Advertisement

ಮಾಯಾವತಿ ಸಹೋದರನಿಗೆ ಸೇರಿದ 400 ಕೋಟಿ ಮೌಲ್ಯದ ಆಸ್ತಿ ಜಪ್ತಿ

08:46 AM Jul 19, 2019 | sudhir |

ಲಕ್ನೋ: ಉತ್ತರ ಪ್ರದೇಶದ ಮಾಜೀ ಮುಖ್ಯಮಂತ್ರಿ ಹಾಗೂ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ಸಹೋದರನಿಗೆ ಸೇರಿದ ಸುಮಾರು 400 ಕೋಟಿ ರೂಪಾಯಿಗಳ ಮೌಲ್ಯದ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆಯು ಇಂದು ಜಪ್ತಿ ಮಾಡಿದೆ.

Advertisement

ದೆಹಲಿ ಮೂಲದ ಆದಾಯ ತೆರಿಗೆ ಇಲಾಖೆಯ ಬೇನಾಮಿ ತಡೆ ಘಟಕವು ಈ ಬೇನಾಮಿ ಆಸ್ತಿಯ ಜಪ್ತಿಗೆ ನಿರ್ದೇಶನವನ್ನು ನೀಡಿ ಜುಲೈ 16ರಂದು ತಾತ್ಕಾಲಿಕ ಆದೇಶವನ್ನು ಹೊರಡಿಸಿತ್ತು. ಉತ್ತರಪ್ರದೇಶದ ನೋಯ್ಡಾದಲ್ಲಿ ಸುಮಾರು ಏಳು ಎಕರೆಗಳಷ್ಟು ಭೂಮಿಯನ್ನು ಮಾಯಾವತಿ ಅವರ ಸಹೋದರ ಆನಂದ್ ಕುಮಾರ್ ಮತ್ತು ಅವರ ಪತ್ನಿ ವಿಚಿತೆರ್ ಲತಾ ಅವರು ‘ಫಲಾನುಭವಿ ಒಡೆತನ’ದಡಿಯಲ್ಲಿ ಹೊಂದಿದ್ದುದು ಬೆಳಕಿಗೆ ಬಂದಿತ್ತು. ಬೇನಾಮಿ ಆಸ್ತಿ ಪರಭಾರೆ ನಿಷೇಧ ಕಾಯ್ದೆ 1998ರ ಸೆಕ್ಷನ್ 24(3)ರ ಅಡಿಯಲ್ಲಿ ಜಪ್ತಿ ಆದೇಶವನ್ನು ನೀಡಲಾಗಿತ್ತು. ವಶಪಡಿಸಿಕೊಂಡ ಈ ಆಸ್ತಿಯ ಮೌಲ್ಯ ಸುಮಾರು 400 ಕೋಟಿ ರೂಪಾಯಿಗಳಷ್ಟಾಗಬಹುದು ಎನ್ನಲಾಗುತ್ತಿದೆ.

ಮಾಯಾವತಿ ಅವರು ಕಳೆದ ಜೂನ್ ತಿಂಗಳಲ್ಲಿ ಆನಂದ್ ಕುಮಾರ್ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದರು. ಆನಂದ್ ಕುಮಾರ್ ಅವರು ಈ ಹಿಂದೆ ನೋಯ್ಡಾ ಪ್ರಾಧಿಕಾರದಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸಿದ್ದರು ಮತ್ತು ಖೊಟ್ಟಿ ಕಂಪೆನಿಯನ್ನು ಪ್ರಾರಂಭಿಸಿ ಅದರ ಮೂಲಕ ಕೋಟ್ಯಂತರ ರೂಪಾಯಿಗಳ ಸಾಲ ಪಡೆದುಕೊಂಡಿರುವ ಆರೋಪವೂ ಆನಂದ್ ಕುಮಾರ್ ಅವರ ಮೇಲಿದೆ.

2007ರಲ್ಲಿ ಮಾಯಾವತಿ ಅವರು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಆನಂದ್ ಕುಮಾರ್ ಅವರು ಸುಮಾರು 49 ಕಂಪೆನಿಗಳನ್ನು ಪ್ರಾರಂಭಿಸಿದ್ದರು ಎಂದು ಹೇಳಲಾಗುತ್ತಿದೆ ಹಾಗೂ 2014ರ ಅಂತ್ಯದಲ್ಲಿ ಅವರ ಆಸ್ತಿ ಮೌಲ್ಯ 1316 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next