Advertisement

ಶೀಘ್ರವೇ ಸುಸಜಿತ ಐಟಿ ಪಾರ್ಕ್‌ ನಿರ್ಮಾಣ?

09:47 PM Jul 11, 2021 | Team Udayavani |

ವರದಿ: ಕೇಶವ ಆದಿ

Advertisement

ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರಕಾರ ಬೆಳಗಾವಿ ಶಾಸಕರ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಿದರೆ ಶೀಘ್ರವೇ ನಗರದ ಹೊರವಲಯದಲ್ಲಿ ಬಹು ರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಕಲ್ಪಿಸುವ ಸುಸಜ್ಜಿತ ಮಾಹಿತಿ ತಂತ್ರಜ್ಞಾನ ಪಾರ್ಕ್‌ ನಿರ್ಮಾಣವಾಗಲಿದೆ.

ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಶಕ್ತಿ ಕೇಂದ್ರವಾಗಬೇಕೆಂಬ ಬಹು ದಿನಗಳ ಆಸೆ ಈಡೇರಿದ ನಂತರ ಇದಕ್ಕೆ ಪೂರಕವಾಗಿ ಐಟಿ ಪಾರ್ಕ್‌ ನಿರ್ಮಾಣ ಬೇಡಿಕೆ ಇದ್ದು, ಇದಕ್ಕೆ ಸಂಬಂಧಪಟ್ಟಂತೆ ಬೆಳಗಾವಿ ಶಾಸಕ ಅಭಯ ಪಾಟೀಲ ತೀವ್ರ ಪ್ರಯತ್ನ ನಡೆಸಿದ್ದಾರೆ. ಸರಕಾರ ಇದರ ಬಗ್ಗೆ ಮುತುವರ್ಜಿ ವಹಿಸಿ ಅನುಮೋದನೆ ನೀಡಿದ್ದೇ ಆದರೆ ಬೆಳಗಾವಿಯಲ್ಲಿ ಹೊಸ ಅಭಿವೃದ್ಧಿಯ ಹಾದಿ ಸುಗಮವಾಗಲಿದ್ದು, ಉತ್ತರ ಕರ್ನಾಟಕದ ಚಿತ್ರಣವೇ ಬದಲಾಗಲಿದೆ. ಬೆಳಗಾವಿ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹಾಗೂ ಸದ್ಯ ಕೇಂದ್ರ ರಕ್ಷಣಾ ಇಲಾಖೆ ಅಧೀನದಲ್ಲಿರುವ 774 ಎಕರೆ ಜಾಗದಲ್ಲಿ ಹೊಸ ಐಟಿ ಪಾರ್ಕ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಪೂರಕವಾಗಿ ಉಪ ಮುಖ್ಯಮಂತ್ರಿ ಹಾಗೂ ಐಟಿ ಬಿಟಿ ಸಚಿವರಾದ ಅಶ್ವಥ್‌ ನಾರಾಯಣ ಅವರು ಕೇಂದ್ರದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರನ್ನು ಭೇಟಿ ಮಾಡಿ ಐ.ಟಿ ಪಾರ್ಕ್‌ ನಿರ್ಮಿಸಲು ಸಹಕಾರ ಕೋರಿದ್ದಾರೆ.

ಜಾಗದ ವಿವಾದ: ದಾಖಲೆಯ ಪ್ರಕಾರ ಜಾಗ ರಾಜ್ಯ ಸರಕಾರದ್ದು. ಜಾಗದ ಒಡೆತನದ ಸಂಬಂಧ ಈ ಹಿಂದೆ ನಾಲ್ಕೈದು ಸಭೆ ನಡೆದಿದ್ದರೂ ರಕ್ಷಣಾ ಇಲಾಖೆ ಅಧಿಕಾರಿಗಳು ಇದು ತಮ್ಮ ಜಾಗವೆಂದು ಹೇಳಿಕೊಳ್ಳಲು ಬೇಕಾದ ದಾಖಲೆ ಸಲ್ಲಿಸಿಲ್ಲ. ಜತೆಗೆ ಈ ಹಿಂದೆ ರಕ್ಷಣಾ ಇಲಾಖೆಗೆ ಲೀಸ್‌ ಆಧಾರದ ಮೇಲೆ ನೀಡಿದ್ದ ಈ ಜಾಗದ ಅವಧಿಯೂ ಮುಗಿದಿದೆ. ಇದಲ್ಲದೆ ಉತಾರದಲ್ಲಿ ಇದು ರಾಜ್ಯ ಸರಕಾರದ ಜಾಗ ಎಂತಲೇ ಇದೆ. ಆದರೆ ಜಾಗ ಇನ್ನೂ ರಕ್ಷಣಾ ಇಲಾಖೆ ಸ್ವಾಧೀನದಲ್ಲೇ ಇರುವುದರಿಂದ ಇಲ್ಲಿ ಐಟಿ ಪಾರ್ಕ್‌ ಸ್ಥಾಪಿಸಬೇಕೆಂಬ ಕನಸು ನನಸಾಗಿಲ್ಲ.

ಬೆಳಗಾವಿ ನಗರ ಮಹಾರಾಷ್ಟ್ರ-ಗೋವಾ ರಾಜ್ಯಗಳಿಗೆ ಸಂಪರ್ಕದ ಕೊಂಡಿಯಾಗಿದ್ದು, ಇಲ್ಲಿ ಐಟಿ ಬಿಟಿ ಪಾರ್ಕ್‌ ನಿರ್ಮಾಣವಾದರೆ ಪರೋಕ್ಷ-ಅಪರೋಕ್ಷವಾಗಿ ಸುಮಾರು ಒಂದು ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ. ಹೀಗಾಗಿ ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನನ್ನು ಐಟಿ-ಬಿಟಿ ಪಾರ್ಕ್‌ ನಿರ್ಮಿಸಲು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಬೇಕೆಂಬುದು ಉದ್ಯಮಿಗಳ ಹಾಗೂ ಶಾಸಕರ ಮನವಿ. ಶಾಸಕರ ಈ ಮನವಿಗೆ ರಾಜ್ಯದ 60 ಶಾಸಕರು ಸಹಿ ಮಾಡಿ ಸರಕಾರ ಹಾಗೂ ರಕ್ಷಣಾ ಸಚಿವರಿಗೆ ಪತ್ರ ಸಲ್ಲಿಸಿದ್ದಾರೆ.

Advertisement

ಒಂದು ಐಟಿ ಪಾರ್ಕ್‌ ನಿರ್ಮಾಣಕ್ಕೆ ಕನಿಷ್ಠ 100 ಎಕರೆ ಜಾಗ ಇರಬೇಕು. ಕೆಎಲ್‌ಇ ಆಸ್ಪತ್ರೆ ಬಳಿ ಇರುವ ಈ ರಾಜ್ಯ ಸರಕಾರದ ಜಾಗ 774 ಎಕರೆ ವ್ಯಾಪ್ತಿ ಹೊಂದಿದ್ದು, ಸಾಕಷ್ಟು ಐಟಿ ಕಂಪನಿಗಳ ಸ್ಥಾಪನೆಗೆ ನೆರವಾಗಲಿದೆ. ಇಲ್ಲಿಂದ ರೈಲು, ವಿಮಾನ ಸಂಪರ್ಕಕ್ಕೆ ಸಾಕಷ್ಟು ಅನುಕೂಲವಾಗಿದೆ. ಈ ಪ್ರದೇಶ ನಗರದೊಳಗೆ ಇರುವುದರಿಂದ ಸೌಲಭ್ಯ ಒದಗಿಸಲು ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ.

ಇದ್ದೂ ಇಲ್ಲದಂತಿರುವ ಪಾರ್ಕ್‌: ಸರಕಾರ 10 ವರ್ಷಗಳ ಹಿಂದೆ ಬೆಳಗಾವಿಯಿಂದ 18 ಕಿಮೀ ದೂರದ ದೇಸೂರ ಬಳಿ 41 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್‌ ಸ್ಥಾಪಿಸಲು ನಿರ್ಧರಿಸಿ ಅಲ್ಲಿ ರಸ್ತೆ ನಿರ್ಮಾಣ ಮಾಡಿತು. ದುರ್ದೈವ ಎಂದರೆ ಖಾನಾಪುರ ಮೂಲಕ ಗೋವಾ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಎರಡು ಕಿ.ಮೀ. ಒಳಗಿರುವ ಈ ಪ್ರದೇಶದಲ್ಲಿ ಐಟಿ ಪಾರ್ಕ್‌ನ ಒಂದೇ ಒಂದು ಕುರುಹು ಕಾಣುತ್ತಿಲ್ಲ. ಇವತ್ತಿಗೂ ಅಲ್ಲಿ ಯಾವುದೇ ಐಟಿ ಸಂಸ್ಥೆ ತನ್ನ ಕಾರ್ಯಾರಂಭ ಮಾಡಿಲ್ಲ. ಐಟಿ ಪಾರ್ಕ್‌ಗೆ ಆಯ್ಕೆ ಮಾಡಿದ ಜಾಗವೇ ಸರಿ ಇಲ್ಲ. ಇದನ್ನು ಬೆಳಗಾವಿ ವಿಮಾನ ನಿಲ್ದಾಣ ಸಮೀಪ ಮಾಡಬೇಕಿತ್ತು. ಒಂದು ಪಾರ್ಕ್‌ ಮಾಡಿದ ಮೇಲೆ ಉದ್ಯಮಿಗಳಿಗೆ ಅಲ್ಲಿ ಎಲ್ಲ ಸೌಲಭ್ಯ ಕಲ್ಪಿಸಿ ಕೊಡುವುದು ಸರಕಾರದ ಮುಖ್ಯ ಕೆಲಸ. ಆದರೆ ಅಂತಹ ಯಾವುದೇ ಬೆಳವಣಿಗೆ ಆಗಲಿಲ್ಲ. ಹೀಗಾಗಿ ದೇಸೂರ ಬಳಿ ಜಾಗ ಖರೀದಿಸಿದ್ದು ಯಾವ ಪ್ರಯೋಜನಕ್ಕೂ ಬಂದಿಲ್ಲ ಎಂಬುದು ಉದ್ಯಮಿಗಳ ನೋವು. ಈಗ ಕೆಎಲ್‌ಇ ಆಸ್ಪತ್ರೆ ಬಳಿ ಇರುವ ಜಾಗ ಐಟಿ ಪಾರ್ಕ್‌ಗೆ ಹೇಳಿ ಮಾಡಿಸಿದ ಸ್ಥಳ. ಎಲ್ಲದಕ್ಕೂ ಇದು ಅನುಕೂಲ ಆಗಲಿದೆ. ಸಾರಿಗೆ ಮತ್ತಿತರೆ ಸೌಲಭ್ಯಗಳಿಗೆ ಸಂಪರ್ಕದ ಸಮಸ್ಯೆ ಇಲ್ಲ. ನಗರಕ್ಕೆ ಹೊಂದಿಕೊಂಡಿರುವುದರಿಂದ ಯಾವುದಕ್ಕೂ ಪರದಾಡುವ ತಾಪತ್ರಯ ಇಲ್ಲ. ಆದರೆ ಈ ಜಾಗ ಬಿಟ್ಟು ಕೊಡಲು ಕೇಂದ್ರ ರಕ್ಷಣಾ ಇಲಾಖೆ ಮನಸ್ಸು ಮಾಡಬೇಕಷ್ಟೆ.

Advertisement

Udayavani is now on Telegram. Click here to join our channel and stay updated with the latest news.

Next