾರಾದರೂ ಕೇಳಿದರೆ ಹೇಳುತ್ತಿದ್ದ. ಮಗನಿಗಂತೂ ತಂದೆ ಒಬ್ಬರೇ ಇರುವುದು ಸುತರಾಂ ಇಷ್ಟವಿರಲಿಲ್ಲ. ತಾಯಿಯ ವರ್ಷದ ಕಾರ್ಯಕ್ಕೆ ಬಂದವನೇ ಅಪ್ಪನನ್ನು ತನ್ನೊಡನೆ ವಿದೇಶಕ್ಕೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದನು.ಆದರೆ, ತಂದೆಗೆ ಒಪ್ಪಿಗೆ ಇರಲಿಲ್ಲ. ಪ್ರತಿಸಲ ಬಂದಾಗಲೂ ತಂದೆಯನ್ನು ಒಪ್ಪಿಸಲು ಎಲ್ಲ ಪ್ರಯತ್ನ ಮಾಡಿ ವಿಫಲನಾಗುತ್ತಿದ್ದ. ತಾನು ಬೆಳೆಸಿದ ಹಲಸಿನ ಮರಗಳ ನಡುವೆಯೇ ಇದ್ದು ಸಾಯಬೇಕು ಎಂಬುದೊಂದೇ ವೆಂಕಣ್ಣನ ಹಠ. ಆದರೆ, ಈ ಬಾರಿ ವೆಂಕಣ್ಣನ ಮಗ ತಾಯಿಯ ಶ್ರಾದ್ಧಕ್ಕೆ ಬಂದವನು ತಂದೆಗೆ ತಿಳಿಯದಂತೆ ಮಾರಿಬಿಟ್ಟಿದ್ದ. ಅದು ಯಾವುದೋ ರಿಯಲ್ ಎಸ್ಟೇಟ್ ಕಂಪೆನಿಗೆ. ಹಾಗಾದರೂ ಅಪ್ಪ ತನ್ನೊಡನೆ ಬರುತ್ತಾನೆ ಎಂಬುದು ಮಗನ ಆಲೋಚನೆಯಾಗಿತ್ತು. ಆದರೆ, ಇದನ್ನು ಅಪ್ಪನಿಗೆ ತಿಳಿಸುವ ಧೈರ್ಯ ಬರಲಿಲ್ಲ. ತಾನು ವಾಪಸು ಹೋಗುವ ಒಂದೆರಡು ದಿನಗಳ ಹಿಂದೆ ತಿಳಿಸಿ ಅಪ್ಪನನ್ನು ಒಪ್ಪಿಸುವ ವಿಚಾರ ಮಾಡಿದ್ದನು. ಆದರೆ ಒಂದು ದಿನ ತೋಟದೊಳಕ್ಕೆ ದೊಡ್ಡ ದೊಡ್ಡ ಮರ ಕೊರೆಯುವ ಮಿಷನ್ಗಳು ಬಂದವು. ಕಣ್ಣಿಗೆ ಅಡ್ಡವಾಗಿ ಕೈಯನ್ನು ಇಟ್ಟುಕೊಳ್ಳುತ್ತ ಹಲಸಿನ ವೆಂಕಣ್ಣ ಅಂಗಳಕ್ಕೆ ಬಂದು ನೋಡಿದನು. “” ಪುಟ್ಟ… ಓ ಪುಟ್ಟ… ಯಾರೋ ನಮ್ಮ ತೋಟದೊಳಗೆ ಮಿಷನ್ನು ತಂದಿ¨ªಾರೆ… ಪುಟ್ಟ… ಓ ಪುಟ್ಟ…” ವೆಂಕಣ್ಣ ಆತಂಕದಿಂದ ತನ್ನ ಮಗನನ್ನು ಕರೆದನು. ಮಗನಿಗೆ ಹೀಗೆ ಆಗುವುದೆಂಬ ನಿರೀಕ್ಷೆ ಇತ್ತು. ಆದರೂ ಇಷ್ಟು ಬೇಗ ಆ ರಿಯಲ್ ಎಸ್ಟೇಟ್ನವರು ಸೈಟ್ ಮಾಡಲು ಮುಂದಾಗುತ್ತಾರೆ ಎಂದು ತಿಳಿದಿರಲಿಲ್ಲ. ತಂದೆಗೆ ಇರುವ ವಿಷಯವನ್ನು ತಿಳಿಸಿ, ಅದರ ಕಾರಣವನ್ನು ತಿಳಿಸಿದನು. “”ಪುಟ್ಟಾ… ನೀನು ನನ್ನನ್ನು ಕೇಳಬೇಕಿತ್ತು… ” ವೆಂಕಣ್ಣ ಮಗನ ಮೇಲೆ ಮೃದುವಾಗಿಯೇ ರೇಗಿದ್ದ. ಮಗನಿಗೆ ತನ್ನ ಮೇಲೆ ಇದ್ದ ಅತಿಯಾದ ವ್ಯಾಮೋಹವೇ ಇದಕ್ಕೆಲ್ಲ ಕಾರಣ ಎಂದು ಆತನಿಗೆ ತಿಳಿಯಿತು. ಮತ್ತೇನನ್ನೂ ಹೇಳದೆ ವೆಂಕಣ್ಣ ತನ್ನ ಹಲಸಿನ ತೋಟದ ಕಡೆಯೇ ನೋಡತೊಡಗಿದ. ಒಂದೊಂದೇ ಮರಗಳು ಮಿಷನ್ನಿನ ಆರ್ಭಟಕ್ಕೆ ಸರದಿಯಲ್ಲಿ ಧರೆಗುರುಳತೊಡಗಿತು. ತಾನು ಅದೆಷ್ಟೋ ಕಷ್ಟಪಟ್ಟು ಬೆಳೆಸಿದ ತೋಟ ತನ್ನ ಕಣ್ಣೆದುರೇ ಸಮಾಧಿಯಾಗುತ್ತಿದ್ದದ್ದು ವೆಂಕಣ್ಣನಿಗೆ ನುಂಗಲಾರದ ತುತ್ತಾಯಿತು. ಆತನ ಹೆಸರಿನೊಡನೆ ಮಾತ್ರವಲ್ಲ, ಆತನ ರೋಮ ರೋಮದಲ್ಲಿಯೂ ಹಲಸು ಬೆರೆತು ಹೋಗಿತ್ತು. ಯಾಕೋ ಮೈ ಬೆವರಿದಂತಾಯಿತು. ಚಾವಡಿಯಲ್ಲಿದ್ದ ಕಂಬಕ್ಕೆ ಒರಗಿ ಹಾಗೆ ವಿನಾಶವಾಗುತ್ತಿದ್ದ ತನ್ನ ಸನ್ನಿಧಾನವನ್ನು ನೋಡುತ್ತಾ ಕುಳಿತನು. ಕುಳಿತವನು ಮತ್ತೆ ಏಳಲೇ ಇಲ್ಲ.
.
ಹಲಸಿನ ತೋಟದಲ್ಲಿ ವೆಂಕಣ್ಣನ ಚಿತೆಯ ಬೆಂಕಿ ಉರಿಯುತ್ತಿತ್ತು. ಆ ಚಿತೆಯು ಹಲಸಿನ ಕಟ್ಟಿಗೆಯಿಂದಲೇ ಮಾಡಿದ್ದು ! ತಂದೆಯನ್ನು ಕರೆದುಕೊಂಡು ಹೋಗಲೇಬೇಕು ಎಂದು ಬಂದಿದ್ದ ಮಗನಿಗೆ ಆ ಭಾಗ್ಯ ದಕ್ಕಲಿಲ್ಲ. ಹಲಸಿನ ತೋಟದೊಡನೆಯೇ ಹಲಸಿನ ವೆಂಕಣ್ಣನು ನಾಶವಾಗಿ ಹೋಗಿದ್ದ ! – ರಾಘವೇಂದ್ರ ಟಿ. ಆರ್.