Advertisement

ಇದು ಕುಂಬಳ, ನಿಂಬೆ ಉಳಿಸುವ ಸಮಯ…!

09:38 AM Oct 20, 2018 | |

ಬೂದುಗುಂಬಳವು ದಂರೋಟು, ಸಾಂಬಾರಾಗಿಯೂ…ನಿಂಬೆ ಹಣ್ಣು ಆಯಾಸ ಅಡಗಿಸುವ ಷರಬತ್ತು, ವ್ಯಂಜನವಾಗಿಯೂ ಊಟದ ಮೇಜಿಗೆ ಬರಬೇಕೇ ಹೊರತು, ಅವು ಒಗೆತ, ತುಳಿತಕ್ಕೆ ಸಲ್ಲಬಾರದು. ನಾವು ವೈಭವೀಕರಿಸಬೇಕಾದ್ದು ಆಚರಣೆಗಳ ಹಿಂದಿನ ಅರ್ಥಗಳನ್ನು.                     

Advertisement

ಮೌಡ್ಯಗಳಿಂದ ಮುಕ್ತಗೊಳ್ಳುವ ಹಾದಿ ಸುಗಮವಾಗಲು ಪರಿಕಲ್ಪನಾತ್ಮಕ ಆಚಾರ, ವಿಚಾರಗಳನ್ನು ತೊರೆಯಬೇಕಿಲ್ಲ. ಅವನ್ನು ಜೊತೆ ಜೊತೆಗೇ ಕರೆದೊಯ್ಯುವುದು ಪೂರಕವೆ. ಏಕೆಂದರೆ ಅವುಗಳಲ್ಲಿ ಸಾರ್ವಕಾಲಿಕ ಹಾಗೂ ಸಾರ್ವತ್ರಿಕ ದಿಟ ನೆಲೆಗೊಂಡಿರುತ್ತದೆ.  ನಿದರ್ಶನವಾಗಿ, ಸ್ನಾನ ಮಾಡಿಯೇ ಊಟ ಮಾಡು ಎನ್ನುವ ಸಲಹೆ ನಿರ್ದೇಶನವೂ ಅಲ್ಲ, ವಿಧಿಸುವ ಕಟ್ಟುಪಾಡೂ ಅಲ್ಲ. ಮೈ, ಕೈಗೆ ಅಂಟಿರಬಹುದಾದ ಜಿಡ್ಡು, ಕೊಳೆ ನಿವಾರಿಸಿಕೊಂಡ ನಂತರವೇ ಆಹಾರ ಸೇವಿಸಿದರೆ ಮಾರಕ ಸೂಕ್ಷ್ಮಾಣು ಜೀವಿಗಳ ಕಾಟ ತಪ್ಪೀತೆನ್ನುವ ಹಿತನುಡಿಯದು. ಅಂತೆಯೇ, ತೊಲೆಯ ಕೆಳಗೆ ಮಲಗಬಾರದೆಂಬ ಸೂಚನೆಯಲ್ಲಿ ಅದು ಆಕಸ್ಮಿಕವಾಗಿ ಬೀಳಬಹುದು ಎನ್ನುವುದಕ್ಕಿಂತ ಅದರಲ್ಲಿ ಬೀಡು ಬಿಡುವ ಹುಳ, ಕೀಟ, ಹುಪ್ಪಟೆಗಳು ಮಲ, ಮೂತ್ರ ವಿಸರ್ಜಿಸಬಹುದೆಂಬ ಕಾಳಜಿಯಿದೆ. ಅಮಾವಾಸ್ಯೆಯಂದು ಚಂದ್ರನ ಪ್ರಕಾಶಿತ ಗೋಳಾರ್ಧ ನಮಗೆ ಕಾಣದ್ದರಿಂದ (ಇನ್ನು ಹುಣ್ಣಿಮೆಯಂದು ಕಾಣುತ್ತದೆ) ಪೂರ್ಣ ಕತ್ತಲು. ಹಾಗಾಗಿಯೇ ಎಚ್ಚರದಿಂದ ನಡೆ ಎಂಬ ಸಲಹೆಯೆ ಹೊರತು ಆ ದಿನಕ್ಕೆ ಅವಘಡ, ಅಪಘಾತಗಳನ್ನು ಆರೋಪಿಸಬೇಕಾದ್ದಿಲ್ಲ. ಧರೆ ಆ ಬಗೆಯಲ್ಲಿ ಲಯಬದ್ಧವಾಗಿ ಬುಗುರಿಯಂತೆ ತಿರುಗಿ ಸೂರ್ಯನನ್ನು ಬಳಸದಿದ್ದರೆ ಅತಿರೇಕ, ಅಯೋಮಯ ಕಟ್ಟಿಟ್ಟ ಬುತ್ತಿ. 

ಎಲ್ಲ ವಿಧಿಗಳಿಗೂ ಸಮರ್ಥನೆಗಳನ್ನು ಪೋಣಿಸುತ್ತ ಇದೋ ಇದು ವೈಜ್ಞಾನಿಕ ಎಂದು ಬಿಂಬಿಸುವುದೂ ಮೌಡ್ಯವೇ. ಚಿಂತನೆ, ಸ್ವವಿಮರ್ಶೆ, ಪರಾಮರ್ಶೆ ಸತ್ಯದೆಡೆಗೆ ಒಯ್ಯುವ ಅಸ್ತ್ರಗಳು. ಪ್ರಶ್ನಿಸಿಯೇ ಒಪ್ಪುವ ಮನೋವೃತ್ತಿ ಅನುಭವವನ್ನು ಸಂಸ್ಕರಿಸುತ್ತದೆ. ಗ್ರಹಿಸಲಾಗದ ಸಂಗತಿಗಳು ಊಹೆಗಳಿಗೆ ಶರಣಾಗುತ್ತವೆ. ಶಕುನಗಳನ್ನು ಸೃಷ್ಟಿಸುತ್ತವೆ. ಅಮೆರಿಕದ ಖ್ಯಾತ ಹಾಸ್ಯಪಟು ಮತ್ತು ಕಿರುತೆರೆ, ಸಿನಿಮಾ ನಿರ್ದೇಶಕರಾಗಿದ್ದ ಗ್ರೌಚೊ ಮಾರ್ಕ್ಸ್ರನ್ನು ಸಂದರ್ಶನವೊಂದರಲ್ಲಿ “ನಿಮ್ಮ ದಾರಿಯಲ್ಲಿ ಬೆಕ್ಕು ಅಡ್ಡವಾದರೆ ಏನು ಮಾಡುವಿರಿ?’ ಎಂದು ಕೇಳಲಾಯಿತಂತೆ. ಅದಕ್ಕವರು “ಅದು ಎಲ್ಲಿಗೊ ಹೊರಟಿದೆ ಎಂದು ಭಾವಿಸುತ್ತೇನೆ’ ಎಂದರಂತೆ! ಪ್ರಕೃತಿಯ ವಿದ್ಯಮಾನಗಳು ‘ಭೂತ ಪ್ರೇತಗಳಿಗೆ’ ಒಳಪಟ್ಟಿಲ್ಲ! ಅದರ ವ್ಯಾಪಾರಗಳು ಸಹಜ, ಸ್ವಾಭಾವಿಕ ಕಾರಣಗಳಿಂದ ಸಾಗುತ್ತವೆ. ಆಕಾಶ ಮೇಲೆ ಬಿದ್ದೇ ಹೋಗುತ್ತದೆ. ಸಮುದ್ರ ಯಾವಾಗ ಉಕ್ಕೇರಿ ನುಂಗೀತೊ? ಭುವಿ ಬಾಯಿ ಬಿಟ್ಟರೆ ಗತಿಯೇನು?- ಮುಂತಾದ ಭಯ ಮೌಡ್ಯದ ಮೂಲವಾಗಿದ್ದರ ಪರಿಣಾಮವಾಗಿ ಅವಕ್ಕೆ ಪರಿಹಾರಗಳೆಂಬಂತೆ ಕೆಲ ಆಚರಣೆ, ವಿಧಿಗಳು ಹುಟ್ಟಿಕೊಂಡವು.    ಕಾರ್ಯ-ಕಾರಣ ವಿಶ್ಲೇಷಿಸುತ್ತ ಹೋದಂತೆ ಪ್ರಕೃತಿಗೆ ಅಂಜಬೇಕಾಗಿಲ್ಲ, ಅದನ್ನು ಆಸಕ್ತಿಯಿಂದ ಅಧ್ಯಯನಿಸಿ ವಿಸ್ಮಯವನ್ನು ಆಹ್ಲಾದಿಸಬೇಕೆಂಬ ಅರಿವು ಮೂಡತೊಡಗಿತು. 

 ವನ ಸಂವೃದ್ಧಿಗೆ ನಮ್ಮ ಪೂರ್ವಿಕರ ಕ್ರಿಯಾಶೀಲತೆ ಬಹುಮುಖೀ. ವಿಷವೃಕ್ಷವಾದರೂ ಉರುಳಿಸಬಾರದೆನ್ನುವುದು ಸುಭಾಷಿತ. ಮನೆ ನಿರ್ಮಿಸುವಾಗ ನಿವೇಶನದಲಿ ಬೆಳೆದ ಮರ ಕಡಿಯದೆ ಅದನ್ನು ಅತಿ ನಾಜೂಕಿನಿಂದ ಮನೆಯ ಒಂದು ಭಾಗವಾಗಿ ಪರಿಗಣಿಸಿ ಪೋಷಿಸುವ ಪ್ರವೃತ್ತಿ ನಮ್ಮ ಪರಂಪರೆಯಲ್ಲಿದೆ.  ಸಾಲು ಸಸಿಗಳನ್ನು ನೆಡಿಸುವುದು ಆಳುವ ಅರಸರ ಪಾಲಿಗೆ ಮಹತ್ತರ ಅಭಿವೃದ್ಧಿ ಕಾರ್ಯವೆನಿಸಿತ್ತು. ರಾಜರ್ಷಿ, ಜನಾನುರಾಗಿ ಪ್ರಭುಗಳಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ರಿಂದ ಲೋಕಸೇವಾನಿರತ ಬಿರುದಾಂಕಿತರೂ ಶಾಲಾ ಮುಖ್ಯಶಿಕ್ಷಕರೂ ಆಗಿದ್ದ ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪನವರು ಆರಂಭಿಸಿದ ಹೆಚ್ಚು ಹೆಚ್ಚು ಮರ ಬೆಳೆಸಿರಿ ಎಂಬ ಅಭಿಯಾನ ವಿಶಿಷ್ಟವಾಗಿತ್ತು. ತಮ್ಮ ಕೋಟಿನ ಕಿಸೆಗಳಲ್ಲಿ ಹೊಂಗೆ, ಸೀಬೆ, ಪರಂಗಿ, ಹುಣಿಸೆ, ಹಲಸು ಮುಂತಾದ ಬೀಜಗಳನ್ನು ತುಂಬಿಕೊಂಡು ವಿತರಿಸುತ್ತ ಪ್ರಚಾರಾಂದೋಲನ ಮಾಡುತ್ತಿದ್ದರು. ಗಿಡ, ಬಳ್ಳಿ, ಮರ ಎಲ್ಲಾದರೂ ಹೇಗಾದರೂ ಬೆಳೆದುಕೊಂಡು ದೇಶ ಸಂವೃದ್ಧಿ  ಹೊಂದಲಿ ಎನ್ನುವ ಆಶಯವೇ ಹಣ್ಣು, ಹಂಪಲುಗಳನ್ನು ನಿವಾಳಿಸಿ ಎಸೆಯುವ ಆಚರಣೆಯಾಗಿ ಬೇರೂರಿಬಹುದು. 

ಕಾಲ ಎಲ್ಲದರ ಪರಿಷ್ಕರಣೆ ಬಯಸುತ್ತದೆ. ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಜನಸಂಖ್ಯೆ ಏರುತ್ತಿದೆ. ಆಹಾರ ಪದಾರ್ಥಗಳ ಅಭಾವ ಜಾಗತಿಕ ಸಮಸ್ಯೆಯೇ ಆಗಿದೆ. ಹಿಂದಿನಿಂದ ಬಂದ ಆಚರಣೆಗಳನ್ನು ಕೈಬಿಡಲಾದೀತೆ ಎನ್ನುವುದು ಒಣ ತರ್ಕ. ಖ್ಯಾತ ವಿಚಾರವಾದಿ, ಶಿಕ್ಷಣ ತಜ್ಞರಾಗಿದ್ದ ಡಾ.ಹೆಚ್‌.ನರಸಿಂಹಯ್ಯನವರಿಗೆ ಕುಂಬಳಕಾಯಿ ಮೌಡ್ಯದ ವಿರುದ್ಧ ಹೋರಾಟಕ್ಕೆ ಒಂದು ಪ್ರತಿಮೆಯಾಗಿತ್ತು. ಪೂಜೆ, ಪುನಸ್ಕಾರದ ಹೆಸರಿನಲ್ಲಿ ಅಮೂಲ್ಯ ಆಹಾರ ವಸ್ತುಗಳನ್ನು ವ್ಯರ್ಥಗೊಳಿಸಬಾರದು ಎನ್ನುವ ಅವರ ಇಂಗಿತ ಕುಂಬಳದ ಮೂಲಕ ಅಭಿವ್ಯಕ್ತವಾಗುತ್ತಿತ್ತು. ಅದು ಯಾರ ವಿರುದ್ಧ ಸವಾಲೂ ಅಲ್ಲ. ಕುಂಬಳ ಕಾಯಿ ಅಕ್ಷರಶಃ ಪೌಷ್ಟಿಕಾಂಶಗಳ ಬುತ್ತಿ. ಎ-ಸಿ ವಿಟಮಿನ್ನುಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಂ, ರಂಜಕ, ಕಬ್ಬಿಣ ಖನಿಜಾಂಶಗಳುಳ್ಳ ನಾರಿನ ಅಂಶವಿರುವ ಅದು ಬಹುರೋಗ ಹರ. ಕುಂಬಳಕಾಯಿ ಸೇವನೆಯಿಂದ ನಮ್ಮ ತೂಕ ನಿಯಂತ್ರಣ ಸಾಧ್ಯವೆಂದು ಸಾಬೀತಾಗಿದೆ. ಇದಕ್ಕೆ ಕಾರಣ ಸ್ವಾರಸ್ಯಕರ. ಒಂದೆಡೆ ಕಡಿಮೆ ಕ್ಯಾಲೊರಿ. ಇನ್ನೊಂದೆಡೆೆ ಹಸಿವು ಹೆಚ್ಚಿಸುವ ಗುಣ ಅದಕ್ಕಿದೆ! 

Advertisement

ಇನ್ನು ವೈಟಮಿನ್‌ ಸಿ ,ಎ, ಬಿ-6,ಇ ಹೇರಳವಾಗಿರುವ ನಿಂಬೆ ಹಣ್ಣಿನ ಉಪಯೋಗ ಬಣ್ಣನೆಗೆ ಮೀರಿದ್ದು. ಅದರ ಸೇವನೆಯಿಂದ ರಕ್ತ ಹೆಪ್ಪುಗಟ್ಟುವಿಕೆ ನಿವಾರಣೆ. ದೇಹದೊರಗಿನ ಮತ್ತು ಒಳಗಿನ ಅಂಗಾಂಗಗಳ ರಕ್ತಸ್ರಾವ ಶಮನ. ಮೂಲವ್ಯಾಧಿ ನಿಯಂತ್ರಣ. ನಿಂಬೆರಸವನ್ನು ತ್ವಚೆಗೆ ಹಚ್ಚಿದರೆ ಹೊಳಪು. ತಲೆಹೊಟ್ಟಿನ ನ್ಯೂನತೆಗೂ ಅದು ಮದ್ದು. ಅದು ವ್ರಣ, ಕೀಲು ಊತ ಮತ್ತು ಉತ್ಕರ್ಷಣ ನಿವಾರಕ. ಸುಟ್ಟಗಾಯಗಳ ಶಮನಕ್ಕೂ ನಿಂಬೆ ಹಣ್ಣಿನ ರಸದ ಲೇಪನ ಪರಿಣಾಮಕಾರಿ. ಬಣ್ಣಗಳು ತ್ವರಿತವಾಗಿ ಒಣಗುವುದನ್ನು ತಡೆಗಟ್ಟುವ ಗುಣ ನಿಂಬೆ ರಸಕ್ಕಿದೆ. ಅದು ಹಲ್ಲುಬೇನೆಗೂ ಔಷಧಿ.

“ಕಲ್ಲು ನಾಗರಕ್ಕೆ ಹಾಲು ಬೇಡ, ಮಕ್ಕಳಿಗೆ ಹಾಲು ನೀಡಿ’ ಎಂಬ ಅಭಿಯಾನಕ್ಕೆ ಕೆಲ ವರ್ಷಗಳಿಂದ ಚಾಲನೆ ದೊರೆತಿರುವುದು ಶ್ಲಾಘನೀಯ. ಯಾವುದೇ ಯಂತ್ರ, ವಾಹನ, ಪರಿಕರಗಳಿಗೆ ಪೂಜೆಯೆಂದರೆ ಅವನ್ನು ಶುಚಿಯಾಗಿಟ್ಟುಕೊಳ್ಳುವುದು.  ಪರಿಸರ ಸ್ನೇಹಿಯಾಗಿರುವಂತೆ ನಿರ್ವಹಿಸಲು ಸಂಕಲ್ಪಿಸುವುದು.. ಬೂದು ಗುಂಬಳಕ್ಕೆ ರಂಧ್ರ ಮಾಡಿ ಕುಂಕುಮ ತುಂಬಿಸಿ ನಿವಾಳಿಸಿ ಎಸೆದರೆ ಅಥವಾ ನಿಂಬೆ ಹಣ್ಣಿನ ಮೇಲೆ ಗಾಲಿ ಹೊರಳಿಸಿದರೆ ಅದು ಹೋಳಾಗಿ ತ್ಯಾಜ್ಯದ ರಾಶಿ ಇನ್ನಷ್ಟು ಪೇರುವುದಷ್ಟೆ. ಎಲೆ ಸಸ್ಯದ ಆಹಾರ ಕಾರ್ಖಾನೆ. ಎಲೆಗಳನ್ನು ಕಿತ್ತರೆ ಫ‌ಲ ಬರುವುದು ಹೇಗೆ ತಾನೆ ಸಾಧ್ಯ? ತೋರಣ ಕೇವಲ ಸಾಂಕೇತಿಕವಾಗಿರಬೇಕು. ಇಲ್ಲವಾದರೆ ಅಪಾರ ಪ್ರಮಾಣದಲ್ಲಿ ಬಾಳೆಲೆ, ಮಾವಿನೆಲೆ ಕೀಳಲ್ಪಲ್ಟರೆ ಅಷ್ಟರಮಟ್ಟಿಗೆ ಬೆಳೆಯುವ ಹಂತದಲ್ಲೇ ಗಿಡ, ಮರ ಸೊರಗುತ್ತವೆ. ಇಳುವರಿಯೂ ಕ್ಷೀಣಿಸಿ ತ್ಯಾಜ್ಯಪರ್ವತದ ಎತ್ತರವೂ ಏರುತ್ತದೆ. 

ಭೂಮಿ ಹದಗೊಳಿಸಿ ಬೀಜ ಬಿತ್ತಿ, ಗೊಬ್ಬರ ಹಾಕಿ ಅನಾವೃಷ್ಟಿ, ಅತಿವೃಷ್ಟಿ ವೈಪರೀತ್ಯಗಳ ತೂಗುಗತ್ತಿಯನ್ನೆದುರಿಸುತ್ತಾರೆ ಶ್ರಮ ಜೀವಿಗಳಾದ ರೈತರು. ಹಾಗೂ ಹೀಗೂ ಕೈಗೂಡಿದ ಫ‌ಸಲನ್ನು ಗುಲಗಂಜಿಯಷ್ಟೂ ಪೋಲಾಗದೆ ಸದ್ಬಳಕೆಯಾದರೆ ಮಾತ್ರ ಬೆಳೆಗಾರನ ದುಡಿಮೆಯ ಸಾರ್ಥಕ್ಯ. ಬೂದುಗುಂಬಳ ದಂರೋಟು, ಸಾಂಬಾರಾಗಿ ನಿಂಬೆ ಆಯಾಸ ಅಡಗಿಸುವ ಷರಬತ್ತು, ವ್ಯಂಜನವಾಗಿ ಊಟದ ಮೇಜಿಗೆ ಬರಬೇಕೆ ಪರಂತು ಒಗೆತ, ತುಳಿತಕ್ಕೆ ಸಲ್ಲಬಾರದು. ನಾವು ವೈಭವೀಕರಿಸಬೇಕಾದದ್ದು ಆಚರಣೆಗಳ ಹಿಂದಿನ ಅರ್ಥ, ಅರುಹುಗಳನ್ನು…

ಬಿಂಡಿಗನವಿಲೆ ಭಗವಾನ್‌ 

Advertisement

Udayavani is now on Telegram. Click here to join our channel and stay updated with the latest news.

Next