Advertisement

ಕಾಂಗ್ರೆಸ್ ಇರುವ ರಾಜ್ಯಗಳಲ್ಲಿ ಇಂಧನ ಬೆಲೆ ಇಳಿಕೆ ಆಗಿದೆಯಾ: ಪ್ರಹ್ಲಾದ ಜೋಶಿ

08:43 PM Nov 06, 2021 | Team Udayavani |

ಧಾರವಾಡ: ಯಾವ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆಯೋ ಅಲ್ಲಿ ಇಂಧನದ ಮೇಲಿನ ವ್ಯಾಟ್ ಕಡಿಮೆ ಆಗಿದೆಯಾ ಅಥವಾ ಕಡಿಮೆ ಮಾಡುತ್ತಾರಾ ಎಂಬುದನ್ನು ಡಿ.ಕೆ.ಶಿವಕುಮಾರ ಅವರು ರಾಹುಲ್ ಗಾಂಧಿ ಅವರನ್ನು ಕೇಳಿ ಹೇಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಡಿ.ಕೆ.ಶಿವಕುಮಾರ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

Advertisement

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಮುಂದಿಟ್ಟುಕೊಂಡು ಬೆಲೆ ಇಳಿಕೆ ಮಾಡುವುದು ನಮ್ಮ ಪ್ರವೃತ್ತಿಯಲ್ಲ. ಒಟ್ಟಾರೆ ದೇಶದಲ್ಲಿ 29 ಉಪಚುನಾವಣೆಗಳು ನಡೆದಿವೆ. ಅದರಲ್ಲಿ 12 ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದೆ. ಕಾಂಗ್ರೆಸ್ ಹಿಮಾಚಲಪ್ರದೇಶ ಹಾಗೂ ರಾಜಸ್ಥಾನ ಎರಡು ಕಡೆಗಳಲ್ಲಿ ಗೆದ್ದಿದೆ. ನಾವು ತೆಲಂಗಾಣ, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲೂ ಗೆದ್ದಿದ್ದೇವೆ. ಆಗಲೂ ಸಹ ಇಂಧನದ ಬೆಲೆ ಏರಿಕೆ ಆಗುತ್ತಿತ್ತು. ಇಂಧನ ಬೆಲೆ ಕಂಟ್ರೋಲ್ ಆಗದೇ ಹೀಗೇ ಮುಂದುವರೆದುಕೊಂಡು ಬಂದಿದ್ದು ಕಾಂಗ್ರೆಸ್ ಕಾಲಘಟ್ಟದಲ್ಲಿ ವಿನಹ ನಮ್ಮ ಕಾಲದಲ್ಲಿ ಅಲ್ಲ ಎಂದರು.

ಇಂದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಏರಿಕೆ ಆಗುತ್ತಿರುವ ಬೆಲೆ ಏರಿಕೆಯನ್ನು ಗಮನಿಸಿ ಅದನ್ನು ನಿಯಂತ್ರಣಕ್ಕೆ ತರುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಆದರೂ ಬೆಲೆ ನಿರಂತರವಾಗಿ ಏರುತ್ತಿದೆ. ಇದರ ಮಧ್ಯೆಯೂ ಜನರಿಗೆ ಸ್ವಲ್ಪ ಹೊರೆ ಕಡಿಮೆ ಮಾಡಿದ್ದೇವೆ. ಡಿಕೆಶಿ ಹಾಗೂ ಸಿದ್ದರಾಮಯ್ಯನವರು ಪ್ರಬುದ್ಧ ರಾಜಕಾರಣಿಗಳು. ರಾಹುಲ್ ಗಾಂಧಿ ಅವರಿಗೆ ತಿಳುವಳಿಕೆ ಕಡಿಮೆ ಇದೆ. ಇವರೂ ಸಹ ತಿಳುವಳಿಕೆ ಇಲ್ಲದವರಂತೆ ಮಾತನಾಡಬಾರದು ಎಂದರು.

ಇದನ್ನೂ ಓದಿ:ಕೇದಾರನಾಥ ಪ್ರತಿಮೆ ಅನಾವರಣ: ಮೋದಿಗೆ ದೇವೇಗೌಡರ ಪ್ರಶಂಸೆ

ದೇಶದಲ್ಲಿ ದೊಡ್ಡಪ್ರಮಾಣದಲ್ಲಿ ಜನೋಪಯೋಗಿ ಕೆಲಸಗಳು ಆಗಬೇಕಿವೆ. ಕೊರೊನಾ ಲಸಿಕೆ, ಧಾನ್ಯಗಳ ವಿತರಣೆ ಆಗಬೇಕಿದೆ. ಇದಕ್ಕೆಲ್ಲ ಹಣ ಬೇಕು. ಇದರ ಮಧ್ಯೆಯೂ ಬೆಲೆ ಇಳಿಕೆ ಮಾಡಿ ಜನರ ಹೊರೆ ಕಡಿಮೆ ಮಾಡಿದ್ದೇವೆ ಎಂದರು.

Advertisement

ಬಿಜೆಪಿ, ಸಿದ್ದರಾಮಯ್ಯ ಟ್ವೀಟ್ ವಾರ್‌ಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತರ ಪರವಾಗಿಲ್ಲ. ನಾವು ತುಷ್ಟೀಕರಣದ ರಾಜಕಾರಣ ಮಾಡುವುದಿಲ್ಲ. ಕಾಂಗ್ರೆಸ್‌ ಇತಿಹಾಸ ಕೆದಕಿ ನೋಡಿದಾಗ ಆ ಪಕ್ಷ ತುಷ್ಟೀಕರಣದ ರಾಜಕಾರಣ ಮಾಡುತ್ತಲೇ ಬಂದಿದೆ. ಮತಬ್ಯಾಂಕ್‌ ಎಂದು ಮಾಡಿಕೊಂಡು ತುಷ್ಟೀರಣದ ರಾಜಕಾರಣ ಮಾಡಿಕೊಂಡೇ ಬಂದಿದೆ ಎಂದರು.

ಎಲ್ಲೇ ಚುನಾವಣೆಗಳು ನಡೆದರೆ ಅಲ್ಲಿಗೆ ಸರ್ಕಾರ ಹಾಗೂ ಸರ್ಕಾರದ ಮಂತ್ರಿಗಳು ಹೋಗುವುದು ಸಹಜ. ಈ ಹಿಂದೆ ನಂಜನಗೂಡು, ಪಿರಿಯಾಪಟ್ಟಣದಲ್ಲಿ ಚುನಾವಣೆ ನಡೆದಾಗ ಸಿದ್ದರಾಮಯ್ಯ ಹೋಗಿರಲಿಲ್ಲವೇ? ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿಗೆ ಶೇ.53 ರಷ್ಟು ಮತಗಳು ಬಂದಿವೆ. ಸೋತರೆ ಧೃತಿಗೆಡುವ ಸಿದ್ಧಾಂತ ನಮ್ಮದಲ್ಲ. ಸಿಂದಗಿಯಲ್ಲಿ 30 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಸೋತಿದೆ. ಅಲ್ಲಿಗೂ ಸಿದ್ದರಾಮಯ್ಯನವರು ಪ್ರಚಾರಕ್ಕೆ ಹೋಗಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಸೊಲು ಎಂದರೆ ಈಗ ಕಾಂಗ್ರೆಸ್ ವಿರೋಧ ಪಕ್ಷದಲ್ಲೂ ಕುಳಿತುಕೊಳ್ಳಲು ಅರ್ಹತೆ ಪಡೆದುಕೊಂಡಿಲ್ಲ ಅದು ಸೋಲು. ನಾಲ್ಕು ಸಾವಿರ ಮತಗಳ ಅಂತರದಿಂದ ಸೋತರೆ ಅದು ಸೋಲಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next