Advertisement

ಸಾಮುದಾಯಿಕ ಪ್ರಸರಣ ಆಗಿದ್ದು ನಿಜ; ಕೊನೆಗೂ ಒಪ್ಪಿಕೊಂಡ ಸರಕಾರ

01:45 AM Oct 19, 2020 | mahesh |

ಹೊಸದಿಲ್ಲಿ: “ಕೊರೊನಾ ಸೋಂಕು ಭಾರತ ದಲ್ಲಿ ಸಾಮುದಾಯಿಕ ಮಟ್ಟದಲ್ಲಿ ವ್ಯಾಪಿಸಿದೆ.’ ದೇಶದಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಪತ್ತೆಯಾದ ಸುಮಾರು 9 ತಿಂಗಳ ಬಳಿಕ ಕೇಂದ್ರ ಸರಕಾರ, ಸೋಂಕು ಸಮುದಾಯ ಮಟ್ಟ ದಲ್ಲಿ ವ್ಯಾಪಿಸಿರುವು ದನ್ನು ಒಪ್ಪಿಕೊಂಡಿದೆ. ಆದರೆ, ಸಾಮುದಾ ಯಿಕ ಮಟ್ಟದ ವ್ಯಾಪಿ ಸುವಿಕೆಯು ಕೆಲವು ಜಿಲ್ಲೆಗಳಿಗಷ್ಟೇ ಸೀಮಿತ ವಾಗಿದೆ ಎಂದೂ ಸ್ಪಷ್ಟಪಡಿಸಿದೆ. ರವಿವಾರ “ಸಂಡೇ ಸಂವಾದ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಈ ವಿಚಾರ ತಿಳಿಸಿದ್ದಾರೆ.

Advertisement

ಕೆಲವು ದಿನಗಳ ಹಿಂದಷ್ಟೇ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಸೋಂಕು ಸಮುದಾಯ ಮಟ್ಟದಲ್ಲಿ ಹರಡುತ್ತಿದೆ ಎಂದು ಹೇಳಿದ್ದರು. ಈ ಕುರಿತು ಹರ್ಷವರ್ಧನ್‌ರನ್ನು ಪ್ರಶ್ನಿಸಿದಾಗ ಅವರು, “ಪಶ್ಚಿಮ ಬಂಗಾಲ ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಜನಸಂಖ್ಯೆ ಇರುವ ಸ್ಥಳಗಳಲ್ಲಿ ಸಮುದಾಯ ಮಟ್ಟದಲ್ಲಿ ಸೋಂಕು ಹರಡಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಆದರೆ ಇದು ಸೀಮಿತ ಜಿಲ್ಲೆಗಳಲ್ಲಿವೆ’ ಎಂದಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕೇಂದ್ರ ಸರಕಾರವೇ ಸೋಂಕಿನ ಸಾಮುದಾಯಿಕ ವ್ಯಾಪಿಸುವಿಕೆ ಯನ್ನು ಒಪ್ಪಿದಂತಾಗಿದೆ.

ಚೀನದ ವಾದಕ್ಕೆ ಪುರಾವೆ ಇಲ್ಲ
“ಕೊರೊನಾ ವೈರಸ್‌ ಮೊದಲು ಕಂಡುಬಂದಿದ್ದು ನಮ್ಮ ದೇಶದಲ್ಲಲ್ಲ. ಕಳೆದ ವರ್ಷ ಹಲವು ದೇಶಗಳಲ್ಲಿ ಏಕಕಾಲಕ್ಕೆ ಸೋಂಕು ಕಾಣಿಸಿಕೊಂಡಿತ್ತು. ಆದರೆ, ಅದನ್ನು ಮೊದಲು ಬಹಿರಂಗಪಡಿಸಿದ್ದು ಮಾತ್ರ ನಾವು’ ಎಂಬ ಚೀನದ ವಾದವನ್ನು ದೃಢೀಕರಿಸುವಂಥ ಯಾವುದೇ ಪುರಾವೆ ಸಿಕ್ಕಿಲ್ಲ. ಸದ್ಯ ಇರುವ ಮಾಹಿತಿ ಪ್ರಕಾರ, ಚೀನದ ವುಹಾನ್‌ನಲ್ಲೇ ಸೋಂಕು ಮೊದಲಿಗೆ ಕಾಣಿಸಿಕೊಂಡಿರುವುದು. ಅದನ್ನೇ ಜಗತ್ತು ಒಪ್ಪಿಕೊಂಡಿದೆ ಎಂದು ಹರ್ಷವರ್ಧನ್‌ ಹೇಳಿದ್ದಾರೆ.

ಮ್ಯುಟೇಷನ್‌ ಆಗಿಲ್ಲ
ದೇಶದಲ್ಲಿ ಈವರೆಗೆ ಕೋವಿಡ್ ವೈರಸ್‌ನ ಮ್ಯುಟೇಷನ್‌(ರೂಪಾಂತರ) ಆಗಿರುವುದು ಕಂಡುಬಂದಿಲ್ಲ ಎಂದೂ ಹರ್ಷವರ್ಧನ್‌ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಬಯೋಟೆಕ್ನಾಲಜಿ ಇಲಾಖೆಯು ಭಾರತದಾದ್ಯಂತ ನಡೆಸಿದ ಅಧ್ಯಯನವೂ ಇದೇ ರೀತಿಯ ವರದಿ ನೀಡಿದೆ. ದೇಶದಲ್ಲಿ ಕಂಡುಬಂದ ಕೊರೊನಾ ವೈರಸ್‌ನ ಪ್ರಮುಖ ಎ2ಎ ಕಣವು, ಜೂನ್‌ನಿಂದ ಈವರೆಗೆ ಯಾವುದೇ ರೀತಿಯ ಮ್ಯುಟೇಷನ್‌ಗೆ ಒಳಗಾಗಿಲ್ಲ ಎಂದು ಈ ವರದಿ ಸ್ಪಷ್ಟಪಡಿಸಿದೆ. ಕಳೆದ 6 ತಿಂಗಳಲ್ಲಿ ಬೆಂಗಳೂರಿನ ನ್ಯಾಷನಲ್‌ ಸೆಂಟರ್‌ ಫಾರ್‌ ಬಯಾಲಾಜಿಕಲ್‌ ಸೈನ್ಸಸ್‌ ಸೇರಿದಂತೆ ದೇಶದ ಹಲವು ಸಂಸ್ಥೆಗಳು, 1058 ಜಿನೋಮ್‌ಗಳನ್ನು ಪ್ರತ್ಯೇಕಿಸಿ ಅಧ್ಯಯನ ನಡೆಸಿವೆ. ದೇಶದಲ್ಲಿ ಪ್ರಮುಖವಾಗಿ ಕಂಡುಬಂದಿದ್ದು ಎ2ಎ ಸ್ಟ್ರೈನ್‌. ಆನಂತರದಲ್ಲಿ ಯಾವುದೇ ರೂಪಾಂತರವು ಪತ್ತೆಯಾಗಿಲ್ಲ ಎಂದು ವರದಿ ಹೇಳಿದೆ.

ಆಕ್ಸಿಮೀಟರ್‌ ಖರೀದಿ
ಮಾರುಕಟ್ಟೆಯಲ್ಲಿ ಚೀನ ಮೂಲದ ಆಕ್ಸಿಮೀಟ ರ್‌ಗಳೇ ತುಂಬಿವೆ ಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ ರುವ ಸಚಿವರು, “ಗ್ರಾಹಕರು ಐಎಸ್‌ಒ ಅಥವಾ ಐಇಸಿ ಗುರುತು ಇರುವ ಎಫ್ಡಿಎ ಅಥವಾ ಸಿಇಯಿಂದ ಅನುಮತಿ ಪಡೆದ ಪಲ್ಸ್‌ ಆಕ್ಸಿಮೀಟರ್‌ಗಳನ್ನು ಖರೀದಿಸಲಿ. ಮಾರುಕಟ್ಟೆಯಲ್ಲೂ, ಆನ್‌ಲೈನ್‌ನಲ್ಲೂ ಅದು ಲಭ್ಯವಿದೆ’ ಎಂದಿದ್ದಾರೆ.

Advertisement

ಬೆಲೆ ತೆರುತ್ತಿದೆ ಕೇರಳ
ಓಣಂ ಅವಧಿಯಲ್ಲಿ ಕೇರಳ ಸರಕಾರ ನಿರ್ಬಂಧಗಳನ್ನು ಸಡಿಲಿಸಿ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟದ್ದರಿಂದಾಗಿ ಅಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಹಬ್ಬದ ಅವಧಿಯ ನಿರ್ಲಕ್ಷ್ಯಕ್ಕೆ ಈಗ ಕೇರಳ ಬೆಲೆ ತೆರುತ್ತಿದೆ. ಇದು ಎಲ್ಲ ರಾಜ್ಯಗಳಿಗೂ ಪಾಠ. ಜೀವ ಒತ್ತೆ ಇಟ್ಟು ಯಾವುದೇ ಹಬ್ಬಗಳನ್ನು ಆಚರಿಸಬೇಕು ಎಂದು ಯಾರೂ ಹೇಳುವುದಿಲ್ಲ. ದಯವಿಟ್ಟು ಎಲ್ಲರೂ ನಿಮ್ಮ ನಿಮ್ಮ ಮನೆಗಳಲ್ಲೇ ಹಬ್ಬ ಆಚರಿಸಿ ಎಂದಿದ್ದಾರೆ ಹರ್ಷವರ್ಧನ್‌.

ಪತ್ರಿಕೆಗಳು ಸೇಫ್
ಪತ್ರಿಕೆಗಳ ಮೂಲಕ ಸೋಂಕು ಹರಡುವುದಿಲ್ಲ. ಪತ್ರಿಕೆಗಳಿಂದ ಕೊರೊನಾ ಹಬ್ಬುತ್ತದೆ ಎನ್ನುವುದಕ್ಕೆ ಈವರೆಗೆ ಯಾವುದೇ ವೈಜ್ಞಾನಿಕ ಸಾಕ್ಷ್ಯ ಸಿಕ್ಕಿಲ್ಲ. ಹೀಗಾಗಿ ಸೋಂಕಿನ ಸಂದರ್ಭದಲ್ಲಿ ಪತ್ರಿಕೆ ಓದುವುದರಿಂದ ಯಾವುದೇ ಹಾನಿ ಇಲ್ಲ ಎಂದೂ ಹರ್ಷವರ್ಧನ್‌ ಸ್ಪಷ್ಟಪಡಿಸಿದ್ದಾರೆ.

ನೇಸಲ್‌ ಲಸಿಕೆ ಪ್ರಯೋಗ ಶೀಘ್ರ
ಪ್ರಸ್ತುತ ದೇಶದಲ್ಲಿ ಯಾವುದೇ ನೇಸಲ್‌ ವ್ಯಾಕ್ಸಿನ್‌(ಮೂಗಿನ ಮೂಲಕ ಹಾಕುವಂಥ ಲಸಿಕೆ) ಪ್ರಯೋಗ ನಡೆಯುತ್ತಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಭಾರತ್‌ ಬಯೋಟೆಕ್‌ ಹಾಗೂ ಸೇರಮ್‌ ಇನ್‌ಸ್ಟಿಟ್ಯೂಟ್‌ ಇಂಥ ಲಸಿಕೆಗಳ ಪ್ರಯೋಗವನ್ನೂ ನಡೆಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next