Advertisement

ಬಾಲ ಕಾರ್ಮಿಕ ಪದ್ಧತಿ ತಡೆ ಎಲ್ಲರ ಜವಾಬ್ದಾರಿ

09:29 AM Jun 20, 2019 | Suhan S |

ಹುಬ್ಬಳ್ಳಿ: ಮಕ್ಕಳ ಬಾಲ್ಯ ಅಮೂಲ್ಯವಾದದ್ದು, ಪಾಲಕರು ಮಕ್ಕಳನ್ನು ದುಡಿಮೆಗೆ ಹಚ್ಚಿ ಅವರ ಭವಿಷ್ಯ ಹಾಳು ಮಾಡದೆ, ಅವರನ್ನು ಮುಖ್ಯವಾಹಿನಿಗೆ ತರಲು ಮುಂದಾಗಬೇಕು ಎಂದು ಹುಬ್ಬಳ್ಳಿ ನ್ಯಾಯಾಲಯದ 1ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಮಾದೇಶ ವಿ. ಹೇಳಿದರು.

Advertisement

ಹೊಸೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಬಾಲ್ಯದಲ್ಲಿಯೇ ಶಾಲೆಗೆ ಬಂದು ಉತ್ತಮ ವಿದ್ಯಾಭ್ಯಾಸ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ಆದರೆ ವಿವಿಧ ಕಾರಣಗಳಿಗಾಗಿ ಪಾಲಕರು ಅವರನ್ನು ಶಾಲೆ ಬಿಡಿಸಿ ಚಿಕ್ಕವಯಸ್ಸಿನಲ್ಲೇ ಯಾವುದಾದರು ಕೂಲಿ ಕೆಲಸಕ್ಕೆ ಸೇರುತ್ತಾರೆ. ಸಂವಿಧಾನ 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಹಕ್ಕು ನೀಡಿದೆ. ಹಾಗಾಗಿ ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯ. ಎಲ್ಲಾ ಮಕ್ಕಳಿಗೂ ಅವರ ಬಾಲ್ಯ ಸುರಕ್ಷಿತವಾಗಿ ಕಳೆಯುವ ಹಕ್ಕಿದೆ. ಅದಕ್ಕಾಗಿ ಸರಕಾರಗಳು ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ಇಲಾಖೆಯಿಂದ ವಿವಿಧ ಸೌಲಭ್ಯಗಳಿದ್ದು, ಕಾರ್ಮಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬಾಲ ಕಾರ್ಮಿಕ ಪದ್ಧತಿ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದ ಸಹಾಯಕ ಕಾರ್ಮಿಕ ಆಯುಕ್ತೆ ಮೀನಾ ಪಾಟೀಲ, ಬಡತನ ದೇಶಕ್ಕೆ ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಬಡವರೆಲ್ಲ ಬಾಲ ಕಾರ್ಮಿಕರೆ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಬಾಲ ಕಾರ್ಮಿಕತೆಗೆ ಬಡತನ ಜೊತೆ ಜನಸಂಖ್ಯೆ ಸ್ಫೋಟವೂ ಕಾರಣ. ಇದನ್ನು ತಡೆಗಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಲಾಭದ ಆಸೆ, ಕಡಿಮೆ ವೇತನ ನೀಡುವ ದೃಷ್ಟಿಯಿಂದ ಹಲವಾರು ಉದ್ಯಮಗಳಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುತ್ತಾರೆ. ಹೋಟೆಲ್, ಇಟ್ಟಿಗೆ ಭಟ್ಟಿ, ಗಣಿಗಾರಿಕೆ, ಕೈಗಾರಿಕಾ ಕಂಪನಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಬಾಲಕರನ್ನು ದುಡಿಸಿಕೊಳ್ಳುವವರಿಗೆ ಹಾಗೂ ಮಕ್ಕಳನ್ನು ದುಡಿಸಲು ಕಳುಹಿಸುವ ಪಾಲಕರಿಗೆ 20ರಿಂದ 50 ಸಾವಿರ ರೂ.ವರೆಗೆ ದಂಡ, ಜೊತೆಗೆ 6 ತಿಂಗಳಿನಿಂದ 3 ವರ್ಷದ ವರೆಗೆ ಕಾರಾಗೃಹ ಶಿಕ್ಷೆಯಿದೆ. ಪಾಲಕರು ಮಗು ದುಡಿಸಿ ಬದುಕುವುದು ಅವಶ್ಯವಿಲ್ಲ. ಯಾವುದೇ ಬಾಲಕರು ಶಾಲೆಯಿಂದ ಹೊರಗುಳಿಯಬಾರದು ಎಂದರು.

ತಹಶೀಲ್ದಾರ್‌ ಸಂಗಮೇಶ ಬಾಡಗಿ, ಸಹಾಯಕ ಸರಕಾರಿ ಅಭಿಯೋಜಕ ಪ್ರಕಾಶ ಸುಂಕದ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಮಾತನಾಡಿದರು.

Advertisement

ಸಹಾಯಕ ಸರಕಾರಿ ಅಭಿಯೋಜಕ ಪ್ರಕಾಶ ಸುಂಕದ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ, ಹಿರಿಯ ಕಾರ್ಮಿಕ ನಿರೀಕ್ಷಕ ಸಿದ್ದಪ್ಪ ಕೈಯನೂರ ಮೊದಲಾದವರಿದ್ದರು. ಜಿ.ಸಿ. ಕೊಲಕಾರ ಸ್ವಾಗತಿಸಿದರು. ವಿ.ಜಿ. ಗಳಬಿ ನಿರೂಪಿಸಿದರು. ಲಲಿತಾ ಸಾತೇನಹಳ್ಳಿ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಬಾಲ ಕಾರ್ಮಿಕ ಪದ್ಧತಿ ವಿರೋಧಿಸಿ ಶಾಲಾ ಮಕ್ಕಳಿಂದ ಜಾಥಾ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next