Advertisement

ಮಂಗಳೂರಿನಲ್ಲಿ ಘಮ ಘಮ ಹಲಸಿನ ಹಬ್ಬ !

11:51 AM Jul 16, 2018 | Team Udayavani |

ಮಹಾನಗರ: ನಗರದ ಸಾವಯವ ಕೃಷಿಕ ಗ್ರಾಹಕರ ಬಳಗದ ವತಿಯಿಂದ ಶ್ರೀ ಶರವು ಮಹಾಗಣಪತಿ ದೇವಸ್ಥಾನ ಹತ್ತಿರದ ಬಾಳಂಭಟ್‌ ಹಾಲ್‌ನಲ್ಲಿ ರವಿವಾರ ಆಯೋಜಿಸಲಾಗಿದ್ದ ಮೂರನೇ ವರ್ಷದ ‘ಹಲಸು ಹಬ್ಬ’ ಮಂಗಳೂರಿಗರ ಮನ ತಣಿಸಿದೆ. ನಗರದಲ್ಲಿ ಮಳೆ ಸುರಿಯುತ್ತ, ಆಹ್ಲಾದಕರ ಗಾಳಿ ಬೀಸುತ್ತಿದ್ದಂತೆ, ಹಲಸು ಮೂಡಿಸಿದ ಘಮ ಘಮ ಸುವಾಸನೆಯನ್ನು ನಗರದ ಸಾವಿರಾರು ಜನರು ಆಸ್ವಾದಿಸಿದರು. ಕೆಂಪು ರುದ್ರಾಕ್ಷಿ, ಹಳದಿ ರುದ್ರಾಕ್ಷಿ, ತಿಳಿ ಕೇಸರಿ, ಪ್ರಕಾಶ್‌ಚಂದ್ರ ಹಲಸು, ಬ್ರೆಜಿಲ್‌ 365… ಹೀಗೆ ನಾನಾ ವಿಧದ ಹಲಸು ಇಲ್ಲಿದ್ದರೆ, ಅದರ ಜತೆಗೆ ಮೌಲ್ಯವರ್ಧಿತ ಉತ್ಪನ್ನಗಳಾದ ಐಸ್‌ಕ್ರೀಂ, ಹೋಳಿಗೆ, ಪಾನಕ ಕೂಡ ಅಲ್ಲಿ ಭಾಗವಹಿಸಿದ್ದ ಜನರಿಗೆ ಮಹದಾನಂದ ನೀಡಿತು. 

Advertisement

ಮೇಳದಲ್ಲಿ ಸುಮಾರು 40 ಆಹಾರ ಮಳಿಗೆಗಳು, ಎರಡು ಗಿಡ ಮಾರಾಟದ ಮಳಿಗೆಗಳಿದ್ದವು. ಮಂಚೂರಿ, ಚಿಲ್ಲಿ,  ರೋಸ್ಟ್‌, ಕೇಸರಿಬಾತ್‌, ಬರ್ಫಿ,  ಅಂಬಡೆ, ಬನ್ಸ್‌, ಗಟ್ಟಿ, ಪಾಯಸ, ಗಾರಿಕೆ, ಚಿಪ್ಸ್‌, ಹಪ್ಪಳ, ಕಬಾಬ್‌, ಚಿಕ್ಕಿ, ಉಪ್ಪಿನಕಾಯಿ, ಜಾಮೂನ್‌ ಹೀಗೆ ಹಲವು ವಿಧದ ಹಲಸಿನ ಮೌಲ್ಯವರ್ಧಿತ
ಉತ್ಪನ್ನಗಳು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾದವು. ಇದರ ಜತೆಗೆ ಸಾವಯವ ತರಕಾರಿ, ಹಣ್ಣು ಹಂಪಲು ಮಾರಾಟ, ಹಲಸಿಗೆ ಸಂಬಂಧಿಸಿದ ಪುಸ್ತಕಗಳು, ವಿವಿಧ ತಳಿಯ ಗಿಡ, ಬೀಜಗಳ ಮಾರಾಟ ನಡೆಯಿತು.

ಹಲಸಿನ ಐಸ್‌ಕ್ರೀಮ್‌!
ಪುತ್ತೂರು ಮರಿಕೆಯ ಸುಹಾಸ್‌- ಮಾನಸ ಯುವಕರ ತಂಡದಿಂದ ಹಲಸಿನ ಐಸ್‌ಕ್ರೀಮ್‌, ಉಪ್ಪಿನಂಗಡಿ ಇಳಂತಿಲ ಆದರ್ಶ ಐಸ್‌ಕ್ರೀಮ್‌ ತಯಾರಿಸಿ ಭಾಗವಹಿಸಿದ್ದು ಗಮನಸೆಳೆಯಿತು.

ಹಲಸಿನ ಪಾಯಸ!
ಉಪ್ಪಿನಂಗಡಿಯ ಮಂಜುನಾಥ ಭಟ್‌ ಅವರು ಹಲಸಿನ ಬೀಜದ ಪಾಯಸ ಹಂಚಿದರು. ಪದವಿನಂಗಡಿಯ ವಿನೋದ್‌ ಅವರು ಹಲಸಿನ ಬೀಜದ ಚಟ್ನಿ ಹುಡಿ ಮಾರಾಟ ಮಾಡಿದರು. ಮೂಡುಶೆಡ್ಡೆ ಹಾಗೂ ಉಪ್ಪಿನಂಗಡಿಯಿಂದ ಬಂದಿದ್ದ ವ್ಯಾಪಾರಿಗಳು ಸ್ಥಳದಲ್ಲಿಯೇ ಬಿಸಿಬಿಸಿ ಹೋಳಿಗೆಗಳನ್ನು ರೆಡಿ ಮಾಡುತ್ತಿದ್ದರು. ಹಲಸಿನ ಉತ್ಪನ್ನಗಳಲ್ಲಿ ಕೆಲವೊಂದನ್ನು ಮೊದಲೇ ತಯಾರಿಸಿ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದರೆ, ಇನ್ನು ಕೆಲವನ್ನು ಸ್ಥಳದಲ್ಲೇ ತಯಾರಿಸಿ ಕೊಡಲಾಗುತ್ತಿತ್ತು. ಮಾರಾಟಗಾರರು ತೆಂಗಿನ ಎಣ್ಣೆ ಉಪಯೋಗಿಸಿಯೇ ಉತ್ಪನ್ನಗಳನ್ನು ತಯಾರಿಸಬೇಕು ಎಂದು ಸಾವಯವ ಬಳಗದಿಂದ ಮೊದಲೇ ಸೂಚನೆ ನೀಡಲಾಗಿತ್ತು. ಗ್ರಾಹಕರೂ ಖರೀದಿಸುವಾಗ ಪರಿಶೀಲಿಸಿ ಖರೀದಿಸುವಂತೆ ಆಯೋಜಕರು ಸೂಚಿಸುತ್ತಿದ್ದರು. 

ಹಲಸಿನ ಸವಿಯುಂಡ ಸಾವಿರಾರು ಮಂದಿ
ಬೆಳಗ್ಗೆ ಸುಮಾರು 7 ಗಂಟೆಗೆ ಹಲಸು ಹಬ್ಬ ಆರಂಭವಾಯಿತು. ಆ ಕ್ಷಣದಿಂದಲೇ ಭಾರೀ ಸಂಖ್ಯೆಯಲ್ಲಿ ಜನರು ಹಬ್ಬದಲ್ಲಿ ಪಾಲ್ಗೊಂಡರು. ಸಂಜೆಯವರೆಗೆ ಸಾವಿರಾರು ಜನರು ಬಂದು ಹಲಸು ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಕೆಲವರು ಸ್ಥಳದಲ್ಲೇ ಹಲಸಿನ ವಿವಿಧ ಉತ್ಪನ್ನಗಳನ್ನು ಸವಿದರೆ, ಇನ್ನು ಕೆಲವರು ಹಲಸು, ಹಲಸಿನ ಉತ್ಪನ್ನಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದರು. ಅಂತೂ, ಮನೆ ಮಂದಿ ಹಲಸಿನ ಹಬ್ಬದಲ್ಲಿ ಭಾಗ ವಹಿಸಿ ‘ಸಂಡೇ’ ಎಂಜಾಯ್‌ ಮಾಡಿದರು. 

Advertisement

ತೂಬುಗೆರೆಯಿಂದ ಬಂದಿತ್ತು ಹಲಸು!
ಸಾವಯವ ಕೃಷಿಕ-ಗ್ರಾಹಕರ ಬಳಗದ ಸಂಘಟನ ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ ಮಾತನಾಡಿ, ಬೆಂಗಳೂರಿನ ಗ್ರಾಮೀಣ ಜಿಲ್ಲೆಯ ತೂಬುಗೆರೆಯ ಪ್ರಸಿದ್ಧ ಕೆಂಪುತೊಳೆಯ ರುದ್ರಾಕ್ಷಿ ಹಲಸಿನ ಪ್ರದರ್ಶನ ಈ ಬಾರಿ ವಿಶೇಷವಾಗಿತ್ತು. ದೇಶದಲ್ಲಿಯೇ ಪ್ರಥಮ ಹಲಸು ಬೆಳೆಗಾರರ ಸಂಘದ ಎಂ.ಜಿ. ರವಿಕುಮಾರ್‌ ಹಾಗೂ ತಂಡದವರು ಸುಮಾರು 2 ಟನ್‌ ಕೆಂಪು ತೊಳೆಯ ರುದ್ರಾಕ್ಷಿ ಹಲಸಿನ ಹಣ್ಣು ತಂದು ಮಾರಾಟ ಮಾಡಿದರು. ಸಣ್ಣ ಗಾತ್ರದ ಹಣ್ಣುಗಳು ಗ್ರಾಹಕರ ವಿಶೇಷ ಆಕರ್ಷಣೆಗೆ ಕಾರಣವಾಗಿದ್ದವು. ಶಿವಮೊಗ್ಗದ ರಿಪ್ಪನ್‌ಪೇಟೆಯ ಅನಂತ ಮೂರ್ತಿ ಜವಳಿ ಹಾಗೂ ಅಮೋಘ ಜವಳಿ ಅವರು ಹಲಸಿನ ಸಸಿಗಳ ಮಾರಾಟ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next