Advertisement

ಬದಲಾವಣೆ ಹೆಸರಿನಲ್ಲಿ ಕನ್ನಡ ಮರೆಯುವುದು ತರವಲ್ಲ

09:16 PM Feb 29, 2020 | Lakshmi GovindaRaj |

ಮೈಸೂರು: ತಾಯಿ ನುಡಿ, ಮಾತೃಭಾಷೆಯನ್ನು ಮರೆಯುವವನು ಮನುಷ್ಯನಾಗಲಾರ. ಆದರೆ ಇಂದು ಮಾತೃಭಾಷೆಯನ್ನು ಮರೆಯುತ್ತಿರುವುದು ನೋವಿನ ಸಂಗತಿ ಎಂದು ಸಮ್ಮೇಳನಾಧ್ಯಕ್ಷ ಟಿ.ಎಸ್‌. ರಾಜಪ್ಪ ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿರುವ 17ನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

Advertisement

ಅತ್ಯಂತ ವೈಜ್ಞಾನಿಕವಾದ ಉಚ್ಛಾರಣೆಗೆ ಅನುಗುಣವಾದ ಲಿಪಿ-ಭಾಷೆ ನಮ್ಮದು. ನಾವು ಬರೆದಂತೆಯೇ ಓದುತ್ತೇವೆ. ಕನ್ನಡ ಭಾಷೆಯಲ್ಲಿ ಪ್ರಾದೇಶಿಕ ವೈಶಿಷ್ಟéಗಳು ಉಳಿದು ಬಂದಿರುವುದು ಸಂತಸದ ಸಂಗತಿ. ಆದರೆ ಬದಲಾವಣೆ ಹೆಸರಿನಲ್ಲಿ ಕನ್ನಡ ಮರೆಯುವುದು ತರವಲ್ಲ. ಬದಲಾವಣೆ ಬೇಕು. ಆದರೆ ಅಲ್ಲೊಂದು ಔಚಿತ್ಯ ಪ್ರಶ್ನೆ ಇರಬೇಕು ಎಂದು ಅಭಿಪ್ರಾಯಪಟ್ಟರು.

ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಮಿಗಿಲು ಎನ್ನುವುದು ಋಷಿವಾಣಿ ಮತ್ತು ಕವಿದರ್ಶನ. ಆದರೆ ಇಂದು ತಾಯಿ ನುಡಿ ಹಾಗೂ ಮಾತೃಭಾಷೆಯನ್ನು ನಾವು ಮರೆಯುತ್ತಿದ್ದೇವೆ. ಈ ಬಗ್ಗೆ ನಾವೆಲ್ಲ ಗಂಭೀರವಾಗಿ ಯೋಚಿಸಬೇಕಿದೆ ಎಂದರು. ಭಾರತೀಯ ಭಾಷೆಗಳಲ್ಲಿ ಕನ್ನಡವೂ ಪ್ರಾಚೀನ ಪ್ರಾಚೀನವಾಗಿದ್ದು, ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ಬಂದಾಗ ನಾವು ದುಃಖಪಡಲಿಲ್ಲ. ನಮಗೂ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆವು.

ಶಾಸ್ತ್ರೀಯ ಸ್ಥಾನಮಾನವನ್ನು ತಮಿಳುನಾಡು ಪಡೆದುಕೊಳ್ಳಲು ಇದ್ದ ಅಷ್ಟೋ ಅರ್ಹತೆಗಳು ಕನ್ನಡಕ್ಕೂ ಇದ್ದವು. ಕನ್ನಡಕ್ಕೆ ಅಂತಹ ಸ್ಥಾನಮಾನ ದೊರೆಯುವ ಹಂತದಲ್ಲಿ ತಮಿಳುನಾಡಿನ ವ್ಯಕ್ತಿ ಅಲ್ಲಿನ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ. ತಮಗೆ ದಕ್ಕಿದ್ದು ಮತ್ತು ದಕ್ಕಿಸಿಕೊಂಡಿದ್ದು ಇನ್ನೊಬ್ಬರಿಗೆ ದಕ್ಕಬಾರದು ಎಂಬ ವಿಕೃತ ಪ್ರವೃತ್ತಿ ಅವರಲ್ಲಿತ್ತು. ಇದಕ್ಕೆ ನಾವು ಏನು ಹೇಳುವುದು?, ನ್ಯಾಯಾಲಯ ಕೂಡ ವಜಾಗೊಳಿಸಬೇಕಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದು ವಿಪರ್ಯಾಸ ಎಂದರು.

ಕನ್ನಡ ಭಾಷೆಯ ಪ್ರಾಚೀನತೆಯನ್ನು ಅನೇಕ ವಿದ್ವಾಂಸರು ತೋರಿಸಿಕೊಟ್ಟಿದ್ದಾರೆ. ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ಚಂದ್ರ, ಮಿಡತೆ ಕನ್ನಡದ ಶಬ್ಧಗಳೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಪದ್ಮ ಮತ್ತು ಮಾರ್ಕಂಡೇಯ ಪುರಾಣಗಳಲ್ಲಿ ಕರ್ನಾಟಕ ಪ್ರಸ್ತಾಪವಿದೆ. ಕ್ರಿ.ಶ. ಎರಡನೇ ಶತಮಾನದ್ದು ಎನ್ನಲಾದ ಶಿಲಪ್ಪದಿಗಾರಂ ಎಂಬ ತಮಿಳು ಗ್ರಂಥದಲ್ಲಿ ಕರುನಾಢ್‌ ಎಂಬ ಪದ ಇರುವುದು ಗಮನಾರ್ಹ.

Advertisement

ಇದೇ ಕಾಲಕ್ಕೆ ಸೇರುವ ಗ್ರೀಕ್‌ ಪ್ರಹಸನವೊಂದರಲ್ಲಿ ಕನ್ನಡದ ಕೆಲವು ಮಾತುಗಳು ಬಂದಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಕನ್ನಡ ಬಳಕೆ ಇತ್ತೆಂದು ಗೋವಿಂದ ಪೈ ಮತ್ತು ಇತರ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ ಎಂದು ಕನ್ನಡ ನಾಡು, ಭಾಷೆ ಹಾಗೂ ಸಾಹಿತ್ಯಕ್ಕಿರುವ ಇತಿಹಾಸದ ಕುರಿತು ಮಾತನಾಡಿದರು.

ಜಿಲ್ಲೆ ಜ್ವಲಂತ ಸಮಸ್ಯೆ ನಿವಾರಿಸಿ: ಮೈಸೂರು ಜಿಲ್ಲೆಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಪ್ರಮುಖವಾಗಿ ರೈತರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಕೊರತೆ, ಶಾಲೆಗೆ ಸರಿಯಾದ ಕಟ್ಟಡ ಇಲ್ಲದಿರುವುದು, ಯುವಕರಿಗೆ ಕೆಲಸ ಸಿಗದಿರುವುದು, ಆಂಗ್ಲ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚುತ್ತಿರುವುದು, ರಾಜ್ಯದಲ್ಲಿರುವ ಪರಭಾಷ ಉದ್ಯೋಗಿಗಳೊಂದಿಗೆ ವ್ಯವಹಾರ ಮಾಡಲಾಗದೇ ತೊಂದರೆ ಅನುಭವಿಸುತ್ತಿರುವ ಜನಸಾಮಾನ್ಯರು ನಮ್ಮಲ್ಲಿ ಇದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಹಂತಹಂತವಾಗಿ ನಿವಾರಿಸಬೇಕಾಗಿದೆ. ಈ ಸಮ್ಮೇಳನ ಅದಕ್ಕೆ ಪ್ರೇರಣೆ ನೀಡಲಿ ಎಂದು ಸಮ್ಮೇಳನಾಧ್ಯಕ್ಷ ಟಿ.ಎಸ್‌. ರಾಜಪ್ಪ ಆಶಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next