Advertisement

ಸಾಮಾನ್ಯರಿಗೆ ಅಧಿಕಾರ ನೀಡುವ ಪಾರ್ಟಿ ನಮ್ಮದು

09:48 PM Apr 01, 2019 | Lakshmi GovindaRaju |

ಚಾಮರಾಜನಗರ: ಉತ್ತಮ ಪ್ರಜಾಕೀಯ ಪಕ್ಷದ ಮೂಲಕ ಚುನಾವಣಾ ರಾಜಕೀಯದ ಸ್ಥಾಪಿತ ಅಲಿಖೀತ ನಿಯಮಗಳನ್ನು ಮುರಿದು ಜನಸಾಮಾನ್ಯರ ಕೈಗೆ ಅಧಿಕಾರ ನೀಡುವ ನನ್ನ ಹೋರಾಟ ನಿರಂತರವಾಗಿ ಕೊನೆಯ ಉಸಿರಿರುವರೆಗೂ ನಡೆಯುತ್ತದೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ರಾಜ್ಯಾಧ್ಯಕ್ಷ, ನಟ ಉಪೇಂದ್ರ ಹೇಳಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಿದ್ಧರು, ದುಡ್ಡಿರುವವರು ಚುನಾವಣೆಯಲ್ಲಿ ಸ್ಪರ್ಧಿಸಿ ಕೋಟಿ ಕೋಟಿ ರೂ.ಗಳನ್ನು ಖರ್ಚು ಮಾಡಿ ಗೆಲ್ಲುವ ಕೆಟ್ಟ ಪದ್ಧತಿ ತೊಲಗಬೇಕು. ಜನಸಾಮಾನ್ಯರು ಚುನಾವಣೆಗೆ ನಿಂತು ಹಣ ವೆಚ್ಚ ಮಾಡದೇ ಗೆಲ್ಲುವಂಥ ಪರಿಸ್ಥಿತಿ ಬರಬೇಕು. ಅದಕ್ಕಾಗಿ ನಮ್ಮ ಪ್ರಜಾಕೀಯ ಪಕ್ಷ ಹೋರಾಟ ನಡೆಸುತ್ತಿದೆ ಎಂದರು.

ಸಾಮಾನ್ಯ ಜನರಿಗೆ ಅಧಿಕಾರ ನೀಡುವ ಪಕ್ಷ ನಮ್ಮದು: ಉತ್ತಮ ಪ್ರಜಾಕೀಯ ಪಾರ್ಟಿ ಸ್ಥಾಪನೆಯಾಗಿರುವುದು ಜನಸಾಮಾನ್ಯರಿಗೆ ಅಧಿಕಾರ ನೀಡಲು, ಅಭ್ಯರ್ಥಿಯ ಹಿಂದೆ ನಿಂತು ನಾನು ಕೆಲಸ ಮಾಡುತ್ತೇನೆ. ನಾನು ಸ್ಪರ್ಧಿಸಿದರೆ ಒಂದು ಕ್ಷೇತ್ರದಲ್ಲಿ ಮಾತ್ರ ಕೆಲಸ ಮಾಡಬೇಕಾಗುತ್ತದೆ. ಇಂದು ಉಪೇಂದ್ರ ನಂತರ ಪ್ರಿಯಾಂಕ ಉಪೇಂದ್ರ,ನಂತರ ಇನ್ನೊಬ್ಬ ಪ್ರಸಿದ್ದ ವ್ಯಕ್ತಿ ಗೆದ್ದಂತಾಗುತ್ತದೆ.

ಅದರ ಬದಲು ಬಿಪಿಎಲ್‌ ಕಾರ್ಡ್‌ ಹೊಂದಿರುವ ಬಡ ವ್ಯಕ್ತಿ ಸ್ಪರ್ಧೆಗೆ ನಿಲ್ಲಬೇಕು ಎಂದು ಅವರು ತಮ್ಮ ವಿಚಾರಧಾರೆಯನ್ನು ಹೇಳಿಕೊಂಡರು. ರಾಜಕೀಯವನ್ನು ಪ್ರಜೆಗಳಿಗೆ ಹಸ್ತಾಂತರ ಮಾಡಲು ಉತ್ತಮ ಪ್ರಜಾಕೀಯ ಪಾರ್ಟಿ ಗೆಲ್ಲಬೇಕಿದೆ. ಇಂದಿನ ರಾಜಕೀಯ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆಯಾಗಿ ಉತ್ತಮ ಪ್ರಜಾಕೀಯ ಪಾರ್ಟಿ ಹುಟ್ಟುಹಾಕಲಾಗಿದೆ ಎಂದರು.

ಪ್ರಜೆಗಳ ಆಳ್ವಿಕೆ ನಡೆಯಬೇಕು: ರಾಜರ ಆಳ್ವಿಕೆ ನಂತರ ಬ್ರಿಟಿಷರ ಆಳ್ವಿಕೆ ಮುಗಿದ ಮೇಲೆ ರಾಜಕೀಯ ಮುಖಂಡರ ಆಳ್ವಿಕೆಯಾಗಿದೆ. ರಾಜಕೀಯ ಮುಖಂಡರ ಆಳ್ವಿಕೆ ನಿಲ್ಲಬೇಕು. ಪ್ರಜೆಗಳ ಆಳ್ವಿಕೆ ನಡೆಯಬೇಕು. ಈ ನಿಟ್ಟಿನಲ್ಲಿ ಉತ್ತಮ ಪ್ರಜಾಕೀಯ ಪಾರ್ಟಿಯ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದರು. ಉತ್ತಮ ಪ್ರಜಾಕೀಯ ಪಾರ್ಟಿಯನ್ನು ಸ್ಥಾಪನೆ ಮಾಡಿ 28 ಅಭ್ಯರ್ಥಿಗಳನ್ನು ಕಣಕಿಳಿಸಿದ್ದು, ಪಕ್ಷದ ಗುರುತು ಆಟೋ ರಿಕ್ಷಾ ಗುರುತಿಗೆ ಬುದ್ದಿವಂತರು, ಹೃದಯವಂತರು ಮತಹಾಕಿ ಗೆಲ್ಲಿಸಿಬೇಕಿದೆ ಎಂದರು.

Advertisement

ಸುಳ್ಳು ಹೇಳಿ ಮತ ಲೂಟಿ ಮಾಡಲ್ಲ: ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಪ್ರಣಾಳಿಕೆ ಬಿಡುಗಡೆ ಮಾಡುವುದು ದೊಡ್ಡದಲ್ಲ. ಪ್ರಣಾಳಿಕೆಯನ್ನು ಕೋಟ್‌‌ìನಲ್ಲಿ ರಿಜಿಸ್ಟರ್‌ ಮಾಡಬೇಕು. ಪಕ್ಷ ಅಥವಾ ಅಭ್ಯರ್ಥಿ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಈಡೇರಿಸದಿದ್ದರೆ ಆ ಅಭ್ಯರ್ಥಿ ಅನರ್ಹಗೊಳ್ಳಬೇಕು ಆಗ ಮಾತ್ರ ಸುಳ್ಳು ಹೇಳಿ ಮತವನ್ನು ಲೂಟಿ ಮಾಡುವುದು ತಪ್ಪುತ್ತದೆ ಎಂದರು.

ಜನರಿಗೆ ಏನು ಬೇಕು ಎಂಬುದನ್ನು ತಿಳಿದುಕೊಂಡು ಜನರ ಬೇಡಿಕೆಗಳನ್ನು ಈಡೇರಿಸಿ ಜನರಿಗೆ ಪಾರದರ್ಶಕ ಆಡಳಿತವನ್ನು ನೀಡುವಂತಾಗಬೇಕು. ಇತ್ತಿಚಿಗಿನ ತಂತ್ರಜ್ಞಾನಗಳನ್ನು ಬಳಸಿ ಪ್ರತಿಯೊಬ್ಬರಿಗೂ ಸೌಲಭ್ಯವನ್ನು ತಲುಪಿಸುವಷ್ಟು ತಾಕತ್ತು ಸರ್ಕಾರಕ್ಕಿದೆ ಜನರು ಮತದಾನ ಮಾಡುವ ಮೊದಲು ಸರಿಯಾದ ನಿರ್ಧಾರ ಮಾಡಬೇಕು ಎಂದರು.

ಜನ ಸೇವೆಯೇ ಮುಖ್ಯ ಗುರಿ: ಚುನಾವಣೆ ಗೆಲ್ಲಲು ಅಭ್ಯರ್ಥಿಗಳು ಸುಳ್ಳು ಭರವಸೆಗಳನ್ನು ಕೊಟ್ಟು ಗಿಮಿಕ್‌ಗಳನ್ನು ಮಾಡುತ್ತಾರೆ. ಚುನಾವಣೆ ಒಂದು ವರ್ಷ ಮುಂಚಿತವಾಗಿ ಜನಸೇವೆ ಮಾಡಲು ಹಣ ಖರ್ಚು ಮಾಡಿ ಷೋಗಳನ್ನು ನೀಡುತ್ತಾರೆ. ಇಂಥವರನ್ನು ಜನರು ಒಪ್ಪಬಾರದು ವ್ಯಕ್ತಿ ಮತ್ತು ಪಕ್ಷವನ್ನು ನೋಡದೇ ಆತನಲ್ಲಿರುವ ವಿಚಾರವನ್ನು ನೋಡಿ ಮತಹಾಕಬೇಕು ಎಂದರು.

ಲೂಟಿ ಮಾಡುವವರಿಗೆ ಮತ ಹಾಕಬೇಡಿ: ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ 2 ಲಕ್ಷ ಸಂಬಳ ಬರುತ್ತದೆ ಆದರೆ ಆ ಆಭ್ಯರ್ಥಿ ಗೆಲ್ಲಲು 40 ಕೋಟಿ ಹಣವನ್ನು ಖರ್ಚು ಮಾಡುತ್ತಾನೆ. ಕೋಟಿ ಕೋಟಿ ಖರ್ಚು ಮಾಡಿ ಗೆದ್ದು ಸಮಾಜ ಸೇವೆ ಮಾಡುವ ಬದಲು ಅದನ್ನು ಸಮಾಜಕ್ಕೆ ನೀಡಿಲ್ಲ. 40 ಕೋಟಿ ಹಣವನ್ನು ಖರ್ಚು ಮಾಡಿದವರು ಗೆದ್ದಮೇಲೆ ಎರಡು ಪಟ್ಟಿಗಿಂತ ಹೆಚ್ಚು ಲೂಟಿ ಮಾಡುತ್ತಾರೆ ಅಂಥವರು ಗೆಲ್ಲಬಾರದು ಜನರು ಬದಲಾಗಬೇಕು ಎಂದರು.

ಪಾರ್ಟಿ ಫ‌ಂಡ್‌ ಇರಬಾರದು, ಕಾರ್ಯಕರ್ತರು ಇರಬಾರದು, ಪಾರ್ಟಿಯ ಹೆಸರಿನಲ್ಲಿ ದಂಧೆ ನಡೆಯಬಾರದು ಎಂಬ ಬದಲಾವಣೆಯನ್ನು ಬಯಸಿ ಪಕ್ಷ ಸ್ಥಾಪನೆ ಮಾಡಿದ್ದೇನೆ. ರಾಜಕೀಯದಲ್ಲಿ ಸೋಲು ಗೆಲುವು ಮುಖ್ಯವಾಗಲ್ಲ ರಾಜಕೀಯ ಬದಲಾವಣೆಗೆ ನಾನು ಪ್ರಯತ್ನ ಮಾಡಿದ್ದೇನೆ ಎಂಬ ಆತ್ಮ ತೃಪ್ತಿ ಇದೆ ಎಂದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರಜಾಕೀಯ ಅಭ್ಯರ್ಥಿ ಎಂ. ನಾಗರಾಜು ಸುದ್ದಿಗೋಷ್ಠಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next