ಚಿಕ್ಕಬಳ್ಳಾಪುರ: ವಿಪಕ್ಷ ನಾಯಕ ಇಲ್ಲದೇ ಅಧಿವೇಶನ ನಡೆದಿದ್ದು ದುರಂತ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಸ್ವಪಕ್ಷೀಯರ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ನನಗೂ ಬೇಸರ ಇದೆ. ಆದಷ್ಟು ಬೇಗ ರಾಜ್ಯ, ಕೇಂದ್ರ ನಾಯಕರು ಈ ಬಗ್ಗೆ ಗಮನ ಹರಿಸಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಬೇಕು. ವಿಳಂಬ ಆಗುತ್ತಿರುವುದು ಸರಿಯಲ್ಲ ಎಂದರು.
ಮುಂದಿನ ಲೋಕಸಭಾ ಚುನಾವಣೆಗೆ ತಾವು ಸ್ಪರ್ಧಿಸುವ ಬಗ್ಗೆ ಕೇಳಿ ಬರುತ್ತಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ಕೆ.ಸುಧಾಕರ್, ಪಕ್ಷ ಏನೇ ಸೂಚಿಸಿದರೂ ಅದರಂತೆ ನಡೆಯುತ್ತೇನೆ. ಬೇರೆ ರಾಜ್ಯಕ್ಕೆ ಹೋಗಿ ಪಕ್ಷ ಸಂಘಟನೆ ಮಾಡಿ ಅಂದರೂ ಅದಕ್ಕೂ ನಾನು ಬದ್ದನಾಗಿರುವೆ. ನಾನಾಗಿಯೇ ಏನನ್ನೂ ನಾಯಕರ ಬಳಿ ಕೇಳುವುದಿಲ್ಲ. ಪಕ್ಷ ಜವಾಬ್ದಾರಿ ವಹಿಸಿದರೆ ಮಾತ್ರ ಕೆಲಸ ಮಾಡುತ್ತೇನೆ ಎಂದರು.
ರಾಜ್ಯದಲ್ಲಿ 2013 ರಿಂದ 2018ರ ವರೆಗೂ ನಡೆದಿರುವ ಅನೇಕ ಭ್ರಷ್ಟಾಚಾರಗಳು ನನಗೇನು ಗೊತ್ತಿಲ್ಲವಾ? ಬಾಯಿ ಬಿಡುವ ಸಂದರ್ಭ ಬಂದರೆ ಎಲ್ಲವನ್ನೂ ಹೇಳುತ್ತೇನೆ. ಈ ಸರ್ಕಾರದಲ್ಲಿ ಮಾತನಾಡಿದರೆ ಎಸ್ಐಟಿ, ನ್ಯಾಯಾಂಗ ತನಿಖೆ ಅಂತ ಪದಗಳನ್ನು ಬಳಸಿ ಮುಖಂಡರನ್ನು, ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ.
-ಡಾ.ಕೆ.ಸುಧಾಕರ್, ಮಾಜಿ ಸಚಿವ