Advertisement

ಬೆಂಬಲ ಬೆಲೆಯ ಮಹತ್ವ ಎಷ್ಟಿದೆ…ರೈತರಿಗೆ ಅರಿವು ಮೂಡಿಸುವುದು ಅಗತ್ಯ

11:15 AM Dec 20, 2021 | Team Udayavani |

ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ ಎಂಬುದು ಮರೆಯಾಗಿದೆ. ಅಂದರೆ, ಮಳೆ ಬರುತ್ತಿಲ್ಲ ಎಂಬ ಅರ್ಥವಲ್ಲ. ಯಾವಾಗ ಮಳೆಗಾಲ ಆರಂಭವಾಗುತ್ತದೆ, ಯಾವಾಗ ಮುಗಿಯುತ್ತದೆ ಎಂಬುದೇ ಗೊತ್ತಾಗದ ಸ್ಥಿತಿ ಉಂಟಾಗಿದೆ. ಈ ವರ್ಷವಂತೂ ಜನವರಿಯಲ್ಲಿ ಮಳೆ ಆರಂಭವಾಗಿ, ಡಿಸೆಂಬರ್‌ವರೆಗೂ ಬಂದಿದೆ. ಹೀಗಾಗಿ, ರೈತ ಯಾವ ಬೆಳೆ ಬೆಳೆಯಬೇಕು? ಯಾವ ಕಾಲದಲ್ಲಿ ಏನನ್ನು ಬಿತ್ತನೆ ಮಾಡಬೇಕು ಎಂಬುದೇ ಗೊತ್ತಾಗದ ಸ್ಥಿತಿ ಸೃಷ್ಟಿಯಾಗಿದೆ. ಇದರ ಜತೆಗೆ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆಯ ಮಹತ್ವ ಎಷ್ಟಿದೆ ಎಂಬುದರ ವಿವರ ಇಲ್ಲಿದೆ.

Advertisement

ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಮಳೆ ಮಾದರಿಯೂ ಬದಲಾಗಿದೆ. ಇದು ರೈತರಿಗೆ ಹಲವಾರು ಸಂಕಷ್ಟಗಳನ್ನು ತಂದೊಡ್ಡಿದೆ. ಈ ನಿಟ್ಟಿನಲ್ಲಿ ಸರಕಾರಿ ಸಂಸ್ಥೆಗಳು, ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೃಷಿ ಉತ್ಪನ್ನದ ಕುರಿತು ರೈತರಿಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವಾಗಿದೆ. ಅಂದರೆ, ಯಾವ ಹವಾಮಾನದಲ್ಲಿ ಯಾವ ಬೆಳೆ ಬೆಳೆಯಬೇಕು, ಎಷ್ಟು ಪ್ರಮಾಣ ಎಂಬುದನ್ನು ಆಯಾ ಪ್ರದೇಶಕ್ಕೇ ಸೀಮಿತವಾಗಲಿದ್ದು ಈ ಕುರಿತು ರೈತರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಅಂದರೆ ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯಬಹುದು, ಕೋಲಾರ- ಚಿಕ್ಕಬಳ್ಳಾಪುರ ಕಡೆ ಅಡಿಕೆ ಬೆಳೆಯು ವುದು ಸಾಧ್ಯವಿದೆಯೇ?. ಹೀಗಾಗಿ ಪ್ರದೇಶಗಳಿಗೆ ಅನುಗುಣವಾಗಿ ಕೃಷಿ ಉತ್ಪನ್ನಗಳನ್ನು ಬೆಳೆಯಲು ತಿಳಿಸಲಾಗುತ್ತದೆ.

ಹಾಗೆಯೇ ಕೇಂದ್ರ ಸರಕಾರ ಜಿಲ್ಲಾವಾರು ಬೆಳೆ ಯೋಜನೆ ಜಾರಿಗೆ ತರಬೇಕಿದೆ. ರೈತರಿಗೆ ಬೇಕಾದಂತಹ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕಿದೆ, ಒಂದು ವೇಳೆ ಉತ್ಪಾದನೆ ಹೆಚ್ಚಾದರೆ ಕೇಂದ್ರ ಸರಕಾರ ಕೂಡಿಡುವ ವ್ಯವಸ್ಥೆ ಮಾಡಬೇಕಿದೆ. ಇನ್ನು ಬೆಂಬಲ ಬೆಲೆಗೂ ಕಾಯ್ದೆಯ ಸ್ವರೂಪ ತಂದರೆ ಹೆಚ್ಚು ಅನುಕೂಲವಾಗುತ್ತದೆ.

ಕೇಂದ್ರ ಸರಕಾರ ಕೆಲವು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ಘೋಷಿಸಿದ್ದು ರೈತರಿಗೆ ಇದು ಹೆಚ್ಚು ಲಾಭದಾಯಕ. ರೈತನ ಸ್ವಾವಲಂಬನೆಯೇ ಎಂಎಸ್‌ಪಿಯ ಮೂಲ ಉದ್ದೇಶವಾಗಿದೆ. ಕನಿಷ್ಠ ಬೆಂಬಲ ಬೆಲೆಯಿಂದಾಗಿ ರೈತರು ಹಿಡುವಳಿಗೆ ಮುನ್ನವೇ ತನ್ನ ಬೆಳೆಯ ಬೆಂಬಲ ಬೆಲೆಯನ್ನು ಖಾತರಿಪಡಿಸಿಕೊಳ್ಳುತ್ತಾರೆ. ಒಂದು ರೀತಿಯಲ್ಲಿ ರೈತನಿಗೆ ಭದ್ರತೆ ಒದಗಿಸುತ್ತದೆ. ಅಲ್ಲದೇ, ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಹಾಗೂ ಪೈಪೋಟಿಯೂ ಇರಲಿದೆ. ಇದರಿಂದ ಸಹಜವಾಗಿ ಉತ್ಪನ್ನದ ಬೆಲೆಯೂ ಏರಿಕೆಯಾಗಲಿದ್ದು ಇದರ ಲಾಭ ರೈತನಿಗೆ ಸಿಗುತ್ತದೆ.

ರೈತನ ಆರ್ಥಿಕತೆ ಸುಧಾರಣೆಯೇ ಕೇಂದ್ರ ಸರಕಾರದ ಪ್ರಮುಖ ಉದ್ದೇಶವಾಗಿದೆ. ಅಂದರೆ, ರೈತನಿಗೆ ಆಗುವ ನಷ್ಟವನ್ನು ತಪ್ಪಿಸುತ್ತದೆ. ರೈತನ ಖರ್ಚು-ವೆಚ್ಚ ಎಲ್ಲವನ್ನೂ ಸರಿದೂಗಿಸಿ ಕೇಂದ್ರ ಸರಕಾರ ಬೆಂಬಲ ಬೆಲೆಯನ್ನು ನಿರ್ಧರಿಸುತ್ತದೆ. ಈ ಮೂಲಕ ರೈತನಿಗೆ ತನ್ನ ಉತ್ಪನ್ನದ ಮಾರುಕಟ್ಟೆ ಬೆಲೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮಧ್ಯವರ್ತಿಗಳ ಹಾವಳಿಗೆ ಸಿಲುಕಿ ಕೇಳಿದ ಬೆಲೆಗೆ ಮಾರಾಟ ಮಾಡುತ್ತಾನೆ. ಇದರಿಂದಾಗಿ ರೈತ ನಷ್ಟ ಅನುಭವಿಸುತ್ತಾನೆ.

Advertisement

ಇದನ್ನೂ ಓದಿ:ಪಿಂಕ್‌ಬಾಲ್‌ ಟೆಸ್ಟ್‌: ಮಂಕಾದ ಇಂಗ್ಲೆಂಡ್‌; ಅಜೇಯ ದಾಖಲೆಯತ್ತ ಆಸೀಸ್‌

ಉದಾ; ಖಾಸಗಿ ಕಂಪೆನಿಗಳು, ಸಂಸ್ಥೆಗಳು ತಾನು ಉತ್ಪಾದಿಸಿದ ವಸ್ತುಗಳಿಗೆ ಅವುಗಳೇ ಬೆಲೆಯನ್ನು ನಿರ್ಧರಿಸುತ್ತವೆ. ಆದರೆ ರೈತ ಉತ್ಪಾದಿಸಿದ ಉತ್ಪನ್ನಗಳಿಗೆ ಆತ ಬೆಲೆ ನಿಗದಿಪಡಿಸುವ ಹಕ್ಕು ಇಲ್ಲ. ಮಧ್ಯವರ್ತಿಗಳು ಗುರುತು ಮಾಡಿದ ಬೆಲೆ ಆಧಾರದ ಮೇಲೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾನೆ. ರೈತ ಬೆಲೆ ನಿರ್ಧರಿಸುವವನು ಅಲ್ಲ. ಬೆಲೆಯನ್ನು ಬೇಡುವವನು ಆಗಿದ್ದಾನೆ. ಬೆಂಬಲ ಬೆಲೆಯಿಂದಾಗಿ ರೈತನಿಗೆ ತಾನು ಉತ್ಪಾದಿಸಿದ ಉತ್ಪನ್ನದ ಖಚಿತ ಬೆಲೆಯೂ ದೊರೆಯಲಿದ್ದು ಹೆಚ್ಚಿನ ಅರಿವು ಪಡೆದುಕೊಳ್ಳಲು ಸಾಧ್ಯವಿದೆ. ಅಲ್ಲದೇ, ಮಧ್ಯವರ್ತಿಗಳ ಹಾವಳಿಗೆ ಒಳಗಾಗದಿರಲು ಪ್ರಮುಖವಾದ ಸಾಧನವೆನ್ನಬಹುದಾಗಿದೆ. ಒಂದು ವೇಳೆ ಕನಿಷ್ಠ ಬೆಂಬಲ ಬೆಲೆಯೂ ಇಷ್ಟವಿಲ್ಲದಿದ್ದರೆ ಅದಕ್ಕಿಂತ ಹೆಚ್ಚು ಮೌಲ್ಯಕ್ಕೂ ರೈತ ತನ್ನ ಉತ್ಪನ್ನವನ್ನು ಖಾಸಗಿ ಟ್ರೇಡರ್ಸ್‌ಗೆ ಮಾರಾಟ ಮಾಡಬಹುದು. ಇದರಿಂದಲೂ ಲಾಭವಿದೆ.

ಇನ್ನು ಈಗಾಗಲೇ ಹೇಳಿದಂತೆ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರವೇ ನಿರ್ಧರಿಸುತ್ತದೆ. ಆಯಾ ಸಮಯಕ್ಕೆ ಮುಂಚಿತವಾಗಿ ಮುಂಗಾರು, ಹಿಂಗಾರು ಶುರುವಾಗುವ ಮೊದಲೇ ಬೆಲೆ ನಿಗದಿ ಮಾಡಲಾಗುತ್ತದೆ. ಇದರಿಂದಾಗಿ ಯಾವ ಬೆಳೆಗೆ ಎಷ್ಟು ಕನಿಷ್ಠ ಬೆಂಬಲ ಬೆಲೆ ಎಂಬುದರ ಕುರಿತು ಬೆಳೆ ಬೆಳೆಯುವ ಮೊದಲೇ ರೈತನಿಗೆ ಸಿಗುತ್ತದೆ. ಇದರಿಂದ ರೈತನಿಗೆ ಕನಿಷ್ಠ ಇಷ್ಟು ಬೆಲೆ ಸಿಗುತ್ತದೆ ಎಂಬುದು ಖಾತ್ರಿಯಾಗುತ್ತದೆ. ಸರಕಾರದ ಅಧಿಕೃತ ಸಂಸ್ಥೆಗಳು ಉತ್ಪನ್ನಗಳನ್ನು ಖರೀದಿಸಲಿವೆ.

ಕೇಂದ್ರ ಸರಕಾರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ (ಕಮಿಷನ್‌ ಫಾರ್‌ ಅರ್ಗಿಕಲ್ಚರಲ್‌ ಕಾಸ್ಟ್‌ ಅಂಡ್‌ ಪ್ರೈಸ್‌) ಇವರು ಪ್ರಮುಖವಾಗಿ 23 ಬೆಳೆಗಳನ್ನು ಆಯ್ಕೆ ಮಾಡಿದೆ. ಅಂದರೆ 13-14 ಮುಂಗಾರು ಬೆಳೆ, 5-6 ಹಿಂಗಾರು ಬೆಳೆ, 4 ವರ್ಷವಿಡೀ ಬೆಳೆಯುವ ಬೆಳೆಗಳಾಗಿವೆ. 7 ಸಿರಿಧಾನ್ಯಗಳು ಹಾಗೂ ಭತ್ತ, ಜೋಳ, ಗೋಧಿ, ಮೆಕ್ಕೆಜೋಳ, ಬಾರ್ಲಿ, ಸಜ್ಜೆ ರಾಗಿ 5 ಬೇಳೆ ಕಾಳುಗಳು: ಹೆಸರು, ಉದ್ದು, ಕಡಲೆ, ತೊಗರಿ,  ಮಸೂರ್‌ 7 ಎಣ್ಣೆಕಾಳುಗಳು: ನೆಲಗಡಲೆ, ರಾಪ್ಸಿàಡ್‌-ಸಾಸಿವೆ, ಸೋಯಾ ಬಿನ್‌, ಕುಸುಮೆ,  ಸೂರ್ಯಕಾಂತಿ, ನೈಗರ್‌ ಸೀಡ್‌ 4 ವಾಣಿಜ್ಯ ಬೆಳೆಗಳು: ಕೊಬ್ಬರಿ, ಕಬ್ಬು, ಹತ್ತಿ ಮತ್ತು ಕಚ್ಚಾ ಸೆಣಬಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಲಾಗಿದೆ. ಕೇವಲ ಸರಕಾರದ ನೀತಿಯಾಗಿದ್ದು ಅದು ಆಡಳಿತಾತ್ಮಕ ನಿರ್ಧಾರದ ಒಂದು ಭಾಗವಾಗಿದೆ. ಸರಕಾರವೇ ಬೆಳೆಗಳಿಗೆ ಎಂಎಸ್‌ಪಿ ಘೋಷಿಸುತ್ತದೆ, ಆದರೆ ಅವುಗಳ ಅನುಷ್ಠಾನಕ್ಕೆ ಯಾವುದೇ ಕಾನೂನಿನ ಬೆಂಬಲ ಇಲ್ಲ. ಇದೊಂದು ಕಾಯ್ದೆಯಾಗಿ ಮಾರ್ಪಟ್ಟಾಗ ಮಾತ್ರ ರೈತನ ಸಬಲತೆ ಸಾಧ್ಯವಿದೆ. ಅಲ್ಲದೇ, ರೈತನಿಗೆ ಸಮಗ್ರ ಮಾಹಿತಿ ನೀಡುವ ವ್ಯವಸ್ಥೆ ಬೇಕಾಗಿದೆ. ಆ ಜತೆಗೆ ಜಿಲ್ಲಾವಾರು ಮಟ್ಟದಲ್ಲಿ ಆಯಾ ಪ್ರದೇಶಕ್ಕೆ ಅಗತ್ಯ ಬೇಡಿಕೆ ನೋಡಿಕೊಂಡು ಬೆಳೆ ಬೆಳೆಯಲು ತಿಳಿಸಬೇಕಿದೆ.

-ಪ್ರೊ| ಟಿ.ಎನ್‌.ಪ್ರಕಾಶ್‌
ಕಮ್ಮರಡಿ, ಕೃಷಿ ತಜ್ಞರು

Advertisement

Udayavani is now on Telegram. Click here to join our channel and stay updated with the latest news.

Next