Advertisement

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

01:49 AM Sep 25, 2024 | Team Udayavani |

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೆಲವೇ ದಿನಗಳ ಅಂತರದಲ್ಲಿ “ಸಚಿವರು, ಶಾಸಕರ ಮಾತು ಕೇಳುತ್ತಿಲ್ಲ. ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ’ ಸಿಎಂಗೆ ಪತ್ರ ಬರೆಯುವ ಮೂಲಕ ಸರಕಾರದ ವಿರುದ್ಧವೇ ಸಿಡಿದೆದ್ದವರು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್‌. ಪಾಟೀಲ. ಅಂದು ಬಹಿರಂಗ ಪತ್ರ ಬರೆದ ಬೆನ್ನಲ್ಲೇ ಹುದ್ದೆ ನೀಡಿ ಬಾಯಿ ಮುಚ್ಚಿಸಲಾಯಿತು. ಆದರೆ ಈಚೆಗೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆ ತೃಪ್ತಿ ತಂದಿಲ್ಲ ಎಂದು ಹೇಳುವುದರೊಂದಿಗೆ ಮತ್ತೆ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

Advertisement

ಈ ಅಪಸ್ವರದ ಹಿಂದಿನ ಗುಟ್ಟೇನು? ನಿಜವಾಗಿಯೂ ಕಲ್ಯಾಣ ಕರ್ನಾಟಕದ ಬಗೆಗಿನ ಕಳಕಳಿಯಿಂದ ಹೀಗೆ ಮಾತಾಡಿದ್ದಾರಾ? ಸಿಎಂ ಬದಲಾವಣೆ ಅಥವಾ ಸಂಪುಟ ಪುನಾರಚನೆಯಾದರೆ ಹೊಸ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರಾ? ಈಗಲೂ ಸಚಿವರು, ಶಾಸಕರ ಮಾತು ಕೇಳುತ್ತಿಲ್ಲವೇ? ಇಂತಹ ಹಲವು ಪ್ರಶ್ನೆಗಳಿಗೆ ಬಿ.ಆರ್‌. ಪಾಟೀಲ, “ಉದಯವಾಣಿ’ಯೊಂದಿಗೆ ನೇರಾ-ನೇರ ಮಾತನಾಡಿದ್ದಾರೆ. ಅದರ ಸಾರ ಇಲ್ಲಿದೆ..

1. ಅಂದು ಸಚಿವರು ಮಾತು ಕೇಳುತ್ತಿಲ್ಲ ಅಂತ ಬಹಿರಂಗ ಪತ್ರ ಬರೆದಿರಿ. ಇಂದು ಕಲಬುರಗಿ ಸಚಿವ ಸಂಪುಟ ತೃಪ್ತಿ ತಂದಿಲ್ಲ ಅಂತಿದ್ದೀರಿ. ನಿಮ್ಮದೇ ಸರಕಾರದ ವಿರುದ್ಧ ಈ ಭಿನ್ನರಾಗ ಯಾಕೆ?
ಅದೊಂದು ಜನಪರ ದನಿಯೇ ಹೊರತು, ಬಂಡಾಯ ಅಥವಾ ಭಿನ್ನರಾಗ ಅಲ್ಲ. ಅಷ್ಟಕ್ಕೂ ನನ್ನ ದನಿ ಯಾವತ್ತಿಗೂ ಸರಕಾರದ ವಿರುದ್ಧ ಅಲ್ಲ; ಅದರ ಪರವಾಗಿಯೇ ಇರುತ್ತದೆ ಹಾಗೂ ಅದರಿಂದ ಒಳ್ಳೆಯದೇ ಆಗುತ್ತದೆ. ಯಾವೊಂದು ವಿಷಯ ಬಂದಾಗ ನಾನು ಮುಕ್ತವಾಗಿರುತ್ತದೆ. ಅದು ಕೆಲವರಿಗೆ ಬಂಡಾಯ ಅನಿಸಿದರೆ, ಅದಕ್ಕೆ ನಾನೇನೂ ಮಾಡಲಾಗುವುದಿಲ್ಲ.

2. ಸರಕಾರದ ವಿರುದ್ಧ ಈ ಹಿಂದೆ ಜೋರಾಗಿ ಮಾತಾಡಿದ್ದರಿಂದ ನಿಮಗೊಂದು ಹುದ್ದೆ ಸಿಕ್ಕಿತು. ಆ ಮೂಲಕ ನಿಮ್ಮ ಬಾಯನ್ನೂ ಮುಚ್ಚಿಸಲಾಯಿತು. ಈಗ ಮತ್ತೆ ಮಾತನಾಡುತ್ತಿದ್ದೀರಿ…
ಅಂದು ಹುದ್ದೆಗಾಗಿ ನಾನು ಮಾತನಾಡಿರಲಿಲ್ಲ. ಹುದ್ದೆ ಕೊಟ್ಟು ಅವರು ಸುಮ್ಮನಾಗಿಸಿದ್ದಾರೆ ಎಂದಾದರೆ, ನಾನು ಮೊನ್ನೆ ಕಲಬುರಗಿ ಸಂಪುಟ ಸಭೆ ತೃಪ್ತಿ ತಂದಿಲ್ಲ ಅಂತ ಯಾಕೆ ಹೇಳುತ್ತಿದ್ದೆ? ನಾನೊಬ್ಬ ಫ‌ಕೀರ. ಸಮಾಜವಾದಿ ಹಿನ್ನೆಲೆಯಿಂದ ಬಂದವನು ನಾನು. ಕಾರಿನಿಂದ ಇವತ್ತು ಇಳಿದರೆ, ಬಸ್ಸು, ಆಟೋದಲ್ಲಿ ಓಡಾಡುತ್ತೇನೆ. ಗೂಟದ ಕಾರು, ಬಂಗಲೆ, ಅಧಿಕಾರದ ಹುಚ್ಚುಭ್ರಮೆಗಳಲ್ಲಿ ನಾನಿಲ್ಲ.

3.ಸಚಿವರು ಈಗ ಶಾಸಕರ ಮಾತು ಕೇಳುತ್ತಿದ್ದಾರಾ ಅಥವಾ ಈಗಲೂ ಸಮಸ್ಯೆ ಮುಂದುವರಿದಿದೆ ಅಂತ ನಿಮಗೆ ಅನಿಸುತ್ತಿಲ್ಲವೇ?
ಮಾತು ಕೇಳುತ್ತಿಲ್ಲ ಅನ್ನುವುದಕ್ಕಿಂತ ಅನೇಕ ಶಾಸಕರಿಗೆ ಈಗಲೂ ಒಂದಿಲ್ಲೊಂದು ರೀತಿ ಸಮಸ್ಯೆ ಇದ್ದೇ ಇದೆ. ಸಂಬಂಧಪಟ್ಟ ಕ್ಷೇತ್ರದ ಕೆಲಸ ಆಗುತ್ತಿಲ್ಲ ಎಂಬ ಸಾಮಾನ್ಯ ಕೂಗು ಇದೆ. ಹೊಸದಾಗಿ ಆಯ್ಕೆಯಾಗಿ ಬಂದಿದ್ದೇವೆ. ಜನರ ಬೇಡಿಕೆಗಳನ್ನು ಈಡೇರಿಸಬೇಕು. ಆದರೆ ಅದು ಹಣಕಾಸಿನ ಸಮಸ್ಯೆಯಿಂದ ಅದನ್ನು ಈಡೇರಿಸಲು ಆಗುತ್ತಿಲ್ಲ.

Advertisement

4. ಹಾಗಿದ್ದರೆ, ಸರಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದಾಯಿತು..
ಐದು ಗ್ಯಾರಂಟಿಗಳನ್ನು ಕೊಟ್ಟು ಎಲ್ಲವನ್ನೂ ಸರಿಪಡಿಸಿದ್ದೀವಲ್ಲ. ದುಡ್ಡಿನ ಕೊರತೆ, ಕೇಂದ್ರದ ಮಲತಾಯಿ ಧೋರಣೆಯಿಂದಲೂ ಸಮಸ್ಯೆ ಆಗುತ್ತಿದೆ. ನಮಗೆ ಬರಬೇಕಾದ ಅನುದಾನ ಬರಬೇಕಿತ್ತು. ಆದರೆ ಬಂದಿಲ್ಲ. ಮುಂದಿನ ವರ್ಷ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

5. ಸಿಎಂ ಬದಲಾವಣೆ ಕೂಗು ಕೇಳಿಬರುತ್ತಿದೆ. ಮತ್ತೂಂದೆಡೆ ಸಂಪುಟ ಪುನಾರಚನೆಯೂ ಆಗಲಿದೆ ಎನ್ನಲಾಗುತ್ತಿದೆ. ಸಿಎಂ ಸಮಕಾಲೀನರಾದ ನಿಮಗೆ ಈ ಸಲವಾದರೂ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇದೆಯೇ?
ನನಗೆ ಗೊತ್ತಿಲ್ಲ. ನಾನು ಯೋಚನೆ ಮಾಡಲ್ಲ. ಆಸೆಯೂ ಮಾಡಲ್ಲ ಮತ್ತು ನಿರೀಕ್ಷೆಯೂ ಇಲ್ಲ. ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನ ಇತಿಮಿತಿಯಲ್ಲಿ ಜನಪರ ಕೆಲಸಗಳನ್ನು ಸಾಧ್ಯವಾದಷ್ಟು ಮಾಡುತ್ತೇನೆ. ರಾಜ್ಯದಲ್ಲಿ ಆಯಾ ಸಂದರ್ಭ, ಸಮಯ, ಜಾತಿ ಸಮೀಕರಣ ಇವೆಲ್ಲವನ್ನೂ ನೋಡಬೇಕಾಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ಜೀವನದಲ್ಲಾಗಲಿ ಅಥವಾ ಕಾಂಗ್ರೆಸ್‌ನಲ್ಲಾಗಲಿ ನನಗೆ ಗಾಡೂ ಇಲ್ಲ; ಫಾದರೂÅ ಇಲ್ಲ. ಸಿದ್ದರಾಮಯ್ಯ ಸ್ನೇಹಿತರಾಗಿದ್ದಾರೆ. ನಾನು ಈ ಭಾಗದವನು ಎಂಬ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರೂ ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ. ಆದರೆ ನನ್ನ ಸಮಸ್ಯೆ ಇರುವುದು ನನಗೆ ಯಾರೂ ಗಾಡ್‌ಫಾದರ್‌ ಇಲ್ಲದಿರುವುದು. ನಾವು ಕಾಂಗ್ರೆಸ್‌ಗೆ ಹೊಸಬರು. ಸಿದ್ದರಾಮಯ್ಯ ಮತ್ತು ಖರ್ಗೆ ಅವರನ್ನು ಬಿಟ್ಟರೆ, ಬೇರೆ ಯಾರೂ ನನಗೆ ಗೊತ್ತಿಲ್ಲ.

6.ಕಲಬುರಗಿ ಸಂಪುಟ ಸಭೆ ಸಮಾಧಾನ ತಂದಿದ್ದರೂ, ತೃಪ್ತಿ ತಂದಿಲ್ಲ ಅಂತೀರಾ. ಏನು ಈ ಮಾತಿನ ಮರ್ಮ? ನಿಮ್ಮ ಪ್ರಕಾರ ಇವೆರಡರ ನಡುವಿರುವ ವ್ಯತ್ಯಾಸಗಳಾದರೂ ಏನು?
ಈಗ ನೋಡಿ ನಮ್ಮ ಭಾಗಕ್ಕೆ ಇಡೀ ಸಚಿವ ಸಂಪುಟ ಬಂದು ಇಲ್ಲಿನ ವಿಷಯಗಳ ಬಗ್ಗೆ ಚರ್ಚಿಸಿರುವುದು, ಕೆಲವು ವಿಷಯಗಳಿಗೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿರುವುದು ಸಮಾಧಾನದ ಸಂಗತಿ. ಆದರೆ ಮೂಲಸೌಕರ್ಯಗಳಾದ ನೀರು, ಶಿಕ್ಷಣ, ತೊಗರಿ ಅಭಿವೃದ್ಧಿ ಮಂಡಳಿಗೆ ಶಕ್ತಿ ತುಂಬುವುದು, ವಿಶೇಷ ನ್ಯಾಯಾಲಯ ಕೇಳಿದ್ದೆವು. ರಸ್ತೆ ಸಂಪರ್ಕ, ಹೈಸ್ಕೂಲ್‌, ಜೂನಿಯರ್‌ ಕಾಲೇಜುಗಳಾಗಬೇಕು ಎನ್ನುವುದು ಸೇರಿದಂತೆ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ನಮ್ಮ ಭಾಗದ ಶಾಸಕರ ಪ್ರಮುಖ ಬೇಡಿಕೆ ಆಗಿತ್ತು. ಅದಾವುದೂ ಆಗಲಿಲ್ಲ. ಸಂಪುಟ ಸಭೆ ಇಲ್ಲಿ ಮಾಡಬೇಕು ಎಂಬ ನಿರ್ಧಾರವೇ ತಡವಾಗಿ ಆಯಿತು. ಇದರಿಂದ ಇಲ್ಲಿನ ಮೂಲಭೂತ ವಿಷಯಗಳನ್ನು ನಡಾವಳಿಯಲ್ಲಿ ಸೇರಿಸಲು ಆಗಲಿಲ್ಲ. ಇಲ್ಲಿನ ಶಾಸಕರನ್ನು ಆಹ್ವಾನಿಸಿ, ಅಹವಾಲು ಆಲಿಸಬೇಕಿತ್ತು. ಅದಕ್ಕೆ ತಕ್ಕಂತೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಆವಶ್ಯಕತೆ ಇತ್ತು.

7.ಹಾಗಿದ್ದರೆ, ಇದೊಂದು ಕಾಟಾಚಾರಕ್ಕೆ ಮಾಡಿದ ಸಂಪುಟ ಸಭೆಯೇ? ಅಥವಾ ಲೋಕಸಭಾ ಚುನಾ ವಣೆಯಲ್ಲಿ ಕ್ಲೀನ್‌ ಸ್ವೀಪ್‌ ಮಾಡಿರುವ ಕಾಂಗ್ರೆಸ್‌, ಆ ಭಾಗದಲ್ಲಿ ಮತ್ತಷ್ಟು ಹಿಡಿತ ಸಾಧಿಸುವ ರಾಜಕೀಯ ತಂತ್ರಗಾರಿಕೆಯೇ?
ಕಾಟಾಚಾರಕ್ಕೆ ಅಂತ ಹೇಳಲು ಆಗುವುದಿಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಇದೊಂದು ಉತ್ತಮ ಆರಂಭ ಅನ್ನಬಹುದು. ಯಾಕೆಂದರೆ, ಅನೇಕ ಸಚಿವರು ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೂ ಜಿಲ್ಲೆಗೇ ಬಂದಿರಲಿಲ್ಲ. ಈಗ ಬರುವಂತಾಯಿತು.

8. ನಿಮ್ಮ ಪ್ರಕಾರ ಸಚಿವರು ಕಲ್ಯಾಣ ಕರ್ನಾಟಕಕ್ಕೆ ಬರಲು ಸರಕಾರ ಅಲ್ಲಿ ಸಂಪುಟ ಸಭೆಯನ್ನೇ ನಡೆಸಬೇಕಾಗಿ ಬಂತು?
ಬಹಳಷ್ಟು ಜನ ಸಚಿವರಿಗೆ ಇಲ್ಲಿಗೆ ಬರಲು ಪುರುಸೊತ್ತು ಇರಲಿಲ್ಲ. ಸಚಿವಸಂಪುಟ ಸಭೆ ಇದ್ದ ಕಾರಣಕ್ಕೆ ಪುರುಸೊತ್ತು ಮಾಡಿಕೊಂಡು ಬರುವಂತಾಯಿತು. ಅದೇನೇ ಇರಲಿ, ಒಂದು ಉತ್ತಮ ಆರಂಭವಂತೂ ಆಗಿದೆ. ಇದು ಎಷ್ಟರಮಟ್ಟಿಗೆ ಫ‌ಲ ನೀಡುತ್ತದೆ ಹಾಗೂ ಈ ಕಾಳಜಿ ಮುಂದೆಯೂ ಇರಲಿದೆಯೇ ಎಂಬುದನ್ನು ಕಾದುನೋಡಬೇಕಷ್ಟೇ.

9.ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ ನಡೆಯಿತು. ಹಿಂದೆ ನಡೆದ ಸಂಪುಟ ಸಭೆ ಏನಾದರೂ ಫ‌ಲ ನೀಡಿದೆ ಅಂತ ಅನಿಸುತ್ತಿದೆಯೇ?
ಖಂಡಿತ. ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್‌ ಸೀಟುಗಳು ನಮ್ಮ ಭಾಗದ ಯುವಕರಿಗೆ ದೊಡ್ಡ ವರದಾನ ಆಗಿದೆ. ಅಷ್ಟು-ಇಷ್ಟು ರಸ್ತೆಗಳ ಅಭಿವೃದ್ಧಿ ಆಗುತ್ತಿದೆ. ಇದೆಲ್ಲದರ ಆಚೆಗೆ ಕ್ಯಾಬಿನೆಟ್‌ ಎಲ್ಲಿಯಾದರೂ ಆಗಲಿ, ಸರಕಾರದಿಂದ ಪ್ರತೀವರ್ಷ ಬರುವ ಅನುದಾನ ಎಲ್ಲ ಜಿಲ್ಲೆಗಳಿಗೆ ಹಾಗೂ ವಲಯಗಳಿಗೆ ಹೋಗಬೇಕು. ಇದಕ್ಕೆ ಹೆಚ್ಚುವರಿಯಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ಬರಬೇಕು. ಆದರೆ ಈಗ ವ್ಯತಿರಿಕ್ತವಾಗಿ ಪ್ರದೇಶದ ಯಾವುದೇ ಕೆಲಸ-ಕಾರ್ಯಗಳಿಗೆ ಬೇಕಾಗುವ ಅನುದಾನಕ್ಕೆ ಕೆಕೆಆರ್‌ಡಿಬಿ ಕಡೆಗೆ ಕೈತೋರಿಸುವಂತಾಗಿದೆ. ಇದು ದುರಂತ. ಹಳೆಯ ಮೈಸೂರು ಭಾಗಕ್ಕೆ ಸರಿಸಮನಾಗಿ ಬೆಳೆಯಲು ಈ ಮಂಡಳಿ ಒಂದು ಏಣಿ ಅಷ್ಟೇ.

10. ರಾಜ್ಯಪಾಲ ವರ್ಸಸ್‌ ಸರಕಾರ ಕದನ ಜೋರಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನೀವೇನು ಸಲಹೆ ಕೊಡುತ್ತೀರಿ?
ರಾಜ್ಯಪಾಲರು ವೈಯಕ್ತಿಕವಾಗಿ ತುಂಬಾ ಒಳ್ಳೆಯವರು. ಆದರೆ ಅವರು ಕೇಂದ್ರದ ಆಣತಿ ಮೇರೆಗೆ ನಡೆಯುತ್ತಿದ್ದಾರೆ. ಅದು ಸಮಸ್ಯೆ ಆಗುತ್ತಿದೆ.

11. ಆಗಿನ ಸಿದ್ದರಾಮಯ್ಯನೇ ಬೇರೆ ಈಗಿನ ಸಿದ್ದರಾಮಯ್ಯನೇ ಬೇರೆ ಅಂತ ನೀವು ಹೇಳಿದಿರಿ. ಹಾಗಿದ್ದರೆ, ಈಗ ಕೇಳಿಬರುತ್ತಿರುವ ಸಿಎಂ ಬದಲಾವಣೆ ಕೂಗಿಗೆ ನೀವೂ ದನಿಗೂಡಿಸುತ್ತೀರಾ?
2013ರ ಸಿದ್ದರಾಮಯ್ಯ ಗಟ್ಟಿಯಾಗಿದ್ದರು. ಅದೇ ಸಿದ್ದರಾಮಯ್ಯ ನಮಗೆ ಬೇಕು ಅಂತ ನಾನು ಒಮ್ಮೆ ಹೇಳಿದ್ದು ನಿಜ. ಈಗ ಹಾಗಿಲ್ಲ ಎಂದಾದರೆ, ಅವರಿಗೇ ಅವರದ್ದೇ ಆದ ಒತ್ತಡಗಳಿರಬಹುದು. ಹಾಗಂತ, ನಾನು ಸಿಎಂ ಬದಲಾವಣೆ ಕೂಗಿಗೆ ದನಿಗೂಡಿಸುವುದಿಲ್ಲ. ಹಾಗೆನೋಡಿದರೆ, ಸಿಎಂ ಬದಲಾವಣೆ ಬಗ್ಗೆ ಚರ್ಚೆಯೇ ಆಗಬಾರದು ಎನ್ನುವುದು ನನ್ನ ಅಭಿಪ್ರಾಯ.

– ಉದಯವಾಣಿ ಸಂದರ್ಶನ
* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next